ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬರೆ ಮೇಲೆ ಬರೆ ಎಳೆಯುತ್ತಿದೆಯೆಂಬ ಅಳಲಿನ ನಡುವೆ ಅಡಿಕೆ ತೋಟಿಗರಿಗೆ ಸಿಗುತ್ತಿದ್ದ ಮೈಲುತುತ್ತದ ಅನುದಾನವನ್ನು ಹಠಾತ್ ನಿಲ್ಲಿಸಲಾಗಿದ್ದು, ಇದು ಉತ್ತರ ಕನ್ನಡದ ಅಡಿಕೆ ಬೆಳೆಗಾರನ್ನು ಕಂಗೆಡಿಸಿಬಿಟ್ಟಿದೆ. ಅಡಿಕೆಗೆ ಬರುವ ಕೊಳೆ ರೋಗ ನಿಯಂತ್ರಣಕ್ಕಾಗಿ ಅಡಿಕೆ ಗೊನೆಗಳಿಗೆ ಸಿಂಪಡಿಸುವ ಬೊಡೋ ದ್ರಾವಣಕ್ಕೆ ಮೈಲುತುತ್ತ ಅತಿ ಅವಶ್ಯ.
ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆಯಲ್ಲಿ ರೈತರು ಖರೀದಿಸುವ ಮೈಲುತುತ್ತಕ್ಕೆ ಶೇ.50 ಸಹಾಯ ಧನ ಪ್ರತಿ ವರ್ಷ ಸಿಗುತ್ತಿತ್ತು. ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಗೆ 22 ಲಕ್ಷ ಅನುದಾನ ಬಂದಿತ್ತು. ಆದರೆ ಈ ವರ್ಷ ಕೇವಲ 18 ಲಕ್ಷವಷ್ಟೇ ಬಂದಿದೆಯೆಂದು ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ರೈತರ ಅರ್ಧಕ್ಕಿಂತ ಹೆಚ್ಚು ಅರ್ಜಿಗಳಿಗೆ ನೆರವು ಸಿಕ್ಕಿಲ್ಲ. ಈ ಬಾರಿ ಬಂದಿರುವ ಅನುದಾನದಲ್ಲಿ ಹಿಂದಿನ ವರ್ಷದ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗ ಹೆಚ್ಚಿನ ಅನದಾನ ಬಂದರಷ್ಟೇ ರೈತರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತ ಕೊಡಲು ಸಾಧ್ಯವೆಂದು ತೋಟಗಾರಿಕಾ ಅಧಿಕಾರಿಗಳು ಹೇಳುತ್ತಾರೆ.
ಉತ್ತರ ಕನ್ನಡದ ಎಲ್ಲ ತಾಲೂಕುಗಳಲ್ಲಿಯೋ ಒಂದೇ ರೀತಿಯ ಪರಿಸ್ಥಿತಿಯಿದೆ. ಉದಾಹರಣೆಗೆ ಶಿರಸಿ ತಾಲೂಕಲ್ಲಿ ಕಳೆದ ವರ್ಷ 8 ಲಕ್ಷ ಬೇಡಿಕೆ ಇಡಲಾಗಿತ್ತು. ಆದರೆ ಬಂದಿದ್ದು 4.5 ಲಕ್ಷ ಮಾತ್ರ. ಅಂದರೆ ಅನುದಾನ ಕಡಿತದಿಂದ ಅರ್ಧದಷ್ಟು ರೈತರಿಗೆ ಸಹಾಯಧನದ ಮೈಲುತುತ್ತ ಪಡೆಯಲಾಗಿಲ್ಲ. ಅಡಿಕೆಯನ್ನು ಬಾಧಿಸುವ ಕೋಳೆ ರೋಗ ತಪ್ಪಿಸಲು ಹಲವು ರಾಸಾಯನಿಕ ಔಷಧಗಳು ಬಂದಿವೆಯಾದರೂ ಸುಣ್ಣ ಮತ್ತು ಮೈಲುತುತ್ತ ಮಿಶ್ರಣದ ಬೋಡೋ ದ್ರಾವಣ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯ ತೋಟಿಗರದು. ಮಳೆಗಾಲದಲ್ಲಿ ಕನಿಷ್ಠ ಎರಡು ಸಲವಾದರೂ ಈ ದ್ರಾವಣ ಸಿಂಪಡಿಸಬೇಕಾಗುತ್ತದೆ.
ಒಂದು ಎಕರೆ ತೋಟಕ್ಕೆ ಒಂದು ಬಾರಿ ಮದ್ದು ಹೊಡೆಯಲು ಕನಿಷ್ಠ 5 ಕೆ.ಜಿ ಮೈಲುತುತ್ತವಾದರೂ ಬೇಕು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಮೈಲುತುತ್ತಕ್ಕೆ 200 ರಿಂದ 220 ರೂ ದರವಿದೆ. ಫಲಾನುಭವಿಗಳಿಗೆ ಐದು ಎಕರೆಗೆ ಗರಿಷ್ಟ 7,500 ರೂ. ಸಹಾಯಧನ ಕೊಡಬಹುದಾಗಿದೆ. ತೋಟಗಾರಿಕಾ ಇಲಾಖೆಯಿಂದ ಈ ಸಹಾಯಧನ ದೊರಕಿದರೆ ಬಡ ರೈತ ಸಮುದಾಯಕ್ಕೆ ಅನುಕೂಲವಾಗುತ್ತದೆಂದು ತೋಟಿಗರು ಹೇಳುತ್ತಾರೆ.
ಇದನ್ನೂ ಓದಿ: ನೀರಾವರಿ ಯೋಜನೆ ಕುರಿತು ಬಿಜೆಪಿಗೆ ಬದ್ಧತೆ ಇಲ್ಲ: ಎಚ್ಡಿಕೆ