Homeಮುಖಪುಟಶ್ರದ್ಧಾಂಜಲಿ; ನಂದಿದ ಮತ್ತೊಂದು ಸಾಂಸ್ಕೃತಿಕ ದೀಪ

ಶ್ರದ್ಧಾಂಜಲಿ; ನಂದಿದ ಮತ್ತೊಂದು ಸಾಂಸ್ಕೃತಿಕ ದೀಪ

- Advertisement -
- Advertisement -

ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂದು ಹೆಸರು ಬಂದಿರುವುದಕ್ಕೆ ಮೂಲ ಚಾರಿತ್ರಿಕ ಕಾರಣಗಳು ಹಲವು ಇರಬಹುದು. ಒಡೆಯರ್ ಆಳ್ವಿಕೆಯ ಕಾಲದಿಂದಲೂ ಸಂಗೀತ, ಕಲೆ, ಸಾಹಿತ್ಯ, ನಾಟಕ ಹೀಗೆ ಸಾಂಸ್ಕೃತಿಕ ಅಭಿವ್ಯಕ್ತಿಯ ಕೇಂದ್ರಬಿಂದುವಾಗಿ ಮೈಸೂರು ನಗರ ಬೆಳೆದುಬಂದಿದ್ದರಿಂದ ಈ ಹೆಸರು ಸಾರ್ಥಕವಾಗಿಯೇ ಕಾಣುತ್ತದೆ. ಆದರೆ ಸಮಕಾಲೀನ ಸಂದರ್ಭದಲ್ಲಿ ನಿಂತು, ರಾಜಪರಂಪರೆಯ ಸಾಂಸ್ಕೃತಿಕ ಹೆಜ್ಜೆಗಳನ್ನು ಮರೆತು ನೋಡಿದಾಗಲೂ ಸಹ, ಆಧುನಿಕ ಭಾರತದಲ್ಲಿ ಮೈಸೂರು ಒಂದು ಸಾಂಸ್ಕೃತಿಕ ನಗರಿಯಾಗಿ ಕಾಣುವುದು ಇಲ್ಲಿ ಅಭಿವ್ಯಕ್ತಗೊಂಡಿರುವ ಸಾಹಿತ್ಯಕ ಮನಸುಗಳ ಮೂಲಕ, ಕಲಾಸಕ್ತ ಹೃದಯಗಳ ಮೂಲಕ, ಸಂಗೀತ ರಸಿಕರ ಮತ್ತು ಕಲಾವಿದರ ಮೂಲಕ. ಎಲ್ಲ ಪ್ರಕಾರಗಳ ಸಂಗೀತ ಸಾಹಿತ್ಯ ಮತ್ತು ಕಲೆಯ ಶ್ರೀಮಂತಿಕೆಯನ್ನು ಹೊತ್ತಿರುವ ಮೈಸೂರು ಹೊಸ ತಲೆಮಾರಿನ ಪ್ರತಿಭೆಗಳಿಗೆ ನೆಲೆಯಾಗುತ್ತಿರುವಂತೆಯೇ ನಿರಂತರವಾಗಿ ಹಿರಿಯ ತಲೆಮಾರಿನ ಕೊಂಡಿಗಳನ್ನು ಕಳೆದುಕೊಳ್ಳುತ್ತಲೂ ಇದೆ.

ಇಂತಹುದೇ ಒಂದು ಸಾಂಸ್ಕೃತಿಕ ಕೊಂಡಿ ಜೂನ್ 13ರಂದು ಮೈಸೂರಿನ ಸೂಕ್ಷ್ಮ ಮನಸುಗಳನ್ನು ಮೌನದಲ್ಲಿ ಮುಳುಗಿಸಿದೆ. ಮೈಸೂರಿನಲ್ಲಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ’ಹಾಡುಪಾಡು ರಾಮು’ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ, ಸಾಹಿತಿ, ಸಾಹಿತ್ಯ ಪ್ರೇರಕ ಹಾಗೂ ಸಮಾಜಮುಖಿ ಜೀವಿ ಟಿ.ಎಸ್. ರಾಮಸ್ವಾಮಿ ಮಂಗಳವಾರ ಮುಂಜಾನೆ 3.20ರ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಖ್ಯಾತ ವಿಮರ್ಶಕ ಜಿ.ಎಚ್. ನಾಯಕ ಅವರನ್ನು ಕಳೆದುಕೊಂಡ ದುಃಖ ಇನ್ನೂ ಕಳೆಯದಿರುವಾಗಲೇ ಮೈಸೂರಿನ ಮತ್ತೊಂದು ಸಾಂಸ್ಕೃತಿಕ ಪ್ರಣತಿ ಆರಿಹೋಗಿದೆ. ಸಾಮಾನ್ಯವಾಗಿ ಪತ್ರಿಕಾರಂಗವನ್ನು ತಮ್ಮ ಪ್ರಧಾನ ಪ್ರವೃತ್ತಿಯಾಗಿ ಅಥವಾ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವವರು ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಕೆಲವೇ ಮುತ್ಸದ್ಧಿಗಳು ಪತ್ರಿಕೋದ್ಯಮದೊಂದಿಗೇ ಸಾಹಿತ್ಯವನ್ನೂ ರಚಿಸುತ್ತಾ, ಪೋಷಿಸುತ್ತಾ ಬೆಳೆದುಬಂದಿದ್ದಾರೆ. ಅಂತಹವರಲ್ಲಿ ’ಹಾಡುಪಾಡು ರಾಮು’ ಒಬ್ಬರಾಗಿದ್ದರು.

ಸಾಹಿತಿಯೊಬ್ಬರ ಸಾಹಿತ್ಯ ಕೃಷಿ ಮತ್ತು ಅದರ ಫಲವತ್ತತೆಯನ್ನು ಪರಿಮಾಣಾತ್ಮಕವಾಗಿ ಅಳೆಯಲಾಗುವುದಿಲ್ಲ, ಎಷ್ಟು ಬರೆದಿದ್ದಾರೆ ಎನ್ನುವುದಕ್ಕಿಂತಲೂ ಎಂತಹ ಪ್ರಬುದ್ಧ, ಮನುಜಸೂಕ್ಷ್ಮ ಸಂವೇದನಾಶೀಲ ಸಾಹಿತ್ಯ ಬರೆದಿದ್ದಾರೆ ಎನ್ನುವುದು ಒಬ್ಬ ವ್ಯಕ್ತಿಯನ್ನು ಸಾಹಿತ್ಯವಲಯದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸುತ್ತದೆ. ಅವಿವಾಹಿತರಾಗಿಯೇ ಕೂಡು ಕುಟುಂಬದಲ್ಲಿ ಬಾಳಿಬದುಕಿದ ’ಹಾಡುಪಾಡು ರಾಮು’ ಅವರ ಅಗ್ನಿಸೂಕ್ತ, ವಿಷ್ಣುಕ್ರಾಂತಿ ಮತ್ತು ಇತರ ಪದ್ಯಗಳು, ರಾಮು ಕವಿತೆಗಳು- ಈ ಮೂರು ಕವನ ಸಂಕಲನಗಳು ಪ್ರಕಟವಾಗಿವೆ. ಅದೇ ವೇಳೆ ನೂರಾರು ಕವಿಗಳಿಗೆ ಸ್ಫೂರ್ತಿಯೂ ಆಗಿದ್ದಾರೆ. ಈ ಅಕ್ಷರ ಗುಚ್ಚಗಳನ್ನೂ ಮೀರಿ ರಾಮಸ್ವಾಮಿ ಅವರು ಮೈಸೂರಿನ ಜನಮಾನಸದಲ್ಲಿ ಉಳಿದಿರುವುದು ಅವರ ಮೂಲ ಹೆಸರನ್ನೇ ಮರೆಮಾಚುವಷ್ಟು ಮಟ್ಟಿಗೆ ಬಳಕೆಗೆ ಬಂದಿರುವ ಆಂದೋಲನ ಪತ್ರಿಕೆಯ ಭಾನುವಾರದ ಪುರವಣಿ ’ಹಾಡುಪಾಡು’ ಮೂಲಕ. ಕೂಡುಕುಟುಂಬದಲ್ಲಿ ಇದ್ದುಕೊಂಡು ಏಕಾಂತತೆ-ಒಂಟಿತನಕ್ಕೆ ಅವಕಾಶವನ್ನೇ ನೀಡದಂತೆ ತಮ್ಮ ಸಾಮಾಜಿಕ-ಸಾಹಿತ್ಯಕ-ಪತ್ರಿಕೋದ್ಯಮದ ಕೃಷಿಯನ್ನು ಹಸನಾಗಿ ಪೋಷಿಸಿಕೊಂಡು ಬಂದಿದ್ದ ರಾಮು ಅವರಿಗೆ ಈ ನಾಲ್ಕು ಗೋಡೆಗಳಿಂದಾಚೆಗೂ ಒಂದು ದೊಡ್ಡ ಕುಟುಂಬ ಇತ್ತು. ಅದು ಮೈಸೂರಿನ ಪ್ರಜ್ಞಾವಂತ ಸಮಾಜ ಮತ್ತು ಸಾಂಸ್ಕೃತಿಕ ಮನಸುಗಳು.

ರಾಮು ಅವರನ್ನು ಪತ್ರಿಕೋದ್ಯಮಕ್ಕೆ ಅಥವಾ ಅವರಿಂದಲೇ ರೂಪುಗೊಂಡು, ಅವರ ಅನುಪಸ್ಥಿತಿಯಲ್ಲೂ ಓದುಗರನ್ನು ಇಂದಿಗೂ ತಣಿಸುತ್ತಿರುವ ’ಹಾಡುಪಾಡು’ ಎಂಬ ಪುರವಣಿಗೆ ಮಾತ್ರ ಸೀಮಿತಗೊಳಿಸುವುದು ಅಪಚಾರವಾಗುತ್ತದೆ. ಇದನ್ನೂ ಮೀರಿದ ಸಾಹಿತ್ಯ-ಸಾಂಸ್ಕೃತಿಕ ಪ್ರಜ್ಞೆ ಅವರಲ್ಲಿದ್ದುದನ್ನು ಅವರ ಸಮಕಾಲೀನರ ನಡುವಿನ ಮಾತುಕತೆಗಳಲ್ಲಿ ಗುರುತಿಸಬಹುದು. ವಾಣಿಜ್ಯೀಕರಣಕ್ಕೊಳಗಾಗಿ, ಕಾರ್ಪೊರೇಟ್ ಹಿತಾಸಕ್ತಿಗಳ ನಿಬಂಧನೆಗಳಿಗೊಳಪಟ್ಟು ತಮ್ಮ ಪಾರಂಪರಿಕ ನೈತಿಕ ಮೊನಚನ್ನು ಕಳೆದುಕೊಳ್ಳುತ್ತಿರುವ ಪತ್ರಿಕೋದ್ಯಮದಲ್ಲಿ ’ಪ್ರಾಮಾಣಿಕತೆ’ ಎಂಬ ಮ್ಯೂಸಿಯಂ ಪೀಸ್‌ಗೆ ಸಾಕ್ಷಿಯಾಗಿದ್ದವರು ಟಿ.ಎಸ್. ರಾಮಸ್ವಾಮಿ. ಪತ್ರಿಕೆಗಳೆಂದರೆ ಕೇವಲ ಸುದ್ದಿಪ್ರಸರಣದ ಅಕ್ಷರ ಸಾಧನಗಳಲ್ಲ, ಅದನ್ನೂ ಮೀರಿದ ನೈತಿಕ ಕರ್ತವ್ಯ ಅವುಗಳಿಗೆ ಇರುತ್ತದೆ ಎಂಬ ಉದಾತ್ತ ನಿಲುಮೆಯನ್ನೇ ಸಾಕ್ಷಾತ್ಕರಿಸಿಕೊಂಡಿದ್ದ ಹಾಡುಪಾಡು ರಾಮು ಆಂದೋಲನ ಪತ್ರಿಕೆಯ ತಮ್ಮ ದಶಕಗಳ ಒಡನಾಟದಲ್ಲಿ ಇದನ್ನು ನಿರೂಪಿಸಿದ್ದಂತೂ ಸತ್ಯ.

1970ರ ದಶಕದಲ್ಲಿ ಇಡೀ ಭಾರತೀಯ ಸಮಾಜವನ್ನೇ ಜಾಗೃತಗೊಳಿಸುವಂತಹ ಜನಾಂದೋಲನಗಳು ಎಲ್ಲೆಡೆ ವ್ಯಾಪಿಸುತ್ತಿದ್ದಾಗ, ಸಾಹಿತ್ಯ, ಕಲೆ, ಸಂಗೀತ, ಜಾನಪದ, ನಾಟಕ, ಹವ್ಯಾಸಿ ರಂಗಭೂಮಿ ಮತ್ತು ಪತ್ರಿಕೋದ್ಯಮ-ಹೀಗೆ ಎಲ್ಲ ಸಾಂಸ್ಕೃತಿಕ ನೆಲೆಗಳಲ್ಲೂ ಪರಿವರ್ತನೆಯ ಕೂಗು ಉಲ್ಬಣಿಸುತ್ತಿದ್ದಾಗ, ಮೈಸೂರು ಸಹ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ನವ್ಯ-ದಲಿತ-ಬಂಡಾಯ ಸಾಹಿತ್ಯದ ಬೇರುಗಳು ಮೈಸೂರಿನಲ್ಲೂ ವ್ಯಾಪಿಸುತ್ತಿದ್ದ ಕಾಲ. ಎಡಪಂಥೀಯ ವಿಚಾರಧಾರೆ, ಸಮಾಜವಾದಿ ಧೋರಣೆ ಮತ್ತು ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಮಾನತೆಯನ್ನು ಒದಗಿಸಬೇಕೆಂಬ ನಿಶ್ಚಲ ಧ್ಯೇಯ ಈ ಕಾಲಘಟ್ಟದ ಘೋಷವಾಕ್ಯಗಳಾಗಿ ಎಲ್ಲ ಸಾಂಸ್ಕೃತಿಕ ವಲಯಗಳಲ್ಲೂ ಪಸರಿಸಿತ್ತು. ಈ ವಾತಾವರಣದಲ್ಲೇ ತಮ್ಮ ಸಾಮಾಜಿಕ ಪಯಣವನ್ನು ಆರಂಭಿಸಿದ ಟಿ.ಎಸ್.ರಾಮಸ್ವಾಮಿ 1970ರ ದಶಕದ ಸಮಾಜಮುಖಿ-ಪ್ರಗತಿಪರ ಧ್ವನಿಗಳಲ್ಲಿ ಒಂದಾಗಿದ್ದರು. ಒಡನಾಡಿಯೂ, ಸಹಪಾಠಿಯೂ ಆಗಿದ್ದ ದೇವನೂರ ಮಹದೇವ ಅವರನ್ನೊಳಗೊಂಡಂತೆ, ಕೆಲವು ತಿಂಗಳುಗಳ ಹಿಂದೆ ನಿಧನರಾದ ಪ. ಮಲ್ಲೇಶ್, ಜಿ.ಎಚ್. ನಾಯಕ್, ನಮ್ಮೊಡನಿಲ್ಲದ ಕುಕ್ಕರಹಳ್ಳಿ ಬಸವರಾಜ್, ಪ್ರೊ. ರಾಮದಾಸ್ ಇನ್ನೂ ಹಲವಾರು ಬುದ್ಧಿಜೀವಿಗಳೊಡನೆ ಹಾಡುಪಾಡು ರಾಮು ತಮ್ಮ ಸಾಮಾಜಿಕ ಬದುಕಿನ ಪಯಣಕ್ಕೆ ಪ್ರವೇಶಿಸಿದ್ದರು.

ಆ ಕಾಲಘಟ್ಟದಲ್ಲಿ ಡಾ. ವಿ. ಲಕ್ಷ್ಮೀನಾರಾಯಣ್, ರತಿರಾವ್, ದಿವಂಗತ ರಾಮಲಿಂಗಂ ಇನ್ನೂ ಮುಂತಾದವರ ಮೂಲಕ ಎಡಪಂಥೀಯ ಸೈದ್ಧಾಂತಿಕ ನೆಲೆಗಳು ಗಟ್ಟಿಯಾಗುವ ದೃಷ್ಟಿಯಿಂದ ಕುಕ್ಕರಹಳ್ಳಿಯಲ್ಲೇ ಸ್ಥಾಪಿಸಲಾಗಿದ್ದ ಮಾರ್ಕ್ಸ್‌ವಾದಿ ಗ್ರಂಥಾಲಯದ ಸಂಸ್ಥಾಪಕರಲ್ಲಿ ಶ್ರೀಯುತ ಟಿ.ಎಸ್. ರಾಮಸ್ವಾಮಿ ಒಬ್ಬರಾಗಿದ್ದರು. ಆ ಕಾಲಘಟ್ಟದ ಎಲ್ಲ ಸಾಮಾಜಿಕ ತಲ್ಲಣಗಳನ್ನು ತಮ್ಮದೆಂದೇ ಭಾವಿಸಿ, ಎಲ್ಲ ಜನಪರ-ಪ್ರಗತಿಪರ-ಸಮಾಜಮುಖಿ ಹೋರಾಟಗಳ ಒಂದು ಭಾಗವಾಗಿಯೇ ಬೆಳೆದ ರಾಮಸ್ವಾಮಿ ಕೆಲವರ್ಷಗಳ ನಂತರ ಪತ್ರಿಕೋದ್ಯಮಕ್ಕೆ ಹೊರಳಿದರೂ, ಅವರ ಸಾಮಾಜಿಕ ಕರ್ತವ್ಯವನ್ನು ಮರೆತು ಕಚೇರಿಯೊಳಗೆ ಬಂಧಿತರಾಗಲಿಲ್ಲ. ಹಾಡುಪಾಡು ರಾಮು ಅವರಿಂದ ಮಾರ್ಗದರ್ಶನ ಪಡೆದ ಪತ್ರಕರ್ತರ ಸಂಖ್ಯೆ ಬಹುಶಃ ಎಣಿಸಲಸಾಧ್ಯ. ಯುವ ಪತ್ರಕರ್ತರಿಗೆ ಉತ್ತೇಜನ ನೀಡುವುದೇ ಅಲ್ಲದೆ, ಮಾರ್ಗದರ್ಶಕರೂ ಆಗಿ ತಾವು ಸಂಪಾದಿಸುತ್ತಿದ್ದ ಹಾಡುಪಾಡು ಪುಟಗಳಲ್ಲಿ ಯುವ ಕವಿಗಳಿಗೆ, ಕತೆಗಾರರಿಗೆ, ಚಿತ್ರಕಾರರಿಗೆ ಅವಕಾಶ ಕೊಡುವ ಮೂಲಕ ಹೊಸ ತಲೆಮಾರಿನ ಒಂದು ಬೌದ್ಧಿಕ ಕಣಜವನ್ನು ರೂಪಿಸಿದ್ದರು.

ಯುವ ಕವಿಗಳ ಕಾವ್ಯಗಳನ್ನು ತಿದ್ದಿತೀಡಿ ಅವರಲ್ಲಿರಬಹುದಾಗಿದ್ದ ಕವಿ ಮನಸ್ಸನ್ನು ಮತ್ತಷ್ಟು ಉದ್ದೀಪನಗೊಳಿಸಿ, ಸಾಹಿತ್ಯ ಕ್ಷೇತ್ರದ ನೊಗ ಹೊರಲು ಸಿದ್ಧಪಡಿಸುತ್ತಿದ್ದ ಹಾಡುಪಾಡು ರಾಮು ಅವರ ಸಾಹಿತ್ಯಕ-ಪತ್ರಿಕೋದ್ಯಮದ ಬೇಸಾಯವು ಮನೆಯೊಳಗಿದ್ದಾಗಲೂ ಅಷ್ಟೇ ಆಸಕ್ತಿಯಿಂದ ನಡೆಯುತ್ತಿತ್ತು ಎಂದು ಅವರ ದೀರ್ಘಕಾಲದ ಒಡನಾಡಿಗಳು ಹೇಳುವುದಿದೆ. ಸದಾ ಯಾವುದಾದರೂ ಗಂಭೀರ ಸಾಹಿತ್ಯ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದುದೇ ಅಲ್ಲದೆ, ಸುತ್ತಲಿನ ಸಮಾಜದ ಎಲ್ಲ ವ್ಯತ್ಯಯಗಳ ಬಗ್ಗೆ ತಮ್ಮ ಆತಂಕ, ತಲ್ಲಣ, ಆಸಕ್ತಿ ಹಾಗೂ ಸದಾಶಯಗಳನ್ನು ಮನೆಗೆ ಬಂದ ಗೆಳೆಯರೊಡನೆ ಚರ್ಚೆ ಮಾಡುತ್ತಿದ್ದುದು ಅವರ ಪ್ರವೃತ್ತಿಯೇ ಆಗಿತ್ತು. ಅವರೊಡಗಿನ ಸಾಹಿತ್ಯ ಚರ್ಚೆಗಳು ರನ್ನ ಪಂಪರಿಂದ ಇತ್ತೀಚಿನ ಕವಿಗಳವರೆಗೂ ವಿಸ್ತರಿಸುತ್ತಿದ್ದುದನ್ನು ರಹಮತ್ ತರೀಕೆರೆ ತಮ್ಮ ಲೇಖನವೊಂದರಲ್ಲಿ ನೆನೆಯುತ್ತಾರೆ. ರಾಮಸ್ವಾಮಿ ಅವರು ಓದಿರುವಷ್ಟು ಪ್ರಮಾಣದಲ್ಲಿ ಬರೆದಿದ್ದರೆ ಬಹುಶಃ ಬಹುದೊಡ್ಡ ಸಾಹಿತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಬಹುದಿತ್ತೇನೋ. ಆದರೂ ಕುಮಾರವ್ಯಾಸ ಮತ್ತು ಪಂಪನನ್ನು ಕುರಿತ ಅವರ ಲೇಖನಗಳು ಯಾವುದೇ ಸಾಹಿತ್ಯ ವಿದ್ಯಾರ್ಥಿಗೆ ತೀಕ್ಷ್ಣ ಒಳನೋಟಗಳನ್ನು ನೀಡುವಂತಿರುವುದು ರಾಮು ಅವರ ಸಾಹಿತ್ಯಕ ಪ್ರಭಾವಳಿಯ ದ್ಯೋತಕ.

ರಹಮತ್ ತರೀಕೆರೆ ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ: “ರಾಮು, ಕನ್ನಡ ಸಾಹಿತ್ಯದ ಬಹಳ ಜನರಿಗೆ ಗೊತ್ತಿಲ್ಲದ ಒಬ್ಬ ಗುಪ್ತಸಾಧಕರು. ಅವರಷ್ಟು ಪ್ರಮಾಣದಲ್ಲಿ ಸಾಹಿತ್ಯ ಓದಿಕೊಂಡಿರುವವರು, ಆ ಬಗ್ಗೆ ಸೂಕ್ಷ್ಮಚಿಂತನೆ ಮಾಡಿರುವವರು ಬಹಳಿಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಎಷ್ಟೋ ಪ್ರೊಫೆಸರುಗಳಿಗೆ ಅವರ ಪಾಂಡಿತ್ಯದ ಕಿಂಚಿತ್ ಪ್ರಮಾಣವಿದ್ದರೂ, ಅವು ಜ್ಞಾನದಿಂದ ಬೆಳಗುತ್ತಿದ್ದವು.” (ಅವಧಿ- 13 ಜೂನ್ 2023).

ಈ ಮಾತುಗಳು ಹಿರಿಯರಿಗೆ ರಹಮತ್ ಸಲ್ಲಿಸಿರುವ ಗೌರವಪೂರ್ವಕ ಗುರುದಕ್ಷಿಣೆಯೋ ಅಥವಾ ಉತ್ಪ್ರೇಕ್ಷಿತ ಹೊಗಳಿಕೆಯೋ ಅಲ್ಲ, ಹಾಡುಪಾಡು ರಾಮು-ಟಿ,ಎಸ್.ರಾಮಸ್ವಾಮಿ ಈ ಮಾತುಗಳನ್ನು ತಮ್ಮ ಬದುಕಿನುದ್ದಕ್ಕೂ ವಿಭಿನ್ನ ಆಯಾಮದಲ್ಲಿ ಸಾಕ್ಷಾತ್ಕರಿಸಿದವರು. ಸಾಹಿತ್ಯಕ ಪ್ರಜ್ಞೆ ಮತ್ತು ಸಾಮಾಜಿಕ ಸೂಕ್ಷ್ಮತೆಯನ್ನು ಹೊಂದಿರುವವರಲ್ಲಿ ಇರಲೇಬೇಕಾದ ಸಂವೇದನಾಶೀಲತೆಗೆ ಹಾಡುಪಾಡು ರಾಮು ಸಾಕ್ಷಿಪ್ರಜ್ಞೆಯಾಗಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ದಿವಂಗತ ಪ. ಮಲ್ಲೇಶ್ ಸದಾ ಒಂದು ಮಾತು ಹೇಳುತ್ತಿದ್ದರು “ನಮ್ಮಲ್ಲಿ ಇರುವುದನ್ನು ಸಮಾಜಕ್ಕೆ ಕೊಡುವುದು ದೊಡ್ಡದಲ್ಲ ರೀ, ಸಮಾಜದ ಒಳಿತಿಗೆ ಏನು ಬೇಕೋ ಅದನ್ನು ನಾವು ಕೊಡಬೇಕು” ಎಂದು. ಅವರ ಮಾತುಗಳಿಗೆ ಬಹುಶಃ ಹಾಡುಪಾಡು ರಾಮು ಜೀವಂತ ಸಾಕ್ಷಿಯಾಗಿದ್ದರು.

ಆಗಿದ್ದರು ಎನ್ನುವುದು ಅಪರಾಧವಾದೀತೇನೋ, ಸದಾ ಕಾಲವೂ ಸಾಕ್ಷಿಪ್ರಜ್ಞೆಯಾಗಿಯೇ ಉಳಿಯಲಿದ್ದಾರೆ. ಅವರ ನೆನಪು ಚಿರಸ್ಥಾಯಿ.

ನಾ ದಿವಾಕರ
ಮೂಲತಃ ಕೋಲಾರದವರಾದ ದಿವಾಕರ ಅವರು ಮೈಸೂರಿನಲ್ಲಿ ನೆಲೆಸಿ, ಇಲ್ಲಿನ ಜನಚಳವಳಿಗಳ ಭಾಗವಾದವರು. ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು ಸ್ವಯಂ ನಿವೃತ್ತಿ ಪಡೆದ ಬಳಿಕ ಎಡಪಂಥೀಯ, ದಲಿತ, ಕಾರ್ಮಿಕ, ರೈತ ಚಳವಳಿ ಮತ್ತು ಬರವಣಿಗೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...