Homeಮುಖಪುಟಮರುಕಳಿಸಿದ ಸರ್ವಾಧಿಪತ್ಯದ ಅಪಾಯ

ಮರುಕಳಿಸಿದ ಸರ್ವಾಧಿಪತ್ಯದ ಅಪಾಯ

- Advertisement -
- Advertisement -

ಆಳುವ ಸರ್ವಾಧಿಕಾರಿಗಳ ಹುಟ್ಟು ಮತ್ತು ಜನ ಅವರನ್ನು ಸ್ವೀಕರಿಸುವುದರ ಕುರಿತು ಹಲವಾರು ಚಿಂತಕರು ಚಿಂತನೆ ನಡೆಸಿದ್ದಾರೆ. ಅವರಲ್ಲಿ ಬಹುಶಃ ಹನ್ಹಾ ಅರೆಂಟ್ (Hannah Arendt) ಅತ್ಯಂತ ಮುಖ್ಯರಾದವರು.

******

ಹನ್ಹಾ ಅರೆಂಟ್ ಮತ್ತು ಭೂತಗಳ ಒಗಟು ಬಿಡಿಸುವುದು

ಇಪ್ಪತ್ತೊಂದನೇ ಶತಮಾನದ ಪ್ರಪಂಚವು ಇಪ್ಪತ್ತನೇ ಶತಮಾನದ ಪ್ರಪಂಚಕ್ಕಿಂತ ತುಂಬಾ ಭಿನ್ನವಾಗಿದೆ. ಕಳೆದ ನೂರು ವರ್ಷಗಳಲ್ಲಿ ವ್ಯಕ್ತಿವಾದದ ಸ್ವರೂಪವು ಬದಲಾಗಿದೆ. ’ಬಂಡವಾಳ’ದ ಗುಣಸ್ವಭಾವವೂ ಬದಲಾಗಿದೆ. ನಗರ ಜನವಸತಿಗಳ ಸಂಕೀರ್ಣತೆಗಳು ಕೂಡಾ ಬದಲಾಗಿವೆ. ಹೀಗಿದ್ದರೂ, ಇಪ್ಪತ್ತನೇ ಶತಮಾನದ ಗುಣಸ್ವರೂಪಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ. ಈ ಕಾಲದ ಅನಿಯಂತ್ರಿತವಾದ ಸ್ಥಿತಿ ಮತ್ತು ಸರ್ವಾಧಿಕಾರದ ಜಾಗತಿಕ ಬೆದರಿಕೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಡಾಲ್ಫ್ ಹಿಟ್ಲರ್ ಮತ್ತು ಜೋಸೆಫ್ ಸ್ಟಾಲಿನ್ ಆಡಳಿತದ ಕಾಲದಿಂದಲೂ, ಆಳುವ ಸರ್ವಾಧಿಕಾರಿಗಳ ಹುಟ್ಟು ಮತ್ತು ಜನ ಅವರನ್ನು ಪ್ರವಾದಿಗಳಂತೆ ಸ್ವೀಕರಿಸುವುದರ ಕುರಿತು ಹಲವಾರು ಚಿಂತಕರು ಚಿಂತನೆ ನಡೆಸಿದ್ದಾರೆ. ಇಂತಹ ಚಿಂತಕರಲ್ಲಿ ಬಹುಶಃ ಹನ್ಹಾ ಅರೆಂಟ್ ಅತ್ಯಂತ (1906-1975) ಮುಖ್ಯರಾದವರು.

ಅಡಾಲ್ಫ್ ಹಿಟ್ಲರ್

ಎರಡನೇ ಮಹಾಯುದ್ಧದ ಮತಿಹೀನ ಹಿಂಸಾಚಾರ ಮತ್ತು ಹಿಟ್ಲರನ ಥರ್ಡ್ ರೈಖ್ (Third Reich) ಆಡಳಿತದಲ್ಲಿ ಯಹೂದಿಗಳು, ಪೋಲರು, ಜಿಪ್ಸಿಗಳು ಮತ್ತು ಇತರ ಬಿಳಿಯರಲ್ಲದ ಜನರನ್ನು ನಡೆಸಿಕೊಂಡ ಅಮಾನವೀಯ ರೀತಿಗಳನ್ನು ಕಣ್ಣಾರೆ ನೋಡಿದವರೂ, ಹಿಂದಿನ ಯುಎಸ್‌ಎಸ್‌ಆರ್‌ನ ಸ್ಟಾಲಿನ್‌ವಾದಿ ಆಡಳಿತದಲ್ಲಿ ದೊಡ್ಡ ಸಂಖ್ಯೆಯ ಜನರ ಅಂತ್ಯವನ್ನೂ, ಲಕ್ಷಾಂತರ ರೈತಾಪಿ ವರ್ಗದ ಜನರ ಸರ್ವನಾಶದ ಕುರಿತು ಆಳವಾಗಿ ಚಿಂತನೆ ನಡೆಸಿದವರೂ ಆದ ಅರೆಂಟ್, ಸರ್ವಾಧಿಕಾರಿ ಆಡಳಿತಗಳ ಮನಸ್ಥಿತಿ ಮತ್ತು ರಾಜಕೀಯದ ಕುರಿತು ಅಭೂತಪೂರ್ವವಾದ ಒಳನೋಟಗಳನ್ನು ಅಭಿವೃದ್ಧಿಪಡಿಸಿದ್ದಾರೆ.

’ದಿ ಒರಿಜಿನ್ಸ್ ಆಫ್ ಟೊಟಾಲಿಟೇರಿಯನಿಸಂ’ (1951) ಮತ್ತು ’ದಿ ಹ್ಯೂಮನ್ ಕಂಡಿಷನ್’ ಪುಸ್ತಕಗಳಲ್ಲಿ ಅವರು ಇಪ್ಪತ್ತನೇ ಶತಮಾನಕ್ಕೆ ವಿಶಿಷ್ಟವಾದ ಸರ್ವಾಧಿಕಾರಿ ಪ್ರವೃತ್ತಿಯ ಕುರಿತು ಆಳವಾದ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದಾರೆ. ಅದನ್ನು ಅವರು ಹಿಂದಿನ ಕಾಲಘಟ್ಟಗಳ ಊಳಿಗಮಾನ್ಯ, ಪಾಳೇಗಾರಿ ಹಿಂಸಾಚಾರ ಮತ್ತು ಯುದ್ಧಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಿ, ಗುರುತಿಸಿದ್ದಾರೆ. ಇಪ್ಪತ್ತನೇ ಶತಮಾನದ ಸರ್ವಾಧಿಪತ್ಯವು ಹೇಗೆ ಭಯ-ಭೀತಿ ಮತ್ತು ಹೆಚ್ಚು ಮುಖ್ಯವಾಗಿ ತಾತ್ವಿಕವಾದ ಹುಸಿ ಕಲ್ಪನೆಯ ಸಿದ್ಧಾಂತದ ತಳಹದಿಯ ಮೇಲೆ ಕಟ್ಟಲಾದಂತದ್ದು ಎಂದು ಅವರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.

ಅವರ ಅಭಿಪ್ರಾಯದ ಪ್ರಕಾರ, ಹೊಸ ಸರ್ವಾಧಿಕಾರಿ ಪ್ರಭುತ್ವವು ಒಂದು ಭಾರೀ ಐತಿಹಾಸಿಕ ಅನ್ಯಾಯದ ಮತ್ತು ಅವಮಾನದ ಕಲ್ಪಿತ ಭಾವನೆಯ ತಳಹದಿಯ ಮೇಲೆ ಜೀವತಳೆದು, ಪ್ರಭುತ್ವದ ಹೆಸರಿನಲ್ಲಿ ಕೆಲಸ ಮಾಡುವ ಅನೌಪಚಾರಿಕವಾದ ಗುಂಪುಗಳ ಮೂಲಕ ಪ್ರತೀಕಾರ ಮತ್ತು ಸೇಡು ತೀರಿಸುವ ಭರವಸೆ ನೀಡುತ್ತದೆ. ಇದು ಬಹುಸಂಖ್ಯಾತ ಜನರ ಸ್ಥಾನಮಾನವನ್ನು, “ಐತಿಹಾಸಿಕವಾಗಿ ಅನ್ಯಾಯಕ್ಕೆ ಒಳಗಾದದ್ದರಿಂದ” “ಅನ್ಯಾಯ ಮಾಡಬಲ್ಲ ಸಾಮರ್ಥ್ಯದ” ಸ್ಥಾನಮಾನಕ್ಕೆ ಏರಿಸುವ ಭರವಸೆಯ ಮೂಲಕ ಭಾರೀ ಸಂಖ್ಯೆಯಲ್ಲಿ ಜನಸಮೂಹವನ್ನು ಆಕರ್ಷಿಸಿತು; ಆದರೆ ಆ ಪರಮೋಚ್ಚ ನಾಯಕನಿಗೆ ಆ ಜನಸಮೂಹದ ಕುರಿತು ಅಸಡ್ಡೆಯ ಭಾವನೆಯ ಹೊರತು ಬೇರೇನೂ ಇರಲಿಲ್ಲ. ಈ ಭರವಸೆಗಳಿಂದ ಆಕರ್ಷಿತರಾದ ಬಹುಸಂಖ್ಯಾತ ಜನರು ತಮ್ಮ ನಾಯಕನ ಯಾವುದೇ ಪ್ರತ್ಯಕ್ಷವಾದ ನಿರ್ದಿಷ್ಟ ಆದೇಶ ಇಲ್ಲದೆಯೇ “ಹಿಂದಿನ ಕಾಲ್ಪನಿಕ ಅನ್ಯಾಯದಾತರಿಗೆ” ಅನ್ಯಾಯವೆಸಗಲು ಸಿದ್ಧರಾದರು.

ಇದು ಒಂದು ರಾಷ್ಟ್ರಕ್ಕೆ ’ಇತಿಹಾಸದ ಬೀಗ ತೆರೆಯುವ ಕೀಲಿಗೈ’ ಒದಗಿಸಿತು- ಏಕೆಂದರೆ, ದೇಶವೆಂದರೆ, ’ಅನುಪಮ ಆಯ್ಕೆ’, ಎಂಬುದೇ ಆ ನಾಯಕನ ಘೋಷಿತ ಜೀವನ ಧ್ಯೇಯವಾಗಿತ್ತು. ಭಯ ಉತ್ಪಾದಿಸುವ ಆತನ ಅಧಿಕಾರವು- ಆತ ಬಹುಸಂಖ್ಯಾತ ಸಮುದಾಯದ ವಿರುದ್ಧ ದ್ವೇಷಪೂರಿತ ಗುರಿಯ ಸಾಧನೆಗಾಗಿಯೇ ಜನ್ಮವೆತ್ತಿದ್ದಾನೆ ಎಂದು ಹೇಳಿಕೊಳ್ಳುವಷ್ಟು ಬೆಳೆದಿತ್ತು. ಅವರು ಆತನನ್ನು ಶ್ಲಾಘಿಸಿದರು- ಆತನ ಕೃತ್ಯಗಳು ತಮಗೆ ಹಾನಿ ಮಾಡುತ್ತವೆ, ತಮ್ಮ ಕುಟುಂಬಗಳನ್ನು ನಾಶ ಮಾಡುತ್ತವೆ, ಸಮಾಜವನ್ನು ನಿರಂತರವಾಗಿ ಬೆಳೆಯುವ ದ್ವೇಷದ ವಾತಾವರಣಕ್ಕೆ ತಳ್ಳುತ್ತದೆ ಎಂದು ಗೊತ್ತಿದ್ದರೂ ಕೂಡಾ.

ಹನ್ಹಾ ಅರೆಂಟ್

ಇಪ್ಪತ್ತನೇ ಶತಮಾನದ ದ್ವೇಷಪ್ರೇರಿತ ಸರ್ವಾಧಿಕಾರಿ ಸರಕಾರಗಳ ಪರಮೋಚ್ಚ ನಾಯಕರ ಅಂತ್ಯ ಹೇಗಾಯಿತು ಮತ್ತು ಅವರ ನೆನಪಿನ ಜೊತೆಗೆ ಎಷ್ಟೊಂದು ಕಳಂಕದ ಕೊಳೆ ಅಂಟಿಕೊಡಿದೆ ಎಂಬುದು ಪ್ರಪಂಚಕ್ಕೇ ಗೊತ್ತಿದೆ. ಹೀಗಿದ್ದರೂ, ಒಂದು ಶತಮಾನಕ್ಕೂ ಕಡಿಮೆ ಅವಧಿಯಲ್ಲಿ ಮತ್ತೊಮ್ಮೆ ಪ್ರಪಂಚದಾದ್ಯಂತ ಸರ್ವಾಧಿಕಾರಿ ಆಧಿಪತ್ಯಗಳು ಹುಟ್ಟಿಬರುತ್ತಿವೆ. ಈ ವಿದ್ಯಮಾನವನ್ನು ಕೇವಲ ’ಬಲ’ ಮತ್ತು ’ಎಡ’ ರಾಜಕೀಯ ಗುಂಪುಗಳಲ್ಲಿ ಮಾತ್ರ ಇರಿಸುವುದರ ಮೂಲಕ ಆರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಹೊಟ್ಟೆಬಾಕ ಕಾರ್ಪೊರೆಟ್ ಬಂಡವಾಳವಾದದ ಅಗತ್ಯ ವಿಸ್ತರಣೆಯೆಂದು ನೋಡುವುದರ ಮೂಲಕ ಪೂರ್ಣವಾಗಿ ಅರ್ಥ ಮಾಡಿಕೊಳ್ಳಲೂ ಆಗದು. ಇಪ್ಪತ್ತೊಂದನೇ ಶತಮಾನದ ಸರ್ವಾಧಿಪತ್ಯದ ಬ್ರಾಂಡುಗಳು ಕೃತಕ ಬುದ್ಧಿಮತ್ತೆಯಿಂದ ನೆರವು ಪಡೆಯುವ ಹೊಸ ಸವಾಲನ್ನೂ ಹೊಂದಿದೆ ಎಂದೂ ಹೇಳಬೇಕಾಗುತ್ತದೆ; ಮತ್ತು ಇದು ಸಮಸ್ಯೆಯ ಕೇವಲ ಒಂದು ಭಾಗ ಮಾತ್ರ.

ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಮೆಥಿಯಸ್ ಡೆಸ್ಮೆಟ್ (Mattias Desmet) ಅವರು ಈಗ ಇಪ್ಪತ್ತೊಂದನೇ ಶತಮಾನದ ವ್ಯಾಪಕ ಸರ್ವಾಧಿಪತ್ಯಗಳಿಗೆ ಒಂದು ವಿವರಣೆಯನ್ನು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಪ್ರಕಟವಾದ, ಈಗ ಇಂಗ್ಲಿಷ್ ಅನುವಾದದಲ್ಲಿ ಲಭ್ಯವಿರುವ ಪುಸ್ತಕ ’ದಿ ಸೈಕಾಲಜಿ ಆಫ್ ಟೊಟಾಲಿಟೇರಿಯನಿಸಂ’ನಲ್ಲಿ ಅವರು, ಪ್ರಪಂಚದಾದ್ಯಂತ ಜನರು- ಚೇತರಿಸಲಾಗದ ಏಕಾಂಗಿತನದಿಂದ ಬಳಲುತ್ತಿದ್ದಾರೆ (ಇದು ಅರೆಂಟ್ ಅವರಿಂದ ಪಡೆದ ಒಂದು ಅಂಶ) ಮತ್ತು ಅದು ಅಪಾಯಗಳನ್ನು ಎದುರಿಸಲು ಅವರನ್ನು ಅಸಮರ್ಥರನ್ನಾಗಿಸಿದೆ ಎಂದು ಸೂಚಿಸುತ್ತಾರೆ. ಅಪಾಯವನ್ನು ತಡೆಯುವುದು ಮತ್ತು ಅಪಾಯವನ್ನು ಶಮನ ಮಾಡುವುದಕ್ಕೆ ತಹತಹಿಸುವುದು- ಅವರ ದೃಷ್ಟಿಯಲ್ಲಿ ಅತಿ ವ್ಯಾಪಕವಾಗಿ ಹರಡುತ್ತಿರುವ ಒಂದು ಗುಣಸ್ವಭಾವವಾಗಿಬಿಟ್ಟಿದೆ. ಇದನ್ನು ಅವರು ’ಇನ್ಶೂರೆನ್ಸ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಇದು ಬರೇ ಜೀವ ಅಥವಾ ಆಸ್ತಿಗೆ ಮಾತ್ತವಲ್ಲ; “ವಿಮಗೂ ವಿಮೆ ಮಾಡುವುದು” ಎಂಬಂತಹ ಸಾಮಾನ್ಯ ಪ್ರವೃತ್ತಿಯಾಗಿದೆ. ಈಗ ನಾಗರಿಕರು- ತಮ್ಮ ಜೀವನ ಅಪಾಯರಹಿತವಾಗಿರುವಂತೆ ಮಾಡಲು ಪ್ರಭುತ್ವವು ತಮ್ಮ ಮೇಲೆ ನಿಯಂತ್ರಣಗಳನ್ನು ಹೇರುವುದನ್ನು ಎದುರುನೋಡುತ್ತಾರೆ ಎಂದವರು ವಾದಿಸುತ್ತಾರೆ. ಇಂಥ ಒಂದು ಪರಿಸ್ಥಿತಿಯಲ್ಲಿ ಒಬ್ಬ ಚತುರ ರಾಜಕಾರಣಿಯು ಮೊದಲಿಗೆ ಅನಾಮಿಕವಾದ ಶತ್ರುಗಳ (ಭಯೋತ್ಪಾದಕರು, ಅನ್ಯಗ್ರಹ ಜೀವಿಗಳು ಮತ್ತೀಗ ವೈರಸ್ ಕೂಡಾ) ಭಯ ಹುಟ್ಟಿಸಿ, ಮತ್ತು ನಂತರ ಕಠಿಣವಾದ ನಿಯಂತ್ರಣಗಳನ್ನು ಹೇರುವುದರ ಮೂಲಕ ನಾಗರಿಕರಿಗೆ ಈ ಕಾಲ್ಪನಿಕ ಶತ್ರುಗಳ ವಿರುದ್ಧ ರಕ್ಷಣೆಯ ಭರವಸೆ ನೀಡಿ, ತ್ವರಿತವಾಗಿ ಮೇಲೇರುತ್ತಾನೆ. ಈ ಪ್ರಕ್ರಿಯೆಯಲ್ಲಿ ಖಾಸಗಿತನ, ಸ್ವಾಯತ್ತತೆ, ವ್ಯಕ್ತಿಗಳ ಮಾನಸಿಕ ಸ್ವಸ್ಥತೆ ಕೂಡಾ ಬಲಿಪಶುಗಳಾಗುತ್ತವೆ. ಆಗ ಪ್ರಭುತ್ವವನ್ನು ವ್ಯಕ್ತಿಗಳ ಯಾವುದೇ ಸಾಂಪ್ರದಾಯಿಕ ಹಕ್ಕುಗಳಿಗಿಂತ ಹೆಚ್ಚು ಮಹತ್ವದ್ದು ಎಂಬುದಾಗಿ ನೋಡಲಾಗುತ್ತದೆ.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಇಪ್ಪತ್ತೊಂದನೇ ಶತಮಾನದ ಬ್ರಾಂಡಿನ ಸರ್ವಾಧಿಪತ್ಯವು ಬಹುಸಂಖ್ಯಾತರನ್ನು ರಕ್ಷಿಸುವ ಹೆಸರಿನಲ್ಲಿ ಜನತೆಯ ಮೇಲೆ ನಿಯಂತ್ರಣ ಸಾಧಿಸುತ್ತದೆ. ಅದು ಜೊತೆಗೆಯೇ ಅಲ್ಪಸಂಖ್ಯಾತರ ರಾಕ್ಷಸೀಕರಣ ಕೂಡಾ ಮಾಡುತ್ತದೆ. ಕೊರೊನಾ ಮಹಾಮಾರಿ ಮತ್ತು ಆಗ ವಿವಿಧ ದೇಶಗಳಲ್ಲಿ ಹೇರಲಾದ ನಿಯಂತ್ರಣಗಳನ್ನು ಚರ್ಚಿಸುವ ಮೂಲಕ ಡೆಸ್ಮೆಟ್ ಅವರು, ಹೇಗೆ ಅಪಾಯಗಳ ಪರಿಹಾರ, ತಡೆ, ಶಮನಕ್ಕಾಗಿ ಸಾಮಾಜಿಕ ಮತ್ತು ರಾಜಕೀಯವಾಗಿ ತೆತ್ತಬೇಕಾದ ಬೆಲೆ – ಜನರು ಸ್ವಂತವಾಗಿ ಈ ಅಪಾಯಗಳನ್ನು ಎದುರಿಸಬೇಕಾಗಿದ್ದಲ್ಲಿ ತೆತ್ತಬೇಕಿದ್ದ ಬೆಲೆಗಿಂತ ಹೆಚ್ಚಾಗಿರುತ್ತದೆ ಎಂಬುದನ್ನು ತೋರಿಸಿಕೊಡುತ್ತಾರೆ.

ಮೆಥಿಯಸ್ ಡೆಸ್ಮೆಟ್

ಸಂಕ್ಷಿಪ್ತವಾಗಿ, ಇಪ್ಪತ್ತನೇ ಶತಮಾನದ ಸರ್ವಾಧಿಪತ್ಯವು ತಥಾಕಥಿತ ಐತಿಹಾಸಿಕ ಅನ್ಯಾಯದ ಗ್ರಹಿಕೆಯಿಂದ ಬೆಳೆದು ಬಂದಿದ್ದರೆ, ಅದರ ಇಪ್ಪತ್ತೊಂದನೇ ಶತಮಾನದ ಆವೃತ್ತಿಯು- ಜನರ ಪ್ರತ್ಯೇಕೀಕರಣದ ಗ್ರಹಿಕೆ, ಭಯ ಮತ್ತು ಅಪಾಯಗಳನ್ನು ಎದುರಿಸಲು ಅವರ ತೀವ್ರ ಹಿಂಜರಿಕೆಗಳಿಂದ ಹುಟ್ಟಿಕೊಂಡಿದೆ.

ಕಳೆದ ಶತಮಾನದ ಸರ್ವಾಧಿಕಾರಿಗಳು ಕಾರಣವಾದ ಹಿಂಸೆಯು ಕಣ್ಣಿಗೆ ಹೆಚ್ಚು ಕಾಣುವಂತದ್ದೂ, ಬಣ್ಣದಲ್ಲಿ ಹೆಚ್ಚು ರಕ್ತಕೆಂಪೂ ಆಗಿತ್ತು. ಆದರೆ, ಇಪ್ಪತ್ತೊಂದನೇ ಶತಮಾನದ ಪರಮೋಚ್ಚ ನಾಯಕರು ಛೂಬಿಟ್ಟಿರುವ ಹಿಂಸಾಚಾರವು ಕೇವಲ ರಕ್ತಸಿಕ್ತವಾಗಿರುವುದಲ್ಲ. ಅದು ತಂತ್ರಜ್ಞ (technocratic) ಪ್ರಭುತ್ವದ ಕ್ರೂರವಾದ ನಿಯಂತ್ರಣಗಳನ್ನೂ ಹುಟ್ಟುಹಾಕಿದೆ. ಮತ್ತು ಅದು ದೊಡ್ಡ ಪ್ರಮಾಣದ ಕಲ್ಪಿತ (ಸುಳ್ಳು) ಮಾಹಿತಿಯನ್ನು ಉತ್ಪಾದಿಸುವ ಮೂಲಕ ಸಮರ್ಥನೆಯನ್ನು ಕಂಡುಕೊಳ್ಳುತ್ತಿದೆ.

ನಾವು ಇಪ್ಪತ್ತೊಂದನೇ ಶತಮಾನದ ಮೊದಲ ಕಾಲು ಭಾಗವನ್ನು ಪೂರೈಸುವುದಕ್ಕೆ ಹೆಚ್ಚೇನೂ ದೂರದಲ್ಲಿಲ್ಲ. ಹಿಂದಿನ ಎಲ್ಲಾ ಆಡಳಿತಗಳಂತೆ, ಭಾರತದಲ್ಲಿ ಈಗಿರುವ ಆಡಳಿತವೂ ಇತಿಹಾಸದ ಕತೆಯಾಗಲಿದೆ ಎಂದು ನಮಗೆ ಗೊತ್ತಿದೆ. ಆದರೆ, ಇದು ನಿರ್ದಿಷ್ಟವಾಗಿ ಯಾವಾಗ ಅಥವಾ ಎಷ್ಟು ಬೇಗನೇ ಸಂಭವಿಸಬಹುದು ಎಂದು ನಮಗೆ ಗೊತ್ತಿಲ್ಲ ಎಂಬುದು ನಿಜ. ಆದರೆ, ಅದು ಮುಗಿದಾಗ ವಿದ್ವಾಂಸರು ಮತ್ತು ಇತಿಹಾಸಕಾರರು 2014ರಿಂದ ಭಾರತವು ಎದುರಿಸಿದ ಸರ್ವಾಧಿಪತ್ಯದ ಉಗಮ ಮತ್ತು ಅದರ ಸ್ಪಷ್ಟವಾದ ಗುಣಸ್ವಭಾವಗಳನ್ನು ಕುರಿತು ಚಿಂತನೆ ಮಾಡಬೇಕು. ಆಗ ಅವರು ಭಾರತದ ಸರ್ವಾಧಿಪತ್ಯದ ತಳಿಯು ಇಪ್ಪತ್ತನೇ ಶತಮಾನದ ಸರ್ವಾಧಿಪತ್ಯ ಮತ್ತು ಇಪ್ಪತ್ತೊಂದನೇ ಶತಮಾನದ ಸರ್ವಾಧಿಪತ್ಯಗಳ ವಿಚಿತ್ರ ಮಿಶ್ರಣವಾಗಿರುವುದನ್ನು ಕಂಡುಕೊಳ್ಳುವ ಹೆಚ್ಚಿನ ಸಾಧ್ಯತೆಯಿದೆ.

ಭಾರತದಲ್ಲಿ ಜೀವನ ಮತ್ತು ಅಭಿವ್ಯಕ್ತಿಯ ಪ್ರತಿಯೊಂದು ರೂಪದಲ್ಲಿ- ಹಲವು ಶತಮಾನಗಳು ಜೊತೆಯಾಗಿ ಬದುಕಿವೆ. ಈ ಹಾದಿಯಲ್ಲಿ ನಾವು ದಬ್ಬಾಳಿಕೆ, ಪಿತೃಪ್ರಧಾನತೆ, ತಾರತಮ್ಯ ಮತ್ತು ಸರ್ವಾಧಿಕಾರಗಳನ್ನು ಎದುರಿಸಿದ್ದೇವೆ. ಅರೆಂಟ್ ಮತ್ತು ಡಿಸ್ಮೆಟ್ ಅವರ ಕೃತಿಗಳು- ಭಾರತವನ್ನು ಪ್ರಜಾಪ್ರಭುತ್ವದ ಮಾತೆ ಎಂದು ಹೇಳಿಕೊಳ್ಳುವವರು, ತಾಯಿ ಮತ್ತು ಮಗಳನ್ನು ಭಯ ಮತ್ತು ಕಡು ದುಃಖದಲ್ಲಿ ನಿಲ್ಲುವಂತೆ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗಬಹುದು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಜಿ.ಎನ್. ದೇವಿ
ಜಿ.ಎನ್. ದೇವಿಯವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ- ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್‌ನ ಒಬೈದ್ ಸಿದ್ದಿಕಿ ಪೀಠದ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...