Homeಮುಖಪುಟನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

- Advertisement -
- Advertisement -

ನಿಮಗೆ ನೆನಪಿದೆಯೊ ಗೊತ್ತಿಲ್ಲ, ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಅವರು ಕೈಗೊಂಡ ಕೆಲವು ಆರಂಭಿಕ ಕ್ರಮಗಳಲ್ಲಿ ಒಂದು ಗಮನಾರ್ಹವಾದ ಕ್ರಮ ಎಂದರೆ ಸೌತ್ ಬ್ಲಾಕ್ ಕಚೇರಿಗಳಿಗೆ ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸಿದ್ದು. ಸೌತ್ ಬ್ಲಾಕ್ ಎಂದರೆ ಪ್ರಧಾನಮಂತ್ರಿಗಳ ಕಚೇರಿ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರುವ ಜಾಗ. ಅದಕ್ಕೆ ಆಗ ಕೊಟ್ಟಿದ್ದ ಕಾರಣ, ದಲ್ಲಾಳಿಗಿರಿಗಳಲ್ಲಿ ತೊಡಗಿದ್ದ “ಲ್ಯುಟೆನ್ಸ್” ಮಾಧ್ಯಮವನ್ನು ಅಧಿಕಾರ ಕೇಂದ್ರದಿಂದ ದೂರ ಇರಿಸುವುದು.

ಇದರ ಪರಿಣಾಮ? ಕಳೆದ ಏಳು ವರ್ಷಗಳಲ್ಲಿ ರಕ್ಷಣಾ ಇಲಾಖೆಯ ವ್ಯವಹಾರಗಳ ಬಗ್ಗೆ ಅಧಿಕೃತ ಪತ್ರಿಕಾಹೇಳಿಕೆ ಬಿಟ್ಟರೆ ಬೇರೆ ಸುದ್ದಿಗಳು ಬಹುತೇಕ ಇಲ್ಲವಾದದ್ದು; ಪ್ರಧಾನಮಂತ್ರಿಗಳ ಸಂದರ್ಶನ ಪೂರ್ವ ನಿರ್ಧರಿತ ವ್ಯಕ್ತಿಗಳಿಗೆ ಸೀಮಿತವಾದದ್ದು. ಮತ್ತು ಮುಂದೆ ನಾರ್ತ್ ಬ್ಲಾಕ್‌ಗೂ ಇದೇ ನಿಯಮ ಅಳವಡಿಸಿದ ಬಳಿಕವಂತೂ ಕೇಂದ್ರ ಸಚಿವ ಸಂಪುಟದ ಪತ್ರಿಕಾಗೋಷ್ಠಿಗಳೆಂದರೆ ಶಾಲೆ ಮಕ್ಕಳ ಮಗ್ಗಿ ಬಾಯಿಪಾಠದ ಮಟ್ಟಕ್ಕೆ ಬಂದು ನಿಂತದ್ದು. ಈ ಅಧಿಕಾರಿಗಳ ಉದ್ಧಟತನ ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಇದೇ ಜನವರಿ ಕಡೆಯ ವಾರದಲ್ಲಿ ಹಣಕಾಸು ಸಮೀಕ್ಷೆಯ ಪತ್ರಿಕಾಗೋಷ್ಠಿ ನಡೆದಿತ್ತು. ಒಬ್ಬರು ಪತ್ರಕರ್ತೆ ಎರಡು ಪ್ರಶ್ನೆಗಳನ್ನು ಕೇಳಿದಾಗ, ಮೊದಲ ಪ್ರಶ್ನೆಗೆ ಉತ್ತರ ತಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಅಧಿಕಾರಿಗಳು ಆಕೆ ಎರಡನೇ ಪ್ರಶ್ನೆ ಕೇಳಿದಾಗ, ನಿಯಮ ಪ್ರಕಾರ ಒಂದೇ ಪ್ರಶ್ನೆಗೆ ಅವಕಾಶ ಎಂದರು. ಮೊದಲ ಪ್ರಶ್ನೆಗೆ ನೀವು ನಿಮಗೆ ಸಂಬಂಧಿಸಿದ್ದಲ್ಲ ಎಂದಿದ್ದಿರಿ ಎರಡನೆಯ ಪ್ರಶ್ನೆಯನ್ನು ಪರಿಗಣಿಸಿ ಎಂದು ಆಕೆ ಕೋರಿದಾಗ, ನಿಮ್ಮ ಮೊದಲ ಪ್ರಶ್ನೆಯ ಅವಕಾಶವನ್ನು ನೀವು ವ್ಯರ್ಥ ಮಾಡಿಕೊಂಡಿದ್ದೀರಿ ಎಂದು ಗದರಿ, ಬೇರೊಬ್ಬ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಸೂಚಿಸಿದರು! ಆದರೆ ಅಲ್ಲಿ ನೆರೆದ ಪತ್ರಕರ್ತರಾರಿಗೂ ಏನೂ ಅನ್ನಿಸಲೇ ಇಲ್ಲ!!

ಮಾಧ್ಯಮಗಳ ಒಟ್ಟು ಸ್ಥಿತಿ ಇಲ್ಲಿಗೆ ತಲುಪಿರುವಾಗ, ಕೆಲವೊಮ್ಮೆ ಪವಾಡಗಳು ಸಂಭವಿಸಿದ್ದಿದೆ. ಬಾಲಾಕೋಟ್ ದಾಳಿಯಂತಹ “ಸರ್ಜಿಕಲ್ ಸ್ಟ್ರೈಕ್”ಗಳು ಸಂಭವಿಸಿದಾಗ ಕೆಲವು ನಿರ್ದಿಷ್ಟ ಖಾಸಗಿ ಮಾಧ್ಯಮಗಳಲ್ಲಿ (ಗಮನಿಸಿ ಸರ್ಕಾರಿ ದೂರದರ್ಶನ ಅಲ್ಲ!) ಸೇನಾ ಕಾರ್ಯಾಚರಣೆಯ ಕ್ಲಿಪ್ಪಿಂಗ್‌ಗಳು ಕಾಣಿಸಿಕೊಳ್ಳತೊಡಗಿದವು. ಇದು ಅಭೂತಪೂರ್ವ ವಿದ್ಯಮಾನ. ಸ್ವತಂತ್ರ ಭಾರತದಲ್ಲಿ ಇಲ್ಲಿಯತನಕ ರಕ್ಷಣಾಪಡೆಗಳು ಮಾಧ್ಯಮಗಳ ಮೂಲಕ ತಮ್ಮ ಕಾರ್ಯಾಚರಣೆಗಳನ್ನು “ಪ್ರಚಾರ” ಮಾಡಿದ್ದಿಲ್ಲ. ಈ ರೀತಿಯ “ಸರ್ಜಿಕಲ್ ಸ್ಟ್ರೈಕ್”ಗಳು ಮರುಕಳಿಸತೊಡಗಿದಾಗ ಮತ್ತು ಆ ಎಲ್ಲ ಸಂದರ್ಭಗಳಲ್ಲಿಯೂ ಅವೇ ನಿರ್ದಿಷ್ಟವಾದ ಮಾಧ್ಯಮಗಳಲ್ಲಿ ಮಾತ್ರ ಅಂತಹ ಎಕ್ಸ್‌ಕ್ಲೂಸಿವ್ ಕ್ಲಿಪ್ಪಿಂಗ್‌ಗಳು ಪ್ರಸಾರವಾಗತೊಡಗಿದಾಗ ದೇಶಕ್ಕೆ ಒಂದು ವಿಚಾರ ಸ್ಪಷ್ಟ ಆಗಿದೆ. ಅದೇನೆಂದರೆ: ಸೌತ್ ಬ್ಲಾಕ್‌ಗೆ ಮಾಧ್ಯಮಗಳ ಪ್ರವೇಶವನ್ನು ನಿರ್ಬಂಧಿಸಿದ್ದರ ಹಿಂದಿರುವ ಹುನ್ನಾರ, ಆಯ್ದ #ಡಿಯರ್_ಮೀಡಿಯಾಗಳನ್ನು ಮಾತ್ರ ಒಳಬಿಟ್ಟುಕೊಳ್ಳುವುದು.

ಸುಪ್ರೀಂಕೋರ್ಟ್

ಪ್ರೊಪಗಾಂಡೋದ್ಯಮ

ಹಾಲೀ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಅವರ ಖಾಸಗೀಕರಣ ನೀತಿಯ ಭಾಗವೊ ಎಂಬಂತೆ, ಇಲ್ಲಿಯ ತನಕ ಸರ್ಕಾರಿ ಪ್ರಚಾರ ಮಾಧ್ಯಮವಾಗಿದ್ದ ದೂರದರ್ಶನ ಮಾಡುತ್ತಿದ್ದ ಅಧಿಕೃತ ಸರ್ಕಾರಿ ಸುದ್ದಿಗಳ ಪ್ರಚಾರದ ಕಾರ್ಯವನ್ನು ಖಾಸಗಿ ಟೆಲಿ ಚಾನೆಲ್‌ಗಳು ನಾಮುಂದು ತಾಮುಂದು ಎಂದು ಸ್ಪರ್ಧೆಗೆ ಬಿದ್ದು ಮಾಡಲಾರಂಭಿಸಿವೆ. ರಿಪಬ್ಲಿಕ್ ಟಿ.ವಿ ಚಾನೆಲ್ 2017ರಲ್ಲಿ ಆರಂಭಗೊಂಡ ಬಳಿಕವಂತೂ ಭಾರತೀಯ ಮಾಧ್ಯಮ ಪ್ರಪಂಚದಲ್ಲಿ ಹೊಸದೊಂದು ಸಂಚಲನ ಆರಂಭಗೊಂಡಿದೆ. ಸರ್ಕಾರ ನಡೆಸುವವರ ಪರವಿದ್ದ ಮಾಧ್ಯಮಗಳು ಅದನ್ನು ತೋರಿಸಿಕೊಳ್ಳಲು ಹಿಂಜರಿಕೆ, ಚಡಪಡಿಕೆ ಹೊಂದಿ, “ಬ್ಯಾಲೆನ್ಸ್” ಆಟದಲ್ಲಿರುವಾಗ ರಂಗ ಪ್ರವೇಶ ಮಾಡಿದ ರಿಪಬ್ಲಿಕ್ ಚಾನೆಲ್, ನೇರಾನೇರ ಆಳುವವರ ಸಿದ್ಧಾಂತಗಳ ಪ್ರಚಾರ, ಆಳುವವರ ವಿರೋಧಿಗಳ ಮಟ್ಟಹಾಕುವಿಕೆಯ ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ. ಇದು ಯಾವ ಕೋನದಿಂದಲೂ ಪತ್ರಿಕೋದ್ಯಮದಂತೆ ಕಾಣದಿರುವುದರಿಂದ ಮತ್ತು ಅದರ ಏಕಮಾತ್ರ ಮುಖವಾಣಿಯಾಗಿರುವ ಅರ್ನಬ್ ರಂಜನ್ ಗೋಸ್ವಾಮಿ ಯಾವ ಕೋನದಿಂದಲೂ ಪತ್ರಕರ್ತರಾಗಿ ಕಾಣಿಸದಿರುವುದರಿಂದ ಈ ಬ್ರ್ಯಾಂಡಿನ ಚಟುವಟಿಕೆಯನ್ನು “ಪ್ರೊಪಗಾಂಡೋದ್ಯಮ” ಎಂದು ಕರೆಯುವುದೇ ಉಚಿತವೆನ್ನಿಸುತ್ತದೆ.

ಬಿಸ್ಕೂಟು ಲೆಕ್ಕ

ಒಂದು ಖಾಸಗಿ ಚಾನೆಲ್‌ನ ಲೀಡ್ ಆಂಕರ್ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು, ನಾಲ್ಕೇ ವರ್ಷದಲ್ಲಿ ಏಕಾಏಕಿ ನೂರಾರು ಕೋಟಿಗಳ ಹೂಡಿಕೆ ಮಾಡುವುದು/ಮಾಡಿಸುವುದು ಸಹಜವಾಗಿಯೇ ಎಲ್ಲರ ಹುಬ್ಬೇರಿಸಿದೆ ಮತ್ತು ನಾಲ್ಕು ವರ್ಷಗಳ ಅವಧಿಯೊಳಗೆ, ಬೇರೆಲ್ಲ ವೃತ್ತಿಪರ ಮಾಧ್ಯಮಗಳನ್ನು ರಿಪಬ್ಲಿಕ್ ಬುಲ್ಡೋಜ್ ಮಾಡಿದ ರೀತಿ ಎಲ್ಲವೂ ಊಹಿಸಿದಷ್ಟು ಸರಳವಾಗಿಲ್ಲ ಎಂಬುದನ್ನು ಸಾಬೀತುಮಾಡಿದೆ. ಹಾಗಾಗಿ, ಅರ್ನಬ್ ಬ್ರ್ಯಾಂಡಿನ ಪ್ರೊಪಗಾಂಡೋದ್ಯಮದ ಬಿಸ್ಕೂಟು ಲೆಕ್ಕ ಸುಲಭವಾಗಿ ಸಿಕ್ಕಿಹಾಕಿಕೊಂಡಂತಿದೆ.

ತನ್ನ ಬ್ರ್ಯಾಂಡಿನ ಪತ್ರಿಕೋದ್ಯಮದ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದ್ದರೂ (ಶಶಿ ತರೂರ್‌ರಿಂದ ಆರಂಭಿಸಿ ಇತ್ತೀಚೆಗಿನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ತನಕ) ಅದನ್ನೆಲ್ಲ ತನ್ನ ಸಾಧನೆಯ ಬ್ಯಾಡ್ಜ್‌ಗಳೆಂದು ಸಿಕ್ಕಿಸಿಕೊಳ್ಳುತ್ತಿದ್ದ ಅರ್ನಬ್ ರಂಜನ್ ಗೋಸ್ವಾಮಿಗೆ ಈಗ ಎರಡು ಸಂಗತಿಗಳಲ್ಲಿ ತಾನು ನುಂಗಿದ ತುತ್ತಿನ ಗಾತ್ರ ಹೆಚ್ಚಾಗಿ, ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದೆಂಬ ಶಂಕೆ ಉಂಟಾಗಿದೆ. ಅಂತಹ ಎರಡು ಪ್ರಕರಣಗಳಿವೆ.

ಏನಿದು Dish Fta ಹಗರಣ?

ಸರ್ಕಾರಿ ದೂರದರ್ಶನದ ಫ್ರೀ ಡಿಷ್‌ನಲ್ಲಿ ಖಾಸಗಿ ಚಾನೆಲ್‌ಗಳಿಗೆ ಅವಕಾಶ ಸಿಗಲು ಅವು ಟೆಂಡರಿಗೆ ನಿಂತು ಸುಮಾರು 8-12 ಕೋಟಿ ಪಾವತಿಸಿ ಸ್ಲಾಟ್ ಖರೀದಿ ಮಾಡಬೇಕಿರುತ್ತದೆ. ಆದರೆ ರಿಪಬ್ಲಿಕ್ ಟಿವಿ ಅದೇನನ್ನೂ ಮಾಡದೆ ನೇರವಾಗಿ ಆ ವ್ಯವಸ್ಥೆಯ ಮೂಲಕ 2.2ಕೋಟಿ ವೀಕ್ಷಕರನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 52ಕೋಟಿ ರೂ.ಗಳ ನಷ್ಟವಾಗಿದೆ ಎಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಈ ಪ್ರಕರಣ ಬೆಳಕಿಗೆ ಬಂದಾಗ ಅದನ್ನು ಲಾಜಿಕಲ್ ಅಂತ್ಯಕ್ಕೆ ತಲುಪದಂತೆ ನೆನೆಗುದಿಗೆ ಹಾಕಲು ಕೇಂದ್ರ ಸರ್ಕಾರದ ಸಚಿವರೊಬ್ಬರು ಸಹಾಯ ಮಾಡಿದ್ದಾರೆ ಎಂಬುದು ಈಗ ಬಹಿರಂಗಗೊಂಡಿರುವ ವಾಟ್ಸಾಪ್ ಸಂದೇಶಗಳ ಕಡತದಿಂದ ಬಹಿರಂಗಗೊಂಡಿದೆ.

TRP ತಿರುಚಿದ ಪ್ರಕರಣ

ಪಾಲ್ಗಾರ್ ಲಿಂಚಿಂಗ್ ಪ್ರಕರಣದ ಬಳಿಕ ತನ್ನ ಜೊತೆ ಜಿದ್ದಾಜಿದ್ದಿಗೆ ಇಳಿದಿರುವ ಅರ್ನಬ್ ಗೋಸ್ವಾಮಿಯ ಬೆನ್ನು ಹತ್ತಿರುವ ಮಹಾರಾಷ್ಟ್ರ ಸರ್ಕಾರ, ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ಆಪಾದನೆಯ ಮೇಲೆ ಅರ್ನಬ್‌ರನ್ನು ಬಂಧಿಸಿದ್ದು ಮತ್ತು ಆ ಬಳಿಕ ಅರ್ನಬ್ ಅವರಿಗೆ ಬಹಿರಂಗ ಸವಾಲು ಹಾಕಿ ಹೊತ್ತಿಸಿದ ಕಿಡಿ ಈಗ ಹೊತ್ತಿ ಉರಿಯತೊಡಗಿದಂತಿದೆ.

PC : Twitter

ಟೆಲಿವಿಷನ್ ಚಾನೆಲ್‌ಗಳ ವೀಕ್ಷಕ ಜನಪ್ರಿಯತೆಯನ್ನು ಅಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯ ಗಳಿಸಲು ಸಹಾಯ ಮಾಡುವ ವ್ಯವಸ್ಥೆಯೇ ಟಿಆರ್‌ಪಿ (ಟೆಲಿವಿಶನ್ ರೇಟಿಂಗ್ ಪಾಯಿಂಟ್). ಆಯ್ದ ಕೆಲವು ಮನೆಗಳಲ್ಲಿ ಇರಿಸಲಾಗಿರುವ ವೀಕ್ಷಕ ಮೀಟರ್‌ಗಳ ಮೂಲಕ ಇದನ್ನು ಅಳೆಯಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ, ಇಂತಹ ಮಾಪನಗಳನ್ನು ನಡೆಸುವ ಹಂಸಾ ರಿಸರ್ಚ್ ಗ್ರೂಪ್ ಪೊಲೀಸರಿಗೆ ದೂರು ನೀಡಿ, ಈ ಮೀಟರ್‌ಗಳನ್ನಿರಿಸಿರುವ ಮನೆಗಳವರಿಗೆ ಲಂಚ ನೀಡಿ ಟಿಆರ್‌ಪಿ ತಿರುಚುವ ಕೆಲಸವನ್ನು ಕೆಲವು ಟೆಲಿವಿಷನ್ ಚಾನೆಲ್‌ಗಳು ಮಾಡುತ್ತಿವೆ ಎಂದಿತ್ತು. ಅದರಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಢಾಳಾಗಿ ಕೇಳಿಬಂದಿತ್ತು.

ಇದಾದ ಬಳಿಕ ತನಿಖೆ ಆರಂಭಗೊಂಡು, ಡಿಸೆಂಬರಿನಲ್ಲಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರ ತನಿಖೆಯ ಸಂದರ್ಭದಲ್ಲಿ ಸಿಕ್ಕಿದ ವಾಟ್ಸಾಪ್ ಚಾಟ್ ಸಂದೇಶಗಳಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಪಾರ್ಥೋ ದಾಸ್‌ಗುಪ್ತಾ ನಡುವೆ ನಡೆದ ಮಾತುಕತೆಗಳು ಈಗ ಭಾರೀ ಗದ್ದಲ ಸೃಷ್ಟಿಸಿವೆ. ಮೊನ್ನೆ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದಾಗ ಅದರ ಭಾಗವಾಗಿ ಪಾರ್ಥೋ ದಾಸ್‌ಗುಪ್ತಾ ಅವರ ಚಾಟ್‌ಗಳ ಸಾವಿರಾರು ಪುಟಗಳನ್ನು ಸಲ್ಲಿಸಿದ್ದರು. ಅವೀಗ ಮಾಧ್ಯಮಗಳ ಮೂಲಕ ಲೋಕಮುಖಕ್ಕೆ ಕಾಣಿಸಿಕೊಂಡಿವೆ.

ಅರ್ನಬ್ ಪಾತ್ರ

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

>> 26-02-2019ರಂದು ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಅದಕ್ಕಿಂತ ಮೂರು ದಿನಗಳ ಮೊದಲೇ ಅರ್ನಬ್ ಗೋಸ್ವಾಮಿ ತನ್ನ ವಾಟ್ಸಾಪ್ ಚಾಟ್‌ನಲ್ಲಿ ಚರ್ಚಿಸಿದ್ದು ಇವುಗಳಲ್ಲಿ ಬಹಳ ಗಮನಾರ್ಹವಾದುದು. ರಕ್ಷಣಾ ಇಲಾಖೆಯ ಉನ್ನತ ಹಂತ ಮತ್ತು ಪ್ರಧಾನಮಂತ್ರಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿರದ ಸಂಗತಿಯೊಂದು ಆ ಹಂತದಲ್ಲಿ ಯಕಶ್ಚಿತ್ ವ್ಯಕ್ತಿಯ ಕೈಗೆ ಸಿಗುವುದು “ಸರ್ಕಾರಿ ಗೌಪ್ಯತೆ ಕಾಯಿದೆ(OSA), 1923ರ ಸೆಕ್ಷನ್ 3(1)(ಎ)ರ” ಗಂಭೀರ ಉಲ್ಲಂಘನೆಯೆನ್ನಿಸುತ್ತದೆ. ಆದರೆ, ಈ ವರದಿ ಮಾಡಿದ ಟೈಮ್ಸ್ ನೌ ಚಾನೆಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಅರ್ನಬ್, ತಾನು ವಿಶೇಷವಾದುದೇನನ್ನೂ ಹೇಳಿಲ್ಲ. ಬೇರೆ ಪತ್ರಿಕೆಗಳೂ ದಾಳಿಯ ಸಂಭಾವ್ಯತೆಯನ್ನು ವರದಿ ಮಾಡಿದ್ದವು ಎಂದು ಸಮರ್ಥಿಸಿಕೊಂಡಿದ್ದಾರೆ.

>> ಚಾಟ್ ಉದ್ದಕ್ಕೂ ಹಲವೆಡೆ ಕೇಂದ್ರ ಸರ್ಕಾರದ ಉನ್ನತ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿರುವವರು ತನ್ನ ಬಗಲಿಗಿದ್ದಾರೆ ಎಂಬುದನ್ನು ಅರ್ನಬ್ ವ್ಯಕ್ತಪಡಿಸುತ್ತಾರೆ. “ಲ್ಯುಟೆನ್ಸ್ ಮಿಡೀಯಾ” ಎಂದು ತಾನೇ ಗೇಲಿಮಾಡಿದ್ದು ಸ್ವತಃ ತನ್ನ ವಿರುದ್ಧವೇ ತಿರುಗಿಬಂದಾಗ, ದೇಶಭಕ್ತಿಯ ಹೆಸರಲ್ಲಿ ಸಮರ್ಥಿಸಿಕೊಳ್ಳುವುದು ಮತ್ತು ಈ ನಾಲ್ಕು ವರ್ಷಗಳಲ್ಲಿ ರಿಪಬ್ಲಿಕ್ ಟಿವಿ ಬ್ರೇಕ್ ಮಾಡಿದ ಸುದ್ದಿಗಳನ್ನು ಗಮನಿಸಿದರೆ, ಸರ್ಕಾರ ಇದನ್ನು ತನ್ನ ವಿರೋಧಿಗಳತ್ತ ಗುಂಡೆಸೆಯುವ ಹೆಗಲಾಗಿ ಬಳಸಿಕೊಂಡದ್ದು ಸ್ಪಷ್ಟವಾಗಿ ಕಾಣಿಸುತ್ತದೆ.

>> 2010ರಲ್ಲಿ ನೀರಾ ರಾಡಿಯಾ ಎಂಬ ಅಧಿಕಾರದ ದಳ್ಳಾಲಿ ಮಹಿಳೆ ನಡೆಸಿದ ಮಾತುಕತೆಗಳನ್ನು ಆದಾಯ ತೆರಿಗೆ ಇಲಾಖೆ ರೆಕಾರ್ಡ್ ಮಾಡಿಕೊಂಡದ್ದನ್ನು ಮಾಧ್ಯಮಗಳು ಹೇಗೆ ವರದಿ ಮಾಡಿದವು ಮತ್ತು ಅಂದಿನ ಸರ್ಕಾರದ ಪತನಕ್ಕೆ ಈ ಸಂಗತಿಯ ಕೊಡುಗೆ ಎಷ್ಟಿತ್ತು ಎಂಬುದನ್ನು ಗಮನಿಸಿದರೆ, ಇಂದು ಬಹುತೇಕ ಮಾಧ್ಯಮಗಳು “ವಾಟ್ಸಾಪ್ ಚಾಟ್‌ಗಳು” ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುವಾಗ ಆ ಖಾಸಗಿತನ ಬಹಿರಂಗಗೊಂಡದ್ದು ಹೇಗೆ ಎಂದು ತಲೆಕೆಡಿಸಿಕೊಂಡಿರುವುದು ಕಂಡರೆ, ವಾಟ್ಸಾಪ್ ಬಳಕೆಗೆ ಸಹಿ ಮಾಡುವಾಗ, ಸರ್ಕಾರದ ಸಂಸ್ಥೆಗಳು ತನಿಖೆಗಾಗಿ ಬಯಸಿದಲ್ಲಿ ವಾಟ್ಸಾಪ್ ತನ್ನ ಎನ್ಕ್ರಿಪ್ಟೆಡ್ ಸಂವಹನಗಳನ್ನು ಅವರಿಗೆ ಒದಗಿಸಲು ಬದ್ಧ ಎಂದು ಹೇಳಿರುವುದನ್ನು ಅವರು ಓದಿರುವಂತಿಲ್ಲ.

ಈ ಹಂತದಲ್ಲಿ, ಸ್ವತಃ ಆಳುವ ಬಿಜೆಪಿಯಲ್ಲಿ ವ್ಯಕ್ತವಾಗುತ್ತಿರುವ ಮುಜುಗರ, ಕಿರಿಕಿರಿ ಮತ್ತು ವಿಚಿತ್ರ ಮೌನಗಳನ್ನು ಗಮನಿಸಿದರೆ, ಸ್ವತಃ ಅರ್ನಬ್ ರಂಜನ್ ಗೋಸ್ವಾಮಿಯ ಚಾಟ್ ಅಕೌಂಟ್ ಬಹಿರಂಗಗೊಂಡರೆ, ಹಾಲೀ ಕೇಂದ್ರ ಸರ್ಕಾರದ “ಚಾಟ್‌ಗೇಟ್” ಎಲ್ಲಿಗೆ ತೆರೆದುಕೊಳ್ಳಲಿದೆಯೆಂಬುದನ್ನು ಊಹಿಸುವುದೂ ಕಷ್ಟ. ಆದರೆ ದೇಶದ ಹಿತದೃಷ್ಟಿಯಿಂದ ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಇದೆಲ್ಲದರಿಂದ ಕಂಗೆಟ್ಟಂತೆ ಕಾಣಿಸುತ್ತಿರುವ ಅರ್ನಬ್, ತಾನು ರಾಷ್ಟ್ರಭಕ್ತರ “ನ್ಯಾಷನಲ್ ಕಲೆಕ್ಟಿವ್ ಒಂದನ್ನು ಸ್ಥಾಪಿಸುವ ಮೂಲಕ ತನ್ನ ಸಿದ್ಧಾಂತಗಳ ವಿರೋಧಿಗಳನ್ನು ಮತ್ತು ಷಡ್ಯಂತ್ರಗಾರರನ್ನು ಮಟ್ಟಹಾಕಲು ನೇರ ಕಾರ್ಯಾಚರಣೆಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ ಎಂಬುದು ಲೇಟೆಸ್ಟ್ ಬೆಳವಣಿಗೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ.


ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...