ದೆಹಲಿ ಗಲಭೆಯಲ್ಲಿ ಬೆಂಕಿ ಹಚ್ಚಿದ ಹಾಗೂ ಕೊಲೆ ಮಾಡಿದ ಆರೋಪ ಹೊಂದಿರುವ ತಾಹಿರ್ ಹುಸೇನ್ ಅವರನ್ನು ಆಮ್ ಆದ್ಮಿ ಪಕ್ಷವು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಹುಸೇನ್ ಅವರ ಮೇಲಿನ ಆರೋಪದ ತನಿಖೆಯ ನಂತರ ಅವರ ಅಮಾನತು ತೆರವು ಗೊಳಿಸಲಾಗುವುದು ಎಎಪಿ ಟ್ವೀಟಿಸಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ತಾಹಿರ್ ಹುಸೇನ್ ಅವರ ಮೇಲೆ ಗುಪ್ತಚರ ಇಲಾಖೆಯ ಉದ್ಯೋಗಿ ಅಂಕಿತ್ ಶರ್ಮಾ ಅವರ ಸಾವಿಗೆ ಸಂಬಂಧಿಸಿದಂತೆ ಕೊಲೆ ಆರೋಪ ಹೊರಿಸಲಾಗಿದೆ. ಗುಪ್ತಚರ ಇಲಾಖೆಯ ಉದ್ಯೋಗಿಯಾಗಿದ್ದ ಅಕಿಂತ್ ಶರ್ಮಾರ ಮೃತದೇಹ ಜಾಫ್ರಾಬಾದ್ ಹತ್ತಿರದ ಚರಂಡಿಯಲ್ಲಿ ಪತ್ತೆಯಾಗಿತ್ತು. ಹುಸೇನ್ ಅವರ ಬೆಂಬಲಿಗರು ತಮ್ಮ ಮಗನನ್ನು ಕೊಂದಿದ್ದಾರೆ ಎಂದು ಅಂಕಿತ್ ಅವರ ತಂದೆ ಆರೋಪಿಸಿದ್ದಾರೆ.
ಜಾಫ್ರಾಬಾದ್ನ ತನ್ನ ಮನೆಯ ಸಮೀಪ ಚರಂಡಿಯಲ್ಲಿ ಪತ್ತೆಯಾದ ಅಂಕಿತ್ ಶರ್ಮಾ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಇರಿದಿದೆ. ಗುರುವಾರ ಬಿಡುಗಡೆಯಾದ ಮರಣೋತ್ತರ ವರದಿಯು ಅವರ ದೇಹದಾದ್ಯಂತ ಅನೇಕ ಇರಿತದ ಗಾಯಗಳು ಇರುವುದನ್ನು ಸೂಚಿಸಿದೆ.
ಅಂಕಿತ್ ಶರ್ಮಾ ಅವರ ಸಾವಿನಲ್ಲಿ ಹುಸೇನ್ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕೂಡ ಮಾಡಿದ್ದಾರೆ.
ತಾಹಿರ್ ಹುಸೇನ್ ಅವರಂತರೆ ತೋರುವ ವ್ಯಕ್ತಿಯೊಬ್ಬ ಕಟ್ಟಡದ ಮೇಲಿನಿಂದ ಕಲ್ಲು ಎಸೆಯುವವರೊಂದಿಗೆ ಕೋಲುಗಳನ್ನು ಹಿಡಿದ ವೀಡಿಯೋವೊಂದು ವೈರಲಾಗಿದೆ. ವೀಡಿಯೊಗಳಲ್ಲಿ ಕಟ್ಟಡದ ಕೆಳಗಿನಿಂದ ದಪ್ಪ ಹೊಗೆ ಏಳುತ್ತಿರುವ ದೃಶ್ಯವಿದೆ.
ಹುಸೇನ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ “ನಾನು ಮತ್ತು ನನ್ನ ಕುಟುಂಬ 24 ರಂದು ಪೊಲೀಸರ ಸಮ್ಮುಖದಲ್ಲಿ ಸುರಕ್ಷಿತ ಸ್ಥಳಕ್ಕೆ ಹೋಗಿದ್ದೇವೆ ಅದರ ನಂತರ ಮನೆಗೆ ಹಿಂದಿರುಗಲಿಲ್ಲ” ಎಂದು ಹೇಳಿದ್ದಾರೆ.
ದೆಹಲಿ ಹಿಂಸಾಚಾರದಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದೆಹಲಿ ಪೊಲೀಸರು ಮತ್ತು ಗೃಹ ಸಚಿವಾಲಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.