Homeಮುಖಪುಟಯುಪಿಯಲ್ಲಿ ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ನಿಷೇಧ: ಹಿಂದುಳಿದ ಸಮುದಾಯಗಳ ಧ್ವನಿ ಅಡಗಿಸುವ ತಂತ್ರ ಎಂದ...

ಯುಪಿಯಲ್ಲಿ ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ನಿಷೇಧ: ಹಿಂದುಳಿದ ಸಮುದಾಯಗಳ ಧ್ವನಿ ಅಡಗಿಸುವ ತಂತ್ರ ಎಂದ ಪ್ರತಿಪಕ್ಷಗಳು

- Advertisement -
- Advertisement -

ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ಮತ್ತು ಜಾತಿ ಆಧಾರಿತ ಫಲಕಗಳ ಸಾರ್ವಜನಿಕ ಪ್ರದರ್ಶನವನ್ನು ನಿಷೇಧಿಸಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನವನ್ನು ಪ್ರತಿಪಕ್ಷಗಳು ಟೀಕಿಸಿವೆ.

ಈ ಆದೇಶ ಅಪಾಯಕಾರಿ ಮತ್ತು ಹಿಂದುಳಿದ ಸಮುದಾಯಗಳ ಧ್ವನಿಯನ್ನು ಅಡಗಿಸಲು ಮಾಡಿದ ‘ಕಣ್ಣೊರೆಸುವ ತಂತ್ರ’ ಎಂದು ಹೇಳಿದೆ.

ಭಾನುವಾರ (ಸೆ.21) ಉತ್ತರ ಪ್ರದೇಶ ಸರ್ಕಾರ ಹೊರಡಿಸಿ ನಿರ್ದೇಶನದಲ್ಲಿ ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ಸಾಮಾಜಿಕ ಸಂಘರ್ಷವನ್ನು ಉತ್ತೇಜಿಸುತ್ತವೆ. ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಉಂಟು ಮಾಡುತ್ತವೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿದೆ.

ಜಿಲ್ಲಾ ನ್ಯಾಯಾಧೀಶರು, ಪೊಲೀಸ್ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ಹೊರಡಿಸಿದ ನಿರ್ದೇಶನದಲ್ಲಿ, ಜಾತಿ ಆಧಾರಿತ ಪ್ರದರ್ಶನಗಳು ಮತ್ತು ಪ್ರತಿಭಟನೆಗಳ ಮೂಲಕ ವಿಭಜನೆಯನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪೊಲೀಸ್ ದಾಖಲೆಗಳು ಸೇರಿದಂತೆ ಸಾರ್ವಜನಿಕ ದಾಖಲೆಗಳಲ್ಲಿ ಜಾತಿ ಘೋಷಣೆಯನ್ನು ನಿಷೇಧಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದ ಐದು ದಿನಗಳ ನಂತರ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಾಹನಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿ ವೈಭವೀಕರಣದ ಅಭ್ಯಾಸವನ್ನು ನ್ಯಾಯಾಲಯವು ಆಕ್ಷೇಪಿಸಿದೆ.

ಸರ್ಕಾರದ ನಿರ್ದೇಶವನ್ನು ಉಲ್ಲೇಖಿಸಿ ಸೋಮವಾರ (ಸೆ.22) ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು “5,000 ವರ್ಷಗಳಿಂದ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಜಾತಿ ತಾರತಮ್ಯವನ್ನು ತೆಗೆದುಹಾಕಲು ಏನು ಮಾಡುವುದು?” ಎಂದು ಪ್ರಶ್ನಿಸಿದ್ದಾರೆ.

“ಬಟ್ಟೆ, ವೇಷಭೂಷಣಗಳು ಮತ್ತು ಚಿಹ್ನೆಗಳ ಪ್ರದರ್ಶನಗಳಿಂದ ಉಂಟಾಗುವ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡಲು ಏನು ಮಾಡುವುದು?” ಎಂದು ಕೇಳಿದ್ದಾರೆ.

“ಯಾರನ್ನಾದರೂ ಭೇಟಿಯಾದಾಗ ಅವರ ಹೆಸರಿಗಿಂತ ಮೊದಲು ‘ಜಾತಿ’ ಕೇಳುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಕೊನೆಗೊಳಿಸಲು ಏನು ಮಾಡುವುದು? ಯಾರನ್ನಾದರೂ ತಮ್ಮ ಮನೆಯನ್ನು ಸ್ವಚ್ಛಗೊಳಿಸುವಂತೆ ಮಾಡುವ ಜಾತಿ ತಾರತಮ್ಯದ ಚಿಂತನೆಯನ್ನು ಕೊನೆಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಾ?”ಎಂದಿದ್ದಾರೆ.

ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವ ಮೂಲಕ ಯಾರನ್ನಾದರೂ ದೂಷಿಸಲು ಮಾಡುವ ‘ಜಾತಿ ಆಧಾರಿತ ಪಿತೂರಿಗಳನ್ನು’ ಕೊನೆಗೊಳಿಸಲು ಏನು ಮಾಡುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.

ಗುರ್ಜರ್ ಸಮುದಾಯದ ರಾಜಕೀಯ ಅರಿವಿನ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ‘ಹೆದರಿಕೆ’ ಇದೆಯೇ? ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜ್‌ಕುಮಾರ್ ಭಾಟಿ ಕೇಳಿದ್ದಾರೆ.

ಭಾನುವಾರ ನಿರ್ದೇಶನ ಹೊರಡಿಸುವ ಮೊದಲು ಬಿಜೆಪಿಯೇ ಜಾತಿ ರ‍್ಯಾಲಿಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುತ್ತಿತ್ತು ಎಂದು ಭಾಟಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಿಂದುತ್ವ ಪಕ್ಷವು ಒಂದು ತಿಂಗಳ ಕಾಲ ಹಲವಾರು ಜಾತಿ ಗುಂಪುಗಳೊಂದಿಗೆ ಸಭೆಗಳನ್ನು ನಡೆಸಿತ್ತು ಎಂದಿದ್ದಾರೆ.

“ಬಿಜೆಪಿ ತಮ್ಮ ಸರ್ಕಾರವು ಪ್ರತಿ ಜಾತಿಯಿಂದ ಎಷ್ಟು ಸಚಿವರನ್ನು ನೇಮಿಸಿದೆ ಎಂಬುದನ್ನು ತೋರಿಸುವ ಫಲಕಗಳನ್ನು ಲಕ್ನೋದಲ್ಲಿ ಹಾಕಿತ್ತು” ಎಂದು ರಾಜ್‌ಕುಮಾರ್ ಭಾಟಿ ಹೇಳಿದ್ದಾರೆ.

ಗಾಝಿಯಾಬಾದ್ ವಿಧಾನಸಭಾ ಉಪಚುನಾವಣೆಯ ಸಮಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೋಡ್ ಶೋ ನಡೆಸಿದ್ದರು. ಅಲ್ಲಿ ವಿವಿಧ ಜಾತಿಗಳಿಗೆ ಹತ್ತು ಸ್ವಾಗತ ವೇದಿಕೆಗಳನ್ನು ಸ್ಥಾಪಿಸಲಾಗಿತ್ತು, ಪ್ರತಿಯೊಂದರ ಮೇಲೆ ಆಯಾ ಜಾತಿಗಳ ಹೆಸರುಗಳನ್ನು ಬರೆಯಲಾಗಿತ್ತು ಎಂದು ನೆನಪಿಸಿದ್ದಾರೆ.

“ಇಂದು, ಗುರ್ಜರ್ ಸಮುದಾಯದಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಅಭಿಯಾನ ನಡೆಯುತ್ತಿರುವಾಗ ಮತ್ತು ನಾವು ಬೃಹತ್ ಗುರ್ಜರ್ ರ‍್ಯಾಲಿಯನ್ನು ಘೋಷಿಸಿರುವಾಗ, ಜಾತಿಗಳ ಹೆಸರಿನಲ್ಲಿ ರ‍್ಯಾಲಿಗಳನ್ನು ನಡೆಸಬಾರದು ಎಂದು ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಹೇಗೆ ನೆನಪಾಯಿತು?” ಎಂದು ಅವರು ಕೇಳಿದ್ದಾರೆ.

ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ಉದಯವೀರ್ ಸಿಂಗ್, “ಬಿಜೆಪಿ ಸರ್ಕಾರವು ಮೊದಲು ತನ್ನ ಜಾತಿ ಆಧಾರಿತ ಮನಸ್ಥಿತಿಯನ್ನು ಹೇಗೆ ತೆಗೆದು ಹಾಕುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಮ್ಮ ಪಕ್ಷ ಎಂದಿಗೂ ಜಾತಿ ಆಧಾರಿತ ರ‍್ಯಾಲಿಗಳನ್ನು ನಡೆಸುವುದಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೇಳಿದ್ದಾರೆ.

“ವಾಸ್ತವವಾಗಿ, ಬಿಜೆಪಿ ಜಾತಿ ಆಧಾರಿತ ರಾಜಕೀಯವನ್ನು ಹೆಚ್ಚು ಉತ್ತೇಜಿಸುತ್ತದೆ” ಎಂದು ಅಜಯ್ ರೈ ಹೇಳಿದ್ದಾಗಿ ಪತ್ರಿಕೆಯೊಂದು ಉಲ್ಲೇಖಿಸಿದೆ. “ಆರ್‌ಎಸ್‌ಎಸ್ [ರಾಷ್ಟ್ರೀಯ ಸ್ವಯಂಸೇವಕ ಸಂಘ] ಜಾತಿ ಆಧಾರಿತ ಪ್ರತಿನಿಧಿಗಳನ್ನು ಹೊಂದಿದೆ” ಎಂದು ರೈ ಹೇಳಿದ್ದಾರೆ.

ಈ ಆದೇಶವನ್ನು ಹೇಗೆ ಜಾರಿಗೆ ತರುತ್ತೀರಿ? ಇದು ವಿರೋಧ ಪಕ್ಷಗಳಿಗೆ ಕಿರುಕುಳ ನೀಡುವ ಮತ್ತೊಂದು ಕಾರ್ಯವಿಧಾನವಾಗಿ ಬದಲಾಗುತ್ತಾ? ಎಂದು ಕಾದು ನೋಡಬೇಕಾಗಿದೆ ಎಂದು ರೈ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಧಾರ ಅಪಾಯಕಾರಿ. ದಲಿತ ಸಮುದಾಯ ಮತ್ತು ಇತರ ತಳಮಟ್ಟದ ಗುಂಪುಗಳ ಧ್ವನಿಗಳನ್ನು ಅಡಗಿಸಲು ಮಾಡುವ ‘ಕಣ್ಣೊರೆಸುವ ತಂತ್ರ’ ಎಂದು ಕಾಂಗ್ರೆಸ್ ನಾಯಕ ಅನಿಲ್ ಯಾದವ್ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

ಭಾನುವಾರ ಹೊರಡಿಸಲಾದ ನಿರ್ದೇಶನವು ‘ಅನ್ಯಾಯದ ಶಕ್ತಿಗಳನ್ನು ಮತ್ತಷ್ಟು ಧೈರ್ಯಗೊಳಿಸುತ್ತದೆ ಮತ್ತು ಅಂತಿಮವಾಗಿ ತಾರತಮ್ಯದ ವಿರುದ್ಧ ಹೋರಾಡುವ ಸಾಮಾಜಿಕ ಸಮುದಾಯ ಆಧಾರಿತ ಗುಂಪುಗಳನ್ನು ಗುರಿಯಾಗಿಸುತ್ತದೆ’ ಎಂದು ಅನಿಲ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ಅಗತ್ಯತೆ ಇಲ್ಲದೆ ಜಾತಿಯನ್ನು ದಾಖಲಿಸುವುದು ಅಥವಾ ಘೋಷಿಸುವುದು ಗುರುತಿನ ಪ್ರೊಫೈಲಿಂಗ್‌ಗೆ ಸಮನಾಗಿರುತ್ತದೆ. ಇದು ಪೂರ್ವಾಗ್ರಹವನ್ನು ಬಲಪಡಿಸುತ್ತದೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಭಾನುವಾರ, ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ತನ್ನ ನಿರ್ದೇಶನವನ್ನು ಹೊರಡಿಸಿದೆ.

ಬಂಧನ ಮೆಮೊಗಳು ಮತ್ತು ಠಾಣೆಯ ಸೂಚನಾ ಫಲಕಗಳಂತಹ ಪೊಲೀಸ್ ದಾಖಲೆಗಳು ಜಾತಿ ವಿವರಗಳನ್ನು ಹೊಂದಿರಬಾರದು. ಇಬ್ಬರೂ ಪೋಷಕರ ಹೆಸರನ್ನು ದಾಖಲಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

ಅಪರಾಧ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಪೋರ್ಟಲ್‌ನಿಂದ ಜಾತಿ ಕಾಲಮ್‌ಗಳನ್ನು ತೆಗೆದುಹಾಕಲು ಮತ್ತು ಬದಲಾವಣೆಗಳನ್ನು ಮಾಡುವವರೆಗೆ ಆ ಜಾಗವನ್ನು ಖಾಲಿ ಬಿಡಲು ಅಧಿಕಾರಿಗಳಿಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದೊಂದಿಗೆ ಸಂಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಅಪರಾಧಗಳಂತಹ ಜಾತಿ ಗುರುತುಗಳನ್ನು ನಮೂದಿಸುವುದು ಕಾನೂನಿನಲ್ಲಿ ಅಗತ್ಯವಿದ್ದಾಗ ಮಾತ್ರ ವಿನಾಯಿತಿಗಳನ್ನು ನೀಡಬಹುದು ಎಂದು ಸರ್ಕಾರದ ನಿರ್ದೇಶನದಲ್ಲಿ ತಿಳಿಸಿದೆ.

ಜಾತಿ ಘೋಷಣೆಗಳು ಅಥವಾ ಸ್ಟಿಕ್ಕರ್‌ಗಳನ್ನು ಹೊತ್ತ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಬೇಕು ಮತ್ತು ಜಾತಿಯನ್ನು ವೈಭವೀಕರಿಸುವ ಅಥವಾ ಪ್ರದೇಶಗಳನ್ನು ಜಾತಿ ಪ್ರದೇಶಗಳಾಗಿ ಘೋಷಿಸುವ ಸೈನ್‌ಬೋರ್ಡ್‌ಗಳನ್ನು ತೆಗೆದುಹಾಕಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ರಾಜಸ್ಥಾನ: ದೇವಾಲಯ ಪ್ರವೇಶಿಸಲು ಯತ್ನಿಸಿದ ದಲಿತ ವ್ಯಕ್ತಿ ಮೇಲೆ ಗುಂಪು ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...