ಸುಪ್ರೀಂ ಕೋರ್ಟ್ ತೀರ್ಪಿನಂತೆ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬೇಕು. ಆದ್ದರಿಂದ, ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯು ತನ್ನ ವರದಿಯನ್ನು ತುರ್ತಾಗಿ ನೀಡಬೇಕು ಎಂದು ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ-ರಾಜ್ಯ ಸಮಿತಿ’ ಒತ್ತಾಯಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, “ಸುಮಾರು ನಾಲ್ಕು ದಶಕಗಳ ಒಳಮೀಸಲಾತಿ ಹೋರಾಟವು ಕಳೆದ ಆಗಸ್ಟ್ 1, 2024 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಒಂದು ತಾರ್ಕಿಕ ಅಂತ್ಯ ಕಂಡಿದೆ. ಒಳಮೀಸಲಾತಿಯ ಪರ ವಿರೋಧದ ಚರ್ಚೆಗಳು ತಕ್ಕಮಟ್ಟಿಗೆ ಶಮನಗೊಂಡು ಒಳಮೀಸಲಾತಿ ಯಾರಿಗೆ ಎಷ್ಟೆಷ್ಟು ಸಿಗಬೇಕೆಂಬ ಚರ್ಚೆಗಳು ಹೆಚ್ಚಾದವು. ಈ ದಿಸೆಯಲ್ಲಿ ತುಸು ತಡವಾದರೂ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿರುವುದು ಅಭಿನಂದನೀಯ” ಎಂದು ಹೇಳಿದ್ದಾರೆ.
“ಒಳ ಮೀಸಲಾತಿಗಾಗಿ ಇಷ್ಟು ವರ್ಷ ಕಾದಿರುವ ನಮಗೆ ಇನ್ನೆರಡು ತಿಂಗಳು ಕಾಯುವುದು ತ್ರಾಸದಾಯಕವಲ್ಲ. ಒಳಮೀಸಲಾತಿ ಜಾರಿಯಾಗುವವರೆಗೆ ಎಲ್ಲ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿದಿರುವುದು ಸ್ವಾಗತಾರ್ಹವೇ. ಆದರೂ, ಹೆಚ್ಚು ಕಾಲ ಹೀಗೆ ನೇಮಕಾತಿ ತಡೆಹಿಡಿಯುವುದರ ಮೂಲಕ ಇತರರಿಗೂ ತೊಂದರೆ ಕೊಡುವುದು ಅನ್ಯಾಯವಾಗುತ್ತದೆ. ಜೊತೆಗೆ, ಅತ್ಯಂತ ತಳಸಮುದಾಯದ ಬೇಡಿಕೆಗಳನ್ನು ಸತತವಾಗಿ ಮುಂದೂಡುವುದು ಸಹ ಅನ್ಯಾಯವೇ ಆಗುತ್ತದೆ. ಆದ್ದರಿಂದ, ತುರ್ತಾಗಿ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯು ತನ್ನ ವರದಿಯನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ” ಎಂದು ಮನವಿ ಮಾಡಿದ್ದಾರೆ.
ಒಳ ಮೀಸಲಾತಿ ಹೋರಾಟಗಾರರ ಆಗ್ರಹಗಳೇನು?
“ಯಾವುದೇ ಕಾರಣಕ್ಕೂ, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ಹಾಗೆ ಒಳಮೀಸಲಾತಿ ವರ್ಗೀಕರಣ ಮಾಡುವ ಜೊತೆಗೆ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ʼಪ್ರಾಯೋಗಿಕ ದತ್ತಾಂಶʼವನ್ನು ಮಾನದಂಡವನ್ನಾಗಿ ವಿಧಿಸಿರುವುದರಿಂದ ಮುಂದಿನ ಜನಗಣತಿಯವರೆಗೆ ಅವಶ್ಯಕವಿರುವ ಅಂಶಗಳಿಗೆಲ್ಲ ʼಸ್ಯಾಂಪಲ್ ಸಮೀಕ್ಷೆʼ ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಉದ್ಯೋಗಗಳಲ್ಲಿ ಅತಿ ಕಡಿಮೆ ಆಯ್ಕೆ/ಅವಕಾಶಗಳಿದ್ದಾಗ, ಪ.ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ನೀಡಬೇಕೆಂಬ ಶ್ರೇಣೀಕರಣವನ್ನು ನಿಗದಿಗೊಳಿಸಬೇಕು. ಬಡ್ತಿ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಪರಿಗಣಿಸಿ, ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು” ಎಂದು ಹೇಳಿದ್ದಾರೆ.
“ಗುತ್ತಿಗೆ ನೌಕರಿಗಳಲ್ಲಿಯೂ ಒಳಮೀಸಲಾತಿ ಪರಿಗಣಿಸಲು ಸರ್ಕಾರ ಶಿಫಾರಸು ಮಾಡಬೇಕು. ಒಳಮೀಸಲಾತಿ ಅನುಷ್ಠಾನದಲ್ಲಿನ ಕುಂದುಕೊರತೆಗಳು ಹಾಗೂ ಪ್ರಗತಿಯ ಮೇಲ್ವಿಚಾರಣೆ ಮಾಡಲು ರಾಜ್ಯ ಪರಿಶಿಷ್ಟ ಆಯೋಗದಡಿಯಲ್ಲಿ ಒಂದು ಸ್ವತಂತ್ರ ಸಮಿತಿ ರಚಿಸಿ, ಇಂದಿರಾ ಸಹಾನಿ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ.50 ಮೀಸಲಾತಿ ಮಿತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಬೇಕು” ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
“ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು.
ಈ ಮೇಲಿನ ಮನವಿಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಆಗ್ರಹಿಸುತ್ತದೆ. ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯಲ್ಲಿಯೂ ಎತ್ತಿಹಿಡಿಯಬೇಕೆಂದು ಒತ್ತಾಯಿಸುತ್ತದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪರವಾಗಿ ಬಸವರಾಜ್ ಕೌತಾಳ್, ಡಿ.ಟಿ ವೆಂಕಟೇಶ್, ಶಿವಣ್ಣ ಕನಕಪುರ, ವಿನಯ್ ಶ್ರೀನಿವಾಸ್, ಚಂದ್ರು ತರಹುಣಿಸೆ ಇದ್ದರು.
ಇದನ್ನೂ ಓದಿ; ಪೋಕ್ಸೋ ಪ್ರಕರಣ : ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು


