ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ.
ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್ ಪದಚ್ಯುತಿ ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಲಾಯಿತು ಬಹುಪಾಲು ಸದಸ್ಯರು ನಿರ್ಣಯದ ವಿರುದ್ಧ ಧ್ವನಿ ಎತ್ತಿದ್ದರಿಂದ, ಪದಚ್ಯುತಿ ನಿರ್ಣಯವು ತಿರಸ್ಕೃತಗೊಂಡಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸಂಸದ ಜಗದಾಂಬಿಕ ಪಾಲ್ ಘೋಷಿಸಿದರು.
ಸದನದಲ್ಲಿ ಗದ್ದಲವಿದ್ದ ಕಾರಣ ಮತ್ತು ವಿರೋಧ ಪಕ್ಷದ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳದ ಕಾರಣ, ಮತಗಳ ಎಣಿಕೆ ಮಾಡುವ ‘ಡಿವಿಷನ್ ವೋಟ್’ (ವೈಯಕ್ತಿಕ ಮತದಾನ) ಪ್ರಕ್ರಿಯೆ ನಡೆದಿಲ್ಲ ಎಂದು ವರದಿಯಾಗಿದೆ.
ವಿರೋಧ ಪಕ್ಷಗಳ ಒಕ್ಕೂಟದ (ಇಂಡಿಯಾ) ಬಳಿ ಸುಮಾರು 238 ಸಂಸದರ ಬೆಂಬಲವಿತ್ತು (ಕಾಂಗ್ರೆಸ್ನ 99 ಸದಸ್ಯರು ಸೇರಿದಂತೆ), ಆದರೆ ಆಡಳಿತಾರೂಢ ಎನ್ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಹೊಂದಿದ್ದರಿಂದ ನಿರ್ಣಯದ ಸೋಲು ನಿರೀಕ್ಷಿತವಾಗಿತ್ತು.
ಸಂವಿಧಾನದ 94(ಸಿ) ವಿಧಿಯ ಪ್ರಕಾರ, ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು ಸದನದ ಒಟ್ಟು ಸದಸ್ಯರ ಬಹುಮತದ ಅವಶ್ಯಕತೆಯಿರುತ್ತದೆ.
ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ, ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ದಾಖಲೆ ಸಂಖ್ಯೆಯ ಸಂಸದರನ್ನು ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ಈ ನಿರ್ಣಯ ಮಂಡಿಸಿತ್ತು.
ಈ ನಿರ್ಣಯಕ್ಕೆ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಸೇರಿದಂತೆ 118 ಸದಸ್ಯರು ಸಹಿ ಹಾಕಿದ್ದರು.
ನಿರ್ಣಯದ ಮೇಲಿನ ಚರ್ಚೆಯ ನಂತರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡುತ್ತಿದ್ದಂತೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದವು.
ಈ ನಡುವೆ ಅಮಿತ್ ಶಾ ಮಾತನಾಡಿ, ಸ್ಪೀಕರ್ ವಿರುದ್ಧದ ಈ ನಿರ್ಣಯವು “ಪ್ರಜಾಪ್ರಭುತ್ವದ ಮೇಲಿನ ಕಪ್ಪುಚುಕ್ಕೆ” ಎಂದು ಟೀಕಿಸಿದರು. ಅಲ್ಲದೆ, ಸದನಕ್ಕೆ ಸರಿಯಾಗಿ ಹಾಜರಾಗದ ರಾಹುಲ್ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದರು.
ಲೋಕಸಭೆಯು ಇಡೀ ದೇಶಕ್ಕೆ ಸೇರಿದ್ದೇ ಹೊರತು ಕೇವಲ ಒಂದು ಪಕ್ಷಕ್ಕಲ್ಲ. ವಿರೋಧ ಪಕ್ಷದ ಧ್ವನಿಯನ್ನು ಪದೇ ಪದೇ ಹತ್ತಿಕ್ಕಲಾಗುತ್ತಿದೆ ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.


