ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಕರ್ನಾಟಕದ ರೈತರಿಗೆ ಮನವರಿಕೆ ಮಾಡಿಕೊಡಲು ದೇಶಪ್ರೇಮಿ ಯುವಾಂದೋಲನ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸದಸ್ಯರು ನಡೆಸುತ್ತಿರುವ ಸೈಕಲ್ ಜಾಥಾ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹಳ್ಳಿಗಳಿಗೆ ಹೋಗೋಣ ಹೆಸರಿನಲ್ಲಿ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲಿ ನಡೆಯುತ್ತಿರುವ ಸೈಕಲ್ ಜಾಥಾಗೆ ರೈತರಿಂದ ಸ್ವಾಗತಾರ್ಹ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಕ್ಷಿಣ ಕರ್ನಾಟಕ ವರದಿ
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ “ನಾವು ರೈತರಿಗೆ ಹೆಚ್ಚು ತಿಳಿಸುವುದಕ್ಕಿಂತ, ರೈತರಿಂದ ನಾವು ಬಹಳ ಕಲಿತಿದ್ದೇವೆ. ಮದ್ದೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿ ರೈತರು ನಮಗಿಂತ ಹೆಚ್ಚು ಈ ಕಾಯ್ದೆಗಳ ಅಪಾಯಗಳ ಬಗ್ಗೆ ತಿಳಿದುಕೊಂಡಿದ್ದಾರೆ ಎಂಬುದು ತಿಳಿಯಿತು. ಈ ಕಾಯ್ದೆಗಳು ಯುವಜನರ ಉದ್ಯೋಗಗಳನ್ನು ಸಹ ಕಿತ್ತುಕೊಳ್ಳುತ್ತವೆ. ನಮ್ಮ ಕಾಲದಲ್ಲಿ ಜನವಿರೋಧಿ, ರೈತ ವಿರೋಧಿ ಕಾನೂನುಗಳು ಬಂದರೆ ಆ ಸರ್ಕಾರವನ್ನೇ ನಾವು ಬದಲಿಸುವ ಮಟ್ಟಿಗೆ ಹೋರಾಟ ಮಾಡುತ್ತಿದ್ದೆವು. ಆದರೆ ಈಗಿನ ಯುವಜನರು ಕೇವಲ ಮೋದಿಯನ್ನು ಹೊಗಳುತ್ತಿದ್ದಾರೆ. ಅವರನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ” ಎಂದು ರೈತರು ಬೇಸರ ವ್ಯಕ್ತಪಡಿಸಿದರು ಎಂದರು.
ರೈತರು ನಿಜವಾಗಿಯೂ ಈ ಕಾಯ್ದೆಗಳ ಅಪಾಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಮಾಧ್ಯಮಗಳು ಮತ್ತು ಮೋದಿ ಸರ್ಕಾರದ ಬಗ್ಗೆ ಕೋಪಗೊಂಡಿದ್ದಾರೆ. ಪ್ರತಿ ಊರಿನಲ್ಲಿಯೂ ರೈತರು ನಮ್ಮನ್ನು ತಮ್ಮ ಮನೆಗೆ ತಿಂಡಿಗೆ, ಕಾಫಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರೈತರ ಪ್ರೀತಿ ನಮಗೆ ಸಿಕ್ಕಿದೆ. ಹಾಗೆಯೇ ರೈತರ ಸಂಕಷ್ಟಗಳನ್ನು ನಾವು ನಮ್ಮ ಎದೆಯೊಳಗೆ ಇಳಿಸಿಕೊಂಡಿದ್ದು, ಹೋರಾಟ ಮುಂದುವೆರೆಸುತ್ತೇವೆ ಎಂದು ಭರವಸೆ ನೀಡಿದ್ದೇವೆ ಎಂದು ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಜಾಥಾದ ಯುವಜನರು ಕೃಷಿ ಕಾರ್ಯದಲ್ಲಿ ನಿರತ ರೈತರ ಜೊತೆ ಶ್ರಮದಾನದಲ್ಲಿ ಭಾಗವಹಿಸಿದ್ದರು. ಭತ್ತದ ಹೊರೆಕಟ್ಟಿ ಟ್ರಾಕ್ಟರ್ಗಳಿಗೆ ತುಂಬುವ ಕೆಲಸದಲ್ಲಿಯೂ ಸಹ ಯುವಜನರು ತೊಡಗಿಸಿಕೊಂಡಿದ್ದಾರೆ. ಮನೋಜ್, ಮಮತಾ, ರಾಜಶೇಖರ್ ಅಂಗಡಿ, ಪುಷ್ಪಲತಾ, ರಜಿನಿ, ಸಲೀಂ ಮುಂತಾದವರು ಜಾಥಾದಲ್ಲಿದ್ದಾರೆ.
ಹೈದರಾಬಾದ್ ಕರ್ನಾಟಕ ವರದಿ
ಹೈದರಾಬಾದ್ ಕರ್ನಾಟಕದಲ್ಲಿ ಈ ಮೂರು ದಿನದಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾಥಾ ಯಶಸ್ವಿಯಾಗಿ ನಡೆಯುತ್ತಿದೆ. ರೈತರು ನಮ್ಮ ನಮ್ಮ ಹಳ್ಳಿಗಳಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಈಗ ನಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕ್ವಿಂಟಾಲ್ ಭತ್ತಕ್ಕೆ ಕೆಲವೊಮ್ಮೆ 1500 ರಿಂದ 800ಕ್ಕೆ ಇಳಿದುಬಿಡುತ್ತದೆ. ಹಾಗಾಗಿ ಎಪಿಎಂಸಿ ಮಂಡಿಗಳು ಇರಬೇಕೆಂಬುದು ನಮ್ಮ ಒತ್ತಾಯ ಎಂದು ರೈತರು ತಿಳಿಸಿದ್ದಾರೆ ಎಂದು ದೇಶಪ್ರೇಮಿ ಯುವಾಂದೋಲನದ ಗುರುಬಸವ ನಾನುಗೌರಿ.ಕಾಂಗೆ ತಿಳಿಸಿದರು.
ಎಮ್ಮಿಗನೂರು, ನೆಲ್ಲುಡಿ_ಕೊಟ್ಟಾಲ್, ಕಂಪ್ಲಿ, ಕಂಪ್ಲಿ_ಕೋಟೆ, ಡಣಾಪುರ, ಹೆಬ್ಬಾಳ, ಮುಷ್ಟೂರು, ಕುಂಟೋಜಿ, ಬರಗೂರು ಗ್ರಾಮದ ಬೀದಿ ಬೀದಿ ಗಳಲ್ಲಿ ಹೋರಾಟ ಗೀತೆಯನ್ನು ಹಾಡಿ, ಕರಪತ್ರಗಳನ್ನು ಹಂಚಲಾಯಿತು. ಗ್ರಾಮಸ್ಥರಿಗೆ ರೈತವಿರೋಧಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲಿನ ಜನರೊಂದಿಗೆ ಚರ್ಚೆಗಳು ನಡೆದವು. ದಾರಿ ಉದಕ್ಕೂ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಕರಪತ್ರಗಳನ್ನು ಹಂಚಿ ಸರ್ಕಾರ ತರುತ್ತಿರುವ ರೈತ ವಿರೋಧಿ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು. ಇಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರಚಾರಾಂದೋಲನ ಮುಗಿಸಿ ಕೊಪ್ಪಳ ಜಿಲ್ಲೆಯ ಕಡೆಗೆ ಹೊರಟಿತು ಎಂದು ಅವರು ಮಾಹಿತಿ ನೀಡಿದರು.
ಜಾಥಾದಲ್ಲಿ ದೇಶಪ್ರೇಮಿ ಯುವಾಂದೋಲನದ ಸಂತೋಷ ಎಚ್. ಎಂ, ರಾಜೇಂದ್ರ ರಾಜವಳ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣು, ಚಿದಾನಂದ, ಇಸ್ಮಾಯಿಲ್, ಭುವನ್ ಕುಮಾರ್ ಮತ್ತು ಕರ್ನಾಟಕ ಜನಶಕ್ತಿಯ ವಸಂತ್ ರಾಜ್ ಕಹಳೆ ಇದ್ದರು.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಹಳ್ಳಿಗಳಿಗೆ ಹೊರಟ ಯುವಜನತೆ