ಬೆಂಗಳೂರು: ಮೇಕೆದಾಟು ಸೇರಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ಬಿಜೆಪಿಗೆ ಯಾವ ಬದ್ಧತೆಯೂ ಇಲ್ಲ. ಹೊಸ ಮುಖ್ಯಮಂತ್ರಿಗೂ ಕೂಡ ಬದ್ಧತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ 4 ದಿನಗಳ ಕಾರ್ಯಗಾರದ 2ನೇ ದಿನದ ಕೊನೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಹೋರಾಟ ಮಾಡಲಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸುತ್ತೇವೆ. ಕೇಂದ್ರ ಸರ್ಕಾರದ ವಿರುದ್ದವೂ ಹೋರಾಟ ಮಾಡುತ್ತೇವೆ. ಭಾಷೆ, ನೆಲ, ನೀರಿನ ವಿಚಾರದಲ್ಲಿ ನಾಡಿನ ಹಿತ ಕಾಪಾಡಲು ಜೆಡಿಎಸ್ ಕೆಲಸ ಮಾಡುತ್ತದೆ ಎಂದಿದ್ದಾರೆ.
ಮೇಕೆದಾಟು ಯೋಜನೆ ಕೇಂದ್ರ ಸರಕಾರದ ಮುಂದೆಯೇ ಇಲ್ಲ. ರಾಜ್ಯ ರಾಜ್ಯಗಳ ನಡುವೆ ಬಿಕ್ಕಟ್ಟಿದೆ ಎನ್ನುವ ಕಾರಣಕ್ಕೆ ಕೇಂದ್ರ ಹಿಂಜರಿಯುತ್ತಿದೆ ಎಂದು ತಿಳಿಸಿದ್ದಾರೆ.
ಪಂಚರತ್ನ ಯೋಜನೆ ಘೋಷಣೆ: ಪಂಚರತ್ನ ಯೋಜನೆಗಳಾದ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿಗೆ ವಿಶೇಷ ಯೋಜನೆ ನೀಡುತ್ತೇವೆ. ಈ ಬಗ್ಗೆ ನನ್ನ ಪರಿಕಲ್ಪನೆಯ ಕಾರ್ಯಕ್ರಮಗಳು ಜಾರಿ ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ಜನರಿಗೆ ಮನದಟ್ಟು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸಮಸ್ಯೆ ಪರಿಹಾರ ನೀಡುವ ಕೆಲಸ ಮಾಡುತ್ತೇವೆ. ವಿಧವಾ ವೇತನಾ, ಹಿರಿಯ ನಾಗರಿಕರು, ಯುವಕ ಸಮಸ್ಯೆಗೆ ಬೇಕಾದ ಹಲವು ಯೋಜನೆ ಪ್ರಾರಂಭಿಸುತ್ತೇವೆ. ಮುಂದಿನ 17 ತಿಂಗಳು ಈ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಕ್ರಾಂತಿಗೆ ಅಭ್ಯರ್ಥಿಗಳ ಘೋಷಣೆ: ಜನವರಿ ತಿಂಗಳ ಸಂಕ್ರಾಂತಿ ದಿನವೇ 2023ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜನತಾ ಪರ್ವ ಮಾಸ್ಟರ್ ಮೈಂಡ್ ನಾನೇ
ಇವತ್ತು ನಾನು ನಮ್ಮ ಪಕ್ಷಕ್ಕಾಗಿ ಶಿಕ್ಷಕ ಆಗಿದ್ದೆ. ನಮ್ಮ ಶಾಸಕರು, ಮುಂದಿನ ಚುನಾವಣೆಯ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದು ವಿಶೇಷ ಅನುಭವ. ಅಲ್ಲದೆ, ಇಂದಿನ ಪಿಪಿಟಿ ಪ್ಲ್ಯಾನ್ ಕೂಡಾ ನನ್ನದೆ. ಕಂಟೆಂಟ್ ಕೂಡ ನನ್ನದೇ ಎಂದು ಎಚ್ಡಿಕೆ ಅವರು ಹೇಳಿದರು.
ಕಾಲೇಜು ದಿನಗಳಲ್ಲಿ ನಾನು ಕೊನೆ ಬೇಂಚ್ ವಿದ್ಯಾರ್ಥಿ ಆಗಿದ್ದೆ. ಇಂದು ಅಭ್ಯರ್ಥಿಗಳಿಗೆ ಪಕ್ಷದ ವಿಚಾರಗಳು ತಿಳಿಸಲು ವಿದ್ಯಾರ್ಥಿ ಆಗೋಕ್ಕಿಂತ ಶಿಕ್ಷಕನಂತೆ ಆಗಿ ಶಾಸಕರಿಗೆ ತಿಳಿ ಹೇಳಿದ್ದೇನೆ. ಅಭ್ಯರ್ಥಿಗಳು ಶಿಸ್ತಿನ ವಿಧ್ಯಾರ್ಥಿಗಳಾಗಿ ಕುಳಿತು ಕೇಳಿದ್ದಾರೆ. ಇಡೀ ಕಾರ್ಯಾಗಾರದ ಸಂಪೂರ್ಣ ಪರಿಕಲ್ಪನೆ ನನ್ನದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿರಿ: ಮೈಸೂರು ಗ್ಯಾಂಗ್ ರೇಪ್: ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ನಟ ಚೇತನ್