ಸಾಮಾಜಿಕ ಬಹಿಷ್ಕಾರದ ಆತಂಕಕಾರಿ ಪ್ರಕರಣವೊಂದು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ಅರ್ಜುನಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ (ಎಸ್ಸಿ) ಗೆ ಸೇರಿದ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದಕ್ಕಾಗಿ ಗ್ರಾಮಸ್ಥರು ಕುಟುಂಬ ಒಂದಕ್ಕೆ ಬಹಿಷ್ಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಪತ್ನಿ, ಮಗ ಮತ್ತು ಮೂವರು ಹೆಣ್ಣುಮಕ್ಕಳೊಂದಿಗೆ ವಾಸಿಸುವ ದಯಾನಿಧಿ ಗೌಡ ಅವರು ತಮ್ಮ ಮಕ್ಕಳ ಮದುವೆ ಖರ್ಚಿಗಾಗಿ ಸುಮಾರು ನಾಲ್ಕು ವರ್ಷಗಳ ಹಿಂದೆ ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿದ್ದರು. ಅವರ ಹಿರಿಯ ಮಗಳ ವಿವಾಹವಾಗಿದ್ದು, ಉಳಿದ ಮೂವರು ಮಕ್ಕಳ ವಿವಾಹದ ಮಾತುಕತೆ ಅಂತಿಮಗೊಂಡಿದೆ.
ದಲಿತ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದು ಗ್ರಾಮಸ್ಥರಲ್ಲಿ ಕೋಪವನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ. ಪಂಚಾಯಿತಿ ನಡೆಸಿ ಗೌಡ ಅವರಿಗೆ 3,500 ರೂ. ದಂಡ ವಿಧಿಸಿದ್ದಾರೆ ಎಂದು ‘ಒರಿಸ್ಸಾ ಪೋಸ್ಟ್’ ವರದಿ ಮಾಡಿದೆ.
ದಂಡ ಪಾವತಿಸಿದ ಕುಟುಂಬ, ಭವಿಷ್ಯದಲ್ಲಿ ಹೊರಗಿನವರಿಗೆ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಆದರೂ, ಮಾರ್ಚ್ 16, 2025 ರಂದು ಮತ್ತೊಂದು ಗ್ರಾಮ ಸಭೆಯನ್ನು ಕರೆಯಲಾಯಿತು. ಗ್ರಾಮಸ್ಥರು ಗೌಡ ಅವರಿಗೆ ಹೊಸದಾಗಿ 7 ಲಕ್ಷ ರೂ. ಅಥವಾ ಅದಕ್ಕೆ ಸಮಾನವಾದ ಭೂಮಿ ಕೊಡುವಂತೆ ಆಜ್ಞೆ ಮಾಡಿದ್ದಾರೆ. ಪಮಚಾಯಿತಿ ಆದೇಶವನ್ನು ಪಾಲಿಸಲು ಕುಟುಂಬ ವಿಫಲವಾದಾಗ, ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು.
ಗ್ರಾಮದ ದೇವಸ್ಥಾನ, ಅಂಗಡಿಗಳು, ರಸ್ತೆ, ನೀರು ಮತ್ತು ಸಮುದಾಯ ಬೆಂಬಲದಂತಹ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಇದರಿಂದಾಗಿ ಕುಟುಂಬವು ತೀವ್ರ ಮಾನಸಿಕ ಯಾತನೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಒಳಗಾಯಿತು.
ತಿಂಗಳುಗಳ ಕಾಲ ಪರಿಸ್ಥಿತಿಯನ್ನು ಸಹಿಸಿಕೊಂಡ ನಂತರ, ಗೌಡ ಮತ್ತು ಅವರ ಮಗ ಅನಿಲ್ ಕುಮಾರ್ ಗೌಡ ಅವರು ಕಬಿಸೂರ್ಯನಗರ ಪೊಲೀಸರನ್ನು ಸಂಪರ್ಕಿಸಿ ನ್ಯಾಯಕ್ಕಾಗಿ ದೂರು ದಾಖಲಿಸಿದ್ದಾರೆ. ಗ್ರಾಮಸ್ಥರು ವಿವಾದಿತ ಭೂಮಿಗೆ ಬೇಲಿ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಬಿಸೂರ್ಯನಗರ ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಐಪಿಎಸ್ ಪ್ರೊಬೆಷನರ್ ನಿತೇಶ್ ಕುಮಾರ್ ಮಿಶ್ರಾ ಅವರು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.


