Homeಮುಖಪುಟದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ

ದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ

- Advertisement -
- Advertisement -

ಕನ್ನಡದ ಬಕಾಲ ಮುನಿ ಎಂದೇ ಹೆಸರಾದ ಕೆ.ಬಿ.ಸಿದ್ದಯ್ಯನವರ ’ದಕ್ಲಕಥಾ ದೇವಿ ಕಾವ್ಯ’ ಈಗ ರಂಗಭೂಮಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ತಳ ಸಮುದಾಯಗಳ ಯುವಜನರೇ ಸೇರಿ ಕಟ್ಟಿರುವ ’ಜಂಗಮ ಕಲೆಕ್ಟಿವ್’ ತಂಡ ಈ ಮಹತ್ತರ ರಂಗಸಾಧ್ಯತೆಯನ್ನು ಆಗುಮಾಡಿದೆ. ನೀನಾಸಂ ಅಲ್ಲಿ ಕಲಿತು ಸಿಂಗಾಪುರದಲ್ಲಿ ಹೆಚ್ಚಿನ ರಂಗಾಧ್ಯಯನ ಮಾಡಿ ಬಂದ ಕನ್ನಡದ ಇವತ್ತಿನ ಸೂಕ್ಷ್ಮ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ’ದಕ್ಲಕಥಾ ದೇವಿ ಕಾವ್ಯ’ವನ್ನು ನಾಟಕವಾಗಿಸಿದ್ದಾರೆ.

ಎಲ್ಲಾ ಜಾನಪದ ಕಾವ್ಯಗಳೂ ಅತ್ಯದ್ಭುತವಾದ ರಂಗ ಸಾಧ್ಯತೆಯನ್ನು ಹೊಂದಿರುವಂಥವು. ಅದರಲ್ಲೂ ಪದಕಟ್ಟುವಿಕೆಯಲ್ಲೇ ತಾಳಪ್ರಜ್ಞೆಯನ್ನು ಅಂತರ್ಗತವಾಗಿ ಒಳಗೊಂಡಿರುವ ಸಿದ್ದಯ್ಯನವರ ಬಕಾಲ, ದಕ್ಲಕಥಾ ದೇವಿಯಂತಹ ಕಾವ್ಯಗಳನ್ನು ನಾಟಕ ಮಾಡುವುದೆಂದರೆ, ಅದನ್ನು ಆಗುಮಾಡುವವರಿಗೆ ಕಾವ್ಯದ ಆಳಕ್ಕಿಳಿದು ರೂಪಕಗಳನ್ನು ಕಟ್ಟಿಕೊಳ್ಳುವ ಅಂತಃಶಕ್ತಿ ಬೇಕು. ಇದರ ಜೊತೆಗೆ ತಳ ಸಮುದಾಯಗಳ ಚಲನಶೀಲತೆ, ಸಾಂಸ್ಕೃತಿಕ ಎಚ್ಚರ, ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಅರಿವು ಮತ್ತು ಇವೆಲ್ಲವುಗಳನ್ನು ನಟರ ನೆರವಿನಿಂದ ರಂಗದ ಮೇಲೆ ತರಬಲ್ಲ ಕಸುವು ಇರಬೇಕು. ಲಕ್ಷ್ಮಣ್ ಈ ಕಸುವನ್ನು ’ದಕ್ಲಕಥಾ ದೇವಿ ಕಾವ್ಯ’ದ ಮೂಲಕ ಕನ್ನಡಿಗರ ಗಮನಕ್ಕೆ ತಂದಿದ್ದಾರೆ.

ಕೆ.ಬಿ.ಸಿದ್ದಯ್ಯ

ಕೆ.ಬಿ.ಸಿದ್ದಯ್ಯನವರ ಮಾತುಗಳ ಮೂಲಕ ಶುರುವಾಗುವ ನಾಟಕ ತಮಟೆ ನುಡಿಸುತ್ತಾ ನೆಲದ ಮೇಲೆ ಬಿದ್ದ ನೋಟನ್ನು ಕಣ್ಣರೆಪ್ಪೆಯಲ್ಲಿ ಎತ್ತಿಕೊಳ್ಳುವ ಪಾತ್ರಧಾರಿಯನ್ನು ಸ್ಪಟಿಕದ ಚೂರುಗಳ ಹಾಗೆ ಒಡೆಯುತ್ತಾ ಸಾಗುತ್ತದೆ. ಹಾಗೆ ಒಡೆದ ಪ್ರತಿಚೂರಿನಲ್ಲೂ ದಲಿತ ಬದುಕಿನ ಬಣ್ಣಗಳು ಪ್ರತಿಫಲಿಸುತ್ತದೆ. ದಕ್ಲಕಥಾ ದೇವಿಯ ಮಾತಿನ ಮಾಯಕಕ್ಕೆ ಇಡೀ ರಂಗಮಂಟಪ ನಾಲಿಗೆಯೊಣಗಿದ ಹಸುಗೂಸಿನ ಒಣ ತುಟಿಗಳ ಹಾಗೆ ನಿಧಾನಕ್ಕೆ ಪಸೆಯಾಡಲು ಶುರುವಿಟ್ಟುಕೊಳ್ಳುತ್ತದೆ. ನಾಟಕ ಘಟಿಸುತ್ತಾ ಘಟಿಸುತ್ತಾ ಪಾತ್ರಗಳೊಳಗೆ ಪಾತ್ರಗಳು ಒಡಮೂಡುತ್ತಾ ಸಮುದಾಯದೊಳಗಿನ ಸಮುದಾಯಗಳನ್ನು ಕಾಣಿಸುವ ಮಾಂತ್ರಿಕತೆ ತೆರೆದುಕೊಳ್ಳುತ್ತದೆ.

ಮಾದಿಗ ಸಮುದಾಯದ ಮಕ್ಕಳೆಂದೇ ನಂಬಿರುವ ದಕ್ಕಲರ ಕುಲಪುರಾಣವನ್ನು ನಿರೂಪಿಸುತ್ತಾ ಸಿದ್ದಯ್ಯನವರು ಮಾದಿಗ ಸಮುದಾಯದ ಕಾರುಣ್ಯದ ಹಾದಿಯನ್ನು ಬಿಚ್ಚಿಡುತ್ತಾರೆ. ಊರ ಹೊರಗೆ ನಿಂತು ಮಾದಿಗರ ಕೇರಿಯಲ್ಲಿ ಮಾತ್ರವೇ ಅನ್ನ ಬೇಡುವ ದಕ್ಕಲರು ಕಣ್ಣಿಗೆ ಕಾಣದಷ್ಟು ಸಣ್ಣ ಸಮುದಾಯವಾದರೂ ತಮ್ಮೊಳಗೆ ಇಡೀ ಜಗತ್ತಿಗೆ ಆಗುವಂಥಾ ಬೃಹತ್ತಾದ ಸಾಂಸ್ಕೃತಿಕ ಸಂಪತ್ತನ್ನು ಇರಿಸಿಕೊಂಡಿದ್ದಾರೆ. ಈ ಸಾಂಸ್ಕೃತಿಕ ಸಂಪತ್ತು ’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮೂಲಕ ಕನ್ನಡನಾಡಿನ ಸೀಳುರೋಗಕ್ಕೆ ಔಷಧಿಯಾಗಿ ಒದಗಿಬಂದಿದೆ. ಮಾದಿಗ ಸಮುದಾಯದ ಚಿಕ್ಕ ಕುಟುಂಬವೊಂದು ದಕ್ಕಲ ದೇವಿಯ ಕಥೆಯನ್ನು ಹೇಳುತ್ತಾ ಊರೂರು ಅಲೆದು ಬದುಕು ನಡೆಸುವ ಮತ್ತು ಕುಲಗಳನ್ನು ಕೂಡಿಸುತ್ತಾ ಸಾಗುವ ವಿಭಿನ್ನ ರಂಗತಂತ್ರವನ್ನು ನಿರ್ದೇಶಕರು ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ಕರ್ನಾಟಕದಲ್ಲಿ ಅದರಲ್ಲೂ ಬಯಲ ಸೀಮೆಯಲ್ಲಿ ಹೊಲೆಯ ಮಾದಿಗರ ಸಾಂಸ್ಕೃತಿಕ ಚಹರೆಗಳಾದ ತಮಟೆ ಮತ್ತು ಅರೆವಾದ್ಯಗಳನ್ನು ಇಡೀ ನಾಟಕದಲ್ಲಿ ಸೂಜಿ ದಾರದ ಹಾಗೆ ಬಳಸಲಾಗಿದೆ. ದಕ್ಕಲದೇವನು ತನ್ನ ಎಡಭುಜದ ಮೇಲೆ ತಮಟೆಯನ್ನೂ, ಬಲಭುಜದ ಮೇಲೆ ಅರೆಯನ್ನೂ ಹೊತ್ತುಕೊಂಡು ಅವುಗಳನ್ನು ನುಡಿಸುವ ತನ್ನಿಬ್ಬರು ಮಕ್ಕಳನ್ನು ಜೊತೆಗೂಡಿಸಿಕೊಂಡು ಲೋಕಸಂಚಾರ ಹೊರಡುತ್ತಾನೆ. ಇಡೀ ರಂಗಭೂಮಿಯನ್ನೇ ನಾವು ಲೋಕದ ವಿಸ್ತಾರವೆಂದು ಭಾವಿಸಿದರೆ, ಆ ರಂಗದ ಒಂದು ಮೂಲೆಯಲ್ಲಿ ಕೂತ ದಕ್ಕಲದೇವಿ ಇಡೀ ಲೋಕವನ್ನೇ ಆವರಿಸಿಕೊಳ್ಳುತ್ತಾಳೆ ಮತ್ತು ತನ್ನ ಗಂಡ, ಮಕ್ಕಳ ಯಾತ್ರೆ ಅವಳ ಅರಿವಿಗೆ ಬರುತ್ತಲೇ ಇರುತ್ತದೆ. ಈ ವಿಶಿಷ್ಟ ರಂಗತಂತ್ರವನ್ನು ನಿರ್ದೇಶಕರು ದಲಿತ ಸಮುದಾಯದ ಎಡ ಬಲ ಬಣಗಳ ನಡುವಿನ ವಿದ್ಯಮಾನಗಳನ್ನು ಗಮನಿಸುವ ಬಾಬಾಸಾಹೇಬರ ಕಣ್ಣುಗಳಂತೆ ಸೃಷ್ಟಿಸಿದ್ದಾರೆ. ಇದನ್ನು ಹೊಸ ಕಾಲದ ಹೊಸ ಪ್ರಜ್ಞೆಯ ಲಕ್ಷ್ಮಣ್ ಅಂತಹ ನಿರ್ದೇಶಕರು ಮಾತ್ರ ಮಾಡಲು ಸಾಧ್ಯ.

ದಲಿತರ ನೋವುಗಳನ್ನಷ್ಟೇ ಕಲಾತ್ಮಕ ಮಂಡನೆ ಮಾಡುವ ಮೂಲಕ ಕಟ್ಟಲು ಯತ್ನಿಸಿ ಸೋಲುತ್ತಿದ್ದವರ ಎದುರಿಗೆ ಲಕ್ಷ್ಮಣ್ ಗೆದ್ದಿದ್ದಾರೆ. ಅಥವಾ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಊರ ಹಬ್ಬಗಳಲ್ಲಿ ಗ್ರಾಮದೇವತೆಗೆಂದು ಬೆಳಗಿನ ಜಾವ ಕಡಿದ ಕೋಣದ ರಕ್ತದಲ್ಲಿ ಅನ್ನವನ್ನು ಕಲೆಸಿ ಊರಿನ ಸುತ್ತಲಿನ ಹೊಲಗಳಿಗೆ ಚೆಲ್ಲುವ ’ರಿಚ್ಯುವಲ್ ಈ ನಾಟಕದ ಕೇಂದ್ರಬಿಂದು.

ಕೆ.ಪಿ.ಲಕ್ಷ್ಮಣ್

ಇದರೊಟ್ಟಿಗೆ ದಕ್ಕಲ ಮಕ್ಕಳು ಊರಬೀದಿಯ ಅಂಚಿನಲ್ಲಿ ಮಾದಿಗರಿಂದ ಸಂಗ್ರಹಿಸುವ ಅನ್ನದ ಮಡಿಕೆಗಳನ್ನು ಒಡೆದು ಅನ್ನವನ್ನು ತಲೆಯ ಮೇಲೆ ಹೊತ್ತೊಯ್ಯುವ ರಿಚ್ಯುವಲ್ ಅನ್ನೂ ಕೂಡಿಸಲಾಗಿದೆ. ನಾಟಕ ಎಲ್ಲವನ್ನೂ ಅಭಿನಯಿಸುತ್ತಾ ಕೊನೆಯ ಘಟ್ಟಕ್ಕೆ ಬರುವಷ್ಟರಲ್ಲಿ ಭಾರತೀಯರು ಅವುಡುಗಚ್ಚಿ ಸಹಿಸಿಕೊಳ್ಳಬೇಕಾದ, ಆ ಮೂಲಕ ತಳ ಸಮುದಾಯಗಳ ನಡಿಗೆಗೆ ಹೆಜ್ಜೆ ಹೊಂದಿಸಬೇಕಾದ ಸಮಯ ಬಂದೇಬಿಡುತ್ತದೆ.

ಆ ಘಟ್ಟದಲ್ಲಿ ದಕ್ಲಕಥಾ ದೇವಿ ಭಾರತಮಾತೆಯಾಗಿಬಿಡುತ್ತಾಳೆ. ಈ ದೃಶ್ಯ ಚಮತ್ಕಾರ ನಡೆಯುವ ಮೊದಲು ಭಾರತೀಯ ಗಂಡಸರು ಮೈಗೂಡಿಸಿಕೊಳ್ಳಲೇಬೇಕಾದ ಹೆಣ್ತನದ ಮಾದರಿಯೊಂದು ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಗಂಡನ್ನು ಹೆಣ್ಣಾಗಿಸಿ, ಅವನ ’ಪುರುಷಾಹಂಕಾರವನ್ನು’ ಲಯಗೊಳಿಸಿ ಹೆಣ್ಣ ಕಣ್ಣನ್ನು ಮುಡಿಯುವ ಅದ್ಭುತ ಕಾವ್ಯದಂತೆ ಆ ದೃಶ್ಯ ಮೂಡಿಬಂದಿದೆ.

ಇದನ್ನೂ ಓದಿ: ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಇನ್ನು ಲಕ್ಷ್ಮಣ್ ಅವರ ಈ ಸಾಹಸಕ್ಕೆ ಕೈಜೋಡಿಸಿರುವ ನಟರು ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ನಾನು ನೋಡಿದ ಅತ್ಯದ್ಭುತ ಕಲಾವಿದರು. ದಕ್ಕಲದೇವನ ಪಾತ್ರ ಮಾಡುತ್ತಾ ಬೆರಗು ಹುಟ್ಟಿಸುವ ಸಂತೋಷ್ ದಿಂಡ್ಲೂರು, ದಕ್ಕಲದೇವಿ ಪಾತ್ರದ ಮೂಲಕ ನೆಲದವ್ವನೇ ಎದ್ದು ಬಂದಂತೆ ನಟಿಸುವ ಬಿಂದು ರಕ್ಷಿದಿ, ತಮಟೆ ಬಡಿಯುತ್ತಾ ಕಣ್ಣ ರೆಪ್ಪೆಯಲ್ಲಿ ನೋಟು ಎತ್ತುವ ಡಿಂಗ್ರಿ ಭರತ್, ಅರೆವಾದ್ಯದ ಮೂಲಕ ಮಾಂತ್ರಿಕ ಲೋಕವನ್ನೇ ಸೃಷ್ಟಿಸುವ ನರಸಿಂಹರಾಜು, ಗಂಗಮ್ಮನಾಗಿ ಧುಮ್ಮಿಕ್ಕುವ ರಮಿಕಾ ಚೈತ್ರ- ಈ ಎಲ್ಲರೂ ಅದ್ಬುತ ನಟರು. ಎಲ್ಲರೂ ನುರಿತ ಹಾಡುಗಾರರಾಗಿರುವುದು ಈ ನಾಟಕದ ಇನ್ನೊಂದು ಶಕ್ತಿ. ಇವರೆಲ್ಲರೊಂದಿಗೆ ಬೆಳಕಿನ ಮಂಜು ನಾರಾಯಣ್, ಡ್ರಾಮಟರ್ಜಿಯ ಮೋಹಿತ್, ವಸ್ತ್ರವಿನ್ಯಾಸದ ಶ್ವೇತಾರಾಣಿ, ನಿರ್ದೇಶನದಲ್ಲಿ ಸಹಾಯ ಮಾಡಿದ ಸ್ಕಂದ, ಶ್ರೀಹರ್ಷ ಮತ್ತು ಪೂರ್ವಿ ಕಲ್ಯಾಣಿ ಇವರೆಲ್ಲರೂ ಸೇರಿಕೊಂಡು ಕನ್ನಡ ರಂಗಭೂಮಿಗೆ ದಾರಿದೀಪವಾಗಬಲ್ಲ ನಾಟಕವೊಂದನ್ನು ಕೊಟ್ಟಿದ್ದಾರೆ.

ಭಾರತವನ್ನು ಮೇಲೆತ್ತುವ ಜವಾಬ್ದಾರಿಯನ್ನು ಹೊಂದಿರುವ ದಲಿತ ಸಮುದಾಯ ಒಟ್ಟಾಗಿ ಸಾಗಬೇಕಾದ ಬಾಬಾ ಸಾಹೇಬರ ಕನಸು ಕನ್ನಡದ ಕೆ.ಬಿ. ಸಿದ್ದಯ್ಯನವರ ಕಣ್ಣುಗಳಲ್ಲಿ ದೀಪವಾಗಿ ಉರಿಯುತ್ತಾ ತಲೆಮಾರುಗಳಿಗೆ ದಾರಿಯಾಗುತ್ತಿರುವುದನ್ನು ನೋಡಲು ನಾವು ’ದಕ್ಲಕಥಾ ದೇವಿ ಕಾವ್ಯ’ ನಾಟಕವನ್ನು ನೋಡಬೇಕು.

(’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮುಂದಿನ ಪ್ರದರ್ಶನ ನವೆಂಬರ್ 19, 2022 ಶನಿವಾರ ಸಂಜೆ 6:00 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿದೆ)

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...