ನ್ಯೂಸ್ ಲಾಂಡ್ರಿಯ ಮಹಿಳಾ ಪತ್ರಕರ್ತರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ರಾಜಕೀಯ ವ್ಯಾಖ್ಯಾನಕಾರ ಮತ್ತು ನಿರೂಪಕ ಅಭಿಜಿತ್ ಅಯ್ಯರ್ ಮಿತ್ರ ದೆಹಲಿ ಹೈಕೋರ್ಟ್ ಆದೇಶದಂತೆ ತೆಗೆದುಹಾಕಿದ್ದಾರೆ.
ಆದರೆ, ಮೊಕದ್ದಮೆಯಲ್ಲಿ ಮಹಿಳಾ ಪತ್ರಕರ್ತರು ಮಾನನಷ್ಟಕ್ಕೆ ಪರಿಹಾರ ಕೋರಿದ್ದಾರೆ. ಈ ಹಿನ್ನೆಲೆ, ಪ್ರಕರಣದ ವಿಚಾರಣೆ ಮುಂದುವರಿದಿದೆ. ದೆಹಲಿ ಹೈಕೋರ್ಟ್ ಸೋಮವಾರ (ಮೇ.26) ಅಭಿಜಿತ್ ಅಯ್ಯರ್ಗೆ ಸಮನ್ಸ್ ಜಾರಿ ಮಾಡಿದೆ.
ಬಿಜೆಪಿ ಪರ ಮಾಧ್ಯಮ ಒಪಿಇಂಡಿಯಾ ಅಂಕಣಕಾರ ಅಭಿಜಿತ್ ಅಯ್ಯರ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳಾ ಪತ್ರಕರ್ತರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ನ್ಯೂಸ್ ಲಾಂಡ್ರಿಯ 9 ಮಹಿಳಾ ಪತ್ರಕರ್ತರು ದಾಖಲಿಸಿರುವ ಈ ಪ್ರಕರಣದಲ್ಲಿ ನ್ಯೂಸ್ ಲಾಂಡ್ರಿ ಕೂಡ ವಾದಿಯಾಗಿದೆ.
ಸೋಮವಾರ ವಿಚಾರಣೆ ವೇಳೆ ಅಭಿಜಿತ್ ಅಯ್ಯರ್ ಪರ ಹಿರಿಯ ವಕೀಲ ಪರ್ಸಿವಲ್ ಬಿಲ್ಲಿಮೋರಿಯಾ ಅವರು, ತನ್ನ ಕಕ್ಷಿದಾರರು ವಿವಾದಾತ್ಮಕ ಪೋಸ್ಟ್ಗಳನ್ನು ತೆಗೆದು ಹಾಕಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ನ್ಯೂಸ್ ಲಾಂಡ್ರಿ ಪತ್ರಕರ್ತರ ಪರ ವಕೀಲ ಬಾನಿ ದೀಕ್ಷಿತ್ ಅವರು, ಅಭಿಜಿತ್ ಅಯ್ಯರ್ಗೆ ಈ ಪ್ರಕರಣ ಸಂಬಂಧ ಯಾವುದೇ ಪಶ್ಚಾತ್ತಾಪವಿಲ್ಲ. ಅವರು ಈಗಲೂ ಸಾಮಾಜಿ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ ಮತ್ತು ಕಾವ್ಯಾತ್ಮಕವಾಗಿ ಬರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಅಭಿಜಿತ್ ಪರ ವಕೀಲ, ಮಾನನಷ್ಟ ಪ್ರಕರಣವನ್ನು ವೆಚ್ಚದೊಂದಿಗೆ ವಜಾಗೊಳಿಸುವಂತೆ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರಿಗೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, “ತನ್ನ ಕೈಯಲ್ಲಿರುವ ವಿಷಯವು ಅಭಿಜಿತ್ ಅಯ್ಯರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಮಾತ್ರ ಸೀಮಿತವಾಗಿದೆ. ನಿಮಗೆ ಇತರ ಯಾವುದೇ ದೂರು ಇದ್ದರೆ ಅದನ್ನು ಬೇರೆಲ್ಲಿಯಾದರೂ ಹೇಳಿಕೊಳ್ಳಿ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಜಿತ್ ಪರ ವಕೀಲ ಬಿಲ್ಲಿಮೋರಿಯಾ, ನ್ಯೂಸ್ ಲಾಂಡ್ರಿ ಅತ್ಯಂತ ಕಪಟ ಸುದ್ದಿವಾಹಿನಿಗಳಲ್ಲೊಂದಾಗಿದೆ. ಅದು ಇಟಲಿಯ ಪ್ರಧಾನಿಯ ಜೊತೆಗೆ ಪ್ರಧಾನಿ ಮೋದಿಯವರ ಸಂಬಂಧದ ಬಗ್ಗೆ ಟೀಕಿಸಿತ್ತು ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, “ಲಕ್ಷ್ಮಣ ರೇಖೆ ಎಲ್ಲಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಒಂದು ಪೋಸ್ಟ್ ಮನಹಾನಿಕರವಾಗಿದ್ದಾಗ ಅವರು ನ್ಯಾಯಾಲಯದ ಮೆಟ್ಟಿಲೇರುವ ಹಕ್ಕು ಹೊಂದಿರುತ್ತಾರೆ” ಎಂದು ಹೇಳಿದ್ದಾರೆ.
ಅಂತಿಮವಾಗಿ, ಮೊಕದ್ದಮೆಯಲ್ಲಿ ಉಲ್ಲೇಖಿಸಿರುವಂತೆ ಪರಿಹಾರ ಪಡೆಯುವ ವಿಷಯವನ್ನು ಮುಂದುವರಿಸಲು ಬಯಸುವುದಾಗಿ ಮಹಿಳಾ ಪತ್ರಕರ್ತರ ಪರ ವಕೀಲರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ವೇಳೆ ಅಭಿಜಿತ್ ಅಯ್ಯರ್ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಕೌರವ್, “ಅವರು (ಅರ್ಜಿದಾರ) ಖ್ಯಾತಿ ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನೀವು ನಿಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿ” ಎಂದು ಮೌಖಿಕವಾಗಿ ಸೂಚನೆ ನೀಡಿದ್ದಾರೆ. ನಂತರ ನ್ಯಾಯಾಲಯವು ಎರಡೂ ಪಕ್ಷಗಳ ವಾದಗಳನ್ನು ಪೂರ್ಣಗೊಳಿಸಲು ಜಂಟಿ ರಿಜಿಸ್ಟ್ರಾರ್ ಮುಂದೆ ವಿಷಯವನ್ನು ಇಡುವಂತೆ ನಿರ್ದೇಶಿಸಿದೆ.
ಏನಿದು ಪ್ರಕರಣ?
ಡಿಜಿಟಲ್ ಸುದ್ದಿ ವೇದಿಕೆ ನ್ಯೂಸ್ ಲಾಂಡ್ರಿಯ ಪತ್ರಕರ್ತೆಯರನ್ನು ‘ವೇಶ್ಯೆಯರು’ ಮತ್ತು ಅವರು ಕೆಲಸ ಮಾಡುವ ಸ್ಥಳವನ್ನು ‘ವೇಶ್ಯಾಗೃಹ’ ಎಂದು ನಿಂದಿಸಿ ಪೋಸ್ಟ್ ಹಾಕಿದ್ದ ಅಭಿಜಿತ್ ಅಯ್ಯರ್ ಮಿತ್ರ ವಿರುದ್ದ ಪತ್ರಕರ್ತೆಯರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮಹಿಳಾ ಪತ್ರಕರ್ತರಾದ ಮನೀಶಾ ಪಾಂಡೆ, ಇಶಿತಾ ಪ್ರದೀಪ್, ಸುಹಾಸಿನಿ ಬಿಸ್ವಾಸ್, ಸುಮೇಧಾ ಮಿತ್ತಲ್, ತೀಸ್ತಾ ರಾಯ್ ಚೌಧರಿ, ತಸ್ನೀಮ್ ಫಾತಿಮಾ, ಪ್ರಿಯಾ ಜೈನ್, ಜಯಶ್ರೀ ಅರುಣಾಚಲಂ ಮತ್ತು ಪ್ರಿಯಾಲಿ ಧಿಂಗ್ರಾ ಮೊಕದ್ದಮೆ ಹೂಡಿದವರು. ಪ್ರಕರಣದ ಪಕ್ಷಕಾರರಲ್ಲಿ ನ್ಯೂಸ್ ಲಾಂಡ್ರಿಯೂ ಸೇರಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅಭಿಜಿತ್ ಅಯ್ಯರ್ ಹಾಕಿರುವ ಪೋಸ್ಟ್ಗಳು ಮಾನಹಾನಿಕರ ಆಧಾರರಹಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದ್ದು, ಮಹಿಳಾ ಉದ್ಯೋಗಿಗಳ ಘನತೆ ಮತ್ತು ಖ್ಯಾತಿಗೆ ಹಾನಿ ಮಾಡುವ ಉದ್ದೇಶ ಹೊಂದಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಕೇರಳದ ಅಬ್ದುಲ್ ರಹೀಂಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಸೌದಿ ಕೋರ್ಟ್


