ಬೆಂಗಳೂರಿನ ಹೆಚ್ಎಂಟಿ ವಾರ್ಡ್ನ ಪೀಣ್ಯದ ಎಸ್ಆರ್ಎಸ್ ರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್ ಪ್ರದೇಶದಲ್ಲಿ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದ 53 ಕುಟುಂಬಗಳನ್ನು ತೆರವುಗೊಳಿಸಲು ಯಾರ ಆದೇಶವಿತ್ತು ಎಂಬುದರ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ (ಫೆ.5) ಆದೇಶಿಸಿದೆ.
ತೆರವು ಕಾರ್ಯಾಚರಣೆ ವೇಳೆ ಮಾದಿಗ ಸಮುದಾಯದ ಮಹಿಳೆಯನ್ನು ನಿಂದಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಮುನಿರತ್ನ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಸಂತೋಷ ಗಜಾನನ ಭಟ್ ನಡೆಸಿದ್ದಾರೆ.
ಮುನಿರತ್ನ ಪರ ವಕೀಲ ಎಸ್ ಎಸ್ ಶ್ರೀನಿವಾಸ ರಾವ್ ವಾದ ಮಂಡಿಸಿ, “ಈ ಪ್ರಕರಣದಲ್ಲಿ ಮುನಿರತ್ನ ಮುಗ್ಧರು. ಮೇಲಿಂದ ಮೇಲೆ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಅವರು ಸಾರ್ವಜನಿಕರ ಕೆಲಸ ಮಾಡುವುದೇ ಕಷ್ಟವಾಗಿದೆ” ಎಂದಿದ್ದಾರೆ.
ಒಕ್ಕಲೆಬ್ಬಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಕಾನೂನುಬದ್ಧವಾಗಿ ನಡೆಸಿದೆ. ಆದರೆ, ಮಾಧ್ಯಮಗಳಲ್ಲಿ ಮುನಿರತ್ನ ಅವರ ವ್ಯಕ್ತಿತ್ವಕ್ಕೆ ಹಾನಿ ಮಾಡಲು ಅಪಪ್ರಚಾರ ಮಾಡಲಾಗುತ್ತಿದೆ. ದೂರುದಾರರ ಪರ ಹಿರಿಯ ವಕೀಲ ಸಿ. ಹೆಚ್ ಹನುಮಂತರಾಯ ಅವರು ಆರೋಪಿಸಿರುವಂತೆ ಅಲ್ಲಿ ಕೇವಲ ದಲಿತ ಕುಟುಂಬಗಳು ಮಾತ್ರವೇ ಇರಲಿಲ್ಲ. ಅವರಲ್ಲಿ ಮುಸ್ಲಿಂ ಮತ್ತು ಸಾಮಾನ್ಯ ವರ್ಗದ ಜನರೂ ಇದ್ದರು” ಎಂದಿದ್ದಾರೆ.
ಈ ವೇಳೆ ಹನುಮಂತರಾಯ ಅವರು “ಬಿಬಿಎಂಪಿ ಕಾರ್ಯಾಚರಣೆ ನಡೆಸಿದ್ದರೆ ಮುನಿರತ್ನ ಏಕೆ ಅದನ್ನು ಮೌನವಾಗಿ ವೀಕ್ಷಿಸಿದರು? ಕ್ಷೇತ್ರದ ಶಾಸಕರಾಗಿ ನಿರ್ಗತಿಕರಿಗೆ ಏಕೆ ಪುನರ್ವಸತಿ ಕಲ್ಪಿಸಲಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಆಗ ಮಧ್ಯಪ್ರವೇಶಿಸಿದ ಪೀಠ “ಈ ಪ್ರಕರಣದಲ್ಲಿ ಯಾರು ತೆರವು ಕಾರ್ಯಾಚರಣೆ ನಡೆಸಿದರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ಸಮರ್ಪಕವಾಗಿ ಉತ್ತರಿಸಿಲ್ಲ. ಇದರಿಂದ ಮಧ್ಯಂತರ ಆದೇಶವನ್ನು ಮತ್ತೆ ವಿಸ್ತರಿಸಬೇಕಾಗಿ ಬಂದಿದೆ. ಪೊಲೀಸ್ ಇಲಾಖೆ ಕ್ಷಮತೆಯಿಂದ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಇದೆ” ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, “ಯಾರ ಆದೇಶದ ಅನ್ವಯ ಒತ್ತುವರಿ ಕಾರ್ಯಾಚರಣೆ ನಡೆಸಲಾಗಿದೆ ಎಂಬುವುದನ್ನು ತಿಳಿಸಬೇಕು” ಎಂದು ಸರ್ಕಾರಿ ಅಭಿಯೋಜಕಿ ಪಾರ್ವತಿ ಅವರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಬೆಂಗಳೂರಿನ ಪೀಣ್ಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್ ಪ್ರದೇಶದಲ್ಲಿ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದ 60ರಿಂದ 70ರಷ್ಟು ಉತ್ತರ ಕರ್ನಾಟಕದ ದಲಿತ ಕುಟುಂಬಗಳನ್ನು ಜನವರಿ 20ರಂದು ಶಾಸಕ ಮುನಿರತ್ನ ಮತ್ತು ಬೆಂಬಲಿಗರಾದ ವಸಂತಕುಮಾರ್, ಚನ್ನಕೇಶವ, ಗೊರಗುಂಟೆಪಾಳ್ಯದ ನವೀನ, ಶ್ರೀರಾಮ, ಪೀಣ್ಯದ ಕಿಟ್ಟಿ, ಗಂಗಾ ಮತ್ತು ಇತರರು ಕಾನೂನು ಬಾಹಿರವಾಗಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ. ಅಲ್ಲದೆ, ನನಗೆ ಜಾತಿನಿಂದನೆ ಮಾಡಿ ಅಲ್ಲಿದ್ದ ಕೆಲ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರ ಎದೆಗೆ ಮುನಿರತ್ನ ಒದ್ದಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಜನವರಿ 20ರಂದು ದೂರು ನೀಡಿದ್ದರು.
ಈ ದೂರು ಆಧರಿಸಿ ಪೊಲೀಸರು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ-2023ರ ಸೆಕ್ಷನ್ಗಳಾದ 324(2),74,351(2), 351(3) ಮತ್ತು 190 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ–2014ರ ಸೆಕ್ಷನ್ 3(1), ಆರ್(ಎಸ್) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬ್ಯಾಂಕ್ಗೆ ವಂಚನೆ ಸಾಬೀತು; ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು ಶಿಕ್ಷೆ


