“ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ತಂದುಕೊಟ್ಟಿದ್ದ ಘನತೆಯನ್ನು ಬಿಜೆಪಿ ಸರ್ಕಾರ ಹಾಳುಮಾಡಿದ್ದು, ನಗರದ ಸ್ಥಿತಿ ‘ಗೋವಿಂದಾ, ಗೋವಿಂದಾ…ಗೋವಿಂದ’ ಎನ್ನುವಂತಾಗಿದೆ” ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
“ಬೆಂಗಳೂರು ಹೊರವಲಯದ ಜನರು ತಮ್ಮ ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಅನಾಹುತ, ನಷ್ಟದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಯಾವುದೇ ಪಕ್ಷದವರಾಗಲಿ ಜನ ಆ ಕ್ಷೇತ್ರದ ಶಾಸಕರ ಬಳಿ ಹೋಗಿ ತಮಗಾಗಿರುವ ಅನ್ಯಾಯವನ್ನು ಕೇಳುತ್ತಾರೆ. ಮಹಿಳೆಯರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅದನ್ನು ಕೇಳದಿರುವುದು ಸಮಂಜಸವಲ್ಲ” ಎಂದು ಶಾಸಕ ಅರಂವಿದ ಲಿಂಬಾವಳಿ ಮಹಿಳೆ ಜೊತೆಗೆ ನಡೆದುಕೊಂಡಿದ್ದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾನು ಕೂಡ ರಾಮನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನ ಅವರ ಸಮಸ್ಯೆ, ದುಃಖವನ್ನು ಹೇಳಿಕೊಂಡರು. ಜನರ ಕಷ್ಟ ಕೇಳುವ ತಾಳ್ಮೆ ಇಲ್ಲವಾದರೆ ಅವರು ಶಾಸಕರಾಗಿರಲು ಅರ್ಹರಲ್ಲ. ರಾಮನಗರದ ಉಸ್ತುವಾರಿ ಸಚಿವರು ಜಿಲ್ಲೆ ಕ್ಲೀನ್ ಮಾಡುವುದಾಗಿ ಹೇಳಿದ್ದರು. ಅವರು ದಯವಿಟ್ಟು ಕ್ಲೀನ್ ಮಾಡಲಿ” ಎಂದು ಅವರು ಹೇಳಿದ್ದಾರೆ.
“ಉದ್ಯೋಗ ಸೃಷ್ಟಿ ಮೂಲಕ ಸರ್ಕಾರಕ್ಕೆ ನೆರವು ನೀಡುತ್ತಿರುವ ಕಂಪನಿಗಳು ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಹೊರವಲಯ ರಿಂಗ್ ರೋಡ್ ಕಂಪನಿಗಳ ಸಂಘದವರು ಸರಕಾರಕ್ಕೆ ಪತ್ರ ಬರೆದು ತಮಗಾದ ತೊಂದರೆ, ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ರೀತಿ ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಿದೆ” ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಹವಾಲು ಸಲ್ಲಿಸಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ
ಕಷ್ಟ ಹೇಳಿಕೊಂಡ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಲಿಂಬಾವಳಿ ಅವರು ಶಾಸಕರಾಗಿ ಮುಂದುವರಿಯಲು ಅರ್ಹರೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, “ಕೇವಲ ಅರವಿಂದ ಲಿಂಬಾವಳಿ ಮಾತ್ರವಲ್ಲ ಇಡೀ ಸರ್ಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ. ಇದು ಸರ್ಕಾರದಲ್ಲಿರುವ ಎಲ್ಲರ ವೈಫಲ್ಯ” ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರಿನ ಬ್ರ್ಯಾಂಡ್ ಹಾಳಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ತಂದುಕೊಟ್ಟಿದ್ದ ಘನತೆಯನ್ನು ಈ ಸರ್ಕಾರ ಹಾಳುಮಾಡಿದೆ. ಬೆಂಗಳೂರು ಸ್ಥಿತಿ ಗೋವಿಂದಾ ಗೋವಿಂದಾ ಗೋವಿಂದ ಎನ್ನುವಂತಾಗಿದೆ” ಎಂದು ತಿಳಿಸಿದ್ದಾರೆ.