Homeಕರ್ನಾಟಕಪಾವಗಡ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ: ಕೊರಕಲು ಬಿದ್ದ ರಸ್ತೆಗಳ ದುರಸ್ತಿಗೆ ಆಗ್ರಹ

ಪಾವಗಡ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ: ಕೊರಕಲು ಬಿದ್ದ ರಸ್ತೆಗಳ ದುರಸ್ತಿಗೆ ಆಗ್ರಹ

- Advertisement -
- Advertisement -

ಪಾವಗಡ ರಾಜ್ಯದ ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದು. ತುಮಕೂರು ಜಿಲ್ಲೆಯ ಉತ್ತರದ ಗಡಿ ಪಾವಗಡ. ಮೂರು ಕಡೆಯೂ ಆಂಧ್ರಪ್ರದೇಶದ ಗಡಿಗಳಿಂದ ಸುತ್ತುವರೆದಿರುವ ಪಾವಗಡ ಅಭಿವೃದ್ಧಿಯನ್ನೇನೂ ಕಂಡಿಲ್ಲ. ಜಿಲ್ಲೆಯಲ್ಲಿ ಅತ್ಯಂತ ನಿರ್ಲಕ್ಷಿತ ತಾಲೂಕು ಇದು. ಯಾರಿಗೂ ಬೇಡವಾದ ಕೂಸಿನಂತೆ. ಎಲ್ಲಾ ತಾಲೂಕುಗಳಿಗೆ ಹೇಮಾವತಿ ನೀರು ಕುಡಿಯಲು ಪೂರೈಕೆಯಾಗುತ್ತಿದ್ದರೆ ಈ ತಾಲೂಕಿಗೆ ಯಾವ ಮೂಲದಿಂದಲೂ ನೀರು ಇಲ್ಲ. ನೀರಾವರಿ ಸೌಲಭ್ಯವಿಲ್ಲ. ಮಳೆಯಾಶ್ರಿತ ಬೆಳೆಯೂ ಅಷ್ಟಕ್ಕಷ್ಟೇ. ಅಭಿವೃದ್ಧಿ ಮೂಲೆಗೆ ಸೇರಿದೆ. ಕೊರಕಲು ಬಿದ್ದ ರಸ್ತೆಗಳೇ ಇದಕ್ಕೆ ಸಾಕ್ಷಿಯಾಗಿ ನಿಂತಿವೆ.

ಹಲ್ಲುಗಳನ್ನು ನೋಡಿದರೆ ಸಾಕು ಇವರು ಪಾವಗಡದವರು ಎಂದು ಗುರುತಿಸಲಾಗುತ್ತಿದೆ. ಅಷ್ಟು ಪ್ರಸಿದ್ದಿ ಪಾವಗಡ. ಪ್ಲೋರೈಡ್ ನೀರು ಇಲ್ಲಿನ ಜನರನ್ನು ಜೀವಂತ ಶವಗಳನ್ನಾಗಿ ಮಾಡಿದೆ. ಇಂತೆಂಬ ಪಾಳು ನೆಲದಲ್ಲಿ ರಸ್ತೆಗಳೂ ಟಾರು ಕಂಡಿಲ್ಲ. ಕಿತ್ತುಹೋದ ರಸ್ತೆಗಳಲ್ಲೇ ವಾಹನ-ಜನ ಸಂಚಾರ ಸಾಗಿದೆ. ಜನರ ಗೋಳನ್ನು ಕೇಳೋರೇ ಇಲ್ಲ. ಜನಪ್ರತಿನಿಧಿಗಳು ಮೇಲ್ಜಾತಿಯವರ ಮರ್ಜಿಯಲ್ಲಿ ಕೆಲಸ ನಿರ್ವಹಿಸಬೇಕಾಗಿ ಬಂದಿದೆ.
ಪಾವಗಡ ಪ್ರದೇಶ ಡಾ.ನಂಜುಂಡಪ್ಪ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕು. ಅಭಿವೃದ್ಧಿಯನ್ನೇ ಕಾಣದ ಈ ತಾಲೂಕನ್ನು 370 ಜೆ ಕಲಂ ಅಡಿ ತಂದು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕಿತ್ತು. ಆದರೆ ಅದಾಗಲೇ ಇಲ್ಲ. ಜನಪ್ರನಿಧಿಗಳು ಬಂದ ಅನುದಾನದಲ್ಲಿ ಜೇಬು ಭರ್ತಿ ಮಾಡಿಕೊಳ್ಳುವುದು ಹೇಗೆ ಎಂದು ಚಿಂತಿಸಿದರು. ಕೋಟ್ಯಂತರ ಅನುದಾನ ಬಂದರೂ ಅದು ಎಲ್ಲಿ ಹೋಯಿತು ಎಂಬುದು ಮಾತ್ರ ನಿಗೂಢ. ಆದರೆ ದಾಖಲೆಗಳಲ್ಲಿ ಮಾತ್ರ ಹಣ ಖರ್ಚು ಮಾಡಲಾಗಿದೆ. ಅಭಿವೃದ್ಧಿ ಕಡತಗಳಲ್ಲಿ ಮಾತ್ರ ರಸ್ತೆಗಳು ಆಗಿವೆ ಎಂಬುದನ್ನು ಸಾರುತ್ತವೆ.

ಪಾವಗಡಕ್ಕೆ ಕೂಗಳತೆ ದೂರದಲ್ಲಿರುವ ವೆಂಕಟಾಪುರ ಗ್ರಾಮ ಪಂಚಾಯ್ತಿ ಕೇಂದ್ರ. ರಸ್ತೆಯನ್ನು ನೋಡಿದರೆ ಯಡಿಯೂರು ಸಿದ್ದಲಿಂಗೇಶ್ವರನೇ ಮೆಚ್ಚಬೇಕು. ವೆಂಕಟಾಪುರ-ಮಡಕಶಿರಾ ರಸ್ತೆ ಟಾರು ಕಂಡು ದಶಕವೇ ಕಳೆದಿದೆ. ಟಾರು ಕಿತ್ತುಹೋಗಿರುವುದರಿಂದ ಜಲ್ಲಿಯೇ ರಸ್ತೆಯ ಮೇಲಿದೆ. ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚಾರ ಮಾಡುವುದೇ ದುಸ್ಥರವಾಗಿದೆ. ವೆಂಕಟಾಪುರದಿಂದ ಮಡಕಶಿರಾಕ್ಕೆ ನಿತ್ಯವೂ ನೂರಾರು ಜನರು ಪ್ರಯಾಣಿಸುತ್ತಾರೆ. ದಿನಸಿ, ಪೆಟ್ರೋಲ್, ಡಿಸೆಲ್, ತರಕಾರಿ ತರುವುದು ಅಲ್ಲಿಂದಲೇ. ಪಾವಗಡಕ್ಕೆ ಬರಬೇಕೆಂದರೆ ನಾಲ್ಕೈದು ಕಿಲೋ ಮೀಟರ್ ಹೆಚ್ಚು ದಾರಿ ಕ್ರಮಿಸಬೇಕು. ಹಾಗಾಗಿ ವೆಂಕಟಾಪುರ ಗ್ರಾಮಸ್ಥರು ಮಡಕಶಿರಾಕ್ಕೆ ಹೋಗಿ ಬರುವುದೇ ಹೆಚ್ಚು. ಎಕ್ಕೆದ್ದು ಹೋಗಿರುವ ರಸ್ತೆಯಲ್ಲಿ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಲೇ ದಾರಿ ಸವೆಸುವುದು ಮಾಮೂಲಿನ ಸಂಗತಿ.

ಪಾವಗಡಕ್ಕೆ ಹೋಲಿಸಿದರೆ ಪೆಟ್ರೋಲ್, ಡಿಸೆಲ್ ಬೆಲೆ ಆಂದ್ರಪ್ರದೇಶದಲ್ಲಿ ಮೂರು ರೂಪಾಯಿ ಕಡಿಮೆ ಇದೆ. ಆ ಕಾರಣಕ್ಕಾಗಿಯೇ ದ್ವಿಚಕ್ರವಾಹನ ಸವಾರರು, ಟ್ಯಾಕ್ಟರ್ ಮಾಲಿಕರು, ಆಟೋಚಾಲಕರು ಮಡಕಶಿರಾಕ್ಕೆ ಬರುವುದು ರೂಢಿಯಲ್ಲಿದೆ. ರಸ್ತೆ ಕೆಟ್ಟು ಹೋಗಿದ್ದರೂ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಪಿಡಿಒ ಮತ್ತು ಇಲ್ಲಿನ ಶಾಸಕರು ತಲೆಗೆ ಹಾಕಿಕೊಂಡಿಲ್ಲ.

ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 14 ಲಕ್ಷ ರೂ ಬಿಡುಗಡೆ ಆಗಿತ್ತು. ಆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಒ ಶಾಮೀಲಾಗಿ ಹಣವನ್ನು ಲೂಟಿ ಮಾಡಿ ನೆಪಕ್ಕೆ ಮಾತ್ರ ಕಡಿಮೆ ನೀರು ತುಂಬುವ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೂ ಕೂಡ ಕಳಪೆ ಕಾಮಗಾರಿಯಾಗಿದೆ. ಅಧಿಕಾರಿ ವರ್ಗ ಸ್ಮಾರ್ಟ್ ಆಗುತ್ತಿದೆಯೇ ಹೊರತು ರಸ್ತೆಗಳು ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ ಎಂದು ವೆಂಕಟಾಪುರದ ಯುವ ಮುಖಂಡ ಈ ಶಿವಣ್ಣ ದೂರಿದ್ದಾರೆ.

ವೆಂಕಟಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೆ. 24X7 ಸೇವೆ ನೀಡಲಾಗುವುದು ಎಂಬ ಫಲಕ ಎದ್ದುಕಾಣುತ್ತದೆ. ಆದರೆ ಅದು ನೆಪಮಾತ್ರಕ್ಕೆ ಹಾಕಿರುವ ಫಲಕ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ತೆರೆಯುವುದೇ ಅಪರೂಪ. ವೈದ್ಯರು ಬರುವುದೇ ದುಸ್ಥರ. ಇಲ್ಲಿನ ಸಿಬ್ಬಂದಿ ಖಾಸಗಿ ಕ್ಲಿನಿಕ್  ವೈದ್ಯರೊಂದಿಗೆ ಶಾಮೀಲಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಬಂದರೂ ಸರಿಯಾಗಿ ನೋಡುವುದಿಲ್ಲ. ಸರ್ಕಾರಿ ವೇತನ ಪಡೆಯುವ ವೈದ್ಯರು ಖಾಸಗಿ ವೈದ್ಯರಿಂದಲೂ ಮಾಮೂಲಿ ಸ್ವೀಕರಿಸುತ್ತಾರೆ. ಹಾಗಾಗಿ  ಖಾಸಗಿ ಕ್ಲಿನಿಕ್ ಗಳಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾರೂ ಇರುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಸಬಾ ಹೋಬಳಿ ವ್ಯಾಪ್ತಿಯ ಗುಂಡಾರ್ಲಹಳ್ಳಿ-ವೀರ್ಲಗೊಂದಿ-ಕನ್ನಡಮೇಡಿ ರಸ್ತೆ ಕೆಟ್ಟು ಕೆರ ಹಿಡಿದಿದೆ. ಇರುವ ಒಂದೇ ಒಂದು ಬಸ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರೆ ಹೊಟ್ಟೆಯೊಳಗಿನ ಹಿಟ್ಟು ಬಾಯಿಗೆ ಬರುತ್ತದೆ. ಕುಲುಕಾಟಕ್ಕೆ ಬಸ್ ನಲ್ಲಿ ಕುಳಿತವರು ಅತ್ತಿತ್ತ ವಾಲಾಡುವಂತಹ ಪರಿಸ್ಥಿತಿ ಇದೆ. ರಸ್ತೆಗೆ ಹಾಕಿದ್ದ ಜಲ್ಲಿ ಮೇಲೆದ್ದು ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತದೆ. ದ್ವಿಚಕ್ರವಾಹನ, ಆಟೋಗಳಲ್ಲಿ ಹೋಗುವವರು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಬಾಯಿಗೆ ಬಂದಂತೆ ಶಪಿಸುತ್ತಲೇ ಹೋಗುವುದು ಸಾಮಾನ್ಯ ವಾಗಿದೆ.

ಪಾವಗಡ ತಾಲೂಕಿನಲ್ಲಿ ನಾಲ್ಕು ಹೋಬಳಿಗಳಿದ್ದು ಕೆಲವು ಕಡೆ ಮಾತ್ರ ರಸ್ತೆಗಳು ಟಾರನ್ನು ಕಂಡಿವೆ. ಉಳಿದ ಕಡೆ ಸಾಕಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಾಲೂಕಿನ ರಸ್ತೆಗಳನ್ನು ಅಬಿವೃದ್ಧಿಪಡಿಸಬೇಕು. ಶುದ್ದ ಕುಡಿಯುವ ನೀರನ್ನು ಎಲ್ಲಾ ಗ್ರಾಮಗಳಿಗೂ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...