ರೈತರು ನಡೆಸುತ್ತಿರುವ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ರಾಜ್ಯದ ಹಿರಿಯ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಸ್ವಾಮೀಜಿಗಳು, ಚಿತ್ರನಟರು ಮತ್ತು ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳಬಾರದು ಎಂದು ಆಗ್ರಹಿಸಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪ್ಪಟ್ಟಣದ ರೈತರು ಕಳೆದ 1000 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಭೂಮಿಯನ್ನು ಉಳಿಸಲು ಹೋರಾಟವನ್ನು ನಡೆಸುತ್ತಲೆ ಬಂದಿದ್ದಾರೆ. ಚನ್ನರಾಯಪಟ್ಟಣ ರೈತ ಹೋರಾಟ
ತುರ್ತು ವಿಚಾರವೊಂದನ್ನು ತಮ್ಮ ಗಮನಕ್ಕೆ ತರಲು ಈ ಬಹಿರಂಗ ಪತ್ರ ಬರಿಯುತ್ತಿದ್ದೇವೆ ಎಂದು ಮುಖ್ಯಮಂತ್ರಿಗೆ ಹೇಳಿರುವ ಅವರು, “ಚನ್ನರಾಯಪಟ್ಟಣದ ವಿಚಾರ ರೈತರು ಹಾಗೂ ಸರ್ಕಾರದ ನಡುವೆ, ಜನಪರ ಸಂಘಟನೆಗಳು ಹಾಗೂ ಸರ್ಕಾರದ ನಡುವೆ ಸಂಘರ್ಷದ ವಿಚಾರವಾಗಿ ಪರಿವರ್ತನೆಯಾಗುತ್ತಿರುವುದನ್ನು ಕಂಡು ನಾವು ಕಳವಳಗೊಂಡಿದ್ದೇವೆ. ಸರ್ಕಾರ ಏಕೆ ಈ ರೀತಿ ಹಟ ಹಿಡಿದಿದೆ ಎಂಬುದು ನಮಗೆ ಅರ್ಥವಾಗದಾಗಿದೆ.” ಎಂದು ಹೇಳಿದ್ದಾರೆ.
ಅಭಿವೃದ್ದಿ ಯೋಜನೆಗಳಿಗೆ ಭೂಮಿ ಬೇಕಾಗುತ್ತದೆ ಎಂಬುದನ್ನು ನಾವೂ ಒಪ್ಪುತ್ತೇವೆ. ಆದರೆ ಅದಕ್ಕೊಂದು ರೀತಿನೀತಿ ಇರಬೇಕಲ್ಲವೇ ಎಂದು ಪತ್ರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.
“ಚನ್ನರಾಯಪಟ್ಟಣದ ಭೂಮಿ ಫಲವತ್ತಾದ ಕೃಷಿ ಭೂಮಿಯಾಗಿದೆ, ಸಾವಿರಾರು ಜನ ಅದನ್ನು ನಂಬಿ ಬದುಕುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಈ ಭೂಮಿಯನ್ನು ಕಂಪನಿಗಳಿಗೆ ಕೊಡಲು ತಮಗೆ ಒಪ್ಪಿಗೆ ಇಲ್ಲ ಎಂದು ಸ್ಪಷ್ಟವಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ” ಎಂದು ಪತ್ರ ಹೇಳಿದೆ.
“ಕಳೆದ ಎರಡು ವರ್ಷಗಳಿಂದ ಸತತ ಹೋರಾಟ ನಡೆಸಿದ್ದಾರೆ. ರೈತರ ಕೂಗನ್ನು ಕೇಳಿಸಿಕೊಳ್ಳದೆ ಬಿಜೆಪಿ ಸರ್ಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆಗ ನಿಮ್ಮ ಪಕ್ಷವೂ ಇದನ್ನು ವಿರೋಧಿಸಿತ್ತು. ನೀವೇ ಖುದ್ದು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದಿರಿ. ಈಗ ಏಕೆ ಆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲೇಬೇಕು ಎಂದು ನಿಮ್ಮ ಸರ್ಕಾ ರ ಪಟ್ಟು ಹಿಡಿದಿದೆ ಅರ್ಥವಾಗುತ್ತಿಲ್ಲ” ಎಂದು ಅವರು ಮುಖ್ಯಮಂತ್ರಿಯನ್ನು ಕೇಳಿದ್ದಾರೆ.
“ರೈತರಿಗೀಗ ಅಂತಿಮ ಅಧಿಸೂಚನೆ ಹೋಗಿದೆ. ರೈತರು ಆತಂಕಿತರಾಗಿದ್ದಾರೆ. ಅವರ ಬೆಂಬಲಕ್ಕೆ ಕರ್ನಾಟಕದ ಸಮಸ್ತ ಸಂಘಟನೆಗಳೂ ನಿಂತಿವೆ. ಜೂನ್ 25ಕ್ಕೆ ದೇವನ ಹಳ್ಳಿ ಚಲೋಗೆ ಕರೆ ನೀಡಿವೆ. ಸರ್ಕಾರ ರೈತಪರ ನಿಲುವು ತೆಗೆದುಕೊಳ್ಳುವ ತನಕ ದೇವನಹಳ್ಳಿಯಿಂದ ವಾಪಾಸ್ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಸಂಘರ್ಷ ರೈತರಿಗಾಗಲೀ, ಸರ್ಕಾರಕ್ಕಾಗಲೀ, ರಾಜ್ಯಕ್ಕಾಗಲೀ ಒಳಿತನ್ನು ಮಾಡುವುದಿಲ್ಲ.” ಎಂದು ಪತ್ರವೂ ಹೇಳಿದೆ.
ನೀವು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲವರು ಎಂದು ಹೇಳಿರುವ ಪತ್ರವೂ, ಮುಖ್ಯಮಂತ್ರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದೆ. ಸಮಸ್ಯೆಯನ್ನು ಬಗೆಹರಿಸಿ ರಾಜ್ಯಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಪತ್ರವೂ ಮನವಿ ಮಾಡಿದ್ದು, ಜೊತೆಗೆ ನೀವು ನಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಹಿರಿಯ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಕೆ ಮರುಳಸಿದ್ದಪ್ಪ, ಬಾನು ಮುಷ್ತಾಕ್, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಡಾ.ಹಿಂದೂಧರ ಹೊನ್ನಾಪುರ, ಡಾ.ಎಚ್.ಎಲ್ ಪುಷ್ಪ, ಡಾ.ವಿಜಯಮ್ಮ, ಡಾ. ಜಾಣಗೆರೆ ವೆಂಕಟರಾಮಯ್ಯ, ಎಲ್ ಎನ್ ಮುಕುಂದರಾಜ್, ಡಾ.ಎನ್ ಗಾಯತ್ರಿ, ಡಾ.ಕೆ.ನೀಲ, ಕೆ.ಷರೀಪ, ಚಿತ್ರನಟರಾದ ಪ್ರಕಾಶ್ ರಾಜ್, ಬಿ. ಸುರೇಶ್, ವಿಜ್ಞಾನಿಗಳಾದ ಪ್ರೋ. ಪ್ರಜ್ವಲ್ ಶಾಸ್ತ್ರಿ, ಡಾ.ಸವ್ಯಸಾಚಿ ಚಟರ್ಜಿ, ಡಾ.ವಾಣಿ ಚಾಟರ್ಜಿ ಮತ್ತು ಸಾಣೆಹಳ್ಳಿ ಮಠದ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಜಿ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ. ಚನ್ನರಾಯಪಟ್ಟಣ ರೈತ ಹೋರಾಟ


