ಸೆ.27ರಂದು ರೈತರು ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ. ಆದರೆ ಇದನ್ನು ಸಹಿಸದ ಹಲವು ಬಿಜೆಪಿ ಬೆಂಬಲಿಗರು, ‘ಬಂದ್ ಯಶಸ್ವಿಯಾಗಿಲ್ಲ’ ಎಂದು ಬಿಂಬಿಸಲು ಹಳೆಯ ಪೋಟೋವೊಂದನ್ನು ಶೇರ್ ಮಾಡಿ ನಗೆಪಾಟಲಿಗೀಡಾಗಿದೆ.
“ನನ್ನ ನಗರದಲ್ಲಿ ಭಾರತ್ ಬಂದ್ ಪರಿಣಾಮ ಬೀರಿಲ್ಲ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಒಂದೇ ಪೋಟೋವನ್ನು, ವಿವಿಧ ನಗರಗಳ ಹೆಸರಲ್ಲಿ ಬಿಂಬಿಸಿ ಬಿಜೆಪಿಯ ಬೆಂಬಲಿಗರು ಹಂಚಿಕೊಂಡಿದ್ದಾರೆ. ಸುರಾತ್, ದೆಹಲಿ, ಮುಂಬೈ- ಎಲ್ಲಕ್ಕೂ ಒಂದೇ ಪೋಟೋವನ್ನು ಬಳಸಲಾಗಿದೆ.
ಈ ಕೆಳಗಿರುವ ಪೋಟೋವನ್ನೇ ನೋಡಿ. “ನನ್ನ ನಗರ ಪೂರ್ಣ ತೆರೆದಿದೆ. ಭಾರತ್ ಬಂದ್ಗೆ ಸೂರತ್ ಬೆಂಬಲಿಸಿಲ್ಲ” ಎಂದು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ ‘ಸೂರತ್’ ಜಾಗದಲ್ಲಿ ‘ದೆಹಲಿ’, ‘ಪುಣೆ’ ಹೀಗೆ ಬೇರೊಂದು ನಗರದ ಹೆಸರು ಹಾಕಿ ಅನೇಕರು ಪೋಸ್ಟ್ ಮಾಡಿರುವುದನ್ನು ಕಾಣಬಹುದು. ಫೇಸ್ಬುಕ್, ಟ್ವಿಟ್ಟರ್ನಲ್ಲಿ ಸಾವಿರಾರು ಮಂದಿ ಇದೇ ರೀತಿ ಶೇರ್ ಮಾಡಿ, ರೈತರ ಹೋರಾಟವನ್ನು ಅಪಹಾಸ್ಯ ಮಾಡಲು ಯತ್ನಿಸಿದ್ದಾರೆ.
Along with my Delhi all India is open #RakeshTikait ??#भारत_खुला_है pic.twitter.com/BCX5BQaHaq
— Manoj Singh Parihar (@manojsparihar) September 27, 2021
‘ಒಂದು ರಸ್ತೆ, ಒಂದು ದೇಶ’
‘ಎಲ್ಲರೂ ಸಮಾನರು, ಎಲ್ಲರಿಗೂ ಒಂದೇ ಕಾನೂನು’ ಎಂದು ಆಗಾಗ್ಗೆ ಹೇಳುತ್ತದೆ. ಎಲ್ಲದರಲ್ಲೂ ‘ಏಕಸಂಸ್ಕೃತಿ’ ಬಿಂಬಿಸುವ ಬಿಜೆಪಿ, ‘ಒಂದು ರಾಷ್ಟ್ರ, ಒಂದು ಕಾನೂನು’, ‘ಒಂದು ರಾಷ್ಟ್ರ ಒಂದು ತೆರಿಗೆ’ ಎನ್ನುವ ಘೋಷಣೆಗಳನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪತ್ರಕರ್ತ ಎಸ್.ಸಿ.ದಿನೇಶ್ಕುಮಾರ್, ‘ಒಂದು ದೇಶ ಒಂದು ರಸ್ತೆ’ ಎಂದು ಪೋಟೋಗಳನ್ನು ಶೇರ್ ಮಾಡಿದ್ದಾರೆ. ‘ಒಂದು ದೇಶ, ಒಂದು ರಸ್ತೆ, ಒಂದೇ ಟ್ವೀಟ್’ ಎಂದು ಬರಹಗಾರ್ತಿ ಅಶ್ರೀಕ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಅನೇಕರು ಬಿಜೆಪಿಯ ಟ್ರೋಲ್ ಪಡೆಯ ಸುಳ್ಳುಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಈ ವೈರಲ್ ಪೋಟೋ ಯಾವಾಗ ತೆಗೆದದ್ದು?
‘ದಿ ಕ್ವಿಂಟ್’ ಜಾಲತಾಣ ಈ ಪೋಟೋದ ಅಸಲಿ ಕಥೆಯನ್ನು ಪತ್ತೆ ಹಚ್ಚಿದೆ. ಜನಜಂಗುಳಿಯಿಂದ ತುಳುಕುತ್ತಿರುವ ಈ ಪೋಟೋ ಸುಮಾರು ಐದು ವರ್ಷಗಳ ಹಿಂದಿನದ್ದು ಎಂದು ತಿಳಿಸಿದೆ. ಇದು ಬಿಹಾರದ ಪಾಟ್ನಾ ನಗರದ್ದಾಗಿದ್ದು, ಸುಮಾರು 2016ರಿಂದಲೂ ಇಂಟರ್ನೆಟ್ನಲ್ಲಿ ಲಭ್ಯವಿದೆ. ಪಾಟ್ನಾದ ಟ್ರಾಫಿಕ್ ಸಮಸ್ಯೆ ಕುರಿತು ಬರೆಯಲಾದ ಸುದ್ದಿಗಳಲ್ಲಿ ಈ ಪೋಟೋ ಬಳಕೆಯಾಗಿದೆ.