Homeಮುಖಪುಟಗೃಹ ಸಚಿವರ ಜಿಲ್ಲೆಯಲ್ಲೇ ಕಾಂಗ್ರೆಸ್ ನಾಯಕಿಯ ಭೀಕರ ಹತ್ಯೆ: ಒಂದು ಕೊಲೆಯ ಸುತ್ತ...

ಗೃಹ ಸಚಿವರ ಜಿಲ್ಲೆಯಲ್ಲೇ ಕಾಂಗ್ರೆಸ್ ನಾಯಕಿಯ ಭೀಕರ ಹತ್ಯೆ: ಒಂದು ಕೊಲೆಯ ಸುತ್ತ…

ವಾಟ್ಸಾಫ್, ಫೇಸ್ಬುಕ್‍ನಲ್ಲಿ ರೇಷ್ಮಾ ಪಡೇಕನೂರ ಸಾವಿನ ಕುರಿತು ದಿನಕ್ಕೊಂದು ಸುದ್ದಿಗಳು ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ.

- Advertisement -
- Advertisement -

| ಶಿವಾ |

ಮಳೆ ನಿಂತರೂ ಮಳೆ ಹನಿ ನಿಲ್ಲುತ್ತಿಲ್ಲ ಎನ್ನುವಂತೆ, ಭೀಮೆಯ ಒಡಲು ಕೊಂಚಮಟ್ಟಿಗೆ ತಣ್ಣಗಾದರೂ; ಸೂಫಿ, ಸಂತರ ನಾಡಾದ ವಿಜಯಪುರದಲ್ಲಿ ಮಾತ್ರ ರಕ್ತದ ಹನಿ ಹನಿಯುತ್ತಲೇ ಇದೆ. ವೈಯಕ್ತಿಕ ದ್ವೇಷ, ಹಗೆತನಕ್ಕೆ ಈ ಹಿಂದೆ ಸಾಕಷ್ಟು ಹೆಣಗಳು ಬಿದ್ದಿವೆ. ಆದರೆ ಈಚೆಗೆ ನಡೆದ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಭೀಕರ ಹತ್ಯೆ ಜಿಲ್ಲೆಯ ಜನರನ್ನು ಮತ್ತೆ ಬೆಚ್ಚಿ ಬೀಳುವಂತೆ ಮಾಡಿದ್ದು, ಗೃಹ ಸಚಿವ ಎಂ.ಬಿ. ಪಾಟೀಲರ ತವರೂರಲ್ಲಿಯೇ ತಮ್ಮದೇ ಪಕ್ಷದ ನಾಯಕಿಯೊಬ್ಬರು ಹೀಗೆ ಭೀಕರವಾಗಿ ಕೊಲೆಯಾಗಿರುವುದು ದುರಂತದ ಸಂಗತಿ.

ಮೊದಲೆಲ್ಲಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೇಷ್ಮಾ ಪಡೇಕನೂರ ರಾಜಕೀಯ ನಾಯಕಿ ಆಗಬೇಕೆನ್ನುವ ಹಂಬಲದಿಂದ ರಾಜಕೀಯಕ್ಕೆ ಧುಮ್ಮುಕ್ಕಿದ್ದಳು. ಇದೇ ಹತ್ತು, ಹನ್ನೆರಡು ವರ್ಷಗಳ ಹಿಂದೆ ಸಾಮಾನ್ಯ ಮಹಿಳೆಯಂತಿದ್ದ ರೇಷ್ಮಾ ಪಡೇಕನೂರ; ನೋಡುನೋಡುತ್ತಿದ್ದಂತೆ ಪ್ರಮುಖ ರಾಜಕೀಯ ನಾಯಕರೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತನ್ನ ವರ್ಚಸ್ಸು ಬೆಳೆಸಿಕೊಂಡಿದ್ದಳು. ಹೀಗೆ ರಾಜಕೀಯವಾಗಿ ಬೆಳೆದವಳು ಕೆಲವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದಳು ಎಂದು ಹೇಳಲಾಗುತ್ತಿದ್ದು, ಈ ಹಣಕಾಸಿನ ವ್ಯವಹಾರದ ವೈಮನಸ್ಸಿಗೆ ರೇಷ್ಮಾ ಪಡೇಕನೂರ ಬಲಿಯಾದಳಾ? ಇಲ್ಲಾ ಅವಳು ರಾಜಕಾರಣಿ ಆಗಲು ಹೊರಟಿದ್ದ ಆ ರಾಜಕಾರಣವೇ ರೇಷ್ಮಾಳ ಬದುಕಿಗೆ ಮುಳ್ಳಾಯಿತಾ? ಅದ್ಯಾವ ಹಗೆತನ, ದ್ವೇಷಕ್ಕಾಗಿ ರೇಷ್ಮಾ ಕೊಲೆಯಾದಳು ಎನ್ನುವ ಪ್ರಶ್ನೆಗೆ ಪೊಲೀಸ್ ಇಲಾಖೆ ಉತ್ತರ ನೀಡಬೇಕಿದೆ.

ದಯೆ ಸ್ವಯಂ ಸೇವಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆಯಾದ ರೇಷ್ಮಾ ಪಡೇಕನೂರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಹಾಗೂ ಈ ಹಿಂದೆ ಜೆಡಿಎಸ್ ವಿಜಯಪುರ ಜಿಲ್ಲಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿ, ಕಳೆದ ವರ್ಷವಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಳು. ಇಂತಹ ರಾಜಕೀಯ ಧುರೀಣೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕೊಲೆಯಾದ ರೇಷ್ಮಾ ಪತಿ ಖಾಜಾ ಬಂದೇನವಾಜ್ ಪಡೇಕನೂರ ಸೊಲ್ಲಾಪುರದ ಎಐಎಂಐಎಂ ಪಕ್ಷದ ಮುಖಂಡ ಫೈಲವಾನ್ ತೌಫೀಕ್ ಇಸ್ಮಾಯಿಲ್ ಶೇಖ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತೌಫೀಕ್ ಶೇಖ ಜೊತೆಗೆ ರೇಷ್ಮಾ ಪಡೇಕನೂರಳ ಹಣಕಾಸಿನ ವ್ಯವಹಾರವಿತ್ತು. ಈ ಕುರಿತು ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಜಗಳವೂ ನಡೆದಿತ್ತು. ಈ ಸಂಬಂಧ ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು. ಈತನೇ ಮೊನ್ನೆ ರಾತ್ರಿ, ಹಣಕಾಸಿನ ವಿಷಯ ಮಾತನಾಡಲಿಕ್ಕಾಗಿಯೇ ರೇಷ್ಮಾಳನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದ. ಈತನೇ ಕೊಲೆ ಮಾಡಿರಬಹುದು ಎಂದು ದೂರು ನೀಡಲಾಗಿದೆ.

ಅಲ್ಲದೆ ಈ ಹಿಂದೆ ಎಂಐಎಂ ಮುಖಂಡ ತೌಫೀಕ್ ಶೇಖನ ಹೆಂಡತಿ, ವಿಜಯಪುರದ ರೇಷ್ಮಾಳ ಮನೆಗೆ ಬಂದು, ನನ್ನ ಗಂಡನ ಜೊತೆ ವಾಟ್ಸಾಫ್‍ನಲ್ಲಿ ಚಾಟಿಂಗ್ ಮಾಡುತ್ತೀ? ಅವನಿಗೂ ನಿನಗೂ ಏನು ಸಂಬಂಧ? ಎಂದು ಕ್ಯಾತೆ ತೆಗೆದು, ಜಗಳ ಮಾಡಿದ್ದಳು ಎನ್ನಲಾಗಿದೆ. ತೌಫೀಕ್ ಶೇಖ್ ಮತ್ತು ನನ್ನ ಮಧ್ಯೆ ಹಣಕಾಸಿನ ಸಂಬಂಧವಿದ್ದು, ಆತನ ಹೆಂಡತಿ ಇನ್ನಿಲ್ಲದ ಖ್ಯಾತೆ ತೆಗೆಯುತ್ತಿದ್ದಾಳೆ ಎಂದು ಆಕೆಯ ವಿರುದ್ಧ, ರೇಷ್ಮಾ ಪಡೇಕನೂರ ವಿಜಯಪುರದ ಜಲನಗರ ಠಾಣೆಯಲ್ಲಿ ದೂರು ನೀಡಿದ್ದಳು.

ರಾತ್ರಿ ಹೋದವಳು ಹೆಣವಾದಳು.

ಕೊಲೆ ನಡೆದ ದಿನ ರೇಷ್ಮಾ ಪಡೇಕನೂರ ರಾತ್ರಿ ತನ್ನ ವಿಜಯಪುರ ನಗರದ ಮನೆಯಿಂದ ಆಗಂತುಕನೊಂದಿಗೆ ಹೋದವಳು ಬೆಳಗಾಗುತ್ತಿದ್ದಂತೆ ಬಸವನಬಾಗೇವಾಡಿ ತಾಲೂಕಿನ ಕೊರ್ತಿ- ಕೊಲ್ಹಾರ ಸೇತುವೆ ಕೆಳಗೆ ಶವವಾಗಿ ಸುದ್ದಿಯಾದಳು. ಈ ನಿಗೂಢ ಕೊಲೆಗೆ ಜಿಲ್ಲೆಯ ಜನರು ತಲ್ಲಣಗೊಂಡದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಲವು ಅನುಮಾನಗಳನ್ನು ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ, ಮಾಜಿ ಸಚಿವ ಎಸ್.ಆರ್. ಪಾಟೀಲ (ಬಾಡಗಂಡಿ), ಸಚಿವ ಎಂ.ಸಿ. ಮನಗೂಳಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ರೇಷ್ಮಾ ಪಡೇಕನೂರ ಕಳೆದ ವರ್ಷ ಎಂ.ಬಿ. ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಳು. ಆದರೆ ಮೊನ್ನೆ ಬರ್ಬರ ಹತ್ಯೆಯಾಗಿ, ಕೊಲ್ಹಾರ ಸೇತುವೆ ಕಳೆಗೆ ಬಿದ್ದಿದ್ದು ವಿಪರ್ಯಾಸ.

ವೈರಲ್ ಸುದ್ದಿ
ವಾಟ್ಸಾಫ್, ಫೇಸ್ಬುಕ್‍ನಲ್ಲಿ ರೇಷ್ಮಾ ಪಡೇಕನೂರ ಸಾವಿನ ಕುರಿತು ದಿನಕ್ಕೊಂದು ಸುದ್ದಿಗಳು ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ತೌಫೀಕ್ ಶೇಖ್ ಮತ್ತು ರೇಷ್ಮಾ ಪಡೇಕನೂರ ನಡುವೆ ನಡೆದ ಸಂಭಾಷಣೆ ಸೇರಿದಂತೆ ಮೂರು ಆಡಿಯೋ ತುಣುಕುಗಳು ಜಿಲ್ಲೆಯಾದ್ಯಂತ ವೈರಲ್ ಆಗಿವೆ.

ಪೈಲ್ವಾನನ ಬಗ್ಗೆ ಹಗುರವಾಗಿ ಮಾತನಾಡಿದ ರೇಷ್ಮಾ ಪಡೇಕನೂರ ಅವರ ಧ್ವನಿ ಬಹುಶಃ ಕೊಲೆಗೆ ಕಾರಣವಾಗಿರಬಹುದೇ? ಫೈಲವಾನನ ಆಪ್ತರ ಮುಂದೆ ರೇಷ್ಮಾ ಪಡೇಕನೂರ ಅತ್ಯಂತ ಹೀನಾಯವಾಗಿ ಮಾತನಾಡಿದ್ದು, ಈ ಧ್ವನಿ ಮುದ್ರಿಕೆಯಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಹಾಗಂತ ಇದನ್ನೆ ಪ್ರಮುಖ ಸಾಕ್ಷಿಯಾಗಿ ನಂಬುವಂತಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಈ ಧ್ವನಿ ಮುದ್ರಿಕೆಗಳನ್ನು ಕಳಿಸಿ, ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಅವಶ್ಯಕತೆಯೂ ಇದೆ. ದಿನ ಕಳೆದಂತೆ ರೇಷ್ಮಾ ಪಡೇಕನೂರ ಕಗ್ಗೊಲೆಯ ಹಿಂದಿನ ರಹಸ್ಯ ತೆರೆದಿಡುವ ಹೊಣೆಗಾರಿಕೆ ಜಿಲ್ಲೆ ಮತ್ತು ರಾಜ್ಯ ಪೊಲೀಸರ ಮೇಲಿದೆ. ಕೊಲೆಗೆ ಕಾರಣ ಏನೇ ಇರಲಿ ಆದರೆ ಜಿಲ್ಲೆಯಲ್ಲಿ ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಈ ಕೊಲೆಯೇ ನಿಚ್ಚಳ ನಿದರ್ಶನವಾಗಿದೆ.

ಡಾ.ಎಂ.ಬಿ. ಪಾಟೀಲರು ಗೃಹ ಸಚಿವರಾದ ಮೇಲೆ ಹಳೇ ಕ್ರಿಮಿನಲ್‍ಗಳು ಹೊಸ ಅಪರಾಧ ಮಾಡಲು ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ದಿನಕ್ಕೆ ಐದಾರು ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ. ಇವುಗಳಿಗೆ ರಾಜಿ ಪಂಚಾಯಿತಿಯಲ್ಲಿ ಮುಕ್ತಿ ಕಾಣಿಸಲಾಗುತ್ತಿದೆ. ಇನ್ನುಳಿದಂತೆ ರೇಷ್ಮಾ ಪಡೇಕನೂರ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಹಾಗೂ ಸರಿಯಾದ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಬೇಕು. ಅಂದಾಗ ಮಾತ್ರ ಈ ನಿಗೂಢ ಕೊಲೆಯ ಹಿಂದಿರುವ ಸಂಚು ಬಯಲಾಗಲು ಸಾಧ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...