Homeಮುಖಪುಟಮಾಧ್ಯಮಗಳ ವಿರುದ್ಧ ಸೇಡಿನ ರಾಜಕಾರಣಕ್ಕಿಳಿಯಿತೇ ಕೇಂದ್ರ ಸರ್ಕಾರ? ಇಲ್ಲಿವೆ ಮೂರು ಸಾಕ್ಷಿಗಳು!

ಮಾಧ್ಯಮಗಳ ವಿರುದ್ಧ ಸೇಡಿನ ರಾಜಕಾರಣಕ್ಕಿಳಿಯಿತೇ ಕೇಂದ್ರ ಸರ್ಕಾರ? ಇಲ್ಲಿವೆ ಮೂರು ಸಾಕ್ಷಿಗಳು!

ಮೋದಿಯವರ ಸರ್ಕಾರದ ವೈಫಲ್ಯ ಮತ್ತು ಅಕ್ರಮಗಳನ್ನು ಬಿಚ್ಚಿಟ್ಟ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತುಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಕೇಂದ್ರ ಸರ್ಕಾರ ತನ್ನ ಕಾರ್ಯವೈಖರಿಯನ್ನು ಟೀಕಿಸುವ ಪತ್ರಿಕೆಗಳ ಮೇಲೆ ಜಿದ್ದು ತೀರಿಸಿಕೊಳ್ಳಲು ಮುಂದಾಗಿದೆಯಾ? ಹೌದು, ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ `ರಾಯಿಟರ್ಸ್’ ವರದಿ ಮಾಡಿರುವಂತೆ ಬಿಜೆಪಿ ನೇತೃತ್ವದ ಸರ್ಕಾರ ಮೂರು ಪತ್ರಿಕೆಗಳಿಗೆ ಸರ್ಕಾರದಿಂದ ನೀಡಬೇಕಾದ ಜಾಹೀರಾತುಗಳನ್ನು ತಡೆಹಿಡಿಯುವ ಮೂಲಕ ಅವುಗಳ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದೆ. `ದಿ ಟೈಮ್ಸ್ ಆಫ್ ಇಂಡಿಯಾ’, `ದಿ ಟೆಲಿಗ್ರಾಫ್’ ಮತ್ತು `ದಿ ಹಿಂದು’ ಇವೇ ಆ ಮೂರು ಪತ್ರಿಕೆಗಳು.

ದಿ ಟೈಮ್ಸ್ ಪತ್ರಿಕೆಯನ್ನು ನಿರ್ವಹಿಸುತ್ತಿರುವ ಕೋಲ್‍ಮನ್ ಅಂಡ್ ಕಂಪನಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಬಳಿ `ತಾವು ಮಾಡಿದ ಕೆಲವು ವಸ್ತುನಿಷ್ಠ ವರದಿಗಳು ಸರ್ಕಾರದ ವೈಫಲ್ಯವನ್ನು ಎತ್ತಿಹಿಡಿದಿದ್ದು, ಅವರಿಗೆ ಮುಜುಗರ ಆಗಿರುವುದರಿಂದ ಹೀಗೆ ಮಾಡಿರಬಹುದು’ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸಂಸ್ಥೆಗೆ ಮೊದಲಿನಿಂದಲೂ ಶೇ.15ರಷ್ಟು ಜಾಹೀರಾತು ಆದಾಯ ಸರ್ಕಾರದ ಜಾಹಿರಾತುಗಳಿಂದ ಬರುತ್ತಿತ್ತು ಎಂದು ಆ ಅಧಿಕಾರಿ ವಿವರಿಸಿದ್ದಾರೆ.

ಇನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಜೊತೆ ಮಾತಾಡಿರುವ `ದಿ ಟೆಲಿಗ್ರಾಫ್’ ಮತ್ತು `ದಿ ಹಿಂದು’ ಪತ್ರಿಕೆಗಳನ್ನು ಪ್ರಕಟಿಸುವ `ಎಬಿಪಿ ಸಮೂಹ’ದ ಎಕ್ಸಿಕ್ಯೂಟಿವ್ ಅಧಿಕಾರಿಯೊಬ್ಬರು “ಕಳೆದ ಆರು ತಿಂಗಳಲ್ಲಿ ಸರ್ಕಾರದಿಂದ ನಮಗೆ ಬರುತ್ತಿದ್ದ ಜಾಹೀರಾತುಗಳಲ್ಲಿ ಶೇ.15ರಷ್ಟು ಇಳಿಕೆಯಾಗಿದೆ. ಸಾಮಾನ್ಯವಾಗಿ ಸಂಪಾದಕೀಯ ಬರಹದಲ್ಲಿ ಸರ್ಕಾರ ಬಯಸಿದ್ದಕ್ಕೆ ವಿರುದ್ಧವಾಗಿ ವಸ್ತುಸ್ಥಿತಿಯನ್ನು ತೆರೆದಿಟ್ಟರೆ, ಅವರಿಗೆ ವಿರುದ್ಧವಾಗಿ ಏನನ್ನಾದರು ಬರೆದರೆ, ಜಾಹೀರಾತುಗಳಿಗೆ ಕತ್ತರಿ ಹಾಕುವ ಮೂಲಕ ಪತ್ರಿಕೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ” ಎಂದಿದ್ದಾರೆ. ಅದೇ ಸಂಸ್ಥೆಯ ಮತ್ತೊಬ್ಬ ಅಧಿಕಾರಿ ಹೀಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ, “ನಮ್ಮ ಪತ್ರಿಕೆಗೆ ಯಾಕೆ ಜಾಹೀರಾತು ಕಡಿತ ಮಾಡಲಾಗುತ್ತಿದೆ ಎಂದು ಇದುವರೆಗೆ ಸರ್ಕಾರದಿಂದ ಲಿಖಿತ ಸೂಚನೆ ಬಂದಿಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವುದು ಎಲ್ಲರ ಜವಾಬ್ಧಾರಿ. ಸರ್ಕಾರದ ಇಂತಹ ಪ್ರಯತ್ನಗಳ ಹೊರತಾಗಿಯೂ ನಾವು ನಮ್ಮ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದೇ ತೀರುತ್ತೇವೆ”.

ನೆನಪಿರಬಹುದು, ಭಾರತ ಮತ್ತು ಫ್ರಾನ್ಸ್ ನಡುವಿನ ಬಹುಕೋಟಿ ರಕ್ಷಣಾ ಒಪ್ಪಂದವಾದ ರಫೇಲ್ ವ್ಯವಹಾರದ ಅಕ್ರಮಗಳನ್ನು ಮೊದಲು ಬಯಲಿಗೆಳೆದಿದ್ದು ಮತ್ತು ನಿರಂತರವಾಗಿ ತನಿಖಾ ವರದಿ ಪ್ರಕಟಿಸುತ್ತಾ ಬಂದದ್ದು `ದಿ ಹಿಂದೂ’ ಪತ್ರಿಕೆ. ಹಾಗಾಗಿ ದಿ ಹಿಂದೂ ಕೂಡಾ ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಕೆಲ ತಿಂಗಳಿನಿಂದ ಈ ಪತ್ರಿಕೆಗೆ ಬರುತ್ತಿದ್ದ ಸರ್ಕಾರಿ ಜಾಹೀರಾತುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಸುಪ್ರೀಂ ಕೋರ್ಟ್‍ನಲ್ಲಿ ಈ ಪ್ರಕರಣ ವಿಶೇಷ ಚರ್ಚೆಗೆ ಬಂದಾಗ ಸರ್ಕಾರದ ಪರವಾಗಿ ಅಟಾರ್ನಿ ಜನರಲ್‍ರವರು ದಿ ಹಿಂದೂ ಪತ್ರಿಕೆ ಮತ್ತು ರಫೇಲ್ ಹಗರಣವನ್ನು ಬಯಲಿಗೆಳೆದ ಆ ಪತ್ರಿಕೆಯ ವರದಿಗಾರ ಎನ್.ರಾಮ್ ಅವರ ವಿರುದ್ಧವೇ ಕಳ್ಳತನ ಮತ್ತು ದೇಶದ್ರೋಹದ ಆರೋಪ ಹೊರಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಒಂದುಕಡೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ದನಿ ಎತ್ತುತ್ತಿರುವ ದಿಟ್ಟ ಪತ್ರಕರ್ತರನ್ನು ಹತ್ಯೆ ಮಾಡುವುದು, ಅವಾಚ್ಯವಾಗಿ ಟ್ರೋಲ್ ಮಾಡುವುದು, ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕುವಂತಹ ಕೃತ್ಯಗಳು ಕಳೆದ ಐದು ವರ್ಷಗಳಿಂದೀಚೆಗೆ ಅವ್ಯಾಹತವಾಗಿ ನಡೆಯುತ್ತಿದ್ದರೆ, ಮತ್ತೊಂದೆಡೆ ಸ್ವತಃ ಸರ್ಕಾರವೇ ತನ್ನ ಐಟಿ ಇಲಾಖೆಯ ಮೂಲಕ ಸ್ವತಂತ್ರ ಮಾಧ್ಯಮಗಳ ಮುಖ್ಯಸ್ಥರ ಮೇಲೆ ದಾಳಿ ನಡೆಸುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಕಾಶ್ಮೀರಿ ಪತ್ರಕರ್ತ ಶುಜಾತ್ ಬುಖಾರಿಯಾ ಹತ್ಯೆಗಳು ಪತ್ರಿಕಾ ಸ್ವಾತಂತ್ರ್ಯ ಕುಸಿದಿರುವುದನ್ನು ದೃಢಪಡಿಸುತ್ತವೆ. ಮೋದಿ ಸರ್ಕಾರವನ್ನು ವಸ್ತುನಿಷ್ಠವಾಗಿ ವಿಮರ್ಶೆಗೊಳಪಡಿಸುವ ಎನ್‍ಡಿಟಿವಿಯ ಪ್ರಣವ್ ರಾಯ್‍ರ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ ಹಾಗೂ ಕ್ವಿಂಟ್‍ನ ಸ್ಥಾಪಕ ಸಂಪಾದಕ ರಾಘವ್ ಬೆಹ್ಲ್ ವಿರುದ್ಧ ನಡೆಸಲಾಗುತ್ತಿರುವ ವಿದೇಶಿ ಬೇನಾಮಿ ಆಸ್ತಿ ತನಿಖೆಗಳು ಮಾಧ್ಯಮದ ವಿರುದ್ಧ ಸರ್ಕಾರದ ಉದ್ದೇಶಪೂರ್ವಕ ಹುನ್ನಾರಗಳೆಂಬುದು ಮೇಲ್ನೋಟಕ್ಕೇ ಕಂಡುಬರುತ್ತವೆ. ಇತ್ತೀಚೆಗಷ್ಟೆ ಬಿಡುಗಡೆಯಾದ `ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಪತ್ರಿಕಾ ಸ್ವಾತಂತ್ರ್ಯ ವರದಿಯಲ್ಲಿ ಭಾರತ ಎರಡು ಸ್ಥಾನ ಕೆಳಗೆ ಕುಸಿದಿದೆ. ವಿಪರ್ಯಾಸವೆಂದರೆ 180 ರಾಷ್ಟ್ರಗಳ ಈ ಪಟ್ಟಿಯಲ್ಲಿ 140ನೇ ಸ್ಥಾನದಷ್ಟು ಕೆಟ್ಟ ಸ್ಥಾನದಲ್ಲಿರುವ ಭಾರತ, ಪಕ್ಕದ ಪಾಕಿಸ್ತಾನಕ್ಕಿಂತ ಎರಡು ಸ್ಥಾನ ಮೇಲಿದೆಯಷ್ಟೆ.

I Am a Troll: Inside the Secret World of the BJP’s DigitalArmy,  ಕೃತಿಯ ಲೇಖಕಿ ಸ್ವಾತಿ ಚತುರ್ವೇದಿಯವರು `ಸೋಶಿಯಲ್ ಮೀಡಿಯಾ ಇವತ್ತು ಬಿಜೆಪಿಯ ಬಹುದೊಡ್ಡ ಅಸ್ತ್ರವಾಗಿದ್ದು, ಅರೆಸತ್ಯ ಅಥವಾ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದಲ್ಲದೆ ಬಿಜೆಪಿ ವಿರುದ್ಧ ವರದಿ ಮಾಡುವ ಪತ್ರಕರ್ತರನ್ನು ಟ್ರೋಲ್ ಮಾಡುವುದಕ್ಕೂ ಈ ಅಸ್ತ್ರವನ್ನು ಬಳಸಲಾಗುತ್ತಿದೆ. ಇಂಥಾ ಪ್ರತಿ ಟ್ರೋಲ್ ಮೆಸೇಜುಗಳು ಎಲ್ಲಿಂದಲೋ ಹುಟ್ಟುವಂತದ್ದಲ್ಲ, ದಿಲ್ಲಿಯ ಅಶೋಕ್ ರೋಡ್‍ನಲ್ಲಿರುವ ಆ ಪಕ್ಷದ ಕೇಂದ್ರ ಐಟಿ ಸೆಲ್‍ನ ಜೊತೆ ಪ್ರತಿ ಮೆಸೇಜು ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಇಟ್ಟುಕೊಂಡೇ ಹುಟ್ಟಿರುತ್ತದೆ’ ಎಂದು ಹೇಳುತ್ತಾರೆ. 2016 ಮತ್ತು 2018ರ ಎರಡು ವರ್ಷಗಳ ಅವಧಿಯಲ್ಲೇ ಸೋಶಿಯಲ್ ಮೀಡಿಯಾ ಉಪಯೋಗಿಸುವ ಭಾರತೀಯರ ಸಂಖ್ಯೆ 168 ಮಿಲಿಯನ್‍ನಿಂದ 326 ಮಿಲಿಯನ್‍ಗೆ ಹೆಚ್ಚಾಗಿರುವುದಕ್ಕೂ ಈ ಅವಧಿಯಲ್ಲಿ ಬಿಜೆಪಿ ಪರ ಫೇಕ್ ಸಂದೇಶಗಳು, ಪ್ರಮಾಣಿಕರ ವಿರುದ್ಧ ಟ್ರೋಲ್‍ಗಳು ಹೆಚ್ಚಾಗಿರುವುದೂ ಸ್ವಾತಿಯವರ ಆರೋಪವನ್ನು ದೃಢಪಡಿಸುತ್ತವೆ.

ಇದನ್ನು ಓದಿ: ಭಾರತದ ನೈಜ ಪತ್ರಿಕೋದ್ಯಮದ ಆತ್ಮಸಾಕ್ಷಿಯ ಮೂವರು ಕೀಪರ್‍ಗಳು

ಕಳೆದ ಆಗಸ್ಟ್ ನಲ್ಲಿ ಎಪಿಬಿ ನ್ಯೂಸ್‍ನ ನಿರೂಪಕ ಪುಣ್ಯ ಪ್ರಸೂನ್ ಬಾಜಪೇಯಿ `ದಿ ವೈರ್’ ವೆಬ್‍ಸೈಟ್‍ಗೆ ಹಿಂದಿಯಲ್ಲಿ ಬರೆದ ಲೇಖನವೊಂದರಲ್ಲಿ ‘ಮೋದಿ ಮತ್ತು ಅವರ ಯೋಜನೆಗಳ ವಿರುದ್ಧ ಯಾವ ಕಾರ್ಯಕ್ರಮವನ್ನೂ ಮಾಡದಂತೆ ನನ್ನ ಮೇಲೆ ಒತ್ತಡ ಬಂದಿತ್ತು’ ಎಂದು ತಿಳಿಸಿದ್ದರು. ಅಲ್ಲದೇ, `ಮೀಡಿಯಾಗಳ ಮೇಲೆ ನಿಗಾ ವಹಿಸುವುದಕ್ಕೆಂದೇ ಸರ್ಕಾರ 200 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದು ಅವರ ಕೆಲಸವೇ ಯಾವ್ಯಾವ ಪತ್ರಿಕೆ ಅಥವಾ ಸುದ್ದಿ ಚಾನೆಲ್‍ಗಳು ಸರ್ಕಾರದ ಬಗ್ಗೆ ಎಂತೆಂಥಾ ವರದಿ ಮಾಡುತ್ತೇವೆ ಎನ್ನುವುದನ್ನು ಮಾನಿಟರ್ ಮಾಡುವುದು ಹಾಗೂ ಮೋದಿಯವರ ಚಟುವಟಿಕೆಗಳ ಬಗ್ಗೆ ಎಂತೆಂಥಾ ಸುದ್ದಿ ಮಾಡಬೇಕೆಂದು ಸಂಪಾದಕರುಗಳಿಗೆ ನಿರ್ದೇಶನ ಕೊಡುವುದು’ ಎಂಬ ಅಂಶವನ್ನೂ ಅವರು ಹೊರಗೆಡವಿದ್ದರು.

ಅದಕ್ಕೆ ಪೂರಕವಾಗಿ, ಹಿಂದೂಸ್ತಾನ್ ಟೈಮ್ಸ್ ನ ಸಂಪಾದಕರಾಗಿದ್ದ ಬಾಬಿ ಘೋಷ್ ಅವರ ರಾಜೀನಾಮೆಯನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ದ್ವೇಷದ ಅಪರಾಧಗಳು ಹೇಗೆ ಹೆಚ್ಚಾಗುತ್ತಿವೆ ಎಂಬ ಕುರಿತು ಒಂದು ವಿಶೇಷ `ಹೇಟ್ ಟ್ರ್ಯಾಕರ್’ ಎಂಬ ಕಾರ್ಯಕ್ರಮವನ್ನು ಅವರು ಶುರು ಮಾಡಿದ್ದರು. ಇದು ಸಹಜವಾಗಿಯೇ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತದ್ದಾಗಿತ್ತು. ಕಾರ್ಯಕ್ರಮ ಶುರುವಾದ ಸ್ವಲ್ಪ ದಿನಗಳಲ್ಲೇ ಅವರು ನಿಗೂಢ ಒತ್ತಡಗಳಿಂದಾಗಿ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಅವರ ರಾಜೀನಾಮೆ ಬೆನ್ನಿಗೇ ಆ ಕಾರ್ಯಕ್ರಮ ಕೂಡಾ ಸ್ತಬ್ಧವಾಯ್ತು ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಹೊಸ ಪತ್ರಿಕೆ ಮತ್ತು ಟಿವಿ ಚಾನೆಲ್‍ಗಳಿಗೆ ಪರವಾನಗಿ ಕೊಡುವ ವಿಚಾರದಲ್ಲೆ ಕೇಂದ್ರ ಸರ್ಕಾರ ತುಂಬಾ ತಂತ್ರಗಾರಿಕೆ ತೋರುತ್ತಿರುವ ಹಲವು ನಿದರ್ಶನಗಳಿವೆ. ಸ್ವತಃ ಗೌರಿ ಲಂಕೇಶರ ಆಶಯದ ಮುಂದುವರಿಕೆಯಾಗಿ ಆರಂಭಿಸಲಾದ ಪತ್ರಿಕೆಗೇ ಸತತ ಎರಡು ಬಾರಿ ಯಾವ ಸ್ಪಷ್ಟ ಕಾರಣಗಳೂ ಇಲ್ಲದೆ ನೋಂದಣಿಯನ್ನು ನಿರಾಕರಿಸಲಾಯ್ತು. ಇನ್ನು ರಾಘವ್ ಬೆಹ್ಲ್ ರವರು `ಬ್ಲೂಮ್‍ಬರ್ಗ್ ಕ್ವಿಂಟ್’ಗೆ ಅನುಮತಿ ಪಡೆಯಲು ಎರಡು ವರ್ಷ ಸತಾಯಿಸಲಾಯಿತು. ಅದೇವೇಳೆ, ಬಿಜೆಪಿಯ ರಾಜೀವ್ ಚಂದ್ರಶೇಖರ್‍ರ ಪಾಲುದಾರಿಕೆಯಿರುವ, ಬಲಪಂಥೀಯ ಹಿನ್ನೆಲೆಯ ನಿರೂಪಕ ಅರ್ನಾಬ್ ಗೋಸ್ವಾಮಿಯ `ರಿಪಬ್ಲಿಕ್ ಟಿವಿ’ಗೆ ಕೆಲವೇ ದಿನಗಳಲ್ಲಿ ನೋಂದಣಿ, ಪ್ರಸಾರದ ಹಕ್ಕುಗಳನ್ನು ನೀಡಲಾಯ್ತು.

ಇದೀಗ ಜಾಹಿರಾತುಗಳನ್ನು ಕಾನೂನುಬಾಹಿರವಾಗಿ ತಡೆಹಿಡಿಯುವ ಮೂಲಕ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮತ್ತೊಂದು ಹೆಜ್ಜೆಯ ದಾಳಿಗೆ ಸರ್ಕಾರ ಮುಂದಾಗಿದೆ. ಕಾಂಗ್ರೆಸ್‍ನ ಅಧೀರ್ ರಂಜನ್ ಚೌಧರಿಯವರು ಇತ್ತೀಚೆಗೆ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ “ಸರ್ಕಾರಿ ಜಾಹೀರಾತುಗಳನ್ನು ತಡೆಹಿಡಿದಿರುವ ಈ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆಯಾಗಿದ್ದು, ಈ ಮೂಲಕ ತನ್ನನ್ನು ಎದುರುಹಾಕಿಕೊಳ್ಳಬೇಡಿ ಎಂಬ ಸರ್ವಾಧಿಕಾರಿ ಸಂದೇಶವನ್ನು ಸರ್ಕಾರ ಮಾಧ್ಯಮಗಳಿಗೆ ನೀಡುತ್ತಿದೆ” ಎಂದು ತರಾಟೆಗೂ ತೆಗೆದುಕೊಂಡಿದ್ದಾರೆ. ಆದರೆ ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಿಜೆಪಿಯ ವಕ್ತಾರ ನಳಿನ್ ಕೊಹ್ಲಿಯವರು `ಸದ್ಯ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಪತ್ರಿಕೆ ಮತ್ತು ನ್ಯೂಸ್ ಚಾನೆಲ್‍ಗಳಲ್ಲಿ ಟೀಕೆಗಳನ್ನು ಮಾಡುತ್ತಿದ್ದಾರೆ, ನಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟಿರುವ ಮನ್ನಣೆಗೆ ಇದೇ ಸಾಕ್ಷಿ. ಇಂಥಾ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಬಿಜೆಪಿ ಹತ್ತಿಕ್ಕುತ್ತಿದೆ ಎಂಬುದೇ ಹಾಸ್ಯಾಸ್ಪದ’ ಎಂದಿದ್ದಾರೆ.

ಇದನ್ನು ಓದಿ: ಗೋದಿ ಮಾಧ್ಯಮಗಳೆದುರು ದಿಟ್ಟತನದಿಂದ ಹೋರಾಡಿದ ನೈಜ ಪತ್ರಕರ್ತರಿಗೆ ಸಿಕ್ಕದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...