ಬುಧವಾರದೊಳಗೆ ತಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡದಿದ್ದರೆ ಮತ್ತು ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಮಗನನ್ನು ರೈತರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸದಿದ್ದರೆ, ಪಕ್ಷದ ರಾಜ್ಯ ಘಟಕವು ಉತ್ತರ ಪ್ರದೇಶದ ಲಖಿಂಪುರ್ ಖೇರಿಯತ್ತ ಪಾದಯಾತ್ರೆ ನಡೆಸಲಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಮಂಗಳವಾರ ಎಚ್ಚರಿಸಿದ್ದಾರೆ.
ಪ್ರಿಯಾಂಕಾ ಗಾಂಧಿಯನ್ನು ಸೋಮವಾರ ಉತ್ತರ ಪ್ರದೇಶದ ಸೀತಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರು, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ವಿರುದ್ದ ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದಾಗ ನಡೆದ, ರೈತರ ಹತ್ಯಾಕಾಂಡದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ಹೋಗುತ್ತಿದ್ದರು.
ಇದನ್ನೂ ಓದಿ: ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಪುತ್ರ ಆಶೀಶ್ ಚಲಾಯಿಸುತ್ತಿದ್ದರು: ಗಾಯಾಳು ರೈತ ಮುಖಂಡ
ಪ್ರಿಯಾಂಕಾ ಗಾಂಧಿ ಅವರ ಬಂಧನವನ್ನು ಪಕ್ಷವು ಪ್ರಶ್ನಿಸಿದೆ. ಶಾಂತಿ ಉಲ್ಲಂಘನೆಯ ಆರೋಪದಲ್ಲಿ ಮಂಗಳವಾರದಂದು ಪ್ರಿಯಾಂಕ ಸೇರಿದಂತೆ ಇತರ 10 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಹತ್ಯಾಕಾಂಡದಲ್ಲಿ ನಾಲ್ವರು ರೈತರು ಮತ್ತು ನಂತರ ನಡೆದ ಹಿಂಸಾಚಾರದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದರು. ರೈತರ ಮೇಲೆ ಹರಿಸಲಾಗಿರುವ ವಾಹನದಲ್ಲಿ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಧು, “ನಾಳೆಯೊಳಗೆ, ರೈತರ ಕ್ರೂರ ಹತ್ಯೆಯ ರುವಾರಿ ಒಕ್ಕೂಟ ಸರ್ಕಾರದ ಸಚಿವರ ಮಗನನ್ನು ಬಂಧಿಸದಿದ್ದರೆ ಮತ್ತು ನಮ್ಮ ನಾಯಕಿ ಪ್ರಿಯಾಂಕ ಗಾಂಧಿಯನ್ನು ಬಿಡುಗಡೆಗೊಳಿಸದಿದ್ದರೆ, ಪಂಜಾಬ್ನ ಕಾಂಗ್ರೆಸ್ ಘಟಕವು ಲಖಿಂಪುರ್ ಖೇರಿ ಕಡೆಗೆ ಹೊರಡುತ್ತದೆ!” ಎಂದು ಎಚ್ಚರಿಸಿದ್ದಾರೆ.
If, by tomorrow, the Union Minister’s son behind the brutal murder of Farmers is not arrested, and our leader @PriyankaGandhi being unlawfully arrested, fighting for farmers is not released, the Punjab Congress will march towards Lakhimpur Kheri ! @INCIndia @INCPunjab
— Navjot Singh Sidhu (@sherryontopp) October 5, 2021
ಲಖಿಂಪುರ್ ಖೇರಿ ಘಟನೆಯನ್ನು ವಿರೋಧಿಸಿ ಸಿಧು ಮತ್ತು ಪಕ್ಷದ ಅನೇಕ ಶಾಸಕರು ಪಂಜಾಬ್ ರಾಜಭವನದ ಹೊರಗೆ ಸೋಮವಾರ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಲಖಿಂಪುರ್ ರೈತರ ಹತ್ಯೆ ಪ್ರಕರಣ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?