Homeಮುಖಪುಟನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

- Advertisement -
- Advertisement -

ದೇವನೂರ ಮಹಾದೇವ ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ಮಹಿಳಾ ಪಾತ್ರಗಳು ಎಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ವಿತೀಯವಾಗಿ ನೆಲೆಸಿವೆ. ದಲಿತ ಕಥನಗಳಲ್ಲಿ ಬರುವ ಮಹಿಳೆಯರು, ಗಂಡಸರ ಮುಂದೆ ನಾಚುತ್ತಾ, ಹೆಬ್ಬೆರಳು ನೆಲಕ್ಕೆ ಸವರುತ್ತಾ, ಸೆರಗು ತಲೆಯ ಮೇಲೆ ಹಾಕಿಕೊಂಡು ನಿಲ್ಲುವುದಿಲ್ಲ. ಒಡಲಾಳದ ಸಾಕವ್ವನ ಲೋಕ, ಕುಸುಮಬಾಲೆಯ ಕೆಂಪಿ, ತೂರಮ್ಮ- ಹೀಗೆ ಈ ನೆಲದ ಗಟ್ಟಿಗಿತ್ತಿಯರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಿ.ಲಂಕೇಶರು ಕಂಡ ‘ಅವ್ವ’- ಈ ಮಣ್ಣಿನ ನಿಜದ ಹೆಣ್ಣಿನ ದರ್ಶನ. ‘ಆಕೆ- ಕಪ್ಪುನೆಲ, ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು, ಬನದ ಕರಡಿ, ಭಗವದ್ಗೀತೆಯಾಚೆಯ ಬದುಕು’. ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್‌ ಸೃಷ್ಟಿಸಿದ ಮಹಿಳಾ ಪಾತ್ರಗಳು ಕೂಡ ಇದಕ್ಕಿಂತ ಭಿನ್ನವೇನಲ್ಲ. ರಂಜಿತ್ ಸಿನಿಮಾಗಳಲ್ಲಿ ಪುರುಷ ಪಾತ್ರಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮಹಿಳಾ ಪಾತ್ರಗಳಿಗೂ ಇದೆ. ರಂಜಿತ್ ನಿರ್ದೇಶನದ, ಇತ್ತೀಚೆಗೆ ತೆರೆಕಂಡ ‘ನಚ್ಚತಿರಂ ನಗರ್ಗಿರದು’ ಸಿನಿಮಾ ಈ ಗಟ್ಟಿತನವನ್ನು ಮತ್ತಷ್ಟು ವಿಸ್ತರಿಸಿದೆ.

‘ನಚ್ಚತಿರಂ ನಗರ್ಗಿರದು’ (ನಕ್ಷತ್ರ ಚಲಿಸುತ್ತಿವೆ) ಎಂಬ ಹೆಸರು ರೂಪಕದಂತಿದೆ. ಇದೊಂದು ಆಶಾವಾದದ ಸಂಕೇತ. ಬೆಳಕಿನುಂಡೆಯೊಂದು ನೆಲವನ್ನು ಸ್ಪರ್ಶಿಸುವ ಕೌತುಕದ ಕ್ಷಣ. ಇಲ್ಲಿನ ಬಹುತೇಕ ಪಾತ್ರಗಳೂ ಆ ಚಲಿಸುವ ನಕ್ಷತ್ರಕ್ಕಾಗಿ ಧ್ಯಾನಿಸುತ್ತಿವೆ. ಪ್ರೀತಿಯ ಅನ್ವೇಷಣೆಯಲ್ಲಿ ತೊಡಗಿರುವ ಇಲ್ಲಿನ ಪ್ರತಿ ಪಾತ್ರಕ್ಕೂ ಮಹತ್ವವಿದೆ. ಆದರೆ ಆ ಕಥೆ ಚಲನೆ ಪಡೆಯುವುದು ರೆನೆ ಎಂಬ ದಲಿತ ಹುಡುಗಿಯ ಸುತ್ತ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೆನೆ- ಅಂಬೇಡ್ಕರ್‌ವಾದಿ. ನೋವುಂಡು ಬೆಳೆದ ಅವಳಲ್ಲಿ ತನ್ನ ಅಸ್ಮಿತೆಯ ಕುರಿತು ಯಾವುದೇ ಅಂಜಿಕೆಯಿಲ್ಲ. ‘ಇದು ನಿಮ್ಮ ಸಮಸ್ಯೆಯೇ ಹೊರತು ನನ್ನದ್ದಲ್ಲ’ ಎಂದು ದಿಟ್ಟವಾಗಿ ಹೇಳಬಲ್ಲ ಹೆಣ್ಣುಮಗಳಾಕೆ. ‘ನಾನು ಹೇಗಿರಬೇಕೆಂದು ಇನ್ನೊಬ್ಬರ ಅಪ್ಪಣೆ ನೀಡಬೇಕಿಲ್ಲ’ ಎನ್ನುವ ರೆನೆ ದನದ ಮಾಂಸ ತಿನ್ನುತ್ತಾ, ‘ಇದು ನನ್ನ ಅಸ್ಮಿತೆ’ ಎನ್ನುವವಳು. ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಲುಕಿರುವ ಮನಸ್ಸುಗಳನ್ನು ನೋಡಿ ಗಹಗಹಿಸಿ ನಗುವವಳು. ‘ತಮಿಳ್‌’ ಎಂಬ ಹೆಸರಿನ ಹುಡುಗಿ ‘ರೆನೆ’ಯಾಗಿ ಗುರುತಿಸಿಕೊಂಡಿದ್ದಾಳೆ. ಈಕೆಯ ಹೆಸರು ‘ತಮಿಳ್‌’ ಎಂದೂ, ಅವಳ ಮೂಲವನ್ನು ಹಂಗಿಸುವ ಜಾತೀಯ ಸುಪ್ತ ಮನಸ್ಥಿತಿಗಳು ಇಲ್ಲಿ ಅನಾವರಣವಾಗುತ್ತವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದೆ, ಓದಿನ ಮೂಲಕ ಗಟ್ಟಿಯಾದವಳು ರೆನೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಅದೊಂದು ರಂಗಭೂಮಿ ಕಲಾವಿದರ ಪುಟ್ಟ ತಂಡ. ಪ್ರೀತಿಯ ಬಗ್ಗೆ ನಾಟಕವೊಂದನ್ನು ಮಾಡಬೇಕೆಂದು ಹೊರಟಿದೆ. ಪ್ರೀತಿ ಎಂದರೇನು? ಅದಕ್ಕಿರುವ ಮಾನದಂಡ ಯಾವುದು? ಯಾವುದನ್ನು ತೆರೆಯ ಮೇಲೆ ತರಬೇಕೆಂಬ ಚರ್ಚೆಯಲ್ಲಿರುವ ತಂಡವು, ಪ್ರೀತಿಯ ಸುತ್ತಲಿನ ರಾಜಕಾರಣದ ಕುರಿತು ಮಾತನಾಡುತ್ತದೆ. ರಂಜಿತ್‌ ಶೋಧಿಸಲು ಹೊರಟಿದ್ದು ಇದನ್ನೇ. ಪ್ರೀತಿಯೆಂದರೆ ಕೇವಲ ಗಂಡು- ಹೆಣ್ಣಿನ ಸಂಬಂಧಗಳಿಗೆ ಸೀಮಿತ ಜನಪ್ರಿಯ ಗ್ರಹಿಕೆಯನ್ನು ಒಡೆಯುತ್ತಾರೆ ರಂಜಿತ್‌.

ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್‌, ಗಂಡು- ಹೆಣ್ಣಿನ ನಡುವಿನ ಸಂಬಂಧ- ಇದೆಲ್ಲವನ್ನೂ ಸಮಾಜ ಒಳಗೊಂಡಿದೆ ಎಂಬುದನ್ನು ಚಿತ್ರಿಸುತ್ತಲೇ, ಪ್ರಧಾನವಾಗಿ ರಂಜಿತ್‌ ಚರ್ಚಿಸಿರುವುದು ಜಾತಿ ಸುತ್ತಲಿನ ಪ್ರೀತಿಯ ಕುರಿತು. ಮರ್ಯಾದೆಗೇಡು ಹತ್ಯೆಗಳ ಸುತ್ತಲಿನ ರಾಜಕೀಯದ ಚರ್ಚೆ ನಡೆಸುತ್ತಲೇ ಇಲ್ಲಿನ ಸಂಪ್ರದಾಯವಾದಿ ಮನಸ್ಸುಗಳ ಪರಿವರ್ತನೆಗೆ ಅವಕಾಶ ನೀಡಬೇಕೆಂಬ ಆಶಯವನ್ನು ರಂಜಿತ್ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಮೂಲಭೂತವಾದಿಗಳಿಗೆ ‘ಗೂಸಾ’ ಕೊಡುವುದೂ ಅನಿವಾರ್ಯವೆಂದು ರಂಜಿತ್ ನಂಬಿದಂತಿದೆ.

ರೆನೆಯ ‘ನೇಚರ್‌’ (ಬುದ್ಧಿ/ಜಾತೀಯ ಗುಣ) ಬಗ್ಗೆ ಮೂದಲಿಸುವ ಆಕೆಯ ಪ್ರಿಯಕರ ಇನಿಯನ್‌ ಆನಂತರದಲ್ಲಿ ಪರಿತಪಿಸುತ್ತಾನೆ. ಆತನ ಮೂದಲಿಕೆಯನ್ನೆಲ್ಲ ಮೂಲೆಗೆ ತಳ್ಳಿ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಇರುವ ರೆನೆಯನ್ನು ಕಂಡು ಆತ ಹೊಟ್ಟೆಕಿಚ್ಚು ಪಡುತ್ತಿರುವವನಂತೆ ಭಾಸವಾದರೂ ಇಂಚಿಂಚೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾನೆ. ಇನಿಯನ್‌ನಂತೆಯೇ ಅರ್ಜುನ್ ಎಂಬ ಪಾತ್ರವನ್ನು ನೋಡಬೇಕಾಗುತ್ತದೆ. ಈ ರಂಗತಂಡವನ್ನು ಸೇರಿದ ಅರ್ಜುನ್‌ ಸಂಪ್ರದಾಯವಾದಿಯೂ ಹೌದು. ಗೇ ಸೆಕ್ಸ್‌, ಟಾನ್ಸ್‌ಜೆಂಡರ್‌ ಪ್ರೀತಿ- ಇದ್ಯಾವುದನ್ನೂ ಮುಕ್ತವಾಗಿ ನೋಡದ ಆತ, ರೆನೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಆದರೆ ರೆನೆ ಕ್ಷಮಿಸುವ ಗುಣ ತೋರುತ್ತಾಳೆ. ಆತನ ಮನಪರಿವರ್ತನೆಗೆ ಅವಕಾಶ ನೀಡುತ್ತಾಳೆ.

ಈ ಕಲಾತಂಡ ಪ್ರದರ್ಶಿಸಲಿರುವ ನಾಟಕದಲ್ಲಿ ಮಾರ್ಯಾದೆಗೇಡು ಹತ್ಯೆಯನ್ನು ಢಾಳಾಗಿ ತೋರಿಸಲು ಇಚ್ಚಿಸಿರುವ ನಿರ್ದೇಶಕನಿಗೆ ಕೆಲವು ಸಲಹೆಗಳನ್ನು ಅರ್ಜುನ್ ನೀಡುವ ಮಟ್ಟಕ್ಕೆ ಬದಲಾಗುತ್ತಾನೆ. “ಹೆತ್ತ ಮಗಳನ್ನು ತಂದೆ ಕೊಲ್ಲುವುದು ಸರಿಯೇ? ಇಲ್ಲಿಗೆ ಬರುವ ಮುನ್ನ conservative ಆಗಿದ್ದ ನಾನು ಈಗ ಎಷ್ಟೊಂದು ಬದಲಾಗಿದ್ದೇನೆ. ಸಮಾಜದ ಬದಲಾವಣೆಗೂ ಅವಕಾಶ ನೀಡಬೇಕು” ಎಂಬ ಆಶಯವನ್ನು ಅರ್ಜುನ್ ವ್ಯಕ್ತಪಡಿಸುತ್ತಾನೆ. ರೆನೆಯ ಸ್ವಾಭಿಮಾನ, ದಿಟ್ಟತನಗಳಿಗೆ ಮನಸೋಲುವ ಅರ್ಜುನ್‌, ತನ್ನ ಜಾತಿವಾದಿ ಕೌಟುಂಬಿಕ ವ್ಯವಸ್ಥೆಯಿಂದ ಹೊರಗೆ ಕಾಲಿಡಲು ನಿರ್ಧರಿಸಿರುವುದು ಇದರ ಮುಂದುವರಿದ ಭಾಗ.

ಮನುವಾದಿ ವ್ಯವಸ್ಥೆ ಭಾರತೀಯತೆಯ ಬೇರುಗಳ ಬಗ್ಗೆ ಸದಾ ಮಾತನಾಡುತ್ತದೆ. ಈ ಬೇರುಗಳಲ್ಲಿ ಜಾತಿ ಮೀರಿದ ಪ್ರೀತಿ ನಿಷಿದ್ಧ, ವರ್ಗ ಮೀರಿದ ಸಂಬಂಧ ನಿಷಿದ್ಧ, ಹೆಣ್ಣು-ಗಂಡಿನ ಪ್ರೀತಿಯಾಚೆಯ ಗೇ ಸೆಕ್ಸ್‌, ಲೆಸ್ಬಿಯನ್‌ ಸೆಕ್ಸ್ ನಿಷಿದ್ಧ. ಇದ್ಯಾವುದೂ ನಮ್ಮ ಬೇರುಗಳಲ್ಲ ಎನ್ನುತ್ತದೆ ಮನುವಾದ. ಯಥಾಸ್ಥಿತಿಯನ್ನು ಸಂಪ್ರದಾಯವಾದಿಗಳು ಬಯಸುತ್ತಾರೆ. ಯಾವುದನ್ನು ಭಾರತದ ಬೇರುಗಳೆಂದು ಧಾರ್ಮಿಕ ಮೂಲಭೂತವಾದಿಗಳು ವಾದಿಸುತ್ತಿದ್ದಾರೋ ಅದಕ್ಕೆ ಬಲವಾದ ಕೊಡಲಿಪೆಟ್ಟು ಕೊಟ್ಟಿದ್ದು- ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದ ಸಂವಿಧಾನ. ಬುದ್ಧನ ಪ್ರೀತಿ, ಕಾರುಣ್ಯ, ಬಸವಾದಿ ಶರಣರ ಪ್ರಜಾಪ್ರಭುತ್ವ ಪರಿಕಲ್ಪನೆಯೇ ಈ ನೆಲದ ನಿಜವಾದ ಬೇರುಗಳು. ಈ ನಿಜದ ಬೇರನ್ನು ಅಲುಗಾಡಿಸಲು ಬರುವ ಮೂಲಭೂತವಾದಿಗಳನ್ನು, ಅಂಬೇಡ್ಕರ್‌ ಆಶಯದಲ್ಲಿ ನಂಬಿಕೆ ಇಟ್ಟ ಮನಸ್ಸುಗಳು ಒಂದಾಗಿ ಹೊಡೆದೋಡಿಸಬೇಕೆಂಬ ಸಂದೇಶವನ್ನು ರಂಜಿತ್‌ ನೀಡಿದ್ದಾರೆ. ಎಳೆಯ ಮಕ್ಕಳ ಮನಸ್ಸಿಗೆ ಮನುವಾದವನ್ನು ತುರುಕುವ ಪ್ರಯತ್ನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಡೆಯುತ್ತಿರುವ ಹೊತ್ತಿನಲ್ಲಿ ರಂಜಿತ್‌, ‘ನಕ್ಷತ್ರಗಳು ಚಲಿಸುತ್ತಿವೆ’ ನೋಡಿದಿರಾ ಎಂದಿದ್ದಾರೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಪ್ರೀತಿಯ ಉದಾತ್ತ ಆಶಯವನ್ನು ಪ್ರದರ್ಶಿಸುತ್ತಿರುವ ಕಲಾತಂಡದ ಮೇಲೆ ‘ಫ್ರಿಂಜ್‌ ಎಲಿಮೆಂಟ್’ ಒಬ್ಬ ದಾಳಿ ಮಾಡುತ್ತಾನೆ (ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ‘ಜೊತೆಗಿರುವನು ಚಂದಿರ’ ನಾಟಕಕ್ಕೆ ಅಡ್ಡಿಪಡಿಸಿದ್ದನ್ನು ನೆನೆಯಬಹುದು). ಇಂತಹ ಫ್ರಿಂಜ್‌ಗಳ ಹಿಂದೆ ಮಾಸ್ಟರ್‌ಗಳಿದ್ದಾರೆ, ಪೊಲೀಸ್ ವ್ಯವಸ್ಥೆಯ ರಕ್ಷಣೆ ಇದೆ. ಆದರೆ ಇದೆಲ್ಲವನ್ನೂ ಅಂಬೇಡ್ಕರ್‌ ಎಂಬ ಅಸ್ತ್ರದ ಮೂಲಕ ಸೋಲಿಸಬೇಕಿರುವುದು ಅನಿವಾರ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂಬುದನ್ನು ರಂಜಿತ್‌ ಮನಗಾಣಿಸಿದ್ದಾರೆ.

ಇಡೀ ಸಿನಿಮಾದುದ್ದಕ್ಕೂ ಹರಿದಿರುವ ಕಲಾನಿರ್ದೇಶನದ ಸೊಗಸು, ಕಥೆಯ ಸಂದೇಶದ ತೀವ್ರತೆಯನ್ನು ಹೆಚ್ಚಿಸುವ ತೆನ್ಮಾ ಅವರ ಸಂಗೀತ, ಪ್ರೀತಿಯ ಜಿಜ್ಞಾಸೆಗೆ ಬಳಸಿರುವ ಅರ್ಥಪೂರ್ಣ ಸಂಭಾಷಣೆ, ಜಾನಪದೀಯ ರೂಪಕವಾಗಿ ಚಿತ್ರಿಸಲಾಗಿರುವ ಮಾರ್ಯಾದೆ ಹತ್ಯೆಗಳು- ಇವೆಲ್ಲವೂ ‘ನಚ್ಚತಿರಂ ನಗರ್ಗಿರದು’ ಸಿನಿಮಾದ ಕಲಾತ್ಮಕತೆಯನ್ನು ಹೆಚ್ಚಿಸಿವೆ. ರೆನೆಯಾಗಿ ದುಶಾರಾ ವಿಜಯನ್‌, ಇನಿಯನ್‌ ಪಾತ್ರದಲ್ಲಿ ಕಾಳಿದಾಸ್ ಜಯರಾಮ್‌, ಅರ್ಜುನ್ ಆಗಿ ಕಲೈ ಅರಸನ್‌- ಹೀಗೆ ಎಲ್ಲ ಕಲಾವಿದರು ಮನೋಜ್ಞವಾಗಿ ನಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...