ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ನ ಸದಸ್ಯರು ಕೋವಿಡ್ ಲಸಿಕೆ ಕುರಿತಂತೆ ಈಗ ನೀಡಿರುವ ಸ್ಪಷ್ಟೀಕರಣದ ಪ್ರಕಾರ, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಅನ್ನು ‘ಕ್ಲಿನಿಕಲ್ ಟ್ರಯಲ್’ ಮೋಡ್’ನಲ್ಲಿ ಬಳಸಬಹುದಾಗಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ‘ಲಸಿಕೆಯ ಸುರಕ್ಷತೆಯ ಕಾರ್ಯತಂತ್ರದ ಭಾಗವಾಗಿ ಕೊವ್ಯಾಕ್ಸಿನ್ ಅನ್ನು ತುರ್ತು ಬಳಕೆಗೆ ಅನುಮೋದಿಸಲಾಗಿದೆ’ ಎಂದಿದ್ದಾರೆ.
ಆದರೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ವಿಜ್ಞಾನಿಗಳು, ಮೊದಲ ಮತ್ತು ಎರಡನೇ ಹಂತದ ಟ್ರಯಲ್ಗಳು ಉತ್ತೇಜನಾಕಾರಿಯಾಗಿದ್ದವು, ಆದರೆ ನವೆಂಬರ್ನಲ್ಲಿ ಆರಂಭವಾದ ಮೂರನೆ ಹಂತದ ಟ್ರಯಲ್ನ ಪರಿಣಾಮಕಾರಿತ್ವ ದತ್ತಾಂಶ (efficacy data) ಲಭ್ಯವಾಗುವ ಮೊದಲೇ ಲಸಿಕೆ ಬಳಕೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸುತ್ತಿದ್ದಾರೆ.
‘ಭಾರತದ ಪ್ರಧಾನ ಔಷಧ ನಿಯಂತ್ರಕ ಸಂಸ್ಥೆ ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಿದ ಮಾರ್ಗಸೂಚಿ ಪ್ರಕಾರ, ಯಾವುದೇ ಲಸಿಕೆ ಬಳಕೆಗೆ ಅನುಮತಿ ನೀಡಲು ಸುರಕ್ಷತಾ ಮತ್ತು ಪರಿಣಾಮಕಾರಿತ್ವ ದತ್ತಾಂಶ ಅಗತ್ಯವಾಗಿದೆ. ಸುರಕ್ಷತಾ ದತ್ತಾಂಶಕ್ಕೆ ಕನಿಷ್ಠ ಎರಡು ತಿಂಗಳ ಕಾಲ ಫಾಲೋ ಅಪ್ ಮಾಡಬೇಕು. ಆದರೆ ಅದು ಇಲ್ಲಿ ಆಗಿಲ್ಲ’ ಎಂದು ಲಸಿಕಾ ತಜ್ಞ ಮತ್ತು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಡಾ. ಗಗನದಿಪ್ ಕಂಗ್ ಹೇಳುತ್ತಾರೆ.
‘ಕೊವ್ಯಾಕ್ಸಿನ್ ವಿಷಯದಲ್ಲಿ, ಸ್ವಯಂಸೇವಕರ ಭರ್ತಿಯೇ ಮುಗಿದಿಲ್ಲ. ಔಷಧ ನಿಯಂತ್ರಕರು ಕೇಳಿದ್ದ ಸುರಕ್ಷತಾ ದತ್ತಾಂಶವನ್ನು ಎಲ್ಲಿಂದ ತರುತ್ತೀರಿ? ನಿಸ್ಸಂಶವಾಯವಾಗಿ ಯಾವುದೇ ಪರಿಣಾಮಕಾರಿತ್ವ ದತ್ತಾಂಶವೂ ಲಭ್ಯ ಇಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈರಲಾಜಿಸ್ಟ್ ಶಹೀದ್ ಜಮೀಲ್, ‘ತುರ್ತು ಬಳಕೆಗೆ ಅನುಮತಿ ನೀಡಲೂ ಕೂಡ ಪರಿಣಾಮಕಾರಿತ್ವ ದತ್ತಾಂಶ ಅಗತ್ಯ. ಈ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನೂ ಪ್ರವೇಶಿಸುತ್ತವೆ. ನಮ್ಮ ನಿಯಂತ್ರಕ ಸಂಸ್ಥೆಗಳು ವಿಶ್ವಾಸವನ್ನು ಉಳಿಸಿಕೊಳ್ಳಬೇಕು’ ಎಂದು ಅಭಿಪ್ರಾಯ ಪಡುತ್ತಾರೆ.
ಏಮ್ಸ್ (ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ನಿರ್ದೇಶಕ ಮತ್ತು ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ರಣದೀಪ್ ಗುಲೇರಿಯಾ, ‘ಕೊವ್ಯಾಕ್ಸಿನ ತುರ್ತು ಬಳಕೆಗೆ ಅನುಮತಿ ನೀಡಿದ್ದು ಏಕೆಂದರೆ, ಆಕಸ್ಮಾತ್ ಪಾಸಿಟಿವ್ ಕೇಸುಗಳ ಸಂಖ್ಯೆ ಹೆಚ್ಚಾದಲ್ಲಿ ಮತ್ತು ಆಕ್ಸ್ಫರ್ಡ್ ಲಸಿಕೆಯ ಕೊರತೆಯಾದಲ್ಲಿ ಕೊವಾಕ್ಷಿನ್ ಅನ್ನು ‘ಕ್ಲಿನಿಕಲ್ ಟ್ರಯಲ್ ಮೋಡ್’ನಲ್ಲಿ ಬಳಸಬಹುದು ಎಂಬ ಕಾರಣಕ್ಕಾಗಿ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
’50 ಮಿಲಿಯನ್ ಡೋಸ್ ಲಸಿಕೆ ಸಿದ್ಧ ಎಂದು ಸೀರಮ್ ಸಂಸ್ಥೇ ಹೇಳಿದೆ. ಹಾಗಾಗಿ ಬಯೋಟೆಕ್ನ ಕೊವಾಕ್ಸಿನ್ 3ನೆ ಹಂತ ಮುಗಿಸುವವರೆಗೂ ಕಾಯಬೇಕಿತ್ತು’ ಎಂದು ವೈರಾಲಜಿಸ್ಟ್ ಶಮೀದ್ ಜಮೀಲ್ ಪ್ರಶ್ನಿಸಿದ್ದಾರೆ.
‘ನೀತಿ ನಿರೂಪಣೆಯ ಮಟ್ಟದಲ್ಲಿ ಮತ್ತು ನಿಯಂತ್ರಕ ಮಟ್ಟದಲ್ಲಿ ಸಮಸ್ಯೆಯಿದೆ. ಲಸಿಕೆಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳಿವೆ. ಈಗ ನಡೆಯುತ್ತಿರುವುದು ಜನರು ನಿಯಂತ್ರಕ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಲಿದೆ’ ಎಂದು ಇಮ್ಯುನಿಲಾಜಿಸ್ಟ್ ಸತ್ಯಜೀತ್ ರಥ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಆಕ್ಸ್ಫರ್ಡ್ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ