Homeಮುಖಪುಟನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

- Advertisement -
- Advertisement -

ನಿಮಗೆ ನೆನಪಿದೆಯೊ ಗೊತ್ತಿಲ್ಲ, ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಅವರು ಕೈಗೊಂಡ ಕೆಲವು ಆರಂಭಿಕ ಕ್ರಮಗಳಲ್ಲಿ ಒಂದು ಗಮನಾರ್ಹವಾದ ಕ್ರಮ ಎಂದರೆ ಸೌತ್ ಬ್ಲಾಕ್ ಕಚೇರಿಗಳಿಗೆ ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸಿದ್ದು. ಸೌತ್ ಬ್ಲಾಕ್ ಎಂದರೆ ಪ್ರಧಾನಮಂತ್ರಿಗಳ ಕಚೇರಿ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರುವ ಜಾಗ. ಅದಕ್ಕೆ ಆಗ ಕೊಟ್ಟಿದ್ದ ಕಾರಣ, ದಲ್ಲಾಳಿಗಿರಿಗಳಲ್ಲಿ ತೊಡಗಿದ್ದ “ಲ್ಯುಟೆನ್ಸ್” ಮಾಧ್ಯಮವನ್ನು ಅಧಿಕಾರ ಕೇಂದ್ರದಿಂದ ದೂರ ಇರಿಸುವುದು.

ಇದರ ಪರಿಣಾಮ? ಕಳೆದ ಏಳು ವರ್ಷಗಳಲ್ಲಿ ರಕ್ಷಣಾ ಇಲಾಖೆಯ ವ್ಯವಹಾರಗಳ ಬಗ್ಗೆ ಅಧಿಕೃತ ಪತ್ರಿಕಾಹೇಳಿಕೆ ಬಿಟ್ಟರೆ ಬೇರೆ ಸುದ್ದಿಗಳು ಬಹುತೇಕ ಇಲ್ಲವಾದದ್ದು; ಪ್ರಧಾನಮಂತ್ರಿಗಳ ಸಂದರ್ಶನ ಪೂರ್ವ ನಿರ್ಧರಿತ ವ್ಯಕ್ತಿಗಳಿಗೆ ಸೀಮಿತವಾದದ್ದು. ಮತ್ತು ಮುಂದೆ ನಾರ್ತ್ ಬ್ಲಾಕ್‌ಗೂ ಇದೇ ನಿಯಮ ಅಳವಡಿಸಿದ ಬಳಿಕವಂತೂ ಕೇಂದ್ರ ಸಚಿವ ಸಂಪುಟದ ಪತ್ರಿಕಾಗೋಷ್ಠಿಗಳೆಂದರೆ ಶಾಲೆ ಮಕ್ಕಳ ಮಗ್ಗಿ ಬಾಯಿಪಾಠದ ಮಟ್ಟಕ್ಕೆ ಬಂದು ನಿಂತದ್ದು. ಈ ಅಧಿಕಾರಿಗಳ ಉದ್ಧಟತನ ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಇದೇ ಜನವರಿ ಕಡೆಯ ವಾರದಲ್ಲಿ ಹಣಕಾಸು ಸಮೀಕ್ಷೆಯ ಪತ್ರಿಕಾಗೋಷ್ಠಿ ನಡೆದಿತ್ತು. ಒಬ್ಬರು ಪತ್ರಕರ್ತೆ ಎರಡು ಪ್ರಶ್ನೆಗಳನ್ನು ಕೇಳಿದಾಗ, ಮೊದಲ ಪ್ರಶ್ನೆಗೆ ಉತ್ತರ ತಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಅಧಿಕಾರಿಗಳು ಆಕೆ ಎರಡನೇ ಪ್ರಶ್ನೆ ಕೇಳಿದಾಗ, ನಿಯಮ ಪ್ರಕಾರ ಒಂದೇ ಪ್ರಶ್ನೆಗೆ ಅವಕಾಶ ಎಂದರು. ಮೊದಲ ಪ್ರಶ್ನೆಗೆ ನೀವು ನಿಮಗೆ ಸಂಬಂಧಿಸಿದ್ದಲ್ಲ ಎಂದಿದ್ದಿರಿ ಎರಡನೆಯ ಪ್ರಶ್ನೆಯನ್ನು ಪರಿಗಣಿಸಿ ಎಂದು ಆಕೆ ಕೋರಿದಾಗ, ನಿಮ್ಮ ಮೊದಲ ಪ್ರಶ್ನೆಯ ಅವಕಾಶವನ್ನು ನೀವು ವ್ಯರ್ಥ ಮಾಡಿಕೊಂಡಿದ್ದೀರಿ ಎಂದು ಗದರಿ, ಬೇರೊಬ್ಬ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಸೂಚಿಸಿದರು! ಆದರೆ ಅಲ್ಲಿ ನೆರೆದ ಪತ್ರಕರ್ತರಾರಿಗೂ ಏನೂ ಅನ್ನಿಸಲೇ ಇಲ್ಲ!!

ಮಾಧ್ಯಮಗಳ ಒಟ್ಟು ಸ್ಥಿತಿ ಇಲ್ಲಿಗೆ ತಲುಪಿರುವಾಗ, ಕೆಲವೊಮ್ಮೆ ಪವಾಡಗಳು ಸಂಭವಿಸಿದ್ದಿದೆ. ಬಾಲಾಕೋಟ್ ದಾಳಿಯಂತಹ “ಸರ್ಜಿಕಲ್ ಸ್ಟ್ರೈಕ್”ಗಳು ಸಂಭವಿಸಿದಾಗ ಕೆಲವು ನಿರ್ದಿಷ್ಟ ಖಾಸಗಿ ಮಾಧ್ಯಮಗಳಲ್ಲಿ (ಗಮನಿಸಿ ಸರ್ಕಾರಿ ದೂರದರ್ಶನ ಅಲ್ಲ!) ಸೇನಾ ಕಾರ್ಯಾಚರಣೆಯ ಕ್ಲಿಪ್ಪಿಂಗ್‌ಗಳು ಕಾಣಿಸಿಕೊಳ್ಳತೊಡಗಿದವು. ಇದು ಅಭೂತಪೂರ್ವ ವಿದ್ಯಮಾನ. ಸ್ವತಂತ್ರ ಭಾರತದಲ್ಲಿ ಇಲ್ಲಿಯತನಕ ರಕ್ಷಣಾಪಡೆಗಳು ಮಾಧ್ಯಮಗಳ ಮೂಲಕ ತಮ್ಮ ಕಾರ್ಯಾಚರಣೆಗಳನ್ನು “ಪ್ರಚಾರ” ಮಾಡಿದ್ದಿಲ್ಲ. ಈ ರೀತಿಯ “ಸರ್ಜಿಕಲ್ ಸ್ಟ್ರೈಕ್”ಗಳು ಮರುಕಳಿಸತೊಡಗಿದಾಗ ಮತ್ತು ಆ ಎಲ್ಲ ಸಂದರ್ಭಗಳಲ್ಲಿಯೂ ಅವೇ ನಿರ್ದಿಷ್ಟವಾದ ಮಾಧ್ಯಮಗಳಲ್ಲಿ ಮಾತ್ರ ಅಂತಹ ಎಕ್ಸ್‌ಕ್ಲೂಸಿವ್ ಕ್ಲಿಪ್ಪಿಂಗ್‌ಗಳು ಪ್ರಸಾರವಾಗತೊಡಗಿದಾಗ ದೇಶಕ್ಕೆ ಒಂದು ವಿಚಾರ ಸ್ಪಷ್ಟ ಆಗಿದೆ. ಅದೇನೆಂದರೆ: ಸೌತ್ ಬ್ಲಾಕ್‌ಗೆ ಮಾಧ್ಯಮಗಳ ಪ್ರವೇಶವನ್ನು ನಿರ್ಬಂಧಿಸಿದ್ದರ ಹಿಂದಿರುವ ಹುನ್ನಾರ, ಆಯ್ದ #ಡಿಯರ್_ಮೀಡಿಯಾಗಳನ್ನು ಮಾತ್ರ ಒಳಬಿಟ್ಟುಕೊಳ್ಳುವುದು.

ಸುಪ್ರೀಂಕೋರ್ಟ್

ಪ್ರೊಪಗಾಂಡೋದ್ಯಮ

ಹಾಲೀ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಅವರ ಖಾಸಗೀಕರಣ ನೀತಿಯ ಭಾಗವೊ ಎಂಬಂತೆ, ಇಲ್ಲಿಯ ತನಕ ಸರ್ಕಾರಿ ಪ್ರಚಾರ ಮಾಧ್ಯಮವಾಗಿದ್ದ ದೂರದರ್ಶನ ಮಾಡುತ್ತಿದ್ದ ಅಧಿಕೃತ ಸರ್ಕಾರಿ ಸುದ್ದಿಗಳ ಪ್ರಚಾರದ ಕಾರ್ಯವನ್ನು ಖಾಸಗಿ ಟೆಲಿ ಚಾನೆಲ್‌ಗಳು ನಾಮುಂದು ತಾಮುಂದು ಎಂದು ಸ್ಪರ್ಧೆಗೆ ಬಿದ್ದು ಮಾಡಲಾರಂಭಿಸಿವೆ. ರಿಪಬ್ಲಿಕ್ ಟಿ.ವಿ ಚಾನೆಲ್ 2017ರಲ್ಲಿ ಆರಂಭಗೊಂಡ ಬಳಿಕವಂತೂ ಭಾರತೀಯ ಮಾಧ್ಯಮ ಪ್ರಪಂಚದಲ್ಲಿ ಹೊಸದೊಂದು ಸಂಚಲನ ಆರಂಭಗೊಂಡಿದೆ. ಸರ್ಕಾರ ನಡೆಸುವವರ ಪರವಿದ್ದ ಮಾಧ್ಯಮಗಳು ಅದನ್ನು ತೋರಿಸಿಕೊಳ್ಳಲು ಹಿಂಜರಿಕೆ, ಚಡಪಡಿಕೆ ಹೊಂದಿ, “ಬ್ಯಾಲೆನ್ಸ್” ಆಟದಲ್ಲಿರುವಾಗ ರಂಗ ಪ್ರವೇಶ ಮಾಡಿದ ರಿಪಬ್ಲಿಕ್ ಚಾನೆಲ್, ನೇರಾನೇರ ಆಳುವವರ ಸಿದ್ಧಾಂತಗಳ ಪ್ರಚಾರ, ಆಳುವವರ ವಿರೋಧಿಗಳ ಮಟ್ಟಹಾಕುವಿಕೆಯ ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ. ಇದು ಯಾವ ಕೋನದಿಂದಲೂ ಪತ್ರಿಕೋದ್ಯಮದಂತೆ ಕಾಣದಿರುವುದರಿಂದ ಮತ್ತು ಅದರ ಏಕಮಾತ್ರ ಮುಖವಾಣಿಯಾಗಿರುವ ಅರ್ನಬ್ ರಂಜನ್ ಗೋಸ್ವಾಮಿ ಯಾವ ಕೋನದಿಂದಲೂ ಪತ್ರಕರ್ತರಾಗಿ ಕಾಣಿಸದಿರುವುದರಿಂದ ಈ ಬ್ರ್ಯಾಂಡಿನ ಚಟುವಟಿಕೆಯನ್ನು “ಪ್ರೊಪಗಾಂಡೋದ್ಯಮ” ಎಂದು ಕರೆಯುವುದೇ ಉಚಿತವೆನ್ನಿಸುತ್ತದೆ.

ಬಿಸ್ಕೂಟು ಲೆಕ್ಕ

ಒಂದು ಖಾಸಗಿ ಚಾನೆಲ್‌ನ ಲೀಡ್ ಆಂಕರ್ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು, ನಾಲ್ಕೇ ವರ್ಷದಲ್ಲಿ ಏಕಾಏಕಿ ನೂರಾರು ಕೋಟಿಗಳ ಹೂಡಿಕೆ ಮಾಡುವುದು/ಮಾಡಿಸುವುದು ಸಹಜವಾಗಿಯೇ ಎಲ್ಲರ ಹುಬ್ಬೇರಿಸಿದೆ ಮತ್ತು ನಾಲ್ಕು ವರ್ಷಗಳ ಅವಧಿಯೊಳಗೆ, ಬೇರೆಲ್ಲ ವೃತ್ತಿಪರ ಮಾಧ್ಯಮಗಳನ್ನು ರಿಪಬ್ಲಿಕ್ ಬುಲ್ಡೋಜ್ ಮಾಡಿದ ರೀತಿ ಎಲ್ಲವೂ ಊಹಿಸಿದಷ್ಟು ಸರಳವಾಗಿಲ್ಲ ಎಂಬುದನ್ನು ಸಾಬೀತುಮಾಡಿದೆ. ಹಾಗಾಗಿ, ಅರ್ನಬ್ ಬ್ರ್ಯಾಂಡಿನ ಪ್ರೊಪಗಾಂಡೋದ್ಯಮದ ಬಿಸ್ಕೂಟು ಲೆಕ್ಕ ಸುಲಭವಾಗಿ ಸಿಕ್ಕಿಹಾಕಿಕೊಂಡಂತಿದೆ.

ತನ್ನ ಬ್ರ್ಯಾಂಡಿನ ಪತ್ರಿಕೋದ್ಯಮದ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದ್ದರೂ (ಶಶಿ ತರೂರ್‌ರಿಂದ ಆರಂಭಿಸಿ ಇತ್ತೀಚೆಗಿನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ತನಕ) ಅದನ್ನೆಲ್ಲ ತನ್ನ ಸಾಧನೆಯ ಬ್ಯಾಡ್ಜ್‌ಗಳೆಂದು ಸಿಕ್ಕಿಸಿಕೊಳ್ಳುತ್ತಿದ್ದ ಅರ್ನಬ್ ರಂಜನ್ ಗೋಸ್ವಾಮಿಗೆ ಈಗ ಎರಡು ಸಂಗತಿಗಳಲ್ಲಿ ತಾನು ನುಂಗಿದ ತುತ್ತಿನ ಗಾತ್ರ ಹೆಚ್ಚಾಗಿ, ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದೆಂಬ ಶಂಕೆ ಉಂಟಾಗಿದೆ. ಅಂತಹ ಎರಡು ಪ್ರಕರಣಗಳಿವೆ.

ಏನಿದು Dish Fta ಹಗರಣ?

ಸರ್ಕಾರಿ ದೂರದರ್ಶನದ ಫ್ರೀ ಡಿಷ್‌ನಲ್ಲಿ ಖಾಸಗಿ ಚಾನೆಲ್‌ಗಳಿಗೆ ಅವಕಾಶ ಸಿಗಲು ಅವು ಟೆಂಡರಿಗೆ ನಿಂತು ಸುಮಾರು 8-12 ಕೋಟಿ ಪಾವತಿಸಿ ಸ್ಲಾಟ್ ಖರೀದಿ ಮಾಡಬೇಕಿರುತ್ತದೆ. ಆದರೆ ರಿಪಬ್ಲಿಕ್ ಟಿವಿ ಅದೇನನ್ನೂ ಮಾಡದೆ ನೇರವಾಗಿ ಆ ವ್ಯವಸ್ಥೆಯ ಮೂಲಕ 2.2ಕೋಟಿ ವೀಕ್ಷಕರನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 52ಕೋಟಿ ರೂ.ಗಳ ನಷ್ಟವಾಗಿದೆ ಎಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಈ ಪ್ರಕರಣ ಬೆಳಕಿಗೆ ಬಂದಾಗ ಅದನ್ನು ಲಾಜಿಕಲ್ ಅಂತ್ಯಕ್ಕೆ ತಲುಪದಂತೆ ನೆನೆಗುದಿಗೆ ಹಾಕಲು ಕೇಂದ್ರ ಸರ್ಕಾರದ ಸಚಿವರೊಬ್ಬರು ಸಹಾಯ ಮಾಡಿದ್ದಾರೆ ಎಂಬುದು ಈಗ ಬಹಿರಂಗಗೊಂಡಿರುವ ವಾಟ್ಸಾಪ್ ಸಂದೇಶಗಳ ಕಡತದಿಂದ ಬಹಿರಂಗಗೊಂಡಿದೆ.

TRP ತಿರುಚಿದ ಪ್ರಕರಣ

ಪಾಲ್ಗಾರ್ ಲಿಂಚಿಂಗ್ ಪ್ರಕರಣದ ಬಳಿಕ ತನ್ನ ಜೊತೆ ಜಿದ್ದಾಜಿದ್ದಿಗೆ ಇಳಿದಿರುವ ಅರ್ನಬ್ ಗೋಸ್ವಾಮಿಯ ಬೆನ್ನು ಹತ್ತಿರುವ ಮಹಾರಾಷ್ಟ್ರ ಸರ್ಕಾರ, ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ಆಪಾದನೆಯ ಮೇಲೆ ಅರ್ನಬ್‌ರನ್ನು ಬಂಧಿಸಿದ್ದು ಮತ್ತು ಆ ಬಳಿಕ ಅರ್ನಬ್ ಅವರಿಗೆ ಬಹಿರಂಗ ಸವಾಲು ಹಾಕಿ ಹೊತ್ತಿಸಿದ ಕಿಡಿ ಈಗ ಹೊತ್ತಿ ಉರಿಯತೊಡಗಿದಂತಿದೆ.

PC : Twitter

ಟೆಲಿವಿಷನ್ ಚಾನೆಲ್‌ಗಳ ವೀಕ್ಷಕ ಜನಪ್ರಿಯತೆಯನ್ನು ಅಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯ ಗಳಿಸಲು ಸಹಾಯ ಮಾಡುವ ವ್ಯವಸ್ಥೆಯೇ ಟಿಆರ್‌ಪಿ (ಟೆಲಿವಿಶನ್ ರೇಟಿಂಗ್ ಪಾಯಿಂಟ್). ಆಯ್ದ ಕೆಲವು ಮನೆಗಳಲ್ಲಿ ಇರಿಸಲಾಗಿರುವ ವೀಕ್ಷಕ ಮೀಟರ್‌ಗಳ ಮೂಲಕ ಇದನ್ನು ಅಳೆಯಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ, ಇಂತಹ ಮಾಪನಗಳನ್ನು ನಡೆಸುವ ಹಂಸಾ ರಿಸರ್ಚ್ ಗ್ರೂಪ್ ಪೊಲೀಸರಿಗೆ ದೂರು ನೀಡಿ, ಈ ಮೀಟರ್‌ಗಳನ್ನಿರಿಸಿರುವ ಮನೆಗಳವರಿಗೆ ಲಂಚ ನೀಡಿ ಟಿಆರ್‌ಪಿ ತಿರುಚುವ ಕೆಲಸವನ್ನು ಕೆಲವು ಟೆಲಿವಿಷನ್ ಚಾನೆಲ್‌ಗಳು ಮಾಡುತ್ತಿವೆ ಎಂದಿತ್ತು. ಅದರಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಢಾಳಾಗಿ ಕೇಳಿಬಂದಿತ್ತು.

ಇದಾದ ಬಳಿಕ ತನಿಖೆ ಆರಂಭಗೊಂಡು, ಡಿಸೆಂಬರಿನಲ್ಲಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರ ತನಿಖೆಯ ಸಂದರ್ಭದಲ್ಲಿ ಸಿಕ್ಕಿದ ವಾಟ್ಸಾಪ್ ಚಾಟ್ ಸಂದೇಶಗಳಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಪಾರ್ಥೋ ದಾಸ್‌ಗುಪ್ತಾ ನಡುವೆ ನಡೆದ ಮಾತುಕತೆಗಳು ಈಗ ಭಾರೀ ಗದ್ದಲ ಸೃಷ್ಟಿಸಿವೆ. ಮೊನ್ನೆ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದಾಗ ಅದರ ಭಾಗವಾಗಿ ಪಾರ್ಥೋ ದಾಸ್‌ಗುಪ್ತಾ ಅವರ ಚಾಟ್‌ಗಳ ಸಾವಿರಾರು ಪುಟಗಳನ್ನು ಸಲ್ಲಿಸಿದ್ದರು. ಅವೀಗ ಮಾಧ್ಯಮಗಳ ಮೂಲಕ ಲೋಕಮುಖಕ್ಕೆ ಕಾಣಿಸಿಕೊಂಡಿವೆ.

ಅರ್ನಬ್ ಪಾತ್ರ

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

>> 26-02-2019ರಂದು ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಅದಕ್ಕಿಂತ ಮೂರು ದಿನಗಳ ಮೊದಲೇ ಅರ್ನಬ್ ಗೋಸ್ವಾಮಿ ತನ್ನ ವಾಟ್ಸಾಪ್ ಚಾಟ್‌ನಲ್ಲಿ ಚರ್ಚಿಸಿದ್ದು ಇವುಗಳಲ್ಲಿ ಬಹಳ ಗಮನಾರ್ಹವಾದುದು. ರಕ್ಷಣಾ ಇಲಾಖೆಯ ಉನ್ನತ ಹಂತ ಮತ್ತು ಪ್ರಧಾನಮಂತ್ರಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿರದ ಸಂಗತಿಯೊಂದು ಆ ಹಂತದಲ್ಲಿ ಯಕಶ್ಚಿತ್ ವ್ಯಕ್ತಿಯ ಕೈಗೆ ಸಿಗುವುದು “ಸರ್ಕಾರಿ ಗೌಪ್ಯತೆ ಕಾಯಿದೆ(OSA), 1923ರ ಸೆಕ್ಷನ್ 3(1)(ಎ)ರ” ಗಂಭೀರ ಉಲ್ಲಂಘನೆಯೆನ್ನಿಸುತ್ತದೆ. ಆದರೆ, ಈ ವರದಿ ಮಾಡಿದ ಟೈಮ್ಸ್ ನೌ ಚಾನೆಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಅರ್ನಬ್, ತಾನು ವಿಶೇಷವಾದುದೇನನ್ನೂ ಹೇಳಿಲ್ಲ. ಬೇರೆ ಪತ್ರಿಕೆಗಳೂ ದಾಳಿಯ ಸಂಭಾವ್ಯತೆಯನ್ನು ವರದಿ ಮಾಡಿದ್ದವು ಎಂದು ಸಮರ್ಥಿಸಿಕೊಂಡಿದ್ದಾರೆ.

>> ಚಾಟ್ ಉದ್ದಕ್ಕೂ ಹಲವೆಡೆ ಕೇಂದ್ರ ಸರ್ಕಾರದ ಉನ್ನತ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿರುವವರು ತನ್ನ ಬಗಲಿಗಿದ್ದಾರೆ ಎಂಬುದನ್ನು ಅರ್ನಬ್ ವ್ಯಕ್ತಪಡಿಸುತ್ತಾರೆ. “ಲ್ಯುಟೆನ್ಸ್ ಮಿಡೀಯಾ” ಎಂದು ತಾನೇ ಗೇಲಿಮಾಡಿದ್ದು ಸ್ವತಃ ತನ್ನ ವಿರುದ್ಧವೇ ತಿರುಗಿಬಂದಾಗ, ದೇಶಭಕ್ತಿಯ ಹೆಸರಲ್ಲಿ ಸಮರ್ಥಿಸಿಕೊಳ್ಳುವುದು ಮತ್ತು ಈ ನಾಲ್ಕು ವರ್ಷಗಳಲ್ಲಿ ರಿಪಬ್ಲಿಕ್ ಟಿವಿ ಬ್ರೇಕ್ ಮಾಡಿದ ಸುದ್ದಿಗಳನ್ನು ಗಮನಿಸಿದರೆ, ಸರ್ಕಾರ ಇದನ್ನು ತನ್ನ ವಿರೋಧಿಗಳತ್ತ ಗುಂಡೆಸೆಯುವ ಹೆಗಲಾಗಿ ಬಳಸಿಕೊಂಡದ್ದು ಸ್ಪಷ್ಟವಾಗಿ ಕಾಣಿಸುತ್ತದೆ.

>> 2010ರಲ್ಲಿ ನೀರಾ ರಾಡಿಯಾ ಎಂಬ ಅಧಿಕಾರದ ದಳ್ಳಾಲಿ ಮಹಿಳೆ ನಡೆಸಿದ ಮಾತುಕತೆಗಳನ್ನು ಆದಾಯ ತೆರಿಗೆ ಇಲಾಖೆ ರೆಕಾರ್ಡ್ ಮಾಡಿಕೊಂಡದ್ದನ್ನು ಮಾಧ್ಯಮಗಳು ಹೇಗೆ ವರದಿ ಮಾಡಿದವು ಮತ್ತು ಅಂದಿನ ಸರ್ಕಾರದ ಪತನಕ್ಕೆ ಈ ಸಂಗತಿಯ ಕೊಡುಗೆ ಎಷ್ಟಿತ್ತು ಎಂಬುದನ್ನು ಗಮನಿಸಿದರೆ, ಇಂದು ಬಹುತೇಕ ಮಾಧ್ಯಮಗಳು “ವಾಟ್ಸಾಪ್ ಚಾಟ್‌ಗಳು” ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುವಾಗ ಆ ಖಾಸಗಿತನ ಬಹಿರಂಗಗೊಂಡದ್ದು ಹೇಗೆ ಎಂದು ತಲೆಕೆಡಿಸಿಕೊಂಡಿರುವುದು ಕಂಡರೆ, ವಾಟ್ಸಾಪ್ ಬಳಕೆಗೆ ಸಹಿ ಮಾಡುವಾಗ, ಸರ್ಕಾರದ ಸಂಸ್ಥೆಗಳು ತನಿಖೆಗಾಗಿ ಬಯಸಿದಲ್ಲಿ ವಾಟ್ಸಾಪ್ ತನ್ನ ಎನ್ಕ್ರಿಪ್ಟೆಡ್ ಸಂವಹನಗಳನ್ನು ಅವರಿಗೆ ಒದಗಿಸಲು ಬದ್ಧ ಎಂದು ಹೇಳಿರುವುದನ್ನು ಅವರು ಓದಿರುವಂತಿಲ್ಲ.

ಈ ಹಂತದಲ್ಲಿ, ಸ್ವತಃ ಆಳುವ ಬಿಜೆಪಿಯಲ್ಲಿ ವ್ಯಕ್ತವಾಗುತ್ತಿರುವ ಮುಜುಗರ, ಕಿರಿಕಿರಿ ಮತ್ತು ವಿಚಿತ್ರ ಮೌನಗಳನ್ನು ಗಮನಿಸಿದರೆ, ಸ್ವತಃ ಅರ್ನಬ್ ರಂಜನ್ ಗೋಸ್ವಾಮಿಯ ಚಾಟ್ ಅಕೌಂಟ್ ಬಹಿರಂಗಗೊಂಡರೆ, ಹಾಲೀ ಕೇಂದ್ರ ಸರ್ಕಾರದ “ಚಾಟ್‌ಗೇಟ್” ಎಲ್ಲಿಗೆ ತೆರೆದುಕೊಳ್ಳಲಿದೆಯೆಂಬುದನ್ನು ಊಹಿಸುವುದೂ ಕಷ್ಟ. ಆದರೆ ದೇಶದ ಹಿತದೃಷ್ಟಿಯಿಂದ ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಇದೆಲ್ಲದರಿಂದ ಕಂಗೆಟ್ಟಂತೆ ಕಾಣಿಸುತ್ತಿರುವ ಅರ್ನಬ್, ತಾನು ರಾಷ್ಟ್ರಭಕ್ತರ “ನ್ಯಾಷನಲ್ ಕಲೆಕ್ಟಿವ್ ಒಂದನ್ನು ಸ್ಥಾಪಿಸುವ ಮೂಲಕ ತನ್ನ ಸಿದ್ಧಾಂತಗಳ ವಿರೋಧಿಗಳನ್ನು ಮತ್ತು ಷಡ್ಯಂತ್ರಗಾರರನ್ನು ಮಟ್ಟಹಾಕಲು ನೇರ ಕಾರ್ಯಾಚರಣೆಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ ಎಂಬುದು ಲೇಟೆಸ್ಟ್ ಬೆಳವಣಿಗೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ.


ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...