Homeಕರ್ನಾಟಕ’ಒಂದು ದೇಶ ಒಂದು ಚುನಾವಣೆ’ ಎಂಬ ಚಿತಾವಣೆ

’ಒಂದು ದೇಶ ಒಂದು ಚುನಾವಣೆ’ ಎಂಬ ಚಿತಾವಣೆ

- Advertisement -
- Advertisement -

’ಒಂದು ದೇಶ ಒಂದು ಚುನಾವಣೆ’ ಸದರಿ ಒಕ್ಕೂಟ ಸರ್ಕಾರ ಮುಂದುಮಾಡುತ್ತಿರುವ ಒಂದು ಬಹುದೊಡ್ಡ ಯೋಜನೆ. ಆಳುವ ವರ್ಗಗಳಿಗೆ ಇಂತಹ ದೊಡ್ಡ ದೊಡ್ಡ ಯೋಜನೆಗಳೆಂದರೆ ಅದೇನೋ ಅಪ್ಯಾಯಮಾನ. ಇಂಗ್ಲಿಷ್‌ನಲ್ಲಿ ಇಂತಹ ಪ್ರವೃತ್ತಿಗೆ ಮೆಗಲೋಮೇನಿಯಾ ಅಂತಾರೆ. ನಿಜ ಹೇಳಬೇಕೆಂದರೆ, ಅದರಷ್ಟಕ್ಕೆ ದೊಡ್ಡದಾಗಿ ಕಾಣಿಸುವ ಈ ’ಒಂದು ದೇಶ ಒಂದು ಚುನಾವಣೆ’ ಎಂಬ ಯೋಜನೆ ಅದಕ್ಕಿಂತಲೂ ದೈತ್ಯ ಯೋಜನೆಯೊಂದರೆ ಭಾಗ.

ಆ ದೈತ್ಯ ಯೋಜನೆ ಏನು ಎಂದರೆ ಈ ದೇಶದ ರಾಜ್ಯಗಳನ್ನು ದುರ್ಬಲಗೊಳಿಸುವುದು. ರಾಜ್ಯಗಳನ್ನು ದೆಹಲಿಯಿಂದ ನಡೆಯುವ ಕೇಂದ್ರಾಡಳಿತ ಅಡಿಯಲ್ಲಿ ಸಾಮಂತ ಘಟಕಗಳನ್ನಾಗಿ ಮಾಡುವುದು. ಮುಂದುವರಿದು, ಈ ದೇಶವನ್ನು ’ರಾಜ್ಯಮುಕ್ತ’ ರಾಷ್ಟ್ರವನ್ನಾಗಿ ಮಾಡುವುದು. ರಾಜಕೀಯ ಶಾಸ್ತ್ರದ ಭಾಷೆಯಲ್ಲಿ ಇದನ್ನು ಏಕೀಕೃತ ವ್ಯವಸ್ಥೆ ಅಥವಾ Unitary System ಅಂತ ಕರೆಯುತ್ತಾರೆ.

ಈಗ ದೇಶದಲ್ಲಿ ಇರುವುದು ಒಂದು ರೀತಿಯ ಒಕ್ಕೂಟ ವ್ಯವಸ್ಥೆ. ಅಂದರೆ, ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳೆರಡೂ ಸಾರ್ವಭೌಮ ಅಧಿಕಾರವನ್ನು ಹಂಚಿಕೊಂಡು ದೇಶವನ್ನು ಮುನ್ನಡೆಸುವ ವ್ಯವಸ್ಥೆ. ಏಕೀಕೃತ ವ್ಯವಸ್ಥೆಯಲ್ಲಿ ಸಾರ್ವಭೌಮ ಅಧಿಕಾರ ಏನಿದ್ದರೂ ಭಾರತ ಸರಕಾರದ ಬಳಿ ಇರುತ್ತದೆ. ರಾಜ್ಯಗಳು ಪಂಚಾಯತ್‌ಗಳ ರೀತಿ ಆಗಿಬಿಡುತ್ತವೆ.

ಪ್ರಶ್ನೆ ಇರುವುದು ಈಗ ದೇಶವನ್ನು ಒಂದು ಏಕೀಕೃತ ರಾಷ್ಟ್ರವನ್ನಾಗಿ ಮಾಡುವ ಅಂತಹ ದರ್ದು ಏನಿದೆ? ಯಾವ ಕಾರಣಕ್ಕೋಸ್ಕರ ಇವರು ಈ ಮಟ್ಟಿಗೆ ಹಠ ಹಿಡಿದು, ಅಡ್ಡಾದಿಡ್ಡಿಯ ದಾರಿ ತುಳಿದು, ಜನರ ಕಣ್ಣಿಗೆ ತಾವೇನೋ ಒಳ್ಳೆಯದು ಮಾಡಲು ಹೊರಟಿದ್ದೇವೆಂದು ಮಂಕುಬೂಧಿ ಎರಚಿ ಇಂತಹದ್ದೊಂದು ಬದಲಾವಣೆ ಮಾಡಿಯೇ ಸಿದ್ಧ ಅಂತ ಹೊರಟಿರುವುದು? ಈ ಪ್ರಶ್ನೆಯ ಜಾಡು ಹಿಡಿದುಹೊರಟರೆ ಇದರ ಹಿಂದೆ ರಾಜ್ಯಗಳನ್ನು ಕಿತ್ತೊಗೆಯುವುದಕ್ಕಿಂತಲೂ ದೊಡ್ಡ ಯೋಜನೆಯೊಂದಿದೆ ಎನ್ನುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಏನದು ಯೋಜನೆ?

ಅದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮರುನಿರೂಪಿಸಿ ಈ ದೇಶದ ಸಂವಿಧಾನವನ್ನು ಅಕ್ಷರಶಃ ತಮಗೆ ಬೇಕಾದಂತೆ ಮರುರೂಪಿಸುವ ಮಹಾನ್ ತಂತ್ರ. ಈ ತಂತ್ರವನ್ನು ಸಾಕಾರಗೊಳಿಸುವಲ್ಲಿ ಈಗ ಅಡ್ಡಿಯಾಗಿರುವುದು ರಾಜ್ಯಗಳು. ರಾಜ್ಯಗಳು ಇರುವುದು ತೊಂದರೆಯಲ್ಲ. ರಾಜ್ಯದಲ್ಲಿ ಇತರ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅಧಿಕಾರ ವಹಿಸಿಕೊಂಡರೆ, ಅವು ರಾಜ್ಯಗಳ ಅಸ್ಮಿತೆಯ ಆಧಾರದಲ್ಲಿ ರಾಜಕೀಯ ಮಾಡುವುದರಿಂದ, ರಾಜ್ಯಗಳ ಸಂಸ್ಕೃತಿಗಳನ್ನು ಪ್ರತಿಪಾದಿಸುವುದರಿಂದ ಹಿಂದೂ ರಾಷ್ಟ್ರದ ಮಹಾನ್ ಯೋಜನೆಗೆ ರಾಜ್ಯಗಳು ತೊಡರಾಗುತ್ತವೆ. ರಾಜ್ಯಗಳು ದೇಶದ ಸಾರ್ವಭೌಮ ಘಟಕಗಳು. ಅವುಗಳಿಗೆ ಸಾಂವಿಧಾನಿಕ ರಕ್ಷಣೆ ಇದೆ. ಹಾಗೆ ನೋಡಿದರೆ ಈ ದೇಶ ಎನ್ನುವುದು ಆಗಿರುವುದೇ ರಾಜ್ಯಗಳಿಂದ. ನೇರಾನೇರ ರಾಜ್ಯಗಳನ್ನು ಏನೂ ಮಾಡುವ ಹಾಗಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಏನೂ ಮಾಡುವ ಹಾಗಿಲ್ಲ. ಹಾಗಾಗಿ ಹಲವಾರು ಅಡ್ಡದಾರಿಗಳ ಮೂಲಕ ರಾಜ್ಯಗಳನ್ನೇ ಸದೆಬಡಿದು, ಪ್ರಾದೇಶಿಕ ಪಕ್ಷಗಳನ್ನು ಸದೆಬಡಿದು, ಹಿಂದೂ ರಾಷ್ಟ್ರ ನಿರ್ಮಾಣದ ಹಾದಿ ಸುಗಮಗೊಳಿಸಬೇಕಿದೆ. ಅದಕ್ಕಾಗಿ ಮೊದಲಿಗೆ ಡಬಲ್ ಎಂಜಿನ್ ಸರ್ಕಾರಗಳ ಭ್ರಮೆಯನ್ನು ತೇಲಿಬಿಡಲಾಯಿತು. ಅದನ್ನು ಜನ ಅಷ್ಟೊಂದು ಪ್ರಮಾಣದಲ್ಲಿ ಒಪ್ಪಿಕೊಳ್ಳುವುದಿಲ್ಲ ಅಂತ ಈಗ ತಿಳಿದಿದೆ. ’ಆಪರೇಷನ್ ಕಮಲ’ ಒಂದು ರಾಷ್ಟ್ರೀಯ ಯೋಜನೆ ಎಂಬಂತೆ ಅದನ್ನು ಎಲ್ಲೆಡೆ ಪ್ರಯೋಗಿಸುವ ಪ್ರಯತ್ನ ನಡೆಯಿತು. ಅದು ಸಾಕಾಗುವುದಿಲ್ಲ ಅಂತ ತಿಳಿಯಿತು. ಆ ನಂತರ ವಿಪಕ್ಷಗಳ ಆಡಳಿತ ಇರುವ ರಾಜ್ಯಗಳನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡುವ ಕೆಲಸ ನಡೆಯಿತು. ಅದೂ ಸಾಲದಾಯಿತು. ಜತೆಜತೆಗೆ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ರಾಜ್ಯಗಳನ್ನು, ರಾಜ್ಯ ಮಟ್ಟದ ವಿಪಕ್ಷ ನಾಯಕರುಗಳನ್ನು ಸದೆ ಬಡಿಯುವ ಕೆಲಸ ನಡೆಯಿತು. ಅದಕ್ಕೂ ಮಿತಿಗಳಿವೆ. ಹಾಗಾಗಿ ಈಗ ಬತ್ತಳಿಕೆಯಲ್ಲಿರುವ ಬಹುದೊಡ್ಡ ಅಸ್ತ್ರದ ಪ್ರಯೋಗಕ್ಕೆ ತಯಾರಿ ನಡೆಯುತ್ತಿರುವುದು. ಅದು ’ಒಂದು ದೇಶ ಒಂದು ಚುನಾವಣೆ’ ಎಂಬ ಅಸ್ತ್ರ.

ಇದನ್ನೂ ಓದಿ: ‘ಒಂದು ದೇಶ ಒಂದು ಚುನಾವಣೆ’ | ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಮತ್ತು ಅನುಷ್ಠಾನ ಅಸಾಧ್ಯ – ಸಿದ್ದರಾಮಯ್ಯ

ಲೋಕಸಭೆಗೂ ರಾಜ್ಯ ವಿಧಾನಸಭೆಗಳಿಗೂ ಏಕಕಾಲದಲ್ಲಿ ಚುನಾವಣೆಗಳು ನಡೆದರೆ ಆಗ ರಾಷ್ಟ್ರಮಟ್ಟದ ವಿಚಾರಗಳೇ ಪ್ರಾಧಾನ್ಯತೆ ಪಡೆದು ರಾಷ್ಟ್ರೀಯ ಪಕ್ಷಗಳೇ ಮೇಲುಗೈ ಪಡೆಯುತ್ತವೆ. ಒಂದೇ ಬಾರಿಗೆ ಎರಡೂ ಆಯ್ಕೆಯನ್ನು ಮಾಡುವ ಮತದಾರರು ಗಲಿಬಿಲಿಗೊಂಡು ಯಾವುದಾದರೂ ಒಂದೇ ಪಕ್ಷಕ್ಕೆ ಎರಡೂ ಓಟುಗಳನ್ನೂ ನೀಡುವ ಸಾಧ್ಯತೆ ಇದೆ. ಹೆಚ್ಚುಕಡಿಮೆ ಹತ್ತರಿಂದ ಇಪ್ಪತ್ತು ಪ್ರತಿಶತ ಓಟುಗಳು ಈ ರೀತಿ ರಾಷ್ಟ್ರೀಯ ಪಕ್ಷಗಳ ಪಾಲಾದರೂ ಪ್ರಾದೇಶಿಕ ಪಕ್ಷಗಳು ತೀವ್ರ ಹಿನ್ನಡೆ ಅನುಭವಿಸುತ್ತವೆ. ಒಂದು ರಾಜ್ಯಕ್ಕೆ ನಡೆಯುವ ಚುನಾವಣೆ ಎಂದರೆ ಅದು ಕೇವಲ ಒಂದು ರಾಜಕೀಯ ಪ್ರಕ್ರಿಯೆ ಮಾತ್ರವಲ್ಲ. ಆ ರಾಜ್ಯದ ಬಗ್ಗೆ ಜನ ತಮಗಿರುವ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ಅನುಭವಿಸುವ ಅದನ್ನು ಪ್ರಕಟಿಸುವ ಮತ್ತು ಅದರ ಬಗ್ಗೆ ಅಭಿಮಾನ ಪಡುವ ಒಂದು ಪರ್ವ ಅದು. ಈ ಸಂಬಂಧವನ್ನೇ ಕಡಿದು ಹಾಕುವ ರೀತಿಯಲ್ಲಿ ರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆಯ ಜತೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ನಡೆದುಹೋಗುವುದು ಎಂದರೆ ರಾಜ್ಯಗಳು ಇದ್ದೂ ಇಲ್ಲದಂತೆ.

ಈಗ ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕಾಗಲಿ, ಆಳುವ ಮೈತ್ರಿಕೂಟಕ್ಕಾಗಲೀ ಮೂರನೇ ಒಂದರಷ್ಟು ಬಹುಮತ ಇಲ್ಲದ ಕಾರಣ ಈ ಅಸ್ತ್ರವನ್ನು ಒಮ್ಮಿಂದೊಮ್ಮೆಲೆ ಪ್ರಯೋಗಿಸುವುದು ಅಸಾಧ್ಯ ಎಂಬ ಒಂದು ಅನಿಸಿಕೆ ಇದೆ. ಆದರೆ, ಅಂದುಕೊಂಡದ್ದನ್ನು ಮಾಡಿಯೇ ತೀರುವಲ್ಲಿ ಈಗಿನ ಆಡಳಿತ ಪಕ್ಷಕ್ಕೆ ಸಂಖ್ಯೆಯ ಮಿತಿ ಬಿಡಿ ಸಾಕ್ಷಾತ್ ಪರದೈವವೇ ಅಡ್ಡಿಯಾದರೂ ಅದರ ಕಣ್ಣಿಗೆ ಮಣ್ಣೆರಚಿ ಕಾರ್ಯ ಸಾಧಿಸಿಕೊಳ್ಳುವ ಕುಟಿಲ ಬುದ್ಧಿಮತ್ತೆ ಅಗಾಧವಾಗಿದೆ. ಆದ ಕಾರಣ ಇಂದಲ್ಲ ನಾಳೆ, ನಾಳೆ ಆಗದೆ ಹೋದರೆ ಅತೀ ಶ್ರೀಘ್ರದಲ್ಲೇ ಮುಂದೊಂದು ದಿನ ಈ ಬದಲಾವಣೆಗಳೆಲ್ಲಾ ಆಗಿಯೇ ತೀರುತ್ತವೆ. ಈ ಹುನ್ನಾರವನ್ನು ಈ ದೇಶದ ಮತದಾರರು ಅರಿತು ಅದಕ್ಕೊಂದು ಪ್ರತಿರೋಧ ಒಡ್ಡಿದರೆ ಮಾತ್ರ ದೇಶದ ಸಂವಿಧಾನವನ್ನು ರಕ್ಷಿಸಲು ಸಾಧ್ಯ. ಅಂತಹ ಪ್ರತಿರೋಧ ಸಾಧ್ಯವಾಗಬಾರದು ಅಥವಾ ಜನ ಈ ಯೋಜನೆಯ ಹಿಂದಿನ ಹುನ್ನಾರವನ್ನು ಅರಿಯಬಾರದು ಎನ್ನುವ ದುರುದ್ದೇಶದಿಂದಲೇ ಯೋಜನೆಯನ್ನು ಚುನಾವಣಾ ಸುಧಾರಣೆ ಎನ್ನುವ ಸಕ್ಕರೆ ಲೇಪನದೊಂದಿಗೆ ಜನರ ಮುಂದಿಡುತ್ತಿರುವುದು.

ಏಕಕಾಲಕ್ಕೆ ಮಾಡಿ ಮುಗಿಸಿಬಿಟ್ಟರೆ ಚುನಾವಣೆ ನಡೆಸಲು ಕಡಿಮೆ ಹಣ ಸಾಕು ಎನ್ನುವುದು ಒಂದು ವಾದ. ಆದರೆ, ಎಷ್ಟು ಹಣ ಉಳಿತಾಯ ಆಗುತ್ತೆ, ಹೇಗೆ ಆಗುತ್ತೆ ಎನ್ನುವ ಲೆಕ್ಕಾಚಾರ ಯಾರೂ ಮಾಡಿದಂತಿಲ್ಲ. ಒಂದುವೇಳೆ ಹಣ ಉಳಿಯುತ್ತದೆ ಅಂತ ಅಂದುಕೊಂಡರೂ, ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಏನನ್ನು ಕಳೆದುಕೊಳ್ಳುತ್ತೇವೆಯೋ ಅದನ್ನು ಹಣದ ಮೂಲಕ ಅಳೆಯಲೂ ಆಗದು, ಹಣದ ಮೂಲಕ ಗಳಿಸಲೂ ಆಗದು. ಆದುದರಿಂದ ಹಣ ಉಳಿತಾಯ ಎನ್ನುವುದು ಒಂದು ಕುಂಟುನೆಪ.

ಎರಡನೆಯದಾಗಿ ಮತ್ತೆಮತ್ತೆ ಚುನಾವಣೆಗಳು ಒಂದಲ್ಲ ಒಂದು ಕಡೆ ನಡೆಯುತ್ತಿರುವುದರಿಂದ ಈ ದೇಶದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ. ಆದುದರಿಂದ ಏಕಕಾಲದಲ್ಲಿ ಎಲ್ಲಾ ಚುನಾವಣೆಗಳು ನಡೆಯಲಿ ಎನ್ನುವುದು ಇನ್ನೊಂದು ವಾದ. ಈ ವಾದಕ್ಕೂ ಯಾವುದೇ ಪುರಾವೆಗಳು ಇಲ್ಲ. ಸರಿಯಾದ ರೀತಿಯಲ್ಲಿ ಚುನಾವಣೆ ನಡೆಯುವುದು, ಈ ದೇಶದ ರಾಜ್ಯಗಳ ಅಸ್ಮಿತೆಯನ್ನು ಮತ್ತು ಸ್ವಾಯತ್ತತೆಯನ್ನು ಕಾಪಿಟ್ಟುಕೊಳ್ಳುವುದು ಕೂಡಾ ಅಭಿವೃದ್ಧಿಯೇ. ಅಭಿವೃದ್ಧಿ ಎಂದರೆ ಕಟ್ಟಡ ಕಟ್ಟುವುದು, ರಸ್ತೆ ನಿರ್ಮಿಸುವುದು, ಬೇಕಿರುವ-ಬೇಡದ ವಸ್ತುಗಳನ್ನು ಉತ್ಪಾದಿಸಿ ಉತ್ಪಾದಿಸಿ ಗುಡ್ಡೆ ಹಾಕುವುದು ಮಾತ್ರವಲ್ಲ. ಈ ದೇಶದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ಚುನಾವಣೆಗಳು ನಡೆದದ್ದು ಎಂದರೆ ಅದು 1990ರ ದಶಕದಲ್ಲಿ. ಈ ದೇಶ ಅತ್ಯಂತ ಹೆಚ್ಚಿನ ಅಭಿವೃದ್ಧಿ ದರವನ್ನು ದಾಖಲಿಸಿದ್ದು ಕೂಡಾ ತೊಂಬತ್ತರ ದಶಕದಲ್ಲಿ. ಆದಕಾರಣ ಚುನಾವಣೆಗಳು ಆಗಾಗ ನಡೆದರೆ ಅಭಿವೃದ್ಧಿಯ ವೇಗ ತಗ್ಗುತ್ತದೆ ಎನ್ನುವ ವಾದದಲ್ಲಿ ಅರ್ಥ ಇಲ್ಲ. ಅರ್ಥ ಇದ್ದರೆ ಅದಕ್ಕೆ ಬೇರೆ ಪರಿಹಾರ ಹುಡುಕಬೇಕೆ ಹೊರತು, ರಾಜ್ಯಗಳ ಕಾಲು ಮುರಿಯುವ ರೀತಿಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಅಲ್ಲ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲ ಇಪ್ಪತ್ತು ವರ್ಷಗಳ ಕಾಲ ನಡೆದ ಚುನಾವಣೆಗಳು ಅಂದರೆ 1952, 1957, 1962 ಮತ್ತು 1967ರ ಚುನಾವನೆಗಳು ಲೋಕಸಭೆಗೆ ಮತ್ತು ವಿಧಾನಸಭೆಗೆ ಏಕಕಾಲದಲ್ಲೇ ನಡೆದಿದ್ದವು. ದೇಶ ಅಂದು ಅನುಸರಿಸುತ್ತಿದ್ದ ಒಂದು ದೇಶ ಒಂದು ಚುನಾವಣೆಯ ಪದ್ಧತಿಯನ್ನು ಕೈಬಿಟ್ಟಿದೆ. ಹಾಗಾಗಿ ಅದನ್ನು ಮತ್ತೀಗ ತರುತ್ತಿದ್ದೇವೆ ಎನ್ನುವ ವಾದ ದೋಷಪೂರಿತವಾಗಿದೆ. ಮೊದಲ ನಾಲ್ಕು ಚುನಾವಣೆಗಳಲ್ಲಿ, ಲೋಕಸಭೆ ಮತ್ತು ವಿಧಾನಸಭೆಗಳೆರಡಕ್ಕೂ ಏಕಕಾಲದಲ್ಲಿ ಮತದಾನ ನಡೆದಿದ್ದು ಸತ್ಯ. ಹಾಗಂತ ಅದು ಹಾಗೆಯೇ ನಡೆಯಬೇಕೆಂಬ ಕಾರಣಕ್ಕೆ ಆದದ್ದಲ್ಲ. ಬದಲಿಗೆ ಆಗ ದೇಶವಿನ್ನೂ ಹುಟ್ಟಿ ಚುನಾವಣಾ ವ್ಯವಸ್ಥೆಯಲ್ಲಿ ಅಂಬೆಗಾಲಿಡುತಿತ್ತು. ಚುನಾವಣೆ ಎಂಬ ಪ್ರಕ್ರಿಯೆ ಪ್ರಾರಂಭ ಆಗಿದ್ದೆ 1952ರಲ್ಲಿ. ಅದೊಂದು ಪ್ರಾಯೋಗಿಕ ಹಂತ. ಅದು ಹಾಗೆಯೇ ನಡೆಯಬೇಕೆಂಬ ನಿಯಮವೂ ಇರಲಿಲ್ಲ, ಅವಶ್ಯಕತೆಯೂ ಇರಲಿಲ್ಲ. ಹಾಗೆ ನಡೆದುಹೋಯಿತು ಅಷ್ಟೇ. ಆಗ ಜನಸಂಖ್ಯೆಯೂ ಕಡಿಮೆ ಇತ್ತು. ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಒಂದೇ ಪ್ರಬಲ ಪಕ್ಷವಾಗಿತ್ತು. ಆದಕಾರಣ ಕೇಂದ್ರದಲ್ಲಿ, ರಾಜ್ಯಗಳಲ್ಲಿ ಅದರದ್ದೇ ಅಧಿಕಾರವಿತ್ತು. ಈಗ ಹಾಗಲ್ಲ. ಜನಸಂಖ್ಯೆ ಬೆಳೆದಿದೆ. ರಾಜ್ಯಗಳಲ್ಲಿ ಹತ್ತಾರು ಪ್ರಾದೇಶಿಕ ಪಕ್ಷಗಳು ಬೆಳೆದಿವೆ. ಪ್ರಜಾತಂತ್ರ ನಿಧಾನವಾಗಿ ಕೆಲವೊಂದು ರೀತಿಯಲ್ಲಾದರೂ ಪ್ರಭುದ್ಧತೆಯನ್ನು ಗಳಿಸುವ ಮಾರ್ಗದಲ್ಲಿದೆ. ಆಗ ಆಗಿ ಹೋಯಿತು, ಎನ್ನುವುದು ಈಗ ಆಗಲೇಬೇಕು ಎನ್ನುವುದಕ್ಕೆ ಖಂಡಿತಾ ಸಮರ್ಥನೆ ಆಗುವುದಿಲ್ಲ.

ನಲವತ್ತೇಳು ಪಕ್ಷಗಳನ್ನು ಕರೆದು ಅಭಿಪ್ರಾಯ ಕೇಳಿದ್ದಾಗಿಯೂ ಅವುಗಳ ಪೈಕಿ ಹದಿನೈದು ಪಕ್ಷಗಳು ಮಾತ್ರ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಿಯೂ ’ಒಂದು ದೇಶ ಒಂದು ಚುನಾವಣೆ’ ಯೋಜನೆಯ ವರದಿ ಸಿದ್ಧಪಡಿಸಿದ ಸಮಿತಿಯ ಮುಖ್ಯಸ್ಥರಾದ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಹೇಳಿದ್ದಾರೆ. ಹಾಗಾದರೆ ಇಂತಹದ್ದೊಂದು ಸಂವಿಧಾನ ವಿರೋಧಿ ನಡೆಗೆ ಈ ದೇಶದ ಬಹುಪಾಲು ಪಕ್ಷಗಳ ಬೆಂಬಲ ಇದೆ ಅಂತ ಆಯಿತು. ಬಿಜೆಪಿ ಮತ್ತು ಅದರ ಆಪ್ತ ಪಕ್ಷಗಳ ಬೆಂಬಲ ಅರ್ಥಮಾಡಿಕೊಳ್ಳುವಂಥದ್ದೆ. ಆದರೆ ಮೂವತ್ತೆರಡು ಪಕ್ಷಗಳು ಪ್ರಸ್ತಾಪದ ಪರ ಇವೆ ಎಂದಾದ ಮೇಲೆ ಇದಕ್ಕೆ ಪ್ರತಿರೋಧ ಏನಿದ್ದರೂ ಜನರಿಂದ ಬರಬೇಕು, ಜನ ಸಂಘಟನೆಗಳಿಂದ ಬರಬೇಕು. ಈ ದೇಶದ ಸಂವಿಧಾನವನ್ನು ಮತ್ತು ಪ್ರಜಾಸತ್ತೆಯನ್ನು ಸಂರಕ್ಷಿಸುವ ಕೆಲಸಕ್ಕೆ ಕೇವಲ ರಾಜಕೀಯ ಪಕ್ಷಗಳನ್ನು ನೆಚ್ಚಿ ಕುಳಿತರೆ ಆಗದು ಎಂದು ಮತ್ತೊಮ್ಮೆ ಸಾಬೀತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...