Homeಅಂಕಣಗಳು'ಮತ್ತೆ ಮತ್ತೆ ಮಳೆ' ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ.....

‘ಮತ್ತೆ ಮತ್ತೆ ಮಳೆ’ ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ…..

- Advertisement -
- Advertisement -

ಕವಿತೆ/ಕಲೆ ಎನ್ನುವುದು ಕೊಂಡ ಹಾಯುವ ಆಚರಣೆಯಂತೆ. ತನ್ನ ಬದುಕಿನ ಮತ್ತು ಸಮಾಜದ ನೆನಪುಗಳನ್ನು ಆ ಕೊಂಡದಲ್ಲಿ ಹಾಯಿಸಿಕೊಳ್ಳುವುದೇ ಕವಿಯ/ಕಲಾವಿದನ ಕೆಲಸ. ಏಕೆಂದರೆ ಕಾವ್ಯ/ಸಾಹಿತ್ಯ/ಕಲೆ ಅನ್ನೋದು ಶೋಷಿತರ ಮೇಲಿನ ಭಾರ ಇಳಿಸುವುದು, ಲೋಕದ ಪಾಪಗಳ ಭಾರ ಹೊರುವುದೇ ಆಗಿದೆ.

ಕವಿತೆಯನ್ನು ಕಟ್ಟುವ, ಸೃಷ್ಟಿಸುವ ಕವಿಯ ವ್ಯಕ್ತಿಗತವಾದ ಪ್ರೇಮ, ವಿರಹ, ಸಂತೋಷದ, ನೆನಪುಗಳು, ಅವಮಾನಗಳು, ಸಾಮಾಜಿಕ, ರಾಜಕೀಯ ಸಂಗತಿಗಳು ಅವನ/ಆಕೆಯ ಮನದಾಳಕ್ಕೆ ಇಳಿದು, ಅವನ/ಆಕೆಯ ಭಾವದಲ್ಲಿ ಕಡೆದು ಅರಿವಿನ ಚಿತ್ರವಾಗಿ ಮೂಡುವಂತೆ ಮಾಡುವುದೇ ಕವಿಯ ಕೆಲಸ.

ಈ ಕೆಲಸಕ್ಕೆ ಭಾಷೆ ಅತಿ ಮುಖ್ಯವಾದದ್ದು. ಆದರೆ ಅದೇ ಎಲ್ಲವೂ ಅಲ್ಲ.

ಈ ಚರ್ಚೆಗಳ ಹಿನ್ನೆಲೆಯಲ್ಲಿ ಗಮನಿಸಬಹುದಾದ ಮುಖ್ಯಸಂಗತಿ ಎಂದರೆ ಕಾವ್ಯಕ್ಕೆ ಶಬ್ದ-ಅರ್ಥಗಳೇ ಮುಖ್ಯ ಎಂಬ ವಿಚಾರ ಕನ್ನಡ ಕಾವ್ಯದ ಮೇಲೂ ಹೆಚ್ಚಿನ ಪ್ರಭಾವ ಬೀರಿ, ಕೇವಲ ಭಾಷೆಯ ಬಳಕೆಯೊಂದರಿಂದಲೇ ಹುಸಿ ಕಾವ್ಯ (pseudo poetry) ಮುನ್ನಲೆಗೆ ಬಂದು ನಿಜವಾದ ಕಾವ್ಯ ಹಿನ್ನೆಲೆಗೆ, ಮರೆಗೆ ಸರಿಯುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವದಲ್ಲಿ ಕಾವ್ಯ ಅನ್ನೋದು ಬದುಕಿಗೆ ಉಪಯೋಗವಾಗಬೇಕು, ಹಿತಕಾರಿಯಾಗಬೇಕು ಎಂಬ ಬಹುಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ.

ಹೀಗೆ ರೂಪುಗೊಳ್ಳುವ ಕವಿತೆಯ ಸ್ವರೂಪ, ಅದರ ಅಂತಿಮ ಗುರಿ ಏನು ಎಂಬುದನ್ನು ನಮ್ಮ ಜನಪದ ಕಾವ್ಯದಲ್ಲಿ ಪ್ರಚಲಿತವಿರುವ ’ಬಾಲಗೋಪಾಲನ ಲಾವಣಿಗಳು’ ಬರುವ ಸಾಲುಗಳು ವಿವರಿಸುತ್ತವೆ.

“ಬಾಲಗೋಪಾಲನ ಹಾಡ ಕೇಳರಿ
ಹಸುಗೂಸಿಗಿ ಹಾಕಿದಾಂಗ ಕ್ಷೀರವನಾ” ಎಂದು.

ಈ ಸಾಲುಗಳಲ್ಲಿ ಹಸುಗೂಸು ಹಾಲು ಕುಡಿಯುವ ಸಹಜ ಕ್ರಿಯೆಯನ್ನು ಕವಿತೆ ಓದುವ, ಕೇಳುವ ಸಹೃದಯನಿಗೆ ಹೋಲಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಹಸುಗೂಸು ಹಾಲು ಕುಡಿಯುವ ಒಟ್ಟು ಕ್ರಿಯೆ, ಕಾವ್ಯದ ಸ್ವರೂಪ ಮತ್ತು ಅದರ ಪ್ರಯೋಜನವನ್ನು ಅರ್ಥವತ್ತಾಗಿ ಹೇಳುತ್ತಿದೆ. ತಾಯಿ ಕವಿಯನ್ನು ಸಂಕೇತಿಸಿದರೆ, ತಾಯ ಎದೆಹಾಲು ಕವಿತೆಯನ್ನು, ಹಸುಗೂಸು ಓದುಗನನ್ನು ಸಂಕೇತಿಸುತ್ತದೆ. ಎದೆಹಾಲು ದೋಷದಿಂದ ಮುಕ್ತವಾದ ಉತ್ತಮಕಾವ್ಯವನ್ನು ಸಂಕೇತಿಸುತ್ತದೆ.

ಹಾಲು ಕುಡಿಯುವ ಕ್ರಿಯೆ ಕೂಸಿಗೆ ಕೊಂಚವೂ ತೊಡಕಾಗಿರದೆ, ಇಷ್ಟವಾದ, ಸಹಜವಾದ, ಸಲೀಸಾದ ಕೆಲಸವಾಗಿ, ಹಾಲು ಕೂಸಿಗೆ ಹಿತವನ್ನುಂಟುಮಾಡುತ್ತದೆ. ಜೀವಶಕ್ತಿಯನ್ನು ಹೆಚ್ಚಿಸುತ್ತದೆ, ಆನಂದವನ್ನು ಉಂಟುಮಾಡುತ್ತದೆ. ಹಾಗೆಯೇ ಕಾವ್ಯವು ಸಹಜವಾಗಿರಬೇಕು, ಸರಳವಾಗಿರಬೇಕು. ಓದುಗನಿಗೆ/ಸಹೃದಯನಿಗೆ ಇಷ್ಟವಾದುದೂ, ಅವನ ಬೆಳವಣಿಗೆಗೆ ಶಕ್ತಿಯನ್ನೊದಗಿಸುವಂತಹದು, ಆನಂದವನ್ನುಂಟುಮಾಡುವಂತಹದು ಆಗಿರಬೇಕು. ಒಟ್ಟಿನಲ್ಲಿ ಅವನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಬೇಕು.

ಇಷ್ಟೆಲ್ಲಾ ಮಾತುಗಳು ಆಡಲು ಕಾರಣ ಹೇಮಂತ ಲಿಂಗಪ್ಪ ಅವರ ಮೊದಲ ಸಂಕಲನದ ಓದು.

ಹೇಮಂತರ ’ಮತ್ತೆ ಮತ್ತೆ ಮಳೆ’ ಸಂಕಲನದಲ್ಲಿ ಒಟ್ಟು ನಲ್ವತ್ತನಾಲ್ಕು ಕವನಗಳಿವೆ. ಇಷ್ಟೂ ಕವನಗಳಲ್ಲಿ ನಾನು ಗಮನಿಸಿದ ಹಾಗೆ ಹೇಮಂತರ ಕವಿತೆಗಳ ಬಹುಮುಖ್ಯ ಅಂಶ ಅಂದರೆ ತನ್ನ ಅನುಭವವನ್ನು ಹಾಗೆ ಒಂದು ಚಿತ್ರವನ್ನಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟುವುದು. ಇದರ ಮೂಲಕ ಕವಿ ಏನು ಹೇಳಲು ಪ್ರಯತ್ನಿಸುತ್ತಾನೆ ಅನ್ನೋದು ಮುಖ್ಯವಲ್ಲ, ಕಾವ್ಯ ಓದುಗನಿಗೆ ಏನನ್ನು ಹೇಳುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಆ ವಿಚಾರವನ್ನು ಹೇಮಂತರ ಕವಿತೆಗಳು ಒಳಗೊಂಡಿವೆ ಅನ್ನೋದೇ ಅವರ ಕವಿತೆಗಳ ಯಶಸ್ಸು.

ಉದಾಹರಣೆಗೆ: 1.

ಉಬ್ಬಿದೆದೆಯ ಏದುಸಿರು
ಕಿವಿಯಿಟ್ಟು ಆಲಿಸೆ
ಕೇಳುತಿದೆ ಸಂಗೀತದಂತೆ

ನಾನು ಗಾಳಿಯೂದಲೇ ಇಲ್ಲ,
ಕೇವಲ ತುಟಿ ಸೋಕಿಸಿದಷ್ಟೆ…
ನೋಡನೋಡ ನೋಡುತ್ತಲೇ ಅವುಗಳು ಉಬ್ಬಿದ್ದೇಕೆ?
ಶಿಖರಗಳ ತುತ್ತತುದಿಯ, ತುಟಿ ಮುತ್ತಿದ್ದೇಕೆ?

ಈಗ ಮೌನದ್ದೇ ಮಾತು,
ಉಸಿರುಗಳದ್ದೇ ಗದ್ದಲ
ಸ್ಪರ್ಶದ್ದೇ ಕಾರುಬಾರು
ಮುತ್ತುಗಳದ್ದೇ ಚರ್ಚೆ….

2.

ತುಂಬಿ ಹರಿದ ಕೆರೆಯ
ತೂಬಿನಲ್ಲಿ ತಡಕಾಡಿ
ಹಿಡಿದ ಮೀನು- ಏಡಿಗಳ
ನನ್ನೂರ ಕೆರೆ
ಅದರ ಏರಿಯೂ..

ಇಂತವು ಹಲವಾರು.

ಎರಡನೆಯದಾಗಿ, ಕವಿಯಾದವನಿಗೆ ತುಂಬು ಜೀವನ ಪ್ರೀತಿ ಇರಬೇಕು ಮತ್ತದು ಪ್ರಾಮಾಣಿಕವಾಗಿರಬೇಕು. ಆಗ ಅದು ಅವನ ಕವಿತೆಗಳಲ್ಲಿ ಸಾಮಾಜಿಕವಾದ ರೂಪ ಪಡೆಯುತ್ತದೆ ಮತ್ತು ಎಲ್ಲರ ಜೀವನಪ್ರೀತಿಯಾಗುತ್ತೆ. ಅಂತಹ ಅಪಾರ ಜೀವನ ಪ್ರೀತಿ ಹೇಮಂತರ ಕವನಗಳಲ್ಲಿ ಎದ್ದು ಕಾಣುತ್ತದೆ. ಅದು ವ್ಯಕ್ತಿಗತವಾದ ಪ್ರೇಮ; ಆ ಪ್ರೇಮ ಅಚಾನಕ್ಕಾಗಿ ಕೊಡುವ ವಿರಹ, ಆ ವಿರಹದ ಅಭಿವ್ಯಕ್ತಿ ಎಲ್ಲರ ವಿರಹವಾಗಿ ಕಡೆಗೆ ವಿಷಾದವಾಗುವ ಬಗೆಯನ್ನು ಕುರಿತು, ಪ್ರೇಮದ ನೆನಪುಗಳ ಕುರಿತು, ಹಾಗೆ ಪರಿಸರ ಮತ್ತು ಅದರ ಜೊತೆಗಿನ ಜೀವಸಂಕುಲಗಳ ಬಗೆಗಿನ ಕಾಳಜಿ ಕುರಿತಾಗಿರಬಹುದು- ಇಲ್ಲೆಲ್ಲಾ ಉತ್ಕಟ ಪ್ರೇಮದ ಅಭಿವ್ಯಕ್ತಿ ಸಹಜವಾಗಿ ವ್ಯಕ್ತವಾಗಿದೆ. ಜೊತೆಗೆ ಪ್ರೇಮದ ಬಗೆಗಳನ್ನು ಹೇಮಂತ್ ತಮ್ಮ ಕವಿತೆಗಳಲ್ಲಿ ಎದುರಾಗುತ್ತಾರೆ.

ತಮ್ಮ ಮೊದಲ ಸಂಕಲನಗಳಲ್ಲಿ ಪ್ರೇಮ, ವಿರಹ, ವಿಷಾದ, ನೆನಪುಗಳನ್ನು ಕವಿತೆ ಮಾಡಲು ಹೋಗಿ ಭಾಷಣ ಮಾಡುವ ಇಲ್ಲವೇ ವಿಚಾರದ ಒಣಮಾತುಗಳ ಕಟ್ಟುಗಳನ್ನಾಗಿಸುವವರೇ ಹೆಚ್ಚು. ಆಗ ಮಾತು ಅನುಭವದ ಹೆಣವಾಗುತ್ತದೆ. ಹೇಮಂತರ ಈ ಸಂಕಲನದಲ್ಲಿ ಒಂದೆರಡು ಕವಿತೆಗಳನ್ನು ಬಿಟ್ಟರೆ ಉಳಿದಂತೆ ಗೆದ್ದಿದ್ದಾರೆ.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಆಹ್ವಾನ, ಮಳೆ, ಪ್ರೀತಿ, ಹುಡುಕಿಕೊಡು ಹುಡುಗಿ, ಮರೆವು, ಬನ್ನಿ ಬನ್ನಿ ಪದಗಳೆ, ಹೇಗೆ, ನೆನಪು, ಬ್ರೀವರಿಯ ಹುಡುಗಿ, ಮಿಳಿತ, ನನ್ನ ತಪ್ಪಲ್ಲ, ಮಳೆಗಾಳಿ, ಪಠ್ಯಪುಸ್ತಕ, ಮತ್ತೆ ಮತ್ತೆ ಮಳೆ, ನೈಟ್ ಜರ್ನಿ ಕವಿತೆಗಳು ಮೇಲಿನ ಮಾತುಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ.

ಮೂರನೆಯದಾಗಿ, ಕವಿ ಏಟ್ಸ್‌ನ ‘Poetry is an escape from Emotion’- ಈ ಮಾತಿಗೆ ಸಾಕ್ಷಿ ಒದಗಿಸುವ ಹಾಗೆ ಕೇವಲ ಪ್ರೇಮ, ವಿರಹಗಳೇ ಕಾವ್ಯದ ವಸ್ತುವಲ್ಲ ಎನ್ನುವುದನ್ನು ಹೇಳುವಂತೆ ಹೇಮಂತರ ಕಾವ್ಯದ ಮತ್ತೊಂದು ಬಹುಮುಖ್ಯ ಮಗ್ಗಲು ಎಂದರೆ ಬದುಕನ್ನು, ಬದುಕಿನ ಘಟ್ಟಗಳನ್ನು, ಸನ್ನಿವೇಶಗಳನ್ನು ಭಿನ್ನವಾಗಿ ನೋಡಲೆತ್ನಿಸುವ ಕ್ರಮ ವಿಶೇಷವೆನ್ನಿಸುತ್ತದೆ..

ನಮಿಸಲಿ ನಾ ಯಾರಿಗೆ, ನನಗೂ ಮೊಲೆಗಳ ಕೊಡು ದೇವರೇ, ಮಳೆಗಾಲದ ಮುಂಜಾನೆ, ಮಗಳು, ಬೆಂಗಳೂರು ನೋಡಿದಾಗಲೆಲ್ಲಾ, ನಾವು ಕೆ.ಇ.ಬಿಯವರು, ಮಗಳಿಗೊಂದಷ್ಟು ಮಾತು- ಈ ಕವಿತೆಗಳು ಹೇಮಂತ್ ಅವರನ್ನು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ಸೂಚನೆಯನ್ನು ಕೊಟ್ಟು ನಂಬಿಕೆಯನ್ನು ಹುಟ್ಟಿಸುತ್ತದೆ.

ನಾಲ್ಕನೆಯದಾಗಿ, ಈ ಸಂಕಲನದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ನಾವುಗಳು ನೋಡುತ್ತಿರುವ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದ, ಇಲ್ಲಿನ ಬಡವರು-ಜನಸಾಮಾನ್ಯರು-ತಳ ಸಮುದಾಯಗಳ ಮೇಲಿನ ಹಿಂಸೆ, ದೌರ್ಜನ್ಯ, ಅನ್ಯಾಯಗಳ ಕೃತ್ಯಗಳನ್ನು ಖಂಡಿಸುತ್ತಲೇ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದದ ಅಮಾನವೀಯತೆಯ ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡುತ್ತಾರೆ. ಇವು ಮೇಲ್ನೋಟಕ್ಕೆ ಬಂಡಾಯ ಕವಿತೆಗಳಂತೆ ಕಂಡರೂ ಬಂಡಾಯದ ರೋಷ, ಆವೇಶಗಳು ಈ ಕವಿತೆಗಳಲ್ಲಿ ಇಲ್ಲ. ಇಲ್ಲಿ ಕಾರುಣ್ಯ, ವಿಷಾದ, ಅರ್ತತೆಯೆ ಸ್ಥಾಯಿಗುಣಗಳಾಗಿವೆ.

ಕಡೆಯದಾಗಿ, ಹೇಮಂತ್ ಈ ಸಂಕಲನದಲ್ಲಿ ಎರಡು ಕವಿತೆಗಳನ್ನು ಅನುವಾದಿಸಿದ್ದಾರೆ. ಆಫ್ರಿಕಾ ಮೂಲದ ಬರಹಗಾರ ಚಿನುವಾ ಅಚಿಬೆಯ ಒಂದು ಕವಿತೆ. ಅಕಾವ್ಯವನ್ನು ಕಾವ್ಯ ಜಗತ್ತಿಗೆ ಪರಿಚಯಿಸಿದ ನೆರೂಡನ ಒಂದು ಕವಿತೆ. ಎರಡೂ ಭಿನ್ನ ವಿಚಾರಗಳ ಕವಿತೆಗಳು. ಇವು ಕನ್ನಡದವೇ ಎಂಬಂತೆ ಅನುವಾದಗೊಂಡಿವೆ. ಹೇಮಂತ್ ಉತ್ತಮ ಅನುವಾದಕರೂ ಆಗಬಹುದು ಎಂಬ ಸೂಚನೆಗಳು ಈ ಅನುವಾದದಲ್ಲಿ ಕಾಣಬಹುದು.

ಕಾವ್ಯ ಮುಲಾಜಿನಿಂದ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಕಾವ್ಯದ ಬಗ್ಗೆ ಮಾತನಾಡುವಾಗ, ಬರೆಯುವಾಗಲೂ ಕೂಡ ಮುಲಾಜಿಗೆ ಒಳಗಾಗಿ ಮಾತನಾಡಬಾರದು ಎನ್ನುವ ಎಚ್ಚರ ನನ್ನನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಕವಿ ಹೇಮಂತ್ ಅವರ ಈ ಸಂಕಲನದಲ್ಲಿ ಟೆಕ್ನಿಕಲ್ ದೃಷ್ಟಿಯಿಂದ ಕವಿತೆ ಪರವಾಗಿಲ್ಲ ಅನ್ನಿಸಿದರೂ ಆಶಯದ ದೃಷ್ಟಿಯಿಂದ ಕೆಲವು ಕೆಟ್ಟ ಪದ್ಯಗಳೂ ಇವೆ. ಉದಾಹರಣೆಗೆ ಗಂಡಿನ ಮನೋಧರ್ಮವನ್ನು ಢಾಳಾಗಿ ಕಾಣಿಸುವ ’ನಿವೇದನೆ’ ಕವಿತೆ. ಇಂತಹ ಕವಿತೆಗಳನ್ನು ಹೇಮಂತ್ ಬರೆಯದಿದ್ದರೆ ಒಳ್ಳೆಯದು. ಹಾಗೆಯೇ ’ದೇಶಪ್ರೇಮ’ ಎಂಬ ಚುಟುಕು ಪದ್ಯ.

ಈ ಮಿತಿಯ ನಡುವೆಯೂ ಹಲವು ಉತ್ತಮ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟಿರುವ ಹೇಮಂತ್‌ಗೆ ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ಸಂಕಲನದಲ್ಲಿ ಇನ್ನಷ್ಟು ಉತ್ತಮ ಕವಿತೆಗಳನ್ನು ಕೊಡುವಂತಾಗಲಿ ಎಂದು ಆಶಿಸುತ್ತೇನೆ.

ಎಚ್ ಎಸ್ ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...