Homeಮುಖಪುಟದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ

ದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ

- Advertisement -
- Advertisement -

ಕನ್ನಡದ ಬಕಾಲ ಮುನಿ ಎಂದೇ ಹೆಸರಾದ ಕೆ.ಬಿ.ಸಿದ್ದಯ್ಯನವರ ’ದಕ್ಲಕಥಾ ದೇವಿ ಕಾವ್ಯ’ ಈಗ ರಂಗಭೂಮಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ತಳ ಸಮುದಾಯಗಳ ಯುವಜನರೇ ಸೇರಿ ಕಟ್ಟಿರುವ ’ಜಂಗಮ ಕಲೆಕ್ಟಿವ್’ ತಂಡ ಈ ಮಹತ್ತರ ರಂಗಸಾಧ್ಯತೆಯನ್ನು ಆಗುಮಾಡಿದೆ. ನೀನಾಸಂ ಅಲ್ಲಿ ಕಲಿತು ಸಿಂಗಾಪುರದಲ್ಲಿ ಹೆಚ್ಚಿನ ರಂಗಾಧ್ಯಯನ ಮಾಡಿ ಬಂದ ಕನ್ನಡದ ಇವತ್ತಿನ ಸೂಕ್ಷ್ಮ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ’ದಕ್ಲಕಥಾ ದೇವಿ ಕಾವ್ಯ’ವನ್ನು ನಾಟಕವಾಗಿಸಿದ್ದಾರೆ.

ಎಲ್ಲಾ ಜಾನಪದ ಕಾವ್ಯಗಳೂ ಅತ್ಯದ್ಭುತವಾದ ರಂಗ ಸಾಧ್ಯತೆಯನ್ನು ಹೊಂದಿರುವಂಥವು. ಅದರಲ್ಲೂ ಪದಕಟ್ಟುವಿಕೆಯಲ್ಲೇ ತಾಳಪ್ರಜ್ಞೆಯನ್ನು ಅಂತರ್ಗತವಾಗಿ ಒಳಗೊಂಡಿರುವ ಸಿದ್ದಯ್ಯನವರ ಬಕಾಲ, ದಕ್ಲಕಥಾ ದೇವಿಯಂತಹ ಕಾವ್ಯಗಳನ್ನು ನಾಟಕ ಮಾಡುವುದೆಂದರೆ, ಅದನ್ನು ಆಗುಮಾಡುವವರಿಗೆ ಕಾವ್ಯದ ಆಳಕ್ಕಿಳಿದು ರೂಪಕಗಳನ್ನು ಕಟ್ಟಿಕೊಳ್ಳುವ ಅಂತಃಶಕ್ತಿ ಬೇಕು. ಇದರ ಜೊತೆಗೆ ತಳ ಸಮುದಾಯಗಳ ಚಲನಶೀಲತೆ, ಸಾಂಸ್ಕೃತಿಕ ಎಚ್ಚರ, ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಅರಿವು ಮತ್ತು ಇವೆಲ್ಲವುಗಳನ್ನು ನಟರ ನೆರವಿನಿಂದ ರಂಗದ ಮೇಲೆ ತರಬಲ್ಲ ಕಸುವು ಇರಬೇಕು. ಲಕ್ಷ್ಮಣ್ ಈ ಕಸುವನ್ನು ’ದಕ್ಲಕಥಾ ದೇವಿ ಕಾವ್ಯ’ದ ಮೂಲಕ ಕನ್ನಡಿಗರ ಗಮನಕ್ಕೆ ತಂದಿದ್ದಾರೆ.

ಕೆ.ಬಿ.ಸಿದ್ದಯ್ಯ

ಕೆ.ಬಿ.ಸಿದ್ದಯ್ಯನವರ ಮಾತುಗಳ ಮೂಲಕ ಶುರುವಾಗುವ ನಾಟಕ ತಮಟೆ ನುಡಿಸುತ್ತಾ ನೆಲದ ಮೇಲೆ ಬಿದ್ದ ನೋಟನ್ನು ಕಣ್ಣರೆಪ್ಪೆಯಲ್ಲಿ ಎತ್ತಿಕೊಳ್ಳುವ ಪಾತ್ರಧಾರಿಯನ್ನು ಸ್ಪಟಿಕದ ಚೂರುಗಳ ಹಾಗೆ ಒಡೆಯುತ್ತಾ ಸಾಗುತ್ತದೆ. ಹಾಗೆ ಒಡೆದ ಪ್ರತಿಚೂರಿನಲ್ಲೂ ದಲಿತ ಬದುಕಿನ ಬಣ್ಣಗಳು ಪ್ರತಿಫಲಿಸುತ್ತದೆ. ದಕ್ಲಕಥಾ ದೇವಿಯ ಮಾತಿನ ಮಾಯಕಕ್ಕೆ ಇಡೀ ರಂಗಮಂಟಪ ನಾಲಿಗೆಯೊಣಗಿದ ಹಸುಗೂಸಿನ ಒಣ ತುಟಿಗಳ ಹಾಗೆ ನಿಧಾನಕ್ಕೆ ಪಸೆಯಾಡಲು ಶುರುವಿಟ್ಟುಕೊಳ್ಳುತ್ತದೆ. ನಾಟಕ ಘಟಿಸುತ್ತಾ ಘಟಿಸುತ್ತಾ ಪಾತ್ರಗಳೊಳಗೆ ಪಾತ್ರಗಳು ಒಡಮೂಡುತ್ತಾ ಸಮುದಾಯದೊಳಗಿನ ಸಮುದಾಯಗಳನ್ನು ಕಾಣಿಸುವ ಮಾಂತ್ರಿಕತೆ ತೆರೆದುಕೊಳ್ಳುತ್ತದೆ.

ಮಾದಿಗ ಸಮುದಾಯದ ಮಕ್ಕಳೆಂದೇ ನಂಬಿರುವ ದಕ್ಕಲರ ಕುಲಪುರಾಣವನ್ನು ನಿರೂಪಿಸುತ್ತಾ ಸಿದ್ದಯ್ಯನವರು ಮಾದಿಗ ಸಮುದಾಯದ ಕಾರುಣ್ಯದ ಹಾದಿಯನ್ನು ಬಿಚ್ಚಿಡುತ್ತಾರೆ. ಊರ ಹೊರಗೆ ನಿಂತು ಮಾದಿಗರ ಕೇರಿಯಲ್ಲಿ ಮಾತ್ರವೇ ಅನ್ನ ಬೇಡುವ ದಕ್ಕಲರು ಕಣ್ಣಿಗೆ ಕಾಣದಷ್ಟು ಸಣ್ಣ ಸಮುದಾಯವಾದರೂ ತಮ್ಮೊಳಗೆ ಇಡೀ ಜಗತ್ತಿಗೆ ಆಗುವಂಥಾ ಬೃಹತ್ತಾದ ಸಾಂಸ್ಕೃತಿಕ ಸಂಪತ್ತನ್ನು ಇರಿಸಿಕೊಂಡಿದ್ದಾರೆ. ಈ ಸಾಂಸ್ಕೃತಿಕ ಸಂಪತ್ತು ’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮೂಲಕ ಕನ್ನಡನಾಡಿನ ಸೀಳುರೋಗಕ್ಕೆ ಔಷಧಿಯಾಗಿ ಒದಗಿಬಂದಿದೆ. ಮಾದಿಗ ಸಮುದಾಯದ ಚಿಕ್ಕ ಕುಟುಂಬವೊಂದು ದಕ್ಕಲ ದೇವಿಯ ಕಥೆಯನ್ನು ಹೇಳುತ್ತಾ ಊರೂರು ಅಲೆದು ಬದುಕು ನಡೆಸುವ ಮತ್ತು ಕುಲಗಳನ್ನು ಕೂಡಿಸುತ್ತಾ ಸಾಗುವ ವಿಭಿನ್ನ ರಂಗತಂತ್ರವನ್ನು ನಿರ್ದೇಶಕರು ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ಕರ್ನಾಟಕದಲ್ಲಿ ಅದರಲ್ಲೂ ಬಯಲ ಸೀಮೆಯಲ್ಲಿ ಹೊಲೆಯ ಮಾದಿಗರ ಸಾಂಸ್ಕೃತಿಕ ಚಹರೆಗಳಾದ ತಮಟೆ ಮತ್ತು ಅರೆವಾದ್ಯಗಳನ್ನು ಇಡೀ ನಾಟಕದಲ್ಲಿ ಸೂಜಿ ದಾರದ ಹಾಗೆ ಬಳಸಲಾಗಿದೆ. ದಕ್ಕಲದೇವನು ತನ್ನ ಎಡಭುಜದ ಮೇಲೆ ತಮಟೆಯನ್ನೂ, ಬಲಭುಜದ ಮೇಲೆ ಅರೆಯನ್ನೂ ಹೊತ್ತುಕೊಂಡು ಅವುಗಳನ್ನು ನುಡಿಸುವ ತನ್ನಿಬ್ಬರು ಮಕ್ಕಳನ್ನು ಜೊತೆಗೂಡಿಸಿಕೊಂಡು ಲೋಕಸಂಚಾರ ಹೊರಡುತ್ತಾನೆ. ಇಡೀ ರಂಗಭೂಮಿಯನ್ನೇ ನಾವು ಲೋಕದ ವಿಸ್ತಾರವೆಂದು ಭಾವಿಸಿದರೆ, ಆ ರಂಗದ ಒಂದು ಮೂಲೆಯಲ್ಲಿ ಕೂತ ದಕ್ಕಲದೇವಿ ಇಡೀ ಲೋಕವನ್ನೇ ಆವರಿಸಿಕೊಳ್ಳುತ್ತಾಳೆ ಮತ್ತು ತನ್ನ ಗಂಡ, ಮಕ್ಕಳ ಯಾತ್ರೆ ಅವಳ ಅರಿವಿಗೆ ಬರುತ್ತಲೇ ಇರುತ್ತದೆ. ಈ ವಿಶಿಷ್ಟ ರಂಗತಂತ್ರವನ್ನು ನಿರ್ದೇಶಕರು ದಲಿತ ಸಮುದಾಯದ ಎಡ ಬಲ ಬಣಗಳ ನಡುವಿನ ವಿದ್ಯಮಾನಗಳನ್ನು ಗಮನಿಸುವ ಬಾಬಾಸಾಹೇಬರ ಕಣ್ಣುಗಳಂತೆ ಸೃಷ್ಟಿಸಿದ್ದಾರೆ. ಇದನ್ನು ಹೊಸ ಕಾಲದ ಹೊಸ ಪ್ರಜ್ಞೆಯ ಲಕ್ಷ್ಮಣ್ ಅಂತಹ ನಿರ್ದೇಶಕರು ಮಾತ್ರ ಮಾಡಲು ಸಾಧ್ಯ.

ದಲಿತರ ನೋವುಗಳನ್ನಷ್ಟೇ ಕಲಾತ್ಮಕ ಮಂಡನೆ ಮಾಡುವ ಮೂಲಕ ಕಟ್ಟಲು ಯತ್ನಿಸಿ ಸೋಲುತ್ತಿದ್ದವರ ಎದುರಿಗೆ ಲಕ್ಷ್ಮಣ್ ಗೆದ್ದಿದ್ದಾರೆ. ಅಥವಾ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಊರ ಹಬ್ಬಗಳಲ್ಲಿ ಗ್ರಾಮದೇವತೆಗೆಂದು ಬೆಳಗಿನ ಜಾವ ಕಡಿದ ಕೋಣದ ರಕ್ತದಲ್ಲಿ ಅನ್ನವನ್ನು ಕಲೆಸಿ ಊರಿನ ಸುತ್ತಲಿನ ಹೊಲಗಳಿಗೆ ಚೆಲ್ಲುವ ’ರಿಚ್ಯುವಲ್ ಈ ನಾಟಕದ ಕೇಂದ್ರಬಿಂದು.

ಕೆ.ಪಿ.ಲಕ್ಷ್ಮಣ್

ಇದರೊಟ್ಟಿಗೆ ದಕ್ಕಲ ಮಕ್ಕಳು ಊರಬೀದಿಯ ಅಂಚಿನಲ್ಲಿ ಮಾದಿಗರಿಂದ ಸಂಗ್ರಹಿಸುವ ಅನ್ನದ ಮಡಿಕೆಗಳನ್ನು ಒಡೆದು ಅನ್ನವನ್ನು ತಲೆಯ ಮೇಲೆ ಹೊತ್ತೊಯ್ಯುವ ರಿಚ್ಯುವಲ್ ಅನ್ನೂ ಕೂಡಿಸಲಾಗಿದೆ. ನಾಟಕ ಎಲ್ಲವನ್ನೂ ಅಭಿನಯಿಸುತ್ತಾ ಕೊನೆಯ ಘಟ್ಟಕ್ಕೆ ಬರುವಷ್ಟರಲ್ಲಿ ಭಾರತೀಯರು ಅವುಡುಗಚ್ಚಿ ಸಹಿಸಿಕೊಳ್ಳಬೇಕಾದ, ಆ ಮೂಲಕ ತಳ ಸಮುದಾಯಗಳ ನಡಿಗೆಗೆ ಹೆಜ್ಜೆ ಹೊಂದಿಸಬೇಕಾದ ಸಮಯ ಬಂದೇಬಿಡುತ್ತದೆ.

ಆ ಘಟ್ಟದಲ್ಲಿ ದಕ್ಲಕಥಾ ದೇವಿ ಭಾರತಮಾತೆಯಾಗಿಬಿಡುತ್ತಾಳೆ. ಈ ದೃಶ್ಯ ಚಮತ್ಕಾರ ನಡೆಯುವ ಮೊದಲು ಭಾರತೀಯ ಗಂಡಸರು ಮೈಗೂಡಿಸಿಕೊಳ್ಳಲೇಬೇಕಾದ ಹೆಣ್ತನದ ಮಾದರಿಯೊಂದು ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಗಂಡನ್ನು ಹೆಣ್ಣಾಗಿಸಿ, ಅವನ ’ಪುರುಷಾಹಂಕಾರವನ್ನು’ ಲಯಗೊಳಿಸಿ ಹೆಣ್ಣ ಕಣ್ಣನ್ನು ಮುಡಿಯುವ ಅದ್ಭುತ ಕಾವ್ಯದಂತೆ ಆ ದೃಶ್ಯ ಮೂಡಿಬಂದಿದೆ.

ಇದನ್ನೂ ಓದಿ: ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಇನ್ನು ಲಕ್ಷ್ಮಣ್ ಅವರ ಈ ಸಾಹಸಕ್ಕೆ ಕೈಜೋಡಿಸಿರುವ ನಟರು ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ನಾನು ನೋಡಿದ ಅತ್ಯದ್ಭುತ ಕಲಾವಿದರು. ದಕ್ಕಲದೇವನ ಪಾತ್ರ ಮಾಡುತ್ತಾ ಬೆರಗು ಹುಟ್ಟಿಸುವ ಸಂತೋಷ್ ದಿಂಡ್ಲೂರು, ದಕ್ಕಲದೇವಿ ಪಾತ್ರದ ಮೂಲಕ ನೆಲದವ್ವನೇ ಎದ್ದು ಬಂದಂತೆ ನಟಿಸುವ ಬಿಂದು ರಕ್ಷಿದಿ, ತಮಟೆ ಬಡಿಯುತ್ತಾ ಕಣ್ಣ ರೆಪ್ಪೆಯಲ್ಲಿ ನೋಟು ಎತ್ತುವ ಡಿಂಗ್ರಿ ಭರತ್, ಅರೆವಾದ್ಯದ ಮೂಲಕ ಮಾಂತ್ರಿಕ ಲೋಕವನ್ನೇ ಸೃಷ್ಟಿಸುವ ನರಸಿಂಹರಾಜು, ಗಂಗಮ್ಮನಾಗಿ ಧುಮ್ಮಿಕ್ಕುವ ರಮಿಕಾ ಚೈತ್ರ- ಈ ಎಲ್ಲರೂ ಅದ್ಬುತ ನಟರು. ಎಲ್ಲರೂ ನುರಿತ ಹಾಡುಗಾರರಾಗಿರುವುದು ಈ ನಾಟಕದ ಇನ್ನೊಂದು ಶಕ್ತಿ. ಇವರೆಲ್ಲರೊಂದಿಗೆ ಬೆಳಕಿನ ಮಂಜು ನಾರಾಯಣ್, ಡ್ರಾಮಟರ್ಜಿಯ ಮೋಹಿತ್, ವಸ್ತ್ರವಿನ್ಯಾಸದ ಶ್ವೇತಾರಾಣಿ, ನಿರ್ದೇಶನದಲ್ಲಿ ಸಹಾಯ ಮಾಡಿದ ಸ್ಕಂದ, ಶ್ರೀಹರ್ಷ ಮತ್ತು ಪೂರ್ವಿ ಕಲ್ಯಾಣಿ ಇವರೆಲ್ಲರೂ ಸೇರಿಕೊಂಡು ಕನ್ನಡ ರಂಗಭೂಮಿಗೆ ದಾರಿದೀಪವಾಗಬಲ್ಲ ನಾಟಕವೊಂದನ್ನು ಕೊಟ್ಟಿದ್ದಾರೆ.

ಭಾರತವನ್ನು ಮೇಲೆತ್ತುವ ಜವಾಬ್ದಾರಿಯನ್ನು ಹೊಂದಿರುವ ದಲಿತ ಸಮುದಾಯ ಒಟ್ಟಾಗಿ ಸಾಗಬೇಕಾದ ಬಾಬಾ ಸಾಹೇಬರ ಕನಸು ಕನ್ನಡದ ಕೆ.ಬಿ. ಸಿದ್ದಯ್ಯನವರ ಕಣ್ಣುಗಳಲ್ಲಿ ದೀಪವಾಗಿ ಉರಿಯುತ್ತಾ ತಲೆಮಾರುಗಳಿಗೆ ದಾರಿಯಾಗುತ್ತಿರುವುದನ್ನು ನೋಡಲು ನಾವು ’ದಕ್ಲಕಥಾ ದೇವಿ ಕಾವ್ಯ’ ನಾಟಕವನ್ನು ನೋಡಬೇಕು.

(’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮುಂದಿನ ಪ್ರದರ್ಶನ ನವೆಂಬರ್ 19, 2022 ಶನಿವಾರ ಸಂಜೆ 6:00 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿದೆ)

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...