ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರನ್ನು ಹರಿಯಾಣ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂಬ ಬಗ್ಗೆ ಅನಾಮಧೇಯ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಜನವರಿ 12 ರಂದು ದೆಹಲಿಯ ರೈತ ಹೋರಾಟದಲ್ಲಿದ್ದ 24 ವರ್ಷದ ಪಂಜಾಬ್ ಮೂಲದ ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರನ್ನು ಪೊಲೀಸರು ಬಂಧಿಸಿದ್ದರು. ಫೆಬ್ರವರಿ 2 ರಂದು ಅವರಿಗೆ ಹರಿಯಾಣದ ಸೋನೆಪತ್ನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಪ್ರಸ್ತುತ ಹರಿಯಾಣದ ಕರ್ನಾಲ್ ಜೈಲಿನಲ್ಲಿರುವ ಅವರನ್ನು ಹಿಂಸಿಸಲಾಗುತ್ತಿದೆ ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರ ಕುಟುಂಬ ಹೇಳಿದೆ.
ಇದನ್ನೂ ಓದಿ: ದಲಿತ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆಗೊಳಿಸಿ: ನಟ ದಿಲ್ಜಿತ್, ನಟಿ ರಮ್ಯಾ ಒತ್ತಾಯ
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ನ್ಯಾಯಮೂರ್ತಿ ತ್ಯಾಗಿ, “ಈ ವಿಷಯವನ್ನು ಕ್ರಿಮಿನಲ್ ರಿಟ್ ಅರ್ಜಿಯೆಂದು ಪರಿಗಣಿಸಲಾಗಿದೆ. ಫೆಬ್ರವರಿ 6 ಮತ್ತು 8 ರಂದು ಸಲ್ಲಿಕೆಯಾದ ಅನಾಮಧೇಯ ದೂರುಗಳನ್ನು ಇಮೇಲ್ ಮೂಲಕ ಸ್ವೀಕರಿಸಿದ್ದು, ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಅವರ ಆದೇಶದ ಮೇರೆಗೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ದೂರುಗಳಲ್ಲಿ ದೂರುದಾರರು ತಮ್ಮ ವಿಳಾಸಗಳು ಮತ್ತು ಇತರ ಸಂಬಂಧಿತ ವಿವರಗಳನ್ನು ಉಲ್ಲೇಖಿಸಿಲ್ಲ ಎಂದು ನ್ಯಾಯಮೂರ್ತಿ ತ್ಯಾಗಿ ಹೇಳಿದ್ದು, ಫೆಬ್ರವರಿ 24 ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಮೂರ್ತಿ ಸೂಚಿಸಿದ್ದಾರೆ. ಪ್ರಕರಣವನ್ನು “ತುರ್ತು ಪಟ್ಟಿಯಲ್ಲಿ” ತೋರಿಸಬೇಕೆಂದು ಎಂದು ಅವರು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ದಲಿತ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆಗೊಳಿಸಿ: ನಟ ದಿಲ್ಜಿತ್, ನಟಿ ರಮ್ಯಾ ಒತ್ತಾಯ