ಒಡಿಶಾ ಆಡಳಿತ ಸೇವೆಯ (ಒಎಎಸ್) ಹಿರಿಯ ಅಧಿಕಾರಿಯೊಬ್ಬರನ್ನು ಕಚೇರಿಯಿಂದ ಎಳೆದೊಯ್ದು ಕ್ರೂರವಾಗಿ ಥಳಿಸಿರುವ ಘಟನೆ ಭುವನೇಶ್ವರ ಮಹಾನಗರ ಪಾಲಿಕೆಯಲ್ಲಿ (ಬಿಎಂಸಿ) ಸೋಮವಾರ (ಜೂನ್ 30, 2025) ನಡೆದಿದೆ.
ಅಧಿಕಾರಿ ವರ್ಗ, ವಿರೋಧ ಪಕ್ಷಗಳ ನಾಯಕರು ಮತ್ತು ಸಾರ್ವಜನಿಕರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಬಿಎಂಸಿಯ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರು ಪಾಲಿಕೆ ಕಟ್ಟಡದಲ್ಲಿ ಸಾರ್ವಜನಿಕರ ಕುಂದುಕೊರತೆ ಕುರಿತಂತೆ ಸಭೆ ನಡೆಸುತ್ತಿದ್ದರು. ಈ ವೇಳೆ 2024ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಪರಾಜಯಗೊಂಡ ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ಎನ್ನಲಾದ ವ್ಯಕ್ತಿಗಳ ಗುಂಪೊಂದು ಅವರನ್ನು ಎಳೆದೊಯ್ದು ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಹಲ್ಲೆಯಿಂದ ಅಧಿಕಾರಿ ಗಾಯಗೊಂಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಹಿರಿಯ ಅಧಿಕಾರಿಯನ್ನು ಕಚೇರಿಯಿಂದ ಎಳೆದೊಯ್ದು ಬಿಜೆಪಿ ಕಾರ್ಪೋರೇಟರ್ ಮುಂದೆಯೇ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಈ ಘಟನೆಗೂ ಸೋತ ಬಿಜೆಪಿ ಅಭ್ಯರ್ಥಿಗೂ ಸಂಬಂಧವಿದೆ ಎಂಬ ಆರೋಪವಿದೆ ಎಂದು” ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
“ರಾಜಧಾನಿ ಭುವನೇಶ್ವರದ ಹೃದಯಭಾಗದಲ್ಲಿ ಹಿರಿಯ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಜನರ ಕುಂದುಕೊರತೆಗಳನ್ನು ಆಲಿಸುತ್ತಿದ್ದಾಗ ಹಾಡಹಗಲೇ ಈ ಘಟನೆ ಸಂಭವಿಸಿದೆ ಎಂಬುದು ಹೆಚ್ಚು ಭಯಾನಕವಾಗಿದೆ” ಎಂದು ಪಟ್ನಾಯಕ್ ಹೇಳಿದ್ದಾರೆ.
“ಈ ನಾಚಿಕೆಗೇಡಿನ ದಾಳಿ ನಡೆಸಿದವರ ವಿರುದ್ಧ ಮಾತ್ರವಲ್ಲದೆ, ಅದರ ಹಿಂದೆ ಇರುವ ರಾಜಕೀಯ ನಾಯಕರ ವಿರುದ್ಧವೂ ತಕ್ಷಣದ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾನು ಮುಖ್ಯಮಂತ್ರಿ ಮೋಹನ್ ಮಾಝಿ ಅವರಲ್ಲಿ ವಿನಂತಿಸುತ್ತೇನೆ” ಎಂದು ಬಿಜೆಡಿ ಅಧ್ಯಕ್ಷರೂ ಆಗಿರುವ ನವೀನ್ ಪಟ್ನಾಯಕ್ ಬರೆದುಕೊಂಡಿದ್ದಾರೆ.
I am utterly shocked seeing this video.
Today, Shri Ratnakar Sahoo, OAS Additional Commissioner, BMC, a senior officer of the rank of Additional Secretary was dragged from his office and brutally kicked and assaulted in front of a BJP Corporator, allegedly linked to a defeated… pic.twitter.com/yf7M3dLt9C
— Naveen Patnaik (@Naveen_Odisha) June 30, 2025
“ಅಧಿಕಾರಿ ತನ್ನ ಎಫ್ಐಆರ್ನಲ್ಲಿ ಹೆಸರಿಸಿರುವ ಜನರು ಕ್ರಿಮಿನಲ್ಗಳಂತೆ ವರ್ತಿಸಿದ್ದಾರೆ. ಒಬ್ಬ ಹಿರಿಯ ಅಧಿಕಾರಿ ತನ್ನ ಸ್ವಂತ ಕಚೇರಿಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ನಾಗರಿಕರು ಸರ್ಕಾರದಿಂದ ಯಾವ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರೀಕ್ಷಿಸಬಹುದು?” ಎಂದು ನವೀನ್ ಪಟ್ನಾಯಕ್ ಪ್ರಶ್ನಿಸಿದ್ದಾರೆ.
“ಮಾಜಿ ರಾಜ್ಯಪಾಲರ ಪುತ್ರ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದಂತೆ, ಈ ಹೇಯ ಕೃತ್ಯಕ್ಕೆ ಶಿಕ್ಷೆಯಾಗದಂತೆ ತಡೆಯಲು ಪ್ರಯತ್ನಿಸದೆ ಮುಖ್ಯಮಂತ್ರಿ ಮೋಹನ್ ಮಾಝಿ ಅವರು ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುವ ಮೂಲಕ ತಮ್ಮ ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಪುನಃಸ್ಥಾಪಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಒಡಿಶಾದ ಜನರು ಇದನ್ನು ಕ್ಷಮಿಸುವುದಿಲ್ಲ” ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ಅಧಿಕಾರಿಯ ಮೇಲಿನ ಹಲ್ಲೆಯನ್ನು ಖಂಡಿಸಿ ಸೋಮವಾರ ಸಂಜೆ, ಮೇಯರ್ ಸುಲೋಚನಾ ದಾಸ್ ನೇತೃತ್ವದಲ್ಲಿ ಬಿಜೆಡಿ ಕಾರ್ಪೊರೇಟರ್ಗಳು ಭುವನೇಶ್ವರದ ಜನನಿಬಿಡ ರಸ್ತೆಯಾದ ಜನಪಥ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ.
ಜೆಎನ್ಯು ವಿದ್ಯಾರ್ಥಿ ನಜೀಬ್ ನಾಪತ್ತೆ: ಪ್ರಕರಣ ಮುಕ್ತಾಯಕ್ಕೆ ಕೋರ್ಟ್ ಸಮ್ಮತಿ


