ಇತ್ತೀಚೆಗಷ್ಟೇ ಪಂಜಾಬ್ನ ನೂತನ ಸಿಎಂ ಆಗಿ ಆಯ್ಕೆಯಾದ ಚರಣ್ ಜಿತ್ ಸಿಂಗ್ ಚನ್ನಿ ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಎಂದು ಮನವಿ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ದೇಶಾದ್ಯಂತ ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಅದಕ್ಕೆ ಪಂಜಾಬ್ ಮತ್ತು ಹರಿಯಾಣದ ರೈತರು ನಾಯಕತ್ವ ನೀಡಿದ್ದಾರೆ. ಈ ಸಂದರ್ಭದಲ್ಲಿಯೇ ಚನ್ನಿಯವರು ಪ್ರಧಾನಿಯವರೊಂದಿಗಿನ ಮೊದಲ ಭೇಟಿಯಲ್ಲಿಯೇ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಜೊತೆಗೆ ಭತ್ತ ಖರೀದಿ ಪ್ರಕ್ರಿಯೆಯನ್ನು ಮುಂದೂಡಿರುವ ಕೇಂದ್ರ ಕ್ರಮವನ್ನು ರದ್ದುಗೊಳಿಸಿ ಕೂಡಲೇ ಭತ್ತ ಖರೀದಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪಂಜಾಬ್ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿದ್ದು ಕೇಂದ್ರದ ಕ್ರಮದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಚನ್ನಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರವು ಅಕ್ಟೋಬರ್ 1 ರಿಂದ ಭತ್ತ ಕೊಳ್ಳುವುದನ್ನು ಅಕ್ಟೋಬರ್ 11 ಕ್ಕೆ ಮುಂದೂಡಿದೆ. ಕೇಂದ್ರದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಇತರ ರಾಜ್ಯ ಏಜೆನ್ಸಿಗಳು ಭತ್ತ ಕೊಳ್ಳುತ್ತವೆ. ಈಗಾಗಲೇ ಅತಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಬೆಳೆಗೆ ಹಾನಿಯಾಗುತ್ತಿದ್ದು, ಕೇಂದ್ರ ಭತ್ತ ಕೊಳ್ಳುವುದನ್ನು ತ್ವರಿತಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
“ಕೃಷಿ ನಮ್ಮ ಮುಖ್ಯ ಆದಾಯದ ಮೂಲವಾಗಿದೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವಂತೆ ನಾನು ಪ್ರಧಾನಿಯವರ ಬಳಿ ಮನವಿ ಮಾಡಿದ್ದೇನೆ” ಎಂದು ಚನ್ನಿ ಪ್ರಧಾನಿಯೊಂದಿಗಿನ ಸಭೆಯ ನಂತರ ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ: ಪ್ರತಿಭಟನಾನಿರತ ರೈತರ ಮೇಲೆ ಮತ್ತೆ ಜಲ ಫಿರಂಗಿ ಬಳಸಿದ ಪೊಲೀಸರು