Homeಮುಖಪುಟನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

- Advertisement -
- Advertisement -

ದೇವನೂರ ಮಹಾದೇವ ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ಮಹಿಳಾ ಪಾತ್ರಗಳು ಎಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ವಿತೀಯವಾಗಿ ನೆಲೆಸಿವೆ. ದಲಿತ ಕಥನಗಳಲ್ಲಿ ಬರುವ ಮಹಿಳೆಯರು, ಗಂಡಸರ ಮುಂದೆ ನಾಚುತ್ತಾ, ಹೆಬ್ಬೆರಳು ನೆಲಕ್ಕೆ ಸವರುತ್ತಾ, ಸೆರಗು ತಲೆಯ ಮೇಲೆ ಹಾಕಿಕೊಂಡು ನಿಲ್ಲುವುದಿಲ್ಲ. ಒಡಲಾಳದ ಸಾಕವ್ವನ ಲೋಕ, ಕುಸುಮಬಾಲೆಯ ಕೆಂಪಿ, ತೂರಮ್ಮ- ಹೀಗೆ ಈ ನೆಲದ ಗಟ್ಟಿಗಿತ್ತಿಯರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಿ.ಲಂಕೇಶರು ಕಂಡ ‘ಅವ್ವ’- ಈ ಮಣ್ಣಿನ ನಿಜದ ಹೆಣ್ಣಿನ ದರ್ಶನ. ‘ಆಕೆ- ಕಪ್ಪುನೆಲ, ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು, ಬನದ ಕರಡಿ, ಭಗವದ್ಗೀತೆಯಾಚೆಯ ಬದುಕು’. ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್‌ ಸೃಷ್ಟಿಸಿದ ಮಹಿಳಾ ಪಾತ್ರಗಳು ಕೂಡ ಇದಕ್ಕಿಂತ ಭಿನ್ನವೇನಲ್ಲ. ರಂಜಿತ್ ಸಿನಿಮಾಗಳಲ್ಲಿ ಪುರುಷ ಪಾತ್ರಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮಹಿಳಾ ಪಾತ್ರಗಳಿಗೂ ಇದೆ. ರಂಜಿತ್ ನಿರ್ದೇಶನದ, ಇತ್ತೀಚೆಗೆ ತೆರೆಕಂಡ ‘ನಚ್ಚತಿರಂ ನಗರ್ಗಿರದು’ ಸಿನಿಮಾ ಈ ಗಟ್ಟಿತನವನ್ನು ಮತ್ತಷ್ಟು ವಿಸ್ತರಿಸಿದೆ.

‘ನಚ್ಚತಿರಂ ನಗರ್ಗಿರದು’ (ನಕ್ಷತ್ರ ಚಲಿಸುತ್ತಿವೆ) ಎಂಬ ಹೆಸರು ರೂಪಕದಂತಿದೆ. ಇದೊಂದು ಆಶಾವಾದದ ಸಂಕೇತ. ಬೆಳಕಿನುಂಡೆಯೊಂದು ನೆಲವನ್ನು ಸ್ಪರ್ಶಿಸುವ ಕೌತುಕದ ಕ್ಷಣ. ಇಲ್ಲಿನ ಬಹುತೇಕ ಪಾತ್ರಗಳೂ ಆ ಚಲಿಸುವ ನಕ್ಷತ್ರಕ್ಕಾಗಿ ಧ್ಯಾನಿಸುತ್ತಿವೆ. ಪ್ರೀತಿಯ ಅನ್ವೇಷಣೆಯಲ್ಲಿ ತೊಡಗಿರುವ ಇಲ್ಲಿನ ಪ್ರತಿ ಪಾತ್ರಕ್ಕೂ ಮಹತ್ವವಿದೆ. ಆದರೆ ಆ ಕಥೆ ಚಲನೆ ಪಡೆಯುವುದು ರೆನೆ ಎಂಬ ದಲಿತ ಹುಡುಗಿಯ ಸುತ್ತ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೆನೆ- ಅಂಬೇಡ್ಕರ್‌ವಾದಿ. ನೋವುಂಡು ಬೆಳೆದ ಅವಳಲ್ಲಿ ತನ್ನ ಅಸ್ಮಿತೆಯ ಕುರಿತು ಯಾವುದೇ ಅಂಜಿಕೆಯಿಲ್ಲ. ‘ಇದು ನಿಮ್ಮ ಸಮಸ್ಯೆಯೇ ಹೊರತು ನನ್ನದ್ದಲ್ಲ’ ಎಂದು ದಿಟ್ಟವಾಗಿ ಹೇಳಬಲ್ಲ ಹೆಣ್ಣುಮಗಳಾಕೆ. ‘ನಾನು ಹೇಗಿರಬೇಕೆಂದು ಇನ್ನೊಬ್ಬರ ಅಪ್ಪಣೆ ನೀಡಬೇಕಿಲ್ಲ’ ಎನ್ನುವ ರೆನೆ ದನದ ಮಾಂಸ ತಿನ್ನುತ್ತಾ, ‘ಇದು ನನ್ನ ಅಸ್ಮಿತೆ’ ಎನ್ನುವವಳು. ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಲುಕಿರುವ ಮನಸ್ಸುಗಳನ್ನು ನೋಡಿ ಗಹಗಹಿಸಿ ನಗುವವಳು. ‘ತಮಿಳ್‌’ ಎಂಬ ಹೆಸರಿನ ಹುಡುಗಿ ‘ರೆನೆ’ಯಾಗಿ ಗುರುತಿಸಿಕೊಂಡಿದ್ದಾಳೆ. ಈಕೆಯ ಹೆಸರು ‘ತಮಿಳ್‌’ ಎಂದೂ, ಅವಳ ಮೂಲವನ್ನು ಹಂಗಿಸುವ ಜಾತೀಯ ಸುಪ್ತ ಮನಸ್ಥಿತಿಗಳು ಇಲ್ಲಿ ಅನಾವರಣವಾಗುತ್ತವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದೆ, ಓದಿನ ಮೂಲಕ ಗಟ್ಟಿಯಾದವಳು ರೆನೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಅದೊಂದು ರಂಗಭೂಮಿ ಕಲಾವಿದರ ಪುಟ್ಟ ತಂಡ. ಪ್ರೀತಿಯ ಬಗ್ಗೆ ನಾಟಕವೊಂದನ್ನು ಮಾಡಬೇಕೆಂದು ಹೊರಟಿದೆ. ಪ್ರೀತಿ ಎಂದರೇನು? ಅದಕ್ಕಿರುವ ಮಾನದಂಡ ಯಾವುದು? ಯಾವುದನ್ನು ತೆರೆಯ ಮೇಲೆ ತರಬೇಕೆಂಬ ಚರ್ಚೆಯಲ್ಲಿರುವ ತಂಡವು, ಪ್ರೀತಿಯ ಸುತ್ತಲಿನ ರಾಜಕಾರಣದ ಕುರಿತು ಮಾತನಾಡುತ್ತದೆ. ರಂಜಿತ್‌ ಶೋಧಿಸಲು ಹೊರಟಿದ್ದು ಇದನ್ನೇ. ಪ್ರೀತಿಯೆಂದರೆ ಕೇವಲ ಗಂಡು- ಹೆಣ್ಣಿನ ಸಂಬಂಧಗಳಿಗೆ ಸೀಮಿತ ಜನಪ್ರಿಯ ಗ್ರಹಿಕೆಯನ್ನು ಒಡೆಯುತ್ತಾರೆ ರಂಜಿತ್‌.

ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್‌, ಗಂಡು- ಹೆಣ್ಣಿನ ನಡುವಿನ ಸಂಬಂಧ- ಇದೆಲ್ಲವನ್ನೂ ಸಮಾಜ ಒಳಗೊಂಡಿದೆ ಎಂಬುದನ್ನು ಚಿತ್ರಿಸುತ್ತಲೇ, ಪ್ರಧಾನವಾಗಿ ರಂಜಿತ್‌ ಚರ್ಚಿಸಿರುವುದು ಜಾತಿ ಸುತ್ತಲಿನ ಪ್ರೀತಿಯ ಕುರಿತು. ಮರ್ಯಾದೆಗೇಡು ಹತ್ಯೆಗಳ ಸುತ್ತಲಿನ ರಾಜಕೀಯದ ಚರ್ಚೆ ನಡೆಸುತ್ತಲೇ ಇಲ್ಲಿನ ಸಂಪ್ರದಾಯವಾದಿ ಮನಸ್ಸುಗಳ ಪರಿವರ್ತನೆಗೆ ಅವಕಾಶ ನೀಡಬೇಕೆಂಬ ಆಶಯವನ್ನು ರಂಜಿತ್ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಮೂಲಭೂತವಾದಿಗಳಿಗೆ ‘ಗೂಸಾ’ ಕೊಡುವುದೂ ಅನಿವಾರ್ಯವೆಂದು ರಂಜಿತ್ ನಂಬಿದಂತಿದೆ.

ರೆನೆಯ ‘ನೇಚರ್‌’ (ಬುದ್ಧಿ/ಜಾತೀಯ ಗುಣ) ಬಗ್ಗೆ ಮೂದಲಿಸುವ ಆಕೆಯ ಪ್ರಿಯಕರ ಇನಿಯನ್‌ ಆನಂತರದಲ್ಲಿ ಪರಿತಪಿಸುತ್ತಾನೆ. ಆತನ ಮೂದಲಿಕೆಯನ್ನೆಲ್ಲ ಮೂಲೆಗೆ ತಳ್ಳಿ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಇರುವ ರೆನೆಯನ್ನು ಕಂಡು ಆತ ಹೊಟ್ಟೆಕಿಚ್ಚು ಪಡುತ್ತಿರುವವನಂತೆ ಭಾಸವಾದರೂ ಇಂಚಿಂಚೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾನೆ. ಇನಿಯನ್‌ನಂತೆಯೇ ಅರ್ಜುನ್ ಎಂಬ ಪಾತ್ರವನ್ನು ನೋಡಬೇಕಾಗುತ್ತದೆ. ಈ ರಂಗತಂಡವನ್ನು ಸೇರಿದ ಅರ್ಜುನ್‌ ಸಂಪ್ರದಾಯವಾದಿಯೂ ಹೌದು. ಗೇ ಸೆಕ್ಸ್‌, ಟಾನ್ಸ್‌ಜೆಂಡರ್‌ ಪ್ರೀತಿ- ಇದ್ಯಾವುದನ್ನೂ ಮುಕ್ತವಾಗಿ ನೋಡದ ಆತ, ರೆನೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಆದರೆ ರೆನೆ ಕ್ಷಮಿಸುವ ಗುಣ ತೋರುತ್ತಾಳೆ. ಆತನ ಮನಪರಿವರ್ತನೆಗೆ ಅವಕಾಶ ನೀಡುತ್ತಾಳೆ.

ಈ ಕಲಾತಂಡ ಪ್ರದರ್ಶಿಸಲಿರುವ ನಾಟಕದಲ್ಲಿ ಮಾರ್ಯಾದೆಗೇಡು ಹತ್ಯೆಯನ್ನು ಢಾಳಾಗಿ ತೋರಿಸಲು ಇಚ್ಚಿಸಿರುವ ನಿರ್ದೇಶಕನಿಗೆ ಕೆಲವು ಸಲಹೆಗಳನ್ನು ಅರ್ಜುನ್ ನೀಡುವ ಮಟ್ಟಕ್ಕೆ ಬದಲಾಗುತ್ತಾನೆ. “ಹೆತ್ತ ಮಗಳನ್ನು ತಂದೆ ಕೊಲ್ಲುವುದು ಸರಿಯೇ? ಇಲ್ಲಿಗೆ ಬರುವ ಮುನ್ನ conservative ಆಗಿದ್ದ ನಾನು ಈಗ ಎಷ್ಟೊಂದು ಬದಲಾಗಿದ್ದೇನೆ. ಸಮಾಜದ ಬದಲಾವಣೆಗೂ ಅವಕಾಶ ನೀಡಬೇಕು” ಎಂಬ ಆಶಯವನ್ನು ಅರ್ಜುನ್ ವ್ಯಕ್ತಪಡಿಸುತ್ತಾನೆ. ರೆನೆಯ ಸ್ವಾಭಿಮಾನ, ದಿಟ್ಟತನಗಳಿಗೆ ಮನಸೋಲುವ ಅರ್ಜುನ್‌, ತನ್ನ ಜಾತಿವಾದಿ ಕೌಟುಂಬಿಕ ವ್ಯವಸ್ಥೆಯಿಂದ ಹೊರಗೆ ಕಾಲಿಡಲು ನಿರ್ಧರಿಸಿರುವುದು ಇದರ ಮುಂದುವರಿದ ಭಾಗ.

ಮನುವಾದಿ ವ್ಯವಸ್ಥೆ ಭಾರತೀಯತೆಯ ಬೇರುಗಳ ಬಗ್ಗೆ ಸದಾ ಮಾತನಾಡುತ್ತದೆ. ಈ ಬೇರುಗಳಲ್ಲಿ ಜಾತಿ ಮೀರಿದ ಪ್ರೀತಿ ನಿಷಿದ್ಧ, ವರ್ಗ ಮೀರಿದ ಸಂಬಂಧ ನಿಷಿದ್ಧ, ಹೆಣ್ಣು-ಗಂಡಿನ ಪ್ರೀತಿಯಾಚೆಯ ಗೇ ಸೆಕ್ಸ್‌, ಲೆಸ್ಬಿಯನ್‌ ಸೆಕ್ಸ್ ನಿಷಿದ್ಧ. ಇದ್ಯಾವುದೂ ನಮ್ಮ ಬೇರುಗಳಲ್ಲ ಎನ್ನುತ್ತದೆ ಮನುವಾದ. ಯಥಾಸ್ಥಿತಿಯನ್ನು ಸಂಪ್ರದಾಯವಾದಿಗಳು ಬಯಸುತ್ತಾರೆ. ಯಾವುದನ್ನು ಭಾರತದ ಬೇರುಗಳೆಂದು ಧಾರ್ಮಿಕ ಮೂಲಭೂತವಾದಿಗಳು ವಾದಿಸುತ್ತಿದ್ದಾರೋ ಅದಕ್ಕೆ ಬಲವಾದ ಕೊಡಲಿಪೆಟ್ಟು ಕೊಟ್ಟಿದ್ದು- ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದ ಸಂವಿಧಾನ. ಬುದ್ಧನ ಪ್ರೀತಿ, ಕಾರುಣ್ಯ, ಬಸವಾದಿ ಶರಣರ ಪ್ರಜಾಪ್ರಭುತ್ವ ಪರಿಕಲ್ಪನೆಯೇ ಈ ನೆಲದ ನಿಜವಾದ ಬೇರುಗಳು. ಈ ನಿಜದ ಬೇರನ್ನು ಅಲುಗಾಡಿಸಲು ಬರುವ ಮೂಲಭೂತವಾದಿಗಳನ್ನು, ಅಂಬೇಡ್ಕರ್‌ ಆಶಯದಲ್ಲಿ ನಂಬಿಕೆ ಇಟ್ಟ ಮನಸ್ಸುಗಳು ಒಂದಾಗಿ ಹೊಡೆದೋಡಿಸಬೇಕೆಂಬ ಸಂದೇಶವನ್ನು ರಂಜಿತ್‌ ನೀಡಿದ್ದಾರೆ. ಎಳೆಯ ಮಕ್ಕಳ ಮನಸ್ಸಿಗೆ ಮನುವಾದವನ್ನು ತುರುಕುವ ಪ್ರಯತ್ನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಡೆಯುತ್ತಿರುವ ಹೊತ್ತಿನಲ್ಲಿ ರಂಜಿತ್‌, ‘ನಕ್ಷತ್ರಗಳು ಚಲಿಸುತ್ತಿವೆ’ ನೋಡಿದಿರಾ ಎಂದಿದ್ದಾರೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಪ್ರೀತಿಯ ಉದಾತ್ತ ಆಶಯವನ್ನು ಪ್ರದರ್ಶಿಸುತ್ತಿರುವ ಕಲಾತಂಡದ ಮೇಲೆ ‘ಫ್ರಿಂಜ್‌ ಎಲಿಮೆಂಟ್’ ಒಬ್ಬ ದಾಳಿ ಮಾಡುತ್ತಾನೆ (ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ‘ಜೊತೆಗಿರುವನು ಚಂದಿರ’ ನಾಟಕಕ್ಕೆ ಅಡ್ಡಿಪಡಿಸಿದ್ದನ್ನು ನೆನೆಯಬಹುದು). ಇಂತಹ ಫ್ರಿಂಜ್‌ಗಳ ಹಿಂದೆ ಮಾಸ್ಟರ್‌ಗಳಿದ್ದಾರೆ, ಪೊಲೀಸ್ ವ್ಯವಸ್ಥೆಯ ರಕ್ಷಣೆ ಇದೆ. ಆದರೆ ಇದೆಲ್ಲವನ್ನೂ ಅಂಬೇಡ್ಕರ್‌ ಎಂಬ ಅಸ್ತ್ರದ ಮೂಲಕ ಸೋಲಿಸಬೇಕಿರುವುದು ಅನಿವಾರ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂಬುದನ್ನು ರಂಜಿತ್‌ ಮನಗಾಣಿಸಿದ್ದಾರೆ.

ಇಡೀ ಸಿನಿಮಾದುದ್ದಕ್ಕೂ ಹರಿದಿರುವ ಕಲಾನಿರ್ದೇಶನದ ಸೊಗಸು, ಕಥೆಯ ಸಂದೇಶದ ತೀವ್ರತೆಯನ್ನು ಹೆಚ್ಚಿಸುವ ತೆನ್ಮಾ ಅವರ ಸಂಗೀತ, ಪ್ರೀತಿಯ ಜಿಜ್ಞಾಸೆಗೆ ಬಳಸಿರುವ ಅರ್ಥಪೂರ್ಣ ಸಂಭಾಷಣೆ, ಜಾನಪದೀಯ ರೂಪಕವಾಗಿ ಚಿತ್ರಿಸಲಾಗಿರುವ ಮಾರ್ಯಾದೆ ಹತ್ಯೆಗಳು- ಇವೆಲ್ಲವೂ ‘ನಚ್ಚತಿರಂ ನಗರ್ಗಿರದು’ ಸಿನಿಮಾದ ಕಲಾತ್ಮಕತೆಯನ್ನು ಹೆಚ್ಚಿಸಿವೆ. ರೆನೆಯಾಗಿ ದುಶಾರಾ ವಿಜಯನ್‌, ಇನಿಯನ್‌ ಪಾತ್ರದಲ್ಲಿ ಕಾಳಿದಾಸ್ ಜಯರಾಮ್‌, ಅರ್ಜುನ್ ಆಗಿ ಕಲೈ ಅರಸನ್‌- ಹೀಗೆ ಎಲ್ಲ ಕಲಾವಿದರು ಮನೋಜ್ಞವಾಗಿ ನಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....