ಜಾತಿ ಆಧಾರಿತ ರಾಜಕೀಯ ರ್ಯಾಲಿಗಳು ಮತ್ತು ಜಾತಿ ಆಧಾರಿತ ಫಲಕಗಳ ಸಾರ್ವಜನಿಕ ಪ್ರದರ್ಶನವನ್ನು ನಿಷೇಧಿಸಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನವನ್ನು ಪ್ರತಿಪಕ್ಷಗಳು ಟೀಕಿಸಿವೆ.
ಈ ಆದೇಶ ಅಪಾಯಕಾರಿ ಮತ್ತು ಹಿಂದುಳಿದ ಸಮುದಾಯಗಳ ಧ್ವನಿಯನ್ನು ಅಡಗಿಸಲು ಮಾಡಿದ ‘ಕಣ್ಣೊರೆಸುವ ತಂತ್ರ’ ಎಂದು ಹೇಳಿದೆ.
ಭಾನುವಾರ (ಸೆ.21) ಉತ್ತರ ಪ್ರದೇಶ ಸರ್ಕಾರ ಹೊರಡಿಸಿ ನಿರ್ದೇಶನದಲ್ಲಿ ಜಾತಿ ಆಧಾರಿತ ರಾಜಕೀಯ ರ್ಯಾಲಿಗಳು ಸಾಮಾಜಿಕ ಸಂಘರ್ಷವನ್ನು ಉತ್ತೇಜಿಸುತ್ತವೆ. ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಉಂಟು ಮಾಡುತ್ತವೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿದೆ.
ಜಿಲ್ಲಾ ನ್ಯಾಯಾಧೀಶರು, ಪೊಲೀಸ್ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ಹೊರಡಿಸಿದ ನಿರ್ದೇಶನದಲ್ಲಿ, ಜಾತಿ ಆಧಾರಿತ ಪ್ರದರ್ಶನಗಳು ಮತ್ತು ಪ್ರತಿಭಟನೆಗಳ ಮೂಲಕ ವಿಭಜನೆಯನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪೊಲೀಸ್ ದಾಖಲೆಗಳು ಸೇರಿದಂತೆ ಸಾರ್ವಜನಿಕ ದಾಖಲೆಗಳಲ್ಲಿ ಜಾತಿ ಘೋಷಣೆಯನ್ನು ನಿಷೇಧಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದ ಐದು ದಿನಗಳ ನಂತರ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಾಹನಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿ ವೈಭವೀಕರಣದ ಅಭ್ಯಾಸವನ್ನು ನ್ಯಾಯಾಲಯವು ಆಕ್ಷೇಪಿಸಿದೆ.
ಸರ್ಕಾರದ ನಿರ್ದೇಶವನ್ನು ಉಲ್ಲೇಖಿಸಿ ಸೋಮವಾರ (ಸೆ.22) ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು “5,000 ವರ್ಷಗಳಿಂದ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಜಾತಿ ತಾರತಮ್ಯವನ್ನು ತೆಗೆದುಹಾಕಲು ಏನು ಮಾಡುವುದು?” ಎಂದು ಪ್ರಶ್ನಿಸಿದ್ದಾರೆ.
“ಬಟ್ಟೆ, ವೇಷಭೂಷಣಗಳು ಮತ್ತು ಚಿಹ್ನೆಗಳ ಪ್ರದರ್ಶನಗಳಿಂದ ಉಂಟಾಗುವ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡಲು ಏನು ಮಾಡುವುದು?” ಎಂದು ಕೇಳಿದ್ದಾರೆ.
“ಯಾರನ್ನಾದರೂ ಭೇಟಿಯಾದಾಗ ಅವರ ಹೆಸರಿಗಿಂತ ಮೊದಲು ‘ಜಾತಿ’ ಕೇಳುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಕೊನೆಗೊಳಿಸಲು ಏನು ಮಾಡುವುದು? ಯಾರನ್ನಾದರೂ ತಮ್ಮ ಮನೆಯನ್ನು ಸ್ವಚ್ಛಗೊಳಿಸುವಂತೆ ಮಾಡುವ ಜಾತಿ ತಾರತಮ್ಯದ ಚಿಂತನೆಯನ್ನು ಕೊನೆಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಾ?”ಎಂದಿದ್ದಾರೆ.
ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವ ಮೂಲಕ ಯಾರನ್ನಾದರೂ ದೂಷಿಸಲು ಮಾಡುವ ‘ಜಾತಿ ಆಧಾರಿತ ಪಿತೂರಿಗಳನ್ನು’ ಕೊನೆಗೊಳಿಸಲು ಏನು ಮಾಡುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
…और 5000 सालों से मन में बसे जातिगत भेदभाव को दूर करने के लिए क्या किया जाएगा?
और वस्त्र, वेशभूषा और प्रतीक चिन्हों के माध्यम से जाति-प्रदर्शन से उपजे जातिगत भेदभाव को मिटाने के लिए क्या किया जाएगा?
और किसी के मिलने पर नाम से पहले ‘जाति’ पूछने की जातिगत भेदभाव की मानसिकता को… pic.twitter.com/a7WVWBB60f
— Akhilesh Yadav (@yadavakhilesh) September 22, 2025
ಗುರ್ಜರ್ ಸಮುದಾಯದ ರಾಜಕೀಯ ಅರಿವಿನ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ‘ಹೆದರಿಕೆ’ ಇದೆಯೇ? ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜ್ಕುಮಾರ್ ಭಾಟಿ ಕೇಳಿದ್ದಾರೆ.
ಭಾನುವಾರ ನಿರ್ದೇಶನ ಹೊರಡಿಸುವ ಮೊದಲು ಬಿಜೆಪಿಯೇ ಜಾತಿ ರ್ಯಾಲಿಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುತ್ತಿತ್ತು ಎಂದು ಭಾಟಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಿಂದುತ್ವ ಪಕ್ಷವು ಒಂದು ತಿಂಗಳ ಕಾಲ ಹಲವಾರು ಜಾತಿ ಗುಂಪುಗಳೊಂದಿಗೆ ಸಭೆಗಳನ್ನು ನಡೆಸಿತ್ತು ಎಂದಿದ್ದಾರೆ.
“ಬಿಜೆಪಿ ತಮ್ಮ ಸರ್ಕಾರವು ಪ್ರತಿ ಜಾತಿಯಿಂದ ಎಷ್ಟು ಸಚಿವರನ್ನು ನೇಮಿಸಿದೆ ಎಂಬುದನ್ನು ತೋರಿಸುವ ಫಲಕಗಳನ್ನು ಲಕ್ನೋದಲ್ಲಿ ಹಾಕಿತ್ತು” ಎಂದು ರಾಜ್ಕುಮಾರ್ ಭಾಟಿ ಹೇಳಿದ್ದಾರೆ.
ಗಾಝಿಯಾಬಾದ್ ವಿಧಾನಸಭಾ ಉಪಚುನಾವಣೆಯ ಸಮಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೋಡ್ ಶೋ ನಡೆಸಿದ್ದರು. ಅಲ್ಲಿ ವಿವಿಧ ಜಾತಿಗಳಿಗೆ ಹತ್ತು ಸ್ವಾಗತ ವೇದಿಕೆಗಳನ್ನು ಸ್ಥಾಪಿಸಲಾಗಿತ್ತು, ಪ್ರತಿಯೊಂದರ ಮೇಲೆ ಆಯಾ ಜಾತಿಗಳ ಹೆಸರುಗಳನ್ನು ಬರೆಯಲಾಗಿತ್ತು ಎಂದು ನೆನಪಿಸಿದ್ದಾರೆ.
“ಇಂದು, ಗುರ್ಜರ್ ಸಮುದಾಯದಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಅಭಿಯಾನ ನಡೆಯುತ್ತಿರುವಾಗ ಮತ್ತು ನಾವು ಬೃಹತ್ ಗುರ್ಜರ್ ರ್ಯಾಲಿಯನ್ನು ಘೋಷಿಸಿರುವಾಗ, ಜಾತಿಗಳ ಹೆಸರಿನಲ್ಲಿ ರ್ಯಾಲಿಗಳನ್ನು ನಡೆಸಬಾರದು ಎಂದು ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಹೇಗೆ ನೆನಪಾಯಿತು?” ಎಂದು ಅವರು ಕೇಳಿದ್ದಾರೆ.
ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ಉದಯವೀರ್ ಸಿಂಗ್, “ಬಿಜೆಪಿ ಸರ್ಕಾರವು ಮೊದಲು ತನ್ನ ಜಾತಿ ಆಧಾರಿತ ಮನಸ್ಥಿತಿಯನ್ನು ಹೇಗೆ ತೆಗೆದು ಹಾಕುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನಮ್ಮ ಪಕ್ಷ ಎಂದಿಗೂ ಜಾತಿ ಆಧಾರಿತ ರ್ಯಾಲಿಗಳನ್ನು ನಡೆಸುವುದಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೇಳಿದ್ದಾರೆ.
“ವಾಸ್ತವವಾಗಿ, ಬಿಜೆಪಿ ಜಾತಿ ಆಧಾರಿತ ರಾಜಕೀಯವನ್ನು ಹೆಚ್ಚು ಉತ್ತೇಜಿಸುತ್ತದೆ” ಎಂದು ಅಜಯ್ ರೈ ಹೇಳಿದ್ದಾಗಿ ಪತ್ರಿಕೆಯೊಂದು ಉಲ್ಲೇಖಿಸಿದೆ. “ಆರ್ಎಸ್ಎಸ್ [ರಾಷ್ಟ್ರೀಯ ಸ್ವಯಂಸೇವಕ ಸಂಘ] ಜಾತಿ ಆಧಾರಿತ ಪ್ರತಿನಿಧಿಗಳನ್ನು ಹೊಂದಿದೆ” ಎಂದು ರೈ ಹೇಳಿದ್ದಾರೆ.
ಈ ಆದೇಶವನ್ನು ಹೇಗೆ ಜಾರಿಗೆ ತರುತ್ತೀರಿ? ಇದು ವಿರೋಧ ಪಕ್ಷಗಳಿಗೆ ಕಿರುಕುಳ ನೀಡುವ ಮತ್ತೊಂದು ಕಾರ್ಯವಿಧಾನವಾಗಿ ಬದಲಾಗುತ್ತಾ? ಎಂದು ಕಾದು ನೋಡಬೇಕಾಗಿದೆ ಎಂದು ರೈ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರ ಅಪಾಯಕಾರಿ. ದಲಿತ ಸಮುದಾಯ ಮತ್ತು ಇತರ ತಳಮಟ್ಟದ ಗುಂಪುಗಳ ಧ್ವನಿಗಳನ್ನು ಅಡಗಿಸಲು ಮಾಡುವ ‘ಕಣ್ಣೊರೆಸುವ ತಂತ್ರ’ ಎಂದು ಕಾಂಗ್ರೆಸ್ ನಾಯಕ ಅನಿಲ್ ಯಾದವ್ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಭಾನುವಾರ ಹೊರಡಿಸಲಾದ ನಿರ್ದೇಶನವು ‘ಅನ್ಯಾಯದ ಶಕ್ತಿಗಳನ್ನು ಮತ್ತಷ್ಟು ಧೈರ್ಯಗೊಳಿಸುತ್ತದೆ ಮತ್ತು ಅಂತಿಮವಾಗಿ ತಾರತಮ್ಯದ ವಿರುದ್ಧ ಹೋರಾಡುವ ಸಾಮಾಜಿಕ ಸಮುದಾಯ ಆಧಾರಿತ ಗುಂಪುಗಳನ್ನು ಗುರಿಯಾಗಿಸುತ್ತದೆ’ ಎಂದು ಅನಿಲ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಅಗತ್ಯತೆ ಇಲ್ಲದೆ ಜಾತಿಯನ್ನು ದಾಖಲಿಸುವುದು ಅಥವಾ ಘೋಷಿಸುವುದು ಗುರುತಿನ ಪ್ರೊಫೈಲಿಂಗ್ಗೆ ಸಮನಾಗಿರುತ್ತದೆ. ಇದು ಪೂರ್ವಾಗ್ರಹವನ್ನು ಬಲಪಡಿಸುತ್ತದೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಭಾನುವಾರ, ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ತನ್ನ ನಿರ್ದೇಶನವನ್ನು ಹೊರಡಿಸಿದೆ.
ಬಂಧನ ಮೆಮೊಗಳು ಮತ್ತು ಠಾಣೆಯ ಸೂಚನಾ ಫಲಕಗಳಂತಹ ಪೊಲೀಸ್ ದಾಖಲೆಗಳು ಜಾತಿ ವಿವರಗಳನ್ನು ಹೊಂದಿರಬಾರದು. ಇಬ್ಬರೂ ಪೋಷಕರ ಹೆಸರನ್ನು ದಾಖಲಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಅಪರಾಧ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ಸಿಸ್ಟಮ್ಸ್ ಪೋರ್ಟಲ್ನಿಂದ ಜಾತಿ ಕಾಲಮ್ಗಳನ್ನು ತೆಗೆದುಹಾಕಲು ಮತ್ತು ಬದಲಾವಣೆಗಳನ್ನು ಮಾಡುವವರೆಗೆ ಆ ಜಾಗವನ್ನು ಖಾಲಿ ಬಿಡಲು ಅಧಿಕಾರಿಗಳಿಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದೊಂದಿಗೆ ಸಂಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಅಪರಾಧಗಳಂತಹ ಜಾತಿ ಗುರುತುಗಳನ್ನು ನಮೂದಿಸುವುದು ಕಾನೂನಿನಲ್ಲಿ ಅಗತ್ಯವಿದ್ದಾಗ ಮಾತ್ರ ವಿನಾಯಿತಿಗಳನ್ನು ನೀಡಬಹುದು ಎಂದು ಸರ್ಕಾರದ ನಿರ್ದೇಶನದಲ್ಲಿ ತಿಳಿಸಿದೆ.
ಜಾತಿ ಘೋಷಣೆಗಳು ಅಥವಾ ಸ್ಟಿಕ್ಕರ್ಗಳನ್ನು ಹೊತ್ತ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಬೇಕು ಮತ್ತು ಜಾತಿಯನ್ನು ವೈಭವೀಕರಿಸುವ ಅಥವಾ ಪ್ರದೇಶಗಳನ್ನು ಜಾತಿ ಪ್ರದೇಶಗಳಾಗಿ ಘೋಷಿಸುವ ಸೈನ್ಬೋರ್ಡ್ಗಳನ್ನು ತೆಗೆದುಹಾಕಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ರಾಜಸ್ಥಾನ: ದೇವಾಲಯ ಪ್ರವೇಶಿಸಲು ಯತ್ನಿಸಿದ ದಲಿತ ವ್ಯಕ್ತಿ ಮೇಲೆ ಗುಂಪು ಹಲ್ಲೆ