ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ನಾಥುರಾಮ್ ಗೋಡ್ಸೆ ವಿಚಾರಧಾರೆಯ ಪ್ರತಿಪಾದಕರಾಗಿದ್ದಾರೆ. ಮಹಾತ್ಮ ಗಾಂಧಿಯನ್ನು ಕೊಂದ ಬಲಪಂಥೀಯ ಗುಂಪುಗಳು ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ರಾಷ್ಟ್ರಪಿತ ಗಾಂಧಿ ವಿಚಾರಗಳಿಗೆ ಬಿಜೆಪಿ ವಿರುದ್ಧವಿದೆ ಎಂದು ಕಾಂಗ್ರೆಸ್ ಸೇರಿರುವ ಯುವ ನಾಯಕ ಕನ್ಹಯ್ಯಕುಮಾರ್ ಪ್ರತಿಪಾದಿಸಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿರುವ ಅವರು, “ಬಿಜೆಪಿ ನನ್ನನ್ನು ತುಕ್ಡೆ, ತುಕ್ಡೆ ಗ್ಯಾಂಗ್ ಎಂದು ಕರೆಯುತ್ತದೆ. ಬಿಜೆಪಿಗೆ ನಾನು ತುಕ್ಡೆ ತುಕ್ಡೆ ಆಗಿದ್ದಾನೆ. ಬಿಜೆಪಿಯನ್ನು ‘ತುಕ್ಡೆ, ತುಕ್ಡೆ’ ಮಡುತ್ತೇನೆ. ಈ ಪಕ್ಷ ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸಿದೆಯೇ ಹೊರತು ಗಾಂಧಿಯನ್ನಲ್ಲ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಎದುರು ಮಾತ್ರ ಅವರು ಗಾಂಧೀಜಿಯನ್ನು ಹೊಗಳುತ್ತಾರೆ ಎಂದಿದ್ದಾರೆ.
ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪಕ್ಷವನ್ನು ಬಲಪಡಿಸಿ, ಸ್ವಾತಂತ್ರವನ್ನು ಉಳಿಸಬೇಕಿದೆ. ನನ್ನಂಥ ಅನೇಕ ಯುವಕರು ಈ ಕೆಲಸ ತಡವಾಗಿದೆ ಎಂದು ಭಾವಿಸಿದ್ದೇವೆ. ರಾಜಕೀಯ ಭವಿಷ್ಯವನ್ನು ಮಾತ್ರ ನೋಡುವವರು ಬಿಜೆಪಿಗೆ ಸೇರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ಟೀಕೆ: ಬಿಜೆಪಿಗೆ ವರದಾನ
ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುವುದು, ಬಿಜೆಪಿಗೆ ವರದಾನವಾಗುತ್ತದೆ. ದೇಶದ ಅತಿದೊಡ್ಡ ವಿರೋಧ ಪಕ್ಷ ಕಾಂಗ್ರೆಸ್ ಆಗಿದ್ದಾಗ, ಬಿಜೆಪಿ ದೊಡ್ಡ ಸೋಲನ್ನು ಎದುರಿಸಲಿದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ ಎಂದು ಕನ್ಹಯ್ಯಕುಮಾರ್ ತಿಳಿಸಿದ್ದಾರೆ.
ರಾಹುಲ್ಗಾಂಧಿ ಅವರು ಸಹಾನುಭೂತಿಯ ನಾಯಕ ಎಂಬುದು ಅವರೊಂದಿಗೆ ಸಂವಹನ ನಡೆಸಿದಾಗ ನನ್ನ ಅನುಭವಕ್ಕೆ ಬಂದಿತು. ಅವರು ಯಾವಾಗಲೂ ನನ್ನ ತಾಯಿಯ ಯೋಗಕ್ಷೇಮ, ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ಅವರ ಈ ಗುಣವನ್ನು ನಾನು ಮೆಚ್ಚುತ್ತೇನೆ. ಈ ಗುಣವೇ ಅವರತ್ತ ನಾನು ಆಕರ್ಷಿತನಾಗಲು ಕಾರಣವಾಯಿತು. ಅವರು ಪ್ರಾಮಾಣಿಕ, ಅವರ ಹೋರಾಟದಲ್ಲಿ ಪ್ರಾಮಾಣಿಕತೆ ಇದೆ. ಸತ್ಯವು ಮೇಲುಗೈ ಸಾಧಿಸಬೇಕೆಂದು ಬಯಸುವ ನಿರ್ಭೀತ ವ್ಯಕ್ತಿ ರಾಹುಲ್ ಗಾಂಧಿ ಎಂದು ಅವರು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಕನ್ಹಯ್ಯಾ ಜೊತೆಗೆ ದೇಶದಾದ್ಯಂತ ಆಡಳಿತ ವಿರೋಧಿ ಚಳವಳಿ ಕಟ್ಟುತ್ತೇನೆ: ಜಿಗ್ನೇಶ್ ಮೆವಾನಿ