Homeಮುಖಪುಟನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

- Advertisement -
- Advertisement -

ದೇವನೂರ ಮಹಾದೇವ ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ಮಹಿಳಾ ಪಾತ್ರಗಳು ಎಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ವಿತೀಯವಾಗಿ ನೆಲೆಸಿವೆ. ದಲಿತ ಕಥನಗಳಲ್ಲಿ ಬರುವ ಮಹಿಳೆಯರು, ಗಂಡಸರ ಮುಂದೆ ನಾಚುತ್ತಾ, ಹೆಬ್ಬೆರಳು ನೆಲಕ್ಕೆ ಸವರುತ್ತಾ, ಸೆರಗು ತಲೆಯ ಮೇಲೆ ಹಾಕಿಕೊಂಡು ನಿಲ್ಲುವುದಿಲ್ಲ. ಒಡಲಾಳದ ಸಾಕವ್ವನ ಲೋಕ, ಕುಸುಮಬಾಲೆಯ ಕೆಂಪಿ, ತೂರಮ್ಮ- ಹೀಗೆ ಈ ನೆಲದ ಗಟ್ಟಿಗಿತ್ತಿಯರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಿ.ಲಂಕೇಶರು ಕಂಡ ‘ಅವ್ವ’- ಈ ಮಣ್ಣಿನ ನಿಜದ ಹೆಣ್ಣಿನ ದರ್ಶನ. ‘ಆಕೆ- ಕಪ್ಪುನೆಲ, ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು, ಬನದ ಕರಡಿ, ಭಗವದ್ಗೀತೆಯಾಚೆಯ ಬದುಕು’. ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್‌ ಸೃಷ್ಟಿಸಿದ ಮಹಿಳಾ ಪಾತ್ರಗಳು ಕೂಡ ಇದಕ್ಕಿಂತ ಭಿನ್ನವೇನಲ್ಲ. ರಂಜಿತ್ ಸಿನಿಮಾಗಳಲ್ಲಿ ಪುರುಷ ಪಾತ್ರಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮಹಿಳಾ ಪಾತ್ರಗಳಿಗೂ ಇದೆ. ರಂಜಿತ್ ನಿರ್ದೇಶನದ, ಇತ್ತೀಚೆಗೆ ತೆರೆಕಂಡ ‘ನಚ್ಚತಿರಂ ನಗರ್ಗಿರದು’ ಸಿನಿಮಾ ಈ ಗಟ್ಟಿತನವನ್ನು ಮತ್ತಷ್ಟು ವಿಸ್ತರಿಸಿದೆ.

‘ನಚ್ಚತಿರಂ ನಗರ್ಗಿರದು’ (ನಕ್ಷತ್ರ ಚಲಿಸುತ್ತಿವೆ) ಎಂಬ ಹೆಸರು ರೂಪಕದಂತಿದೆ. ಇದೊಂದು ಆಶಾವಾದದ ಸಂಕೇತ. ಬೆಳಕಿನುಂಡೆಯೊಂದು ನೆಲವನ್ನು ಸ್ಪರ್ಶಿಸುವ ಕೌತುಕದ ಕ್ಷಣ. ಇಲ್ಲಿನ ಬಹುತೇಕ ಪಾತ್ರಗಳೂ ಆ ಚಲಿಸುವ ನಕ್ಷತ್ರಕ್ಕಾಗಿ ಧ್ಯಾನಿಸುತ್ತಿವೆ. ಪ್ರೀತಿಯ ಅನ್ವೇಷಣೆಯಲ್ಲಿ ತೊಡಗಿರುವ ಇಲ್ಲಿನ ಪ್ರತಿ ಪಾತ್ರಕ್ಕೂ ಮಹತ್ವವಿದೆ. ಆದರೆ ಆ ಕಥೆ ಚಲನೆ ಪಡೆಯುವುದು ರೆನೆ ಎಂಬ ದಲಿತ ಹುಡುಗಿಯ ಸುತ್ತ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೆನೆ- ಅಂಬೇಡ್ಕರ್‌ವಾದಿ. ನೋವುಂಡು ಬೆಳೆದ ಅವಳಲ್ಲಿ ತನ್ನ ಅಸ್ಮಿತೆಯ ಕುರಿತು ಯಾವುದೇ ಅಂಜಿಕೆಯಿಲ್ಲ. ‘ಇದು ನಿಮ್ಮ ಸಮಸ್ಯೆಯೇ ಹೊರತು ನನ್ನದ್ದಲ್ಲ’ ಎಂದು ದಿಟ್ಟವಾಗಿ ಹೇಳಬಲ್ಲ ಹೆಣ್ಣುಮಗಳಾಕೆ. ‘ನಾನು ಹೇಗಿರಬೇಕೆಂದು ಇನ್ನೊಬ್ಬರ ಅಪ್ಪಣೆ ನೀಡಬೇಕಿಲ್ಲ’ ಎನ್ನುವ ರೆನೆ ದನದ ಮಾಂಸ ತಿನ್ನುತ್ತಾ, ‘ಇದು ನನ್ನ ಅಸ್ಮಿತೆ’ ಎನ್ನುವವಳು. ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಲುಕಿರುವ ಮನಸ್ಸುಗಳನ್ನು ನೋಡಿ ಗಹಗಹಿಸಿ ನಗುವವಳು. ‘ತಮಿಳ್‌’ ಎಂಬ ಹೆಸರಿನ ಹುಡುಗಿ ‘ರೆನೆ’ಯಾಗಿ ಗುರುತಿಸಿಕೊಂಡಿದ್ದಾಳೆ. ಈಕೆಯ ಹೆಸರು ‘ತಮಿಳ್‌’ ಎಂದೂ, ಅವಳ ಮೂಲವನ್ನು ಹಂಗಿಸುವ ಜಾತೀಯ ಸುಪ್ತ ಮನಸ್ಥಿತಿಗಳು ಇಲ್ಲಿ ಅನಾವರಣವಾಗುತ್ತವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದೆ, ಓದಿನ ಮೂಲಕ ಗಟ್ಟಿಯಾದವಳು ರೆನೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಅದೊಂದು ರಂಗಭೂಮಿ ಕಲಾವಿದರ ಪುಟ್ಟ ತಂಡ. ಪ್ರೀತಿಯ ಬಗ್ಗೆ ನಾಟಕವೊಂದನ್ನು ಮಾಡಬೇಕೆಂದು ಹೊರಟಿದೆ. ಪ್ರೀತಿ ಎಂದರೇನು? ಅದಕ್ಕಿರುವ ಮಾನದಂಡ ಯಾವುದು? ಯಾವುದನ್ನು ತೆರೆಯ ಮೇಲೆ ತರಬೇಕೆಂಬ ಚರ್ಚೆಯಲ್ಲಿರುವ ತಂಡವು, ಪ್ರೀತಿಯ ಸುತ್ತಲಿನ ರಾಜಕಾರಣದ ಕುರಿತು ಮಾತನಾಡುತ್ತದೆ. ರಂಜಿತ್‌ ಶೋಧಿಸಲು ಹೊರಟಿದ್ದು ಇದನ್ನೇ. ಪ್ರೀತಿಯೆಂದರೆ ಕೇವಲ ಗಂಡು- ಹೆಣ್ಣಿನ ಸಂಬಂಧಗಳಿಗೆ ಸೀಮಿತ ಜನಪ್ರಿಯ ಗ್ರಹಿಕೆಯನ್ನು ಒಡೆಯುತ್ತಾರೆ ರಂಜಿತ್‌.

ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್‌, ಗಂಡು- ಹೆಣ್ಣಿನ ನಡುವಿನ ಸಂಬಂಧ- ಇದೆಲ್ಲವನ್ನೂ ಸಮಾಜ ಒಳಗೊಂಡಿದೆ ಎಂಬುದನ್ನು ಚಿತ್ರಿಸುತ್ತಲೇ, ಪ್ರಧಾನವಾಗಿ ರಂಜಿತ್‌ ಚರ್ಚಿಸಿರುವುದು ಜಾತಿ ಸುತ್ತಲಿನ ಪ್ರೀತಿಯ ಕುರಿತು. ಮರ್ಯಾದೆಗೇಡು ಹತ್ಯೆಗಳ ಸುತ್ತಲಿನ ರಾಜಕೀಯದ ಚರ್ಚೆ ನಡೆಸುತ್ತಲೇ ಇಲ್ಲಿನ ಸಂಪ್ರದಾಯವಾದಿ ಮನಸ್ಸುಗಳ ಪರಿವರ್ತನೆಗೆ ಅವಕಾಶ ನೀಡಬೇಕೆಂಬ ಆಶಯವನ್ನು ರಂಜಿತ್ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಮೂಲಭೂತವಾದಿಗಳಿಗೆ ‘ಗೂಸಾ’ ಕೊಡುವುದೂ ಅನಿವಾರ್ಯವೆಂದು ರಂಜಿತ್ ನಂಬಿದಂತಿದೆ.

ರೆನೆಯ ‘ನೇಚರ್‌’ (ಬುದ್ಧಿ/ಜಾತೀಯ ಗುಣ) ಬಗ್ಗೆ ಮೂದಲಿಸುವ ಆಕೆಯ ಪ್ರಿಯಕರ ಇನಿಯನ್‌ ಆನಂತರದಲ್ಲಿ ಪರಿತಪಿಸುತ್ತಾನೆ. ಆತನ ಮೂದಲಿಕೆಯನ್ನೆಲ್ಲ ಮೂಲೆಗೆ ತಳ್ಳಿ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಇರುವ ರೆನೆಯನ್ನು ಕಂಡು ಆತ ಹೊಟ್ಟೆಕಿಚ್ಚು ಪಡುತ್ತಿರುವವನಂತೆ ಭಾಸವಾದರೂ ಇಂಚಿಂಚೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾನೆ. ಇನಿಯನ್‌ನಂತೆಯೇ ಅರ್ಜುನ್ ಎಂಬ ಪಾತ್ರವನ್ನು ನೋಡಬೇಕಾಗುತ್ತದೆ. ಈ ರಂಗತಂಡವನ್ನು ಸೇರಿದ ಅರ್ಜುನ್‌ ಸಂಪ್ರದಾಯವಾದಿಯೂ ಹೌದು. ಗೇ ಸೆಕ್ಸ್‌, ಟಾನ್ಸ್‌ಜೆಂಡರ್‌ ಪ್ರೀತಿ- ಇದ್ಯಾವುದನ್ನೂ ಮುಕ್ತವಾಗಿ ನೋಡದ ಆತ, ರೆನೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಆದರೆ ರೆನೆ ಕ್ಷಮಿಸುವ ಗುಣ ತೋರುತ್ತಾಳೆ. ಆತನ ಮನಪರಿವರ್ತನೆಗೆ ಅವಕಾಶ ನೀಡುತ್ತಾಳೆ.

ಈ ಕಲಾತಂಡ ಪ್ರದರ್ಶಿಸಲಿರುವ ನಾಟಕದಲ್ಲಿ ಮಾರ್ಯಾದೆಗೇಡು ಹತ್ಯೆಯನ್ನು ಢಾಳಾಗಿ ತೋರಿಸಲು ಇಚ್ಚಿಸಿರುವ ನಿರ್ದೇಶಕನಿಗೆ ಕೆಲವು ಸಲಹೆಗಳನ್ನು ಅರ್ಜುನ್ ನೀಡುವ ಮಟ್ಟಕ್ಕೆ ಬದಲಾಗುತ್ತಾನೆ. “ಹೆತ್ತ ಮಗಳನ್ನು ತಂದೆ ಕೊಲ್ಲುವುದು ಸರಿಯೇ? ಇಲ್ಲಿಗೆ ಬರುವ ಮುನ್ನ conservative ಆಗಿದ್ದ ನಾನು ಈಗ ಎಷ್ಟೊಂದು ಬದಲಾಗಿದ್ದೇನೆ. ಸಮಾಜದ ಬದಲಾವಣೆಗೂ ಅವಕಾಶ ನೀಡಬೇಕು” ಎಂಬ ಆಶಯವನ್ನು ಅರ್ಜುನ್ ವ್ಯಕ್ತಪಡಿಸುತ್ತಾನೆ. ರೆನೆಯ ಸ್ವಾಭಿಮಾನ, ದಿಟ್ಟತನಗಳಿಗೆ ಮನಸೋಲುವ ಅರ್ಜುನ್‌, ತನ್ನ ಜಾತಿವಾದಿ ಕೌಟುಂಬಿಕ ವ್ಯವಸ್ಥೆಯಿಂದ ಹೊರಗೆ ಕಾಲಿಡಲು ನಿರ್ಧರಿಸಿರುವುದು ಇದರ ಮುಂದುವರಿದ ಭಾಗ.

ಮನುವಾದಿ ವ್ಯವಸ್ಥೆ ಭಾರತೀಯತೆಯ ಬೇರುಗಳ ಬಗ್ಗೆ ಸದಾ ಮಾತನಾಡುತ್ತದೆ. ಈ ಬೇರುಗಳಲ್ಲಿ ಜಾತಿ ಮೀರಿದ ಪ್ರೀತಿ ನಿಷಿದ್ಧ, ವರ್ಗ ಮೀರಿದ ಸಂಬಂಧ ನಿಷಿದ್ಧ, ಹೆಣ್ಣು-ಗಂಡಿನ ಪ್ರೀತಿಯಾಚೆಯ ಗೇ ಸೆಕ್ಸ್‌, ಲೆಸ್ಬಿಯನ್‌ ಸೆಕ್ಸ್ ನಿಷಿದ್ಧ. ಇದ್ಯಾವುದೂ ನಮ್ಮ ಬೇರುಗಳಲ್ಲ ಎನ್ನುತ್ತದೆ ಮನುವಾದ. ಯಥಾಸ್ಥಿತಿಯನ್ನು ಸಂಪ್ರದಾಯವಾದಿಗಳು ಬಯಸುತ್ತಾರೆ. ಯಾವುದನ್ನು ಭಾರತದ ಬೇರುಗಳೆಂದು ಧಾರ್ಮಿಕ ಮೂಲಭೂತವಾದಿಗಳು ವಾದಿಸುತ್ತಿದ್ದಾರೋ ಅದಕ್ಕೆ ಬಲವಾದ ಕೊಡಲಿಪೆಟ್ಟು ಕೊಟ್ಟಿದ್ದು- ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದ ಸಂವಿಧಾನ. ಬುದ್ಧನ ಪ್ರೀತಿ, ಕಾರುಣ್ಯ, ಬಸವಾದಿ ಶರಣರ ಪ್ರಜಾಪ್ರಭುತ್ವ ಪರಿಕಲ್ಪನೆಯೇ ಈ ನೆಲದ ನಿಜವಾದ ಬೇರುಗಳು. ಈ ನಿಜದ ಬೇರನ್ನು ಅಲುಗಾಡಿಸಲು ಬರುವ ಮೂಲಭೂತವಾದಿಗಳನ್ನು, ಅಂಬೇಡ್ಕರ್‌ ಆಶಯದಲ್ಲಿ ನಂಬಿಕೆ ಇಟ್ಟ ಮನಸ್ಸುಗಳು ಒಂದಾಗಿ ಹೊಡೆದೋಡಿಸಬೇಕೆಂಬ ಸಂದೇಶವನ್ನು ರಂಜಿತ್‌ ನೀಡಿದ್ದಾರೆ. ಎಳೆಯ ಮಕ್ಕಳ ಮನಸ್ಸಿಗೆ ಮನುವಾದವನ್ನು ತುರುಕುವ ಪ್ರಯತ್ನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಡೆಯುತ್ತಿರುವ ಹೊತ್ತಿನಲ್ಲಿ ರಂಜಿತ್‌, ‘ನಕ್ಷತ್ರಗಳು ಚಲಿಸುತ್ತಿವೆ’ ನೋಡಿದಿರಾ ಎಂದಿದ್ದಾರೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಪ್ರೀತಿಯ ಉದಾತ್ತ ಆಶಯವನ್ನು ಪ್ರದರ್ಶಿಸುತ್ತಿರುವ ಕಲಾತಂಡದ ಮೇಲೆ ‘ಫ್ರಿಂಜ್‌ ಎಲಿಮೆಂಟ್’ ಒಬ್ಬ ದಾಳಿ ಮಾಡುತ್ತಾನೆ (ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ‘ಜೊತೆಗಿರುವನು ಚಂದಿರ’ ನಾಟಕಕ್ಕೆ ಅಡ್ಡಿಪಡಿಸಿದ್ದನ್ನು ನೆನೆಯಬಹುದು). ಇಂತಹ ಫ್ರಿಂಜ್‌ಗಳ ಹಿಂದೆ ಮಾಸ್ಟರ್‌ಗಳಿದ್ದಾರೆ, ಪೊಲೀಸ್ ವ್ಯವಸ್ಥೆಯ ರಕ್ಷಣೆ ಇದೆ. ಆದರೆ ಇದೆಲ್ಲವನ್ನೂ ಅಂಬೇಡ್ಕರ್‌ ಎಂಬ ಅಸ್ತ್ರದ ಮೂಲಕ ಸೋಲಿಸಬೇಕಿರುವುದು ಅನಿವಾರ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂಬುದನ್ನು ರಂಜಿತ್‌ ಮನಗಾಣಿಸಿದ್ದಾರೆ.

ಇಡೀ ಸಿನಿಮಾದುದ್ದಕ್ಕೂ ಹರಿದಿರುವ ಕಲಾನಿರ್ದೇಶನದ ಸೊಗಸು, ಕಥೆಯ ಸಂದೇಶದ ತೀವ್ರತೆಯನ್ನು ಹೆಚ್ಚಿಸುವ ತೆನ್ಮಾ ಅವರ ಸಂಗೀತ, ಪ್ರೀತಿಯ ಜಿಜ್ಞಾಸೆಗೆ ಬಳಸಿರುವ ಅರ್ಥಪೂರ್ಣ ಸಂಭಾಷಣೆ, ಜಾನಪದೀಯ ರೂಪಕವಾಗಿ ಚಿತ್ರಿಸಲಾಗಿರುವ ಮಾರ್ಯಾದೆ ಹತ್ಯೆಗಳು- ಇವೆಲ್ಲವೂ ‘ನಚ್ಚತಿರಂ ನಗರ್ಗಿರದು’ ಸಿನಿಮಾದ ಕಲಾತ್ಮಕತೆಯನ್ನು ಹೆಚ್ಚಿಸಿವೆ. ರೆನೆಯಾಗಿ ದುಶಾರಾ ವಿಜಯನ್‌, ಇನಿಯನ್‌ ಪಾತ್ರದಲ್ಲಿ ಕಾಳಿದಾಸ್ ಜಯರಾಮ್‌, ಅರ್ಜುನ್ ಆಗಿ ಕಲೈ ಅರಸನ್‌- ಹೀಗೆ ಎಲ್ಲ ಕಲಾವಿದರು ಮನೋಜ್ಞವಾಗಿ ನಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...