ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ ‘ಔಪಚಾರಿಕ ಕ್ಷಮೆಯಾಚನೆ’ ಕೇಳುವುದಾಗಿ ಹೇಳಿದೆ.
ಇದನ್ನು, “ತಲೆಮಾರುಗಳ ಜಾತಿ ಆಧಾರಿತ ತಾರತಮ್ಯ, ಹೊರಗಿಡುವಿಕೆ ಮತ್ತು ಅವಕಾಶ ನಿರಾಕರಣೆಯ ಐತಿಹಾಸಿಕ ಅಂಗೀಕಾರ” ಎಂದು ಸಾಮಾಜಿಕ ಕಾರ್ಯಕರ್ತರು ಬಣ್ಣಿಸಿದ್ದಾರೆ. ಪ್ರಸ್ತಾವಿತ ಕ್ಷಮೆಯಾಚನೆಯು ಸಾಮಾಜಿಕ ನ್ಯಾಯ, ಎಲ್ಲರನ್ನೂ ಒಳಗೊಳ್ಳುವ ಪುನಃಸ್ಥಾಪನೆ ಮತ್ತು ಐತಿಹಾಸಿಕ ಸಮನ್ವಯದ ಕ್ರಮಗಳೊಂದಿಗೆ ಜಾರಿಯಾಗುತ್ತದೆ.
ಕಾರ್ಯಸೂಚಿಯಲ್ಲಿ ಏನಿದೆ..?
“ದಲಿತರು ಮತ್ತು ಐತಿಹಾಸಿಕವಾಗಿ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಪ್ರಭುತ್ವ, ಸಮಾಜ ಮತ್ತು ನೀತಿ ರಚನೆಗಳಿಂದ ಉಂಟಾದ ಅನ್ಯಾಯ, ತಾರತಮ್ಯ ಮತ್ತು ಅವಕಾಶಗಳ ವಂಚಿತತೆಯನ್ನು ನಾವು ಔಪಚಾರಿಕವಾಗಿ ಒಪ್ಪಿಕೊಳ್ಳುತ್ತೇವೆ. ಸಾಮಾಜಿಕ ನ್ಯಾಯ, ಎಲ್ಲರನ್ನೂ ಒಳಗೊಳ್ಳುವ ಪುನಃಸ್ಥಾಪನೆ ಮತ್ತು ಐತಿಹಾಸಿಕ ಸಮನ್ವಯಕ್ಕೆ ಆಧಾರವನ್ನು ಸಿದ್ಧಪಡಿಸುತ್ತೇವೆ. ಸುಧಾರಣಾ-ಆಧಾರಿತ ಕಾರ್ಯಕ್ರಮವನ್ನು ಸಹ ಘೋಷಿಸಲಾಗುವುದು” ಎಂದು ಅದು ಹೇಳಿದೆ.
ದಲಿತರು ಜನಸಂಖ್ಯೆಯ ಸುಮಾರು ಶೇ.13-14 ರಷ್ಟಿದ್ದರೂ, ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಸಾಂವಿಧಾನಿಕ ಖಾತರಿಗಳು ಮತ್ತು ಕಾನೂನುಗಳ ಹೊರತಾಗಿಯೂ ಅವರು ಬೇರೂರಿರುವ ಹೊರಗಿಡುವಿಕೆಯನ್ನು ಎದುರಿಸುತ್ತಿರುವ ದೇಶದಲ್ಲಿ ಈ ಭರವಸೆ ಗಮನ ಸೆಳೆದಿದೆ. ಸುಮಾರು ಶೇ.42 ದಲಿತರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಸಾಕ್ಷರತೆ ರಾಷ್ಟ್ರೀಯ ಸರಾಸರಿಗಿಂತ ಕೆಳಗಿದೆ ಮತ್ತು ಪ್ರಮುಖ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವು ಅಸಮಾನವಾಗಿ ಕಡಿಮೆಯಾಗಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಬೈತಾಡಿಯಲ್ಲಿರುವ ದಲಿತ ಸಮಾಜ ಅಭಿವೃದ್ಧಿ ವೇದಿಕೆಯ ಅಧ್ಯಕ್ಷೆ ಸರಸ್ವತಿ ನೇಪಾಳಿ ಪ್ರತಿಕ್ರಿಯಿಸಿ, ಬಾಲ್ಯದಲ್ಲಿ ತನ್ನ ಸಹಪಾಠಿಗಳಂತೆಯೇ ಅದೇ ನೀರಿನ ಪಾತ್ರೆಯಿಂದ ನೀರು ಕುಡಿಯಲು ನಮಗೆ ಅವಕಾಶವಿರಲಿಲ್ಲ. ನಾನು ದಲಿತಳಾಗಿದ್ದರಿಂದ ನೀರಿಗಾಗಿ ಮನೆಗೆ ನಡೆದುಕೊಂಡು ಹೋಗಬೇಕಾಗಿತ್ತು” ಎಂದು ನೆನಪಿಸಿಕೊಂಡರು. “ಪ್ರಭುತ್ವದ ಅಧಿಕೃತ ಕ್ಷಮೆಯಾಚನೆಯು ನಮ್ಮ ಗಾಯಗಳಿಗೆ ಮುಲಾಮು ಇದ್ದಂತೆ” ಎಂದು ಅವರು ಹೇಳಿದರು.
“ಆದರೆ ಅದು ಸಂಪೂರ್ಣವಾಗಿ ಗುಣವಾಗಲು, ಸರ್ಕಾರವು ನಮ್ಮ ಎಲ್ಲಾ ಖಾತರಿಪಡಿಸಿದ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಖಚಿತಪಡಿಸಿಕೊಳ್ಳಬೇಕು. ಅದು ನಮಗೆ ನ್ಯಾಯ ನೀಡುತ್ತದೆ ಮತ್ತು ನಮ್ಮ ಘನತೆಯನ್ನು ಖಚಿತಪಡಿಸುತ್ತದೆ” ಎಂದರು.
ದಲಿತ ಹಕ್ಕುಗಳ ಕಾರ್ಯಕರ್ತ ಹೀರಾ ಲಾಲ್ ಬಿಶ್ವಕರ್ಮ ಈ ಘೋಷಣೆಯನ್ನು ಸ್ವಾಗತಿಸಿದರು. ಆದರೆ ಅದರ ಅರ್ಥವು ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು. “ಪ್ರಸ್ತುತ ನಿರ್ಧಾರವು ಗೌರವಾನ್ವಿತವಾಗಿದೆ. ಆದರೆ ಹಿಂದಿನಂತೆ ಅದು ಕೇವಲ ಬಾಯಿ ಮಾತಿನಲ್ಲೇ ಇರುತ್ತದೆ ಎಂಬ ಭಯವಿದೆ” ಎಂದು ಅವರು ಹೇಳಿದರು.
“ಇಂತಹ ಕಾರ್ಯಕ್ರಮಗಳನ್ನು ಘೋಷಿಸಿದ ನಂತರ, ನೀತಿಗಳು, ಬಜೆಟ್ಗಳು ಮತ್ತು ರಚನೆಗಳು ಬೇಕಾಗುತ್ತವೆ. ಅವುಗಳಿಲ್ಲದೆ, ಅಂತಹ ಘೋಷಣೆಗಳನ್ನು ಬಾಹ್ಯವಾಗಿ ತೋರಿಸುವುದು ಒಳ್ಳೆಯದು, ಆದರೆ ದಲಿತ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ” ಎಂದರು.


