Homeಮುಖಪುಟನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

- Advertisement -
- Advertisement -

ನಿಮಗೆ ನೆನಪಿದೆಯೊ ಗೊತ್ತಿಲ್ಲ, ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಅವರು ಕೈಗೊಂಡ ಕೆಲವು ಆರಂಭಿಕ ಕ್ರಮಗಳಲ್ಲಿ ಒಂದು ಗಮನಾರ್ಹವಾದ ಕ್ರಮ ಎಂದರೆ ಸೌತ್ ಬ್ಲಾಕ್ ಕಚೇರಿಗಳಿಗೆ ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸಿದ್ದು. ಸೌತ್ ಬ್ಲಾಕ್ ಎಂದರೆ ಪ್ರಧಾನಮಂತ್ರಿಗಳ ಕಚೇರಿ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರುವ ಜಾಗ. ಅದಕ್ಕೆ ಆಗ ಕೊಟ್ಟಿದ್ದ ಕಾರಣ, ದಲ್ಲಾಳಿಗಿರಿಗಳಲ್ಲಿ ತೊಡಗಿದ್ದ “ಲ್ಯುಟೆನ್ಸ್” ಮಾಧ್ಯಮವನ್ನು ಅಧಿಕಾರ ಕೇಂದ್ರದಿಂದ ದೂರ ಇರಿಸುವುದು.

ಇದರ ಪರಿಣಾಮ? ಕಳೆದ ಏಳು ವರ್ಷಗಳಲ್ಲಿ ರಕ್ಷಣಾ ಇಲಾಖೆಯ ವ್ಯವಹಾರಗಳ ಬಗ್ಗೆ ಅಧಿಕೃತ ಪತ್ರಿಕಾಹೇಳಿಕೆ ಬಿಟ್ಟರೆ ಬೇರೆ ಸುದ್ದಿಗಳು ಬಹುತೇಕ ಇಲ್ಲವಾದದ್ದು; ಪ್ರಧಾನಮಂತ್ರಿಗಳ ಸಂದರ್ಶನ ಪೂರ್ವ ನಿರ್ಧರಿತ ವ್ಯಕ್ತಿಗಳಿಗೆ ಸೀಮಿತವಾದದ್ದು. ಮತ್ತು ಮುಂದೆ ನಾರ್ತ್ ಬ್ಲಾಕ್‌ಗೂ ಇದೇ ನಿಯಮ ಅಳವಡಿಸಿದ ಬಳಿಕವಂತೂ ಕೇಂದ್ರ ಸಚಿವ ಸಂಪುಟದ ಪತ್ರಿಕಾಗೋಷ್ಠಿಗಳೆಂದರೆ ಶಾಲೆ ಮಕ್ಕಳ ಮಗ್ಗಿ ಬಾಯಿಪಾಠದ ಮಟ್ಟಕ್ಕೆ ಬಂದು ನಿಂತದ್ದು. ಈ ಅಧಿಕಾರಿಗಳ ಉದ್ಧಟತನ ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಇದೇ ಜನವರಿ ಕಡೆಯ ವಾರದಲ್ಲಿ ಹಣಕಾಸು ಸಮೀಕ್ಷೆಯ ಪತ್ರಿಕಾಗೋಷ್ಠಿ ನಡೆದಿತ್ತು. ಒಬ್ಬರು ಪತ್ರಕರ್ತೆ ಎರಡು ಪ್ರಶ್ನೆಗಳನ್ನು ಕೇಳಿದಾಗ, ಮೊದಲ ಪ್ರಶ್ನೆಗೆ ಉತ್ತರ ತಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಅಧಿಕಾರಿಗಳು ಆಕೆ ಎರಡನೇ ಪ್ರಶ್ನೆ ಕೇಳಿದಾಗ, ನಿಯಮ ಪ್ರಕಾರ ಒಂದೇ ಪ್ರಶ್ನೆಗೆ ಅವಕಾಶ ಎಂದರು. ಮೊದಲ ಪ್ರಶ್ನೆಗೆ ನೀವು ನಿಮಗೆ ಸಂಬಂಧಿಸಿದ್ದಲ್ಲ ಎಂದಿದ್ದಿರಿ ಎರಡನೆಯ ಪ್ರಶ್ನೆಯನ್ನು ಪರಿಗಣಿಸಿ ಎಂದು ಆಕೆ ಕೋರಿದಾಗ, ನಿಮ್ಮ ಮೊದಲ ಪ್ರಶ್ನೆಯ ಅವಕಾಶವನ್ನು ನೀವು ವ್ಯರ್ಥ ಮಾಡಿಕೊಂಡಿದ್ದೀರಿ ಎಂದು ಗದರಿ, ಬೇರೊಬ್ಬ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಸೂಚಿಸಿದರು! ಆದರೆ ಅಲ್ಲಿ ನೆರೆದ ಪತ್ರಕರ್ತರಾರಿಗೂ ಏನೂ ಅನ್ನಿಸಲೇ ಇಲ್ಲ!!

ಮಾಧ್ಯಮಗಳ ಒಟ್ಟು ಸ್ಥಿತಿ ಇಲ್ಲಿಗೆ ತಲುಪಿರುವಾಗ, ಕೆಲವೊಮ್ಮೆ ಪವಾಡಗಳು ಸಂಭವಿಸಿದ್ದಿದೆ. ಬಾಲಾಕೋಟ್ ದಾಳಿಯಂತಹ “ಸರ್ಜಿಕಲ್ ಸ್ಟ್ರೈಕ್”ಗಳು ಸಂಭವಿಸಿದಾಗ ಕೆಲವು ನಿರ್ದಿಷ್ಟ ಖಾಸಗಿ ಮಾಧ್ಯಮಗಳಲ್ಲಿ (ಗಮನಿಸಿ ಸರ್ಕಾರಿ ದೂರದರ್ಶನ ಅಲ್ಲ!) ಸೇನಾ ಕಾರ್ಯಾಚರಣೆಯ ಕ್ಲಿಪ್ಪಿಂಗ್‌ಗಳು ಕಾಣಿಸಿಕೊಳ್ಳತೊಡಗಿದವು. ಇದು ಅಭೂತಪೂರ್ವ ವಿದ್ಯಮಾನ. ಸ್ವತಂತ್ರ ಭಾರತದಲ್ಲಿ ಇಲ್ಲಿಯತನಕ ರಕ್ಷಣಾಪಡೆಗಳು ಮಾಧ್ಯಮಗಳ ಮೂಲಕ ತಮ್ಮ ಕಾರ್ಯಾಚರಣೆಗಳನ್ನು “ಪ್ರಚಾರ” ಮಾಡಿದ್ದಿಲ್ಲ. ಈ ರೀತಿಯ “ಸರ್ಜಿಕಲ್ ಸ್ಟ್ರೈಕ್”ಗಳು ಮರುಕಳಿಸತೊಡಗಿದಾಗ ಮತ್ತು ಆ ಎಲ್ಲ ಸಂದರ್ಭಗಳಲ್ಲಿಯೂ ಅವೇ ನಿರ್ದಿಷ್ಟವಾದ ಮಾಧ್ಯಮಗಳಲ್ಲಿ ಮಾತ್ರ ಅಂತಹ ಎಕ್ಸ್‌ಕ್ಲೂಸಿವ್ ಕ್ಲಿಪ್ಪಿಂಗ್‌ಗಳು ಪ್ರಸಾರವಾಗತೊಡಗಿದಾಗ ದೇಶಕ್ಕೆ ಒಂದು ವಿಚಾರ ಸ್ಪಷ್ಟ ಆಗಿದೆ. ಅದೇನೆಂದರೆ: ಸೌತ್ ಬ್ಲಾಕ್‌ಗೆ ಮಾಧ್ಯಮಗಳ ಪ್ರವೇಶವನ್ನು ನಿರ್ಬಂಧಿಸಿದ್ದರ ಹಿಂದಿರುವ ಹುನ್ನಾರ, ಆಯ್ದ #ಡಿಯರ್_ಮೀಡಿಯಾಗಳನ್ನು ಮಾತ್ರ ಒಳಬಿಟ್ಟುಕೊಳ್ಳುವುದು.

ಸುಪ್ರೀಂಕೋರ್ಟ್

ಪ್ರೊಪಗಾಂಡೋದ್ಯಮ

ಹಾಲೀ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಅವರ ಖಾಸಗೀಕರಣ ನೀತಿಯ ಭಾಗವೊ ಎಂಬಂತೆ, ಇಲ್ಲಿಯ ತನಕ ಸರ್ಕಾರಿ ಪ್ರಚಾರ ಮಾಧ್ಯಮವಾಗಿದ್ದ ದೂರದರ್ಶನ ಮಾಡುತ್ತಿದ್ದ ಅಧಿಕೃತ ಸರ್ಕಾರಿ ಸುದ್ದಿಗಳ ಪ್ರಚಾರದ ಕಾರ್ಯವನ್ನು ಖಾಸಗಿ ಟೆಲಿ ಚಾನೆಲ್‌ಗಳು ನಾಮುಂದು ತಾಮುಂದು ಎಂದು ಸ್ಪರ್ಧೆಗೆ ಬಿದ್ದು ಮಾಡಲಾರಂಭಿಸಿವೆ. ರಿಪಬ್ಲಿಕ್ ಟಿ.ವಿ ಚಾನೆಲ್ 2017ರಲ್ಲಿ ಆರಂಭಗೊಂಡ ಬಳಿಕವಂತೂ ಭಾರತೀಯ ಮಾಧ್ಯಮ ಪ್ರಪಂಚದಲ್ಲಿ ಹೊಸದೊಂದು ಸಂಚಲನ ಆರಂಭಗೊಂಡಿದೆ. ಸರ್ಕಾರ ನಡೆಸುವವರ ಪರವಿದ್ದ ಮಾಧ್ಯಮಗಳು ಅದನ್ನು ತೋರಿಸಿಕೊಳ್ಳಲು ಹಿಂಜರಿಕೆ, ಚಡಪಡಿಕೆ ಹೊಂದಿ, “ಬ್ಯಾಲೆನ್ಸ್” ಆಟದಲ್ಲಿರುವಾಗ ರಂಗ ಪ್ರವೇಶ ಮಾಡಿದ ರಿಪಬ್ಲಿಕ್ ಚಾನೆಲ್, ನೇರಾನೇರ ಆಳುವವರ ಸಿದ್ಧಾಂತಗಳ ಪ್ರಚಾರ, ಆಳುವವರ ವಿರೋಧಿಗಳ ಮಟ್ಟಹಾಕುವಿಕೆಯ ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ. ಇದು ಯಾವ ಕೋನದಿಂದಲೂ ಪತ್ರಿಕೋದ್ಯಮದಂತೆ ಕಾಣದಿರುವುದರಿಂದ ಮತ್ತು ಅದರ ಏಕಮಾತ್ರ ಮುಖವಾಣಿಯಾಗಿರುವ ಅರ್ನಬ್ ರಂಜನ್ ಗೋಸ್ವಾಮಿ ಯಾವ ಕೋನದಿಂದಲೂ ಪತ್ರಕರ್ತರಾಗಿ ಕಾಣಿಸದಿರುವುದರಿಂದ ಈ ಬ್ರ್ಯಾಂಡಿನ ಚಟುವಟಿಕೆಯನ್ನು “ಪ್ರೊಪಗಾಂಡೋದ್ಯಮ” ಎಂದು ಕರೆಯುವುದೇ ಉಚಿತವೆನ್ನಿಸುತ್ತದೆ.

ಬಿಸ್ಕೂಟು ಲೆಕ್ಕ

ಒಂದು ಖಾಸಗಿ ಚಾನೆಲ್‌ನ ಲೀಡ್ ಆಂಕರ್ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು, ನಾಲ್ಕೇ ವರ್ಷದಲ್ಲಿ ಏಕಾಏಕಿ ನೂರಾರು ಕೋಟಿಗಳ ಹೂಡಿಕೆ ಮಾಡುವುದು/ಮಾಡಿಸುವುದು ಸಹಜವಾಗಿಯೇ ಎಲ್ಲರ ಹುಬ್ಬೇರಿಸಿದೆ ಮತ್ತು ನಾಲ್ಕು ವರ್ಷಗಳ ಅವಧಿಯೊಳಗೆ, ಬೇರೆಲ್ಲ ವೃತ್ತಿಪರ ಮಾಧ್ಯಮಗಳನ್ನು ರಿಪಬ್ಲಿಕ್ ಬುಲ್ಡೋಜ್ ಮಾಡಿದ ರೀತಿ ಎಲ್ಲವೂ ಊಹಿಸಿದಷ್ಟು ಸರಳವಾಗಿಲ್ಲ ಎಂಬುದನ್ನು ಸಾಬೀತುಮಾಡಿದೆ. ಹಾಗಾಗಿ, ಅರ್ನಬ್ ಬ್ರ್ಯಾಂಡಿನ ಪ್ರೊಪಗಾಂಡೋದ್ಯಮದ ಬಿಸ್ಕೂಟು ಲೆಕ್ಕ ಸುಲಭವಾಗಿ ಸಿಕ್ಕಿಹಾಕಿಕೊಂಡಂತಿದೆ.

ತನ್ನ ಬ್ರ್ಯಾಂಡಿನ ಪತ್ರಿಕೋದ್ಯಮದ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದ್ದರೂ (ಶಶಿ ತರೂರ್‌ರಿಂದ ಆರಂಭಿಸಿ ಇತ್ತೀಚೆಗಿನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ತನಕ) ಅದನ್ನೆಲ್ಲ ತನ್ನ ಸಾಧನೆಯ ಬ್ಯಾಡ್ಜ್‌ಗಳೆಂದು ಸಿಕ್ಕಿಸಿಕೊಳ್ಳುತ್ತಿದ್ದ ಅರ್ನಬ್ ರಂಜನ್ ಗೋಸ್ವಾಮಿಗೆ ಈಗ ಎರಡು ಸಂಗತಿಗಳಲ್ಲಿ ತಾನು ನುಂಗಿದ ತುತ್ತಿನ ಗಾತ್ರ ಹೆಚ್ಚಾಗಿ, ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದೆಂಬ ಶಂಕೆ ಉಂಟಾಗಿದೆ. ಅಂತಹ ಎರಡು ಪ್ರಕರಣಗಳಿವೆ.

ಏನಿದು Dish Fta ಹಗರಣ?

ಸರ್ಕಾರಿ ದೂರದರ್ಶನದ ಫ್ರೀ ಡಿಷ್‌ನಲ್ಲಿ ಖಾಸಗಿ ಚಾನೆಲ್‌ಗಳಿಗೆ ಅವಕಾಶ ಸಿಗಲು ಅವು ಟೆಂಡರಿಗೆ ನಿಂತು ಸುಮಾರು 8-12 ಕೋಟಿ ಪಾವತಿಸಿ ಸ್ಲಾಟ್ ಖರೀದಿ ಮಾಡಬೇಕಿರುತ್ತದೆ. ಆದರೆ ರಿಪಬ್ಲಿಕ್ ಟಿವಿ ಅದೇನನ್ನೂ ಮಾಡದೆ ನೇರವಾಗಿ ಆ ವ್ಯವಸ್ಥೆಯ ಮೂಲಕ 2.2ಕೋಟಿ ವೀಕ್ಷಕರನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 52ಕೋಟಿ ರೂ.ಗಳ ನಷ್ಟವಾಗಿದೆ ಎಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಈ ಪ್ರಕರಣ ಬೆಳಕಿಗೆ ಬಂದಾಗ ಅದನ್ನು ಲಾಜಿಕಲ್ ಅಂತ್ಯಕ್ಕೆ ತಲುಪದಂತೆ ನೆನೆಗುದಿಗೆ ಹಾಕಲು ಕೇಂದ್ರ ಸರ್ಕಾರದ ಸಚಿವರೊಬ್ಬರು ಸಹಾಯ ಮಾಡಿದ್ದಾರೆ ಎಂಬುದು ಈಗ ಬಹಿರಂಗಗೊಂಡಿರುವ ವಾಟ್ಸಾಪ್ ಸಂದೇಶಗಳ ಕಡತದಿಂದ ಬಹಿರಂಗಗೊಂಡಿದೆ.

TRP ತಿರುಚಿದ ಪ್ರಕರಣ

ಪಾಲ್ಗಾರ್ ಲಿಂಚಿಂಗ್ ಪ್ರಕರಣದ ಬಳಿಕ ತನ್ನ ಜೊತೆ ಜಿದ್ದಾಜಿದ್ದಿಗೆ ಇಳಿದಿರುವ ಅರ್ನಬ್ ಗೋಸ್ವಾಮಿಯ ಬೆನ್ನು ಹತ್ತಿರುವ ಮಹಾರಾಷ್ಟ್ರ ಸರ್ಕಾರ, ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ಆಪಾದನೆಯ ಮೇಲೆ ಅರ್ನಬ್‌ರನ್ನು ಬಂಧಿಸಿದ್ದು ಮತ್ತು ಆ ಬಳಿಕ ಅರ್ನಬ್ ಅವರಿಗೆ ಬಹಿರಂಗ ಸವಾಲು ಹಾಕಿ ಹೊತ್ತಿಸಿದ ಕಿಡಿ ಈಗ ಹೊತ್ತಿ ಉರಿಯತೊಡಗಿದಂತಿದೆ.

PC : Twitter

ಟೆಲಿವಿಷನ್ ಚಾನೆಲ್‌ಗಳ ವೀಕ್ಷಕ ಜನಪ್ರಿಯತೆಯನ್ನು ಅಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯ ಗಳಿಸಲು ಸಹಾಯ ಮಾಡುವ ವ್ಯವಸ್ಥೆಯೇ ಟಿಆರ್‌ಪಿ (ಟೆಲಿವಿಶನ್ ರೇಟಿಂಗ್ ಪಾಯಿಂಟ್). ಆಯ್ದ ಕೆಲವು ಮನೆಗಳಲ್ಲಿ ಇರಿಸಲಾಗಿರುವ ವೀಕ್ಷಕ ಮೀಟರ್‌ಗಳ ಮೂಲಕ ಇದನ್ನು ಅಳೆಯಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ, ಇಂತಹ ಮಾಪನಗಳನ್ನು ನಡೆಸುವ ಹಂಸಾ ರಿಸರ್ಚ್ ಗ್ರೂಪ್ ಪೊಲೀಸರಿಗೆ ದೂರು ನೀಡಿ, ಈ ಮೀಟರ್‌ಗಳನ್ನಿರಿಸಿರುವ ಮನೆಗಳವರಿಗೆ ಲಂಚ ನೀಡಿ ಟಿಆರ್‌ಪಿ ತಿರುಚುವ ಕೆಲಸವನ್ನು ಕೆಲವು ಟೆಲಿವಿಷನ್ ಚಾನೆಲ್‌ಗಳು ಮಾಡುತ್ತಿವೆ ಎಂದಿತ್ತು. ಅದರಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಢಾಳಾಗಿ ಕೇಳಿಬಂದಿತ್ತು.

ಇದಾದ ಬಳಿಕ ತನಿಖೆ ಆರಂಭಗೊಂಡು, ಡಿಸೆಂಬರಿನಲ್ಲಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರ ತನಿಖೆಯ ಸಂದರ್ಭದಲ್ಲಿ ಸಿಕ್ಕಿದ ವಾಟ್ಸಾಪ್ ಚಾಟ್ ಸಂದೇಶಗಳಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಪಾರ್ಥೋ ದಾಸ್‌ಗುಪ್ತಾ ನಡುವೆ ನಡೆದ ಮಾತುಕತೆಗಳು ಈಗ ಭಾರೀ ಗದ್ದಲ ಸೃಷ್ಟಿಸಿವೆ. ಮೊನ್ನೆ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದಾಗ ಅದರ ಭಾಗವಾಗಿ ಪಾರ್ಥೋ ದಾಸ್‌ಗುಪ್ತಾ ಅವರ ಚಾಟ್‌ಗಳ ಸಾವಿರಾರು ಪುಟಗಳನ್ನು ಸಲ್ಲಿಸಿದ್ದರು. ಅವೀಗ ಮಾಧ್ಯಮಗಳ ಮೂಲಕ ಲೋಕಮುಖಕ್ಕೆ ಕಾಣಿಸಿಕೊಂಡಿವೆ.

ಅರ್ನಬ್ ಪಾತ್ರ

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

>> 26-02-2019ರಂದು ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಅದಕ್ಕಿಂತ ಮೂರು ದಿನಗಳ ಮೊದಲೇ ಅರ್ನಬ್ ಗೋಸ್ವಾಮಿ ತನ್ನ ವಾಟ್ಸಾಪ್ ಚಾಟ್‌ನಲ್ಲಿ ಚರ್ಚಿಸಿದ್ದು ಇವುಗಳಲ್ಲಿ ಬಹಳ ಗಮನಾರ್ಹವಾದುದು. ರಕ್ಷಣಾ ಇಲಾಖೆಯ ಉನ್ನತ ಹಂತ ಮತ್ತು ಪ್ರಧಾನಮಂತ್ರಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿರದ ಸಂಗತಿಯೊಂದು ಆ ಹಂತದಲ್ಲಿ ಯಕಶ್ಚಿತ್ ವ್ಯಕ್ತಿಯ ಕೈಗೆ ಸಿಗುವುದು “ಸರ್ಕಾರಿ ಗೌಪ್ಯತೆ ಕಾಯಿದೆ(OSA), 1923ರ ಸೆಕ್ಷನ್ 3(1)(ಎ)ರ” ಗಂಭೀರ ಉಲ್ಲಂಘನೆಯೆನ್ನಿಸುತ್ತದೆ. ಆದರೆ, ಈ ವರದಿ ಮಾಡಿದ ಟೈಮ್ಸ್ ನೌ ಚಾನೆಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಅರ್ನಬ್, ತಾನು ವಿಶೇಷವಾದುದೇನನ್ನೂ ಹೇಳಿಲ್ಲ. ಬೇರೆ ಪತ್ರಿಕೆಗಳೂ ದಾಳಿಯ ಸಂಭಾವ್ಯತೆಯನ್ನು ವರದಿ ಮಾಡಿದ್ದವು ಎಂದು ಸಮರ್ಥಿಸಿಕೊಂಡಿದ್ದಾರೆ.

>> ಚಾಟ್ ಉದ್ದಕ್ಕೂ ಹಲವೆಡೆ ಕೇಂದ್ರ ಸರ್ಕಾರದ ಉನ್ನತ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿರುವವರು ತನ್ನ ಬಗಲಿಗಿದ್ದಾರೆ ಎಂಬುದನ್ನು ಅರ್ನಬ್ ವ್ಯಕ್ತಪಡಿಸುತ್ತಾರೆ. “ಲ್ಯುಟೆನ್ಸ್ ಮಿಡೀಯಾ” ಎಂದು ತಾನೇ ಗೇಲಿಮಾಡಿದ್ದು ಸ್ವತಃ ತನ್ನ ವಿರುದ್ಧವೇ ತಿರುಗಿಬಂದಾಗ, ದೇಶಭಕ್ತಿಯ ಹೆಸರಲ್ಲಿ ಸಮರ್ಥಿಸಿಕೊಳ್ಳುವುದು ಮತ್ತು ಈ ನಾಲ್ಕು ವರ್ಷಗಳಲ್ಲಿ ರಿಪಬ್ಲಿಕ್ ಟಿವಿ ಬ್ರೇಕ್ ಮಾಡಿದ ಸುದ್ದಿಗಳನ್ನು ಗಮನಿಸಿದರೆ, ಸರ್ಕಾರ ಇದನ್ನು ತನ್ನ ವಿರೋಧಿಗಳತ್ತ ಗುಂಡೆಸೆಯುವ ಹೆಗಲಾಗಿ ಬಳಸಿಕೊಂಡದ್ದು ಸ್ಪಷ್ಟವಾಗಿ ಕಾಣಿಸುತ್ತದೆ.

>> 2010ರಲ್ಲಿ ನೀರಾ ರಾಡಿಯಾ ಎಂಬ ಅಧಿಕಾರದ ದಳ್ಳಾಲಿ ಮಹಿಳೆ ನಡೆಸಿದ ಮಾತುಕತೆಗಳನ್ನು ಆದಾಯ ತೆರಿಗೆ ಇಲಾಖೆ ರೆಕಾರ್ಡ್ ಮಾಡಿಕೊಂಡದ್ದನ್ನು ಮಾಧ್ಯಮಗಳು ಹೇಗೆ ವರದಿ ಮಾಡಿದವು ಮತ್ತು ಅಂದಿನ ಸರ್ಕಾರದ ಪತನಕ್ಕೆ ಈ ಸಂಗತಿಯ ಕೊಡುಗೆ ಎಷ್ಟಿತ್ತು ಎಂಬುದನ್ನು ಗಮನಿಸಿದರೆ, ಇಂದು ಬಹುತೇಕ ಮಾಧ್ಯಮಗಳು “ವಾಟ್ಸಾಪ್ ಚಾಟ್‌ಗಳು” ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುವಾಗ ಆ ಖಾಸಗಿತನ ಬಹಿರಂಗಗೊಂಡದ್ದು ಹೇಗೆ ಎಂದು ತಲೆಕೆಡಿಸಿಕೊಂಡಿರುವುದು ಕಂಡರೆ, ವಾಟ್ಸಾಪ್ ಬಳಕೆಗೆ ಸಹಿ ಮಾಡುವಾಗ, ಸರ್ಕಾರದ ಸಂಸ್ಥೆಗಳು ತನಿಖೆಗಾಗಿ ಬಯಸಿದಲ್ಲಿ ವಾಟ್ಸಾಪ್ ತನ್ನ ಎನ್ಕ್ರಿಪ್ಟೆಡ್ ಸಂವಹನಗಳನ್ನು ಅವರಿಗೆ ಒದಗಿಸಲು ಬದ್ಧ ಎಂದು ಹೇಳಿರುವುದನ್ನು ಅವರು ಓದಿರುವಂತಿಲ್ಲ.

ಈ ಹಂತದಲ್ಲಿ, ಸ್ವತಃ ಆಳುವ ಬಿಜೆಪಿಯಲ್ಲಿ ವ್ಯಕ್ತವಾಗುತ್ತಿರುವ ಮುಜುಗರ, ಕಿರಿಕಿರಿ ಮತ್ತು ವಿಚಿತ್ರ ಮೌನಗಳನ್ನು ಗಮನಿಸಿದರೆ, ಸ್ವತಃ ಅರ್ನಬ್ ರಂಜನ್ ಗೋಸ್ವಾಮಿಯ ಚಾಟ್ ಅಕೌಂಟ್ ಬಹಿರಂಗಗೊಂಡರೆ, ಹಾಲೀ ಕೇಂದ್ರ ಸರ್ಕಾರದ “ಚಾಟ್‌ಗೇಟ್” ಎಲ್ಲಿಗೆ ತೆರೆದುಕೊಳ್ಳಲಿದೆಯೆಂಬುದನ್ನು ಊಹಿಸುವುದೂ ಕಷ್ಟ. ಆದರೆ ದೇಶದ ಹಿತದೃಷ್ಟಿಯಿಂದ ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಇದೆಲ್ಲದರಿಂದ ಕಂಗೆಟ್ಟಂತೆ ಕಾಣಿಸುತ್ತಿರುವ ಅರ್ನಬ್, ತಾನು ರಾಷ್ಟ್ರಭಕ್ತರ “ನ್ಯಾಷನಲ್ ಕಲೆಕ್ಟಿವ್ ಒಂದನ್ನು ಸ್ಥಾಪಿಸುವ ಮೂಲಕ ತನ್ನ ಸಿದ್ಧಾಂತಗಳ ವಿರೋಧಿಗಳನ್ನು ಮತ್ತು ಷಡ್ಯಂತ್ರಗಾರರನ್ನು ಮಟ್ಟಹಾಕಲು ನೇರ ಕಾರ್ಯಾಚರಣೆಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ ಎಂಬುದು ಲೇಟೆಸ್ಟ್ ಬೆಳವಣಿಗೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ.


ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...