ತೆಲಂಗಾಣದಲ್ಲಿ ಪ್ರತಿಪಕ್ಷ ಬಿಆರ್ಎಸ್ಗೆ ಭಾರಿ ಹಿನ್ನಡೆಯಾಗಿದ್ದು, ಗುರುವಾರ ತಡರಾತ್ರಿ ರಾಜ್ಯದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಪಕ್ಷದ ಆರು ಜನ ಎಂಎಲ್ಸಿಗಳು ಆಡಳಿತಾರೂಢ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಭಾರತ್ ರಾಷ್ಟ್ರ ಸಮಿತಿಯು ಆರು ಶಾಸಕರು ಸೇರಿದಂತೆ ಹಲವಾರು ನಾಯಕರು ಪಕ್ಷವನ್ನು ತೊರೆದಿದ್ದು, ಆಪರೇಷನ್ ಹಸ್ತದಿಂದ ಪಕ್ಷದ ನಾಯಕರು ಆಘಾತಕ್ಕೆ ಒಳಗಾಗಿದ್ದಾರೆ.
ಕಾಂಗ್ರೆಸ್ಗೆ ಪಕ್ಷಾಂತರಗೊಂಡ ಆರು ಎಂಎಲ್ಸಿಗಳೆಂದರೆ, ದಂಡೆ ವಿಠಲ್, ಭಾನು ಪ್ರಸಾದ್ ರಾವ್, ಎಂಎಸ್ ಪ್ರಭಾಕರ್, ಬೊಗ್ಗರಪು ದಯಾನಂದ್, ಯೆಗ್ಗೆ ಮಲ್ಲೇಶಂ ಮತ್ತು ಬಸ್ವರಾಜು ಸರಯ್ಯ ಎಂದು ಮೂಲಗಳು ತಿಳಿಸಿವೆ.
ಟಿಪಿಸಿಸಿ ಅಧ್ಯಕ್ಷರೂ ಆಗಿರುವ ಸಿಎಂ ರೇವಂತ್ ರೆಡ್ಡಿ ಅವರ ನಿವಾಸದಲ್ಲಿ ಬಿಆರ್ಎಸ್ ಎಂಎಲ್ಸಿಗಳು ಕಾಂಗ್ರೆಸ್ಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ತೆಲಂಗಾಣದಲ್ಲಿ ಎಐಸಿಸಿ ಪಕ್ಷದ ವ್ಯವಹಾರಗಳ ಉಸ್ತುವಾರಿ ದೀಪಾ ದಾಸ್ಮುನ್ಸಿ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.
ತೆಲಂಗಾಣ ಲೆಜಿಸ್ಲೇಟ್ ಕೌನ್ಸಿಲ್ ವೆಬ್ಸೈಟ್ ಪ್ರಕಾರ, ಬಿಆರ್ಎಸ್ 25 ಮತ್ತು ಕಾಂಗ್ರೆಸ್ ನಾಲ್ಕು ಸದಸ್ಯರನ್ನು ಹೊಂದಿದೆ. ನಾಲ್ಕು ನಾಮನಿರ್ದೇಶಿತ ಎಂಎಲ್ಸಿಗಳು, ಎಐಎಂಐಎಂನಿಂದ ಇಬ್ಬರು ಸದಸ್ಯರು, ಬಿಜೆಪಿ, ಪಿಆರ್ಟಿಯುನಿಂದ ತಲಾ ಒಬ್ಬರು ಮತ್ತು ಸ್ವತಂತ್ರ ಒಬ್ಬರು, 40 ಸದಸ್ಯರ ಸದನದಲ್ಲಿ ಎರಡು ಸ್ಥಾನಗಳು ಖಾಲಿ ಇವೆ.
ರೇವಂತ್ ರೆಡ್ಡಿ ಎರಡು ದಿನಗಳ ಪ್ರವಾಸದಿಂದ ಗುರುವಾರ ರಾತ್ರಿ ರಾಷ್ಟ್ರ ರಾಜಧಾನಿಗೆ ಹಿಂದಿರುಗಿದ ಕೂಡಲೇ ಎಂಎಲ್ಸಿಗಳು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಹೊಸ ಪಕ್ಷಾಂತರದಿಂದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಬಲ 10ಕ್ಕೆ ಏರಲಿದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ನಂತರ ಆರು ಬಿಆರ್ಎಸ್ ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಆಡಳಿತ ಪಕ್ಷದತ್ತ ಮುಖ ಮಾಡುತ್ತಾರೆ ಎಂಬ ಊಹಾಪೋಹಗಳು ಹಬ್ಬಿವೆ.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಆರ್ಎಸ್ 39 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು.
ಆದಾಗ್ಯೂ, ಸಿಕಂದರಾಬಾದ್ ಕಂಟೋನ್ಮೆಂಟ್ನ ಬಿಆರ್ಎಸ್ ಶಾಸಕಿ ಜಿ ಲಾಸ್ಯ ನಂದಿತಾ ಈ ವರ್ಷದ ಆರಂಭದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸಿಕಂದರಾಬಾದ್ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದು ಅದರ ಬಲವನ್ನು 65 ಕ್ಕೆ ಹೆಚ್ಚಿಸಲು ಕಾರಣವಾಯಿತು.
‘ಇದು ಯಾವ ರೀತಿಯ ನ್ಯಾಯ ಪತ್ರ..’; ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಕೆಟಿಆರ್
ಸಾಲುಸಾಲು ಬಿಆರ್ಎಸ್ ಶಾಸಕರು ಮತ್ತು ನಾಯಕರು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿರುವ ಪಕ್ಷದ ಮುಖಂಡ ಕೆಟಿ ರಾಮ್ ರಾವ್, ಇದು ಯಾವ ರೀತಿಯ ನ್ಯಾಯ ಪತ್ರ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಬಿಆರ್ಎಸ್ ಸಂಸದ ಕೇಶವ ರಾವ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ರಾಜೀನಾಮೆ ನೀಡಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಪಕ್ಷಾಂತರ ಮಾಡಿ ಕಾಂಗ್ರೆಸ್ ಟಿಕೆಟ್ನಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಬಿಆರ್ಎಸ್ ಶಾಸಕರ ಬಗ್ಗೆ ಎನು ಹೇಳುತ್ತೀರಾ? ಕಾಂಗ್ರೆಸ್ಗೆ ಪಕ್ಷಾಂತರಗೊಂಡ ಅರ್ಧ ಡಜನ್ ಇತರ ಬಿಆರ್ಎಸ್ ಶಾಸಕರ ಬಗ್ಗೆ ಏನು ಹೇಳುತ್ತೀರಾ? ರಾಹುಲ್ ಗಾಂಧಿಯವರೆ, ನೀವು ಸಂವಿಧಾನವನ್ನು ಎತ್ತಿ ಹಿಡಿಯಲು ಹೊರಟಿರುವುದು ಹೀಗೆಯೇ” ಎಂದು ಪ್ರಶ್ನಿಸಿದ್ದಾರೆ.
“ನೀವು ಬಿಆರ್ಎಸ್ ಶಾಸಕರನ್ನು ರಾಜೀನಾಮೆ ನೀಡಲು ಸಾಧ್ಯವಾಗದಿದ್ದರೆ, ಕಾಂಗ್ರೆಸ್ ಪ್ರಣಾಳಿಕೆಯಂತೆ 10 ತಿದ್ದುಪಡಿಗಳನ್ನು ನಿಗದಿಪಡಿಸಲು ನೀವು ಬದ್ಧರಾಗಿದ್ದೀರಿ ಎಂದು ರಾಷ್ಟ್ರವು ಹೇಗೆ ನಂಬುತ್ತದೆ? ಯೇ ಕೈಸಾ ನ್ಯಾಯ ಪತ್ರ ಹೈಂ? (ಇದು ಯಾವ ರೀತಿಯ ನ್ಯಾಯ ಪತ್ರ) ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ; ಲೋಕಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅಮೃತಪಾಲ್, ರಶೀದ್


