ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ಲಖಿಂಪುರ್ ಖೇರಿಗೆ ಭೇಟಿ ನೀಡಲು ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ. ಭಾನುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ರೈತರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಕಾಂಗ್ರೆಸ್ ನಿಯೋಗ ಹೊರಟಿದೆ.
ಲಖಿಂಪುರ್ ಖೇರಿಯಲ್ಲಿ ಸಿಆರ್ಪಿಸಿ ಸೆಕ್ಷನ್ 144 ಹಾಕಲಾಗಿದೆ. ಇದರ ಅಡಿಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಲಖಿಂಪುರ್ ಖೇರಿಯ ಜಿಲ್ಲಾ ಕೇಂದ್ರದಿಂದ 70 ಕಿಮೀ ದೂರದಲ್ಲಿರುವ ಟಿಕುನಿಯಾಕ್ಕೆ ಪ್ರತಿಪಕ್ಷ ನಾಯಕರು ಹೋಗುವುದನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರವು ಬಿಗಿ ಬಂದೋಬಸ್ತ್ ಮತ್ತು ಪೊಲೀಸರನ್ನು ನಿಯೋಜಿಸಿದೆ.
ಲಖಿಂಪುರ್ ಖೇರಿ ಹತ್ಯಾಕಾಂಡವನ್ನು ತನಿಖೆ ಮಾಡುವಂತೆ ರಾಜ್ಯ ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗ ತನಿಖೆಗೆ ಘೋಷಿಸಿದೆ.
ಇದನ್ನೂ ಓದಿ: ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಪುತ್ರ ಆಶೀಶ್ ಚಲಾಯಿಸುತ್ತಿದ್ದರು: ಗಾಯಾಳು ರೈತ ಮುಖಂಡ
LIVE: लखीमपुर खेरी में हुए नरसंहार व कांग्रेस नेताओं के साथ अन्याय पर प्रेस के साथियों से मेरी वार्ता। https://t.co/oUC4OA2bKf
— Rahul Gandhi (@RahulGandhi) October 6, 2021
ಬುಧವಾರ ಬೆಳಿಗ್ಗೆ ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ದ ನಾಯಕರು ಲಖಿಂಪುರ ಖೇರಿಗೆ ಭೇಟಿ ನೀಡಿದ್ದ ಹಿನ್ನೆಲೆ ಅನುಮತಿ ನಿರಾಕರಿಸಿದ್ದರೂ ಮೃತ ರೈತರ ಕುಟುಂಬಗಳನ್ನು ಭೇಟಿಯಾಗಲು ಲಖಿಂಪುರ್ ಖೇರಿಗೆ ಕಾಂಗ್ರೆಸ್ ನಿಯೋಗ ಹೊರಟಿದೆ.
“ಸೆಕ್ಷನ್ 144 ಜಾರಿಯಿದ್ದರೂ ಮೂರು ಜನರ ತಂಡ ಹೋಗಬಹುದು. ಸೆಕ್ಷನ್ 144 ನಲ್ಲಿ 5 ಜನರ ತಂಡ ಹೋಗಬಾರದು. ಇದರಿಂದಾಗಿ ನಾವು ಪತ್ರ ಬರೆದಿದ್ದೇವೆ. ಬೇರೆ ಪಕ್ಷದವರಿಗೆ ಅನುಮತಿ ನಿಡಲಾಗುತ್ತಿದೆ. ನಮ್ಮನ್ನು ಮಾತ್ರ ತಡೆಯಲಾಗುತ್ತಿದೆ. ನಾವೇನು ತಪ್ಪು ಮಾಡಿದ್ದೇವೆ..?” ಎಂದು ಪ್ರಶ್ನಿಸಿದ್ದಾರೆ.
“ನಾವು ವಿರೋಧ ಪಕ್ಷದವರು. ನಾವು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಹತ್ರಾಸ್ನಲ್ಲಿ ನಾವು ಒತ್ತಡ ಹಾಕಿದ ಕಾರಣಕ್ಕೆ ಅಲ್ಲಿ ತನಿಖೆ ಆರಂಭವಾಯಿತು. ಇದರಿಂದಾಗಿ ರೈತರ ವಿಷಯದಲ್ಲಿಯೂ ನಾವು ಒತ್ತಡ ಹಾಕುತ್ತಿದ್ದೇವೆ. ರೈತರನ್ನು ಕೊಲೆ ಮಾಡಲಾಗಿದೆ, ಅವರಿಗೆ ಅನ್ಯಾಯವಾಗಿದೆ. ನಿಜ ಹೇಳಬೇಕೆಂದರೆ ಇದು ನಿಮ್ಮ (ಮಾಧ್ಯಮ) ಕೆಲಸ. ನೀವು ನಿಮ್ಮ ಜವಾಬ್ದಾರಿ ಮರೆತು ಕುಳಿತಿದ್ದಿರಿ ಅದಕ್ಕೆ ನಾವು ಮಾಡುತ್ತಿದ್ದೆವೆ” ಎಂದು ಮಾಧ್ಯಮದವರ ವಿರುದ್ದ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸೀತಾಪುರದಲ್ಲಿ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಿಯಾಂಕಾ ಗಾಂಧಿಯನ್ನು ಅತಿಥಿ ಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ. ಪ್ರಿಯಾಂಕಾ, ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಪಕ್ಷದ ನಾಯಕ ದೀಪೇಂದ್ರ ಹೂಡಾ ಮತ್ತು ಇತರರ ವಿರುದ್ಧ (ಸಿಆರ್ಪಿಸಿ) ಸೆಕ್ಷನ್ 151, 107, 116 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಲಖಿಂಪುರ್ ಖೇರಿ ಘಟನೆ ಕುರಿತು ಚರ್ಚಿಸಿದ್ದಾರೆ. ಇಂತಹ ಅನಾಗರಿಕ ಕೃತ್ಯಗಳನ್ನು ಸಹಿಸುವುದಿಲ್ಲ ಎಂದಿರುವ ಚನ್ನಿ, ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವ ರೀತಿಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಿಡುಗಡೆಯಾಗದಿದ್ದರೆ ಲಖಿಂಪುರ್ ಖೇರಿಗೆ ಪಾದಯಾತ್ರೆ: ಸಿಧು ಎಚ್ಚರಿಕೆ