Homeಮುಖಪುಟಮಹಾರಾಷ್ಟ್ರ-ಹರ್ಯಾಣ ಫಲಿತಾಂಶ ಅವಮಾನಕರ ಗೆಲುವು ಸಮಾಧಾನಕರ ಸೋಲು

ಮಹಾರಾಷ್ಟ್ರ-ಹರ್ಯಾಣ ಫಲಿತಾಂಶ ಅವಮಾನಕರ ಗೆಲುವು ಸಮಾಧಾನಕರ ಸೋಲು

- Advertisement -
- Advertisement -

| ಎ. ನಾರಾಯಣ |

ಗೆಲುವಿನಲ್ಲೂ ಸೋಲುವುದು ಎಂದರೆ ಹೀಗೆ. ಸೋಲಿನಲ್ಲೂ ಸಂಭ್ರಮಿಸಲು ಸಾಧ್ಯವಾಗುವುದು ಎಂದರೆ ಅದು ಹೀಗೆ. ಹೋದವಾರ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕಂಡ ಯಾರಿಗಾದರೂ ಹೀಗನಿಸದೆ ಇರದು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೇರುವುದರಲ್ಲಿದೆ. ಹರ್ಯಾಣದಲ್ಲಿ ಬಿಜೆಪಿ ಬಹುಮತ ಪಡೆಯದಿದ್ದರೂ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣ ಚುನಾವಣೋತ್ತರ ಮೈತ್ರಿಕೂಟ ರಚಿಸಿಕೊಂಡು ಅಲ್ಲೂ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೂ ಬಿಜೆಪಿಗೆ ಇದು ಅವಮಾನಕರ ಗೆಲುವು. ಆ ಪಕ್ಷದ ಅಹಂಕಾರಕ್ಕೆ ಚುನಾವಣಾ ಫಲಿತಾಂಶ ಬಹುದೊಡ್ಡ ಮರ್ಮಾಘಾತ ನೀಡಿದೆ. ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ. ಸ್ವತಃ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಈ ರೀತಿ ತನ್ನ ಮುಖವಾಣಿ “ಸಾಮ್ನಾ” ದಲ್ಲಿ ಬರೆದಿದೆ.

ಯಾಕೆ ಬಿಜೆಪಿಗೆ ಇದು ಅವಮಾನಕರ ಗೆಲುವು ಅಂತ ತಿಳಿದುಕೊಳ್ಳಬೇಕಾದರೆ ಚುನಾವಣಾಪೂರ್ವದಲ್ಲಿ ಈ ಎರಡು ರಾಜ್ಯಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತಿದ್ದ ರೀತಿಯನ್ನೊಮ್ಮೆ ನೆನಪಿಸಿಕೊಳ್ಳಬೇಕು. ಹೇಳಿ ಕೇಳಿ ಇದು ಕೇಂದ್ರದ ಬಿಜೆಪಿ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ. ಹೀಗಾಗಿ ತನ್ನ ರಾಷ್ಟ್ರಪ್ರೇಮವನ್ನು ಜನರ ಮುಂದಿಡಲು ಬಿಜೆಪಿಯ ಬಳಿ ಹೊಸದೊಂದು ಅಸ್ತ್ರವಿತ್ತು. ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇನ್ನೊಂದು ರೀತಿಯ ರಾಷ್ಟ್ರೀಯತೆಯ ಅಸ್ತ್ರ ಹಿಡಿದುಕೊಂಡು ಸಾಧಿಸಿದ ಅಭೂತಪೂರ್ವ ವಿಜಯದ ಗುಂಗು ಆ ಪಕ್ಷದ ತಲೆಯೆಲ್ಲಾ ತುಂಬಿತ್ತು. ಅದು ತಾನು ಮಹಾರಾಷ್ಟ್ರದಲ್ಲಿ ಸುಮಾರು 200 ಸ್ಥಾನಗಳನ್ನು (ಒಟ್ಟು 288) ಮತ್ತು ಹರ್ಯಾಣದಲ್ಲಿ ಸುಮಾರು 70 ಸ್ಥಾನಗಳನ್ನು (ಒಟ್ಟು 90) ಗೆಲ್ಲುವುದು ಶತಸಿದ್ಧ ಎಂದು ಹೋದಲ್ಲಿಬಂದಲ್ಲಿ ಸಾರುತಿತ್ತು. ವಿರೋಧ ಪಕ್ಷಗಳು ಲೆಕ್ಕಕ್ಕಿಲ್ಲ ಅಂತ ಅಣಕಿಸುತಿತ್ತು. ಅದರ ತಾಳಕ್ಕೆ ತಕ್ಕಂತೆ ಕುಣಿಯುವ ಮಾಧ್ಯಮಗಳಂತೂ ಈ ಚುನಾವಣೆಯ ಅಗತ್ಯವೇ ಇಲ್ಲವೆಂತಲೂ, ಬಿಜೆಪಿಗೆ ಎರಡೂ ರಾಜ್ಯಗಳಲ್ಲೂ ಸವಾಲೇ ಇಲ್ಲ ಅಂತಲೂ ನಿರಂತರ ವರದಿ ಮಾಡಿದವು. ಕೊನೆಗೆ ಮತಗಟ್ಟೆ ಸಮೀಕ್ಷೆಗಳು (ಒಂದೆರಡು ಸಮೀಕ್ಷೆಗಳನ್ನು ಬಿಟ್ಟರೆ) ಬಿಜೆಪಿಯ ಸ್ಥಾನಗಳ ಲೆಕ್ಕಾಚಾರವನ್ನು ಯಥಾವತ್ತಾಗಿ ನಕಲು ಮಾಡಿ ಜನರ ಮುಂದಿರಿಸಿದವು. ಫಲಿತಾಂಶ ಬಂದಾಗ ಎಲ್ಲರಿಗೂ ದಿಗಿಲು. ಮಹಾರಾಷ್ಟ್ರದಲ್ಲಿ ಪ್ರಯಾಸದ ಜಯ. ಹರ್ಯಾಣದಲ್ಲಿ ಸರಳ ಬಹುಮತವೂ ಇಲ್ಲ! ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿಯನ್ನು ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿಸಲು ಮುಂದಾಗಿದೆ. ಹರ್ಯಾಣದಲ್ಲಿ ಜನನಾಯಕ ಜನತಾ ಪಕ್ಷ ಎಂಬ ಹೊಸ ಪಕ್ಷದ ಜತೆ ಹೆಣಗಾಡಿಕೊಂಡು ಸರಕಾರ ರಚಿಸಿಕೊಂಡಿದೆ.

ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ) ಸೋಲಿನಲ್ಲೂ ಸಾವರಿಸಿಕೊಂಡು ಮುಗುಳ್ನಗುತ್ತಿರುವುದು ಇದೇ ಕಾರಣಕ್ಕೆ. ಈ ಎರಡೂ ಪಕ್ಷಗಳೂ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವಷ್ಟರಮಟ್ಟಿಗೆ ಸಾಧನೆ ತೋರದೇ ಹೋಗಿದ್ದರೂ ತಾವಿನ್ನು ಅಸ್ತಿತ್ವದಲ್ಲಿದ್ದೇವೆ ಮಾತ್ರವಲ್ಲ, ಬಿಜೆಪಿಯ ನಿದ್ದೆ ಕೆಡಿಸುವಷ್ಟರಮಟ್ಟಿಗೆ ಇನ್ನೂ ಜನಬೆಂಬಲವನ್ನೂ ಉಳಿಸಿಕೊಂಡಿದ್ದೇವೆ ಎಂಬ ಸಂದೇಶವನ್ನು ಎರಡೂ ಪಕ್ಷಗಳು ಸ್ಪಷ್ಟವಾಗಿ ರವಾನಿಸಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಇನ್ನಿಲ್ಲದ ಸವಾಲುಗಳ ನಡುವೆ ಚುನಾವಣೆ ಎದುರಿಸಿತ್ತು. ಇನ್ನೇನು ಚುನಾವಣೆಗೆ ವರ್ಷ ಇದೆ ಎನ್ನುವಾಗಲೇ ಬಿಜೆಪಿ ಕಾಂಗ್ರೆಸ್ ಪಾಳಯದ ನಾಯಕರನ್ನು ಒಬ್ಬೊಬ್ಬರಾಗಿ ಖರೀದಿಸಲು ತೊಡಗಿತ್ತು. ಚುನಾವಣಾ ಘೋಷಣೆಯಾಗುವ ವೇಳೆಗೆ ಸ್ವತಃ ವಿರೋಧ ಪಕ್ಷದ ನಾಯಕ ಸೇರಿದಂತೆ ಎಲ್ಲರನ್ನೂ ಬಿಜೆಪಿ ಎಗ್ಗಿಲ್ಲದೆ ಖರೀದಿಸಿ ತನ್ನ ಬಳಿ ಇರಿಸಿಕೊಂಡಿತ್ತು. ಅವರಲ್ಲಿ ಕೆಲವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು ಕೂಡ. ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹವೇ ಉಡುಗಿಹೋಗಿತ್ತು. ಸಾಲದು ಎಂಬುದಕ್ಕೆ ಮಾಧ್ಯಮಗಳು ಈ ಬಾರಿ ಮಹಾರಾಷ್ಟ್ರದಲ್ಲಿ ಸ್ಪರ್ಧೆಯೇ ಇಲ್ಲ, ಇದೊಂದು ಏಕಮುಖ ಚುನಾವಣೆ ಎಂಬಂತೆ ಮೇಲಿಂದ ಮೇಲೆ ಬರೆದ ಕಾರಣ ಸಾಮಾನ್ಯ ಕಾರ್ಯಕರ್ತರ ಜಂಘಾಬಲವೂ ಕುಸಿದಿತ್ತು. ಎನ್.ಸಿ.ಪಿ. ಕೂಡಾ ಇಂತಹದ್ದೇ ಸಮಸ್ಯೆಗಳನ್ನ ಎದುರಿಸಿತ್ತು. ಇದೇನಿದ್ದರೂ ಮುಳುಗುತ್ತಿರುವ ಹಡಗು ಅಂತ ಆ ಪಕ್ಷದಿಂದಲೂ ಆಯಕಟ್ಟಿನ ನಾಯಕರನೇಕರು ಬಿಜೆಪಿಗೆ ತಮ್ಮನ್ನು ಮಾರಿಕೊಂಡಿದ್ದರು. ಹರ್ಯಾಣದಲ್ಲೂ ಹೆಚ್ಚು ಕಡಿಮೆ ಇಂತಹದ್ದೇ ಕತೆ. ಸಾಲದ್ದಕ್ಕೆ ಅಲ್ಲಿ ಕಾಂಗ್ರೆಸ್ ಕಡೆಯ ಕ್ಷಣದವರೆಗೂ ತೀವ್ರವಾದ ಆಂತರಿಕ ಕಚ್ಚಾಟವನ್ನೂ ಎದುರಿಸುತಿತ್ತು. ಇವೆಲ್ಲವನ್ನೂ ಮೀರಿ ನಿಂತು ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಮಹಾರಾಷ್ಟ್ರದಲ್ಲಿ ಹೋದ ಚುನಾವಣೆಯಲ್ಲಿ ಗೆದ್ದದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗಳಿಸಿದವು. ಹರ್ಯಾಣದಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತು. ಅಸ್ತಿತ್ವದಲ್ಲೇ ಇಲ್ಲ ಅಂತ ಎಲ್ಲರೂ ಕಡೆಗಣಿಸಿದ ಎರಡು ವಿರೋಧ ಪಕ್ಷಗಳು ಈ ರೀತಿ ಪುಟಿದೆದ್ದು ನಿಂತದ್ದು ಈ ಕಾಲದ ದೊಡ್ಡ ರಾಜಕೀಯ ಬೆಳವಣಿಗೆ. ಮೋದಿ-ಶಾ ದ್ವಯರ ಏಕಚಕ್ರಾಧಿಪತ್ಯದ ಲೆಕ್ಕಾಚಾರಕ್ಕೆ ಇಷ್ಟರಮಟ್ಟಿಗಾದರೂ ಆದ ಹಿನ್ನಡೆ ದೇಶದಲ್ಲಿ ಹೊಸ ರಾಜಕೀಯ ಸಾಧ್ಯತೆಗಳ ಚರ್ಚೆಗೆ ವೇದಿಕೆ ಒದಗಿಸಿದೆ.

ಕಾಂಗ್ರೆಸ್ ಇಲ್ಲಿ ಗಮನಿಸಬೇಕಾದದ್ದು ಇಷ್ಟನ್ನೇ ಅಲ್ಲ. ಲೋಕಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಚಡಪಡಿಸುತ್ತಿರುವ ಕಾಂಗ್ರೆಸ್ ಗೆ ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ನೀಡಿದ ಇನ್ನೊಂದು ಸಂದೇಶ ಏನು ಎಂದರೆ ಅದು ಇನ್ನೂ ಕೇವಲ ನೆಹರೂ ಕುಟುಂಬದ ಕುಡಿಗಳನ್ನು ಮಾತ್ರ ನೆಚ್ಚಿಕೊಂಡು ರಾಜಕೀಯ ಮಾಡಲು ಸಾಧ್ಯವಿಲ್ಲ ಎನ್ನುವುದು. ನೆಹರೂ ಕುಟುಂಬದ ವ್ಯಕ್ತಿಯೊಬ್ಬ ಪಕ್ಷ ಮುನ್ನಡೆಸಲು ಅಗತ್ಯ ಇರಬಹುದು. ಆದರೆ ಹೊಸ ತಲೆಮಾರಿನ ಮತದಾರರನ್ನು ಸೆಳೆಯುವ ಶಕ್ತಿ ವಂಶದ ಕುಡಿಗಳಲ್ಲಿ ಉಳಿದಿಲ್ಲ. ಆ ಪಕ್ಷ ಪ್ರಬಲ ಪ್ರಾದೇಶಿಕ ನಾಯಕರನ್ನು ಬೆಳೆಸದೆ ಹೋದರೆ ಅದು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹರ್ಯಾಣದಲ್ಲಿ ಕಾಂಗ್ರೆಸ್ಸಿಗೆ ಗೆಲುವು ತಂದುಕೊಟ್ಟಿದ್ದು ಬೂಪಿಂದರ್ ಸಿಂಗ್ ಹೂಡಾ ಎನ್ನುವ ಪ್ರಾದೇಶಿಕ ನಾಯಕ. ಮಹಾರಾಷ್ಟ್ರದಲ್ಲಿ ಅದು ಗೆದ್ದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು ಸ್ಥಳೀಯ ನಾಯಕತ್ವದ ಕಾರಣಕ್ಕೆ. ಕಾಂಗ್ರೆಸ್ ಸ್ಥಳೀಯ ನಾಯಕರೆಲ್ಲಾ ಅವರವರ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿದ್ದರೆ, ಕಾಂಗ್ರೆಸ್-ಎನ್.ಸಿ.ಪಿ. ಮೈತ್ರಿಕೂಟವನ್ನು ಜನರತ್ತ ಒಯ್ದದ್ದು ಶರದ್ ಪವಾರ್ ಎಂಬ ಏಕಾಕಿ ನಾಯಕ. ಇಳಿವಯಸ್ಸಲ್ಲೂ ಈ ಚುನಾವಣೆಯನ್ನೊಂದು ಸವಾಲಾಗಿ ತೆಗೆದುಕೊಂಡು ಕಾಲಿಗೆ ಚಕ್ರಕಟ್ಟಿಕೊಂಡಂತೆ ಇಡೀ ರಾಜ್ಯ ತಿರುಗಿ ಪವಾರ್ ಮೈತ್ರಿಕೂಟಕ್ಕೆ ಮತ್ತೆ ಜನ ಒಲಿಯುವಂತೆ ಮಾಡಿದರು. ಈ ಯಶಸ್ಸನ್ನು ಮುಂದಿನ ಹಂತಕ್ಕೆ ಒಯ್ಯಬೇಕಾದರೆ, ಕಾಂಗ್ರೆಸ್ಸಿಗೆ ಹೊಸ ಮುಖಗಳ ಅಗತ್ಯವಿದೆ. ಈ ಅಗತ್ಯವನ್ನು ಆ ಪಕ್ಷ ಗುರುತಿಸದೆ ಹೋದರೆ ಮತ್ತೆ ಅದಕ್ಕೆ ಸೋಲಿನಲ್ಲೇ ಸಮಾಧಾನ ಪಟ್ಟುಕೊಳ್ಳುವ ಸ್ಥಿತಿ ಶಾಶ್ವತವಾದೀತು.

ಇನ್ನೊಂದು ವಿಷಯ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ದಾಖಲಿಸಿದ ನಂತರ ಬಿಜೆಪಿಯವರು ಈ ದೇಶದ ರಾಜಕೀಯದಲ್ಲಿ ಇನ್ನು ಜಾತಿ-ಆಧಾರಿತ ಮತಗಳಿಕೆಗೆ ಅವಕಾಶವಿಲ್ಲವೆಂದೂ, ಇನ್ನು ಏನಿದ್ದರೂ ‘ಅಭಿವೃದ್ಧಿ’ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲೇ ಚುನಾವಣೆ ನಡೆಯುವುದು ಎಂಬ ವಾದವೊಂದನ್ನು ಮುಂಚೂಣಿಗೆ ತಂದರು. ಹಾಗೆಯೇ ವಿವಿಧ ರಾಜ್ಯಗಳಲ್ಲಿ ನಿರ್ಣಾಯಕವಾಗಿರುವ ಪ್ರಬಲ ಜಾತಿಗಳ ಪ್ರಭಾವದಿಂದ ಆಯಾ ರಾಜ್ಯಗಳ ರಾಜಕೀಯವನ್ನು ಹೊರತಂದು ಅಲ್ಲೆಲ್ಲಾ ಧರ್ಮಾಧಾರಿತವಾದ ಹೊಸ ರಾಜಕೀಯವೊಂದನ್ನು ಕಟ್ಟುವ ಇರಾದೆಯೂ ಬಿಜೆಪಿಯದ್ದಾಗಿತ್ತು. ಜಾತಿ ರಾಜಕೀಯ ಕೊನೆಯಾಗಬೇಕು ಎನ್ನುವುದು ಸರಿಯಾದ ವಾದವೇ ಆಗಿದ್ದರೂ, ಅದಕ್ಕೆ ಬಿಜೆಪಿಯ ಧರ್ಮ-ಆಧಾರಿತ ರಾಜಕೀಯ ಉತ್ತರವಾಗಬಾರದು. ಹಾಗೆ ನೋಡಿದರೆ ಪ್ರಬಲ ಜಾತಿಗಳನ್ನು ಮಣಿಸಲು ಬಿಜೆಪಿ ಕೂಡಾ ಸಣ್ಣಸಣ್ಣ ಜಾತಿಗಳನ್ನು ಒಗ್ಗೂಡಿಸುವ ಜಾತಿ ರಾಜಕೀಯವನ್ನೇ ನೆಚ್ಚಿಕೊಂಡದ್ದು ಎನ್ನುವುದು ಕೂಡಾ ಸತ್ಯ. ಅದೇನೇ ಇರಲಿ, ಮಹಾರಾಷ್ಟ್ರ ಮತ್ತು ಹರ್ಯಾಣದ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಜಾತಿಯ ಪ್ರಭಾವ ಕುಗ್ಗುವುದು ಬಿಡಿ, ನಗರ ಮಧ್ಯಮ ವರ್ಗಗಳ ಆಚೆಗೆ ಜಾತಿ-ಆಧಾರಿತ ರಾಜಕೀಯ ಸಣ್ಣಗೆ ಅಲುಗಾಡಿದ ಹಾಗೆಯೂ ಕಾಣಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಮರಾಠರು ಶರದ್ ಪವಾರರ ಕೈಹಿಡಿದದ್ದು, ಅದೇರೀತಿ ಮರಾಠರಿಗೆ ಮೀಸಲಾತಿ ನೀಡಿದ ಕಾರಣಕ್ಕೆ ದಲಿತ ಮತ್ತು ಹಿಂದುಳಿದ ಮತಗಳು ಬಿಜೆಪಿಯಿಂದ ದೂರ ಸರಿದದ್ದು ಕಂಡುಬರುತ್ತದೆ. ಹರ್ಯಾಣದಲ್ಲಿ ಕಾಂಗ್ರೆಸ್ ಜಾಟರ ಸಮುದಾಯದ ಭೂಪಿಂದರ್ ಸಿಂಗ್ ಮತ್ತು ದಲಿತ ಸಮುದಾಯದ ಕುಮಾರಿ ಶೆಲ್ಜಾ ಅವರನ್ನು ಮುಂಚೂಣಿಗೆ ತಂದ ಕಾರಣಕ್ಕೆ ಆ ಪಕ್ಷಕ್ಕೆ ಜಾಟ- ದಲಿತರ ಮತಗಳು ಒಲಿದಂತೆಯೂ ಕಂಡುಬರುತ್ತದೆ. ಒಟ್ಟಿನಲ್ಲಿ, ಭಾರತದ ಚುನಾವಣೆಗಳ ಒಳಸುಳಿಗಳನ್ನು ಸುಲಭ ಲೆಕ್ಕಾಚಾರದಲ್ಲಿ ಅರ್ಥಮಾಡಿಕೊಳ್ಳುವ ಹಾಗಿಲ್ಲ ಎನ್ನುವುದಕ್ಕೆ ಇನ್ನೊಂದು ಸಾಕ್ಷಿಯಾಗಿ ಎರಡು ರಾಜ್ಯಗಳ ಚುನಾವಣಾ ಫಲಿತಾಂಶಗಳು ನಮ್ಮ ಮುಂದಿವೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....