Homeಮುಖಪುಟಯುಪಿಯಲ್ಲಿ ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ನಿಷೇಧ: ಹಿಂದುಳಿದ ಸಮುದಾಯಗಳ ಧ್ವನಿ ಅಡಗಿಸುವ ತಂತ್ರ ಎಂದ...

ಯುಪಿಯಲ್ಲಿ ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ನಿಷೇಧ: ಹಿಂದುಳಿದ ಸಮುದಾಯಗಳ ಧ್ವನಿ ಅಡಗಿಸುವ ತಂತ್ರ ಎಂದ ಪ್ರತಿಪಕ್ಷಗಳು

- Advertisement -
- Advertisement -

ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ಮತ್ತು ಜಾತಿ ಆಧಾರಿತ ಫಲಕಗಳ ಸಾರ್ವಜನಿಕ ಪ್ರದರ್ಶನವನ್ನು ನಿಷೇಧಿಸಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನವನ್ನು ಪ್ರತಿಪಕ್ಷಗಳು ಟೀಕಿಸಿವೆ.

ಈ ಆದೇಶ ಅಪಾಯಕಾರಿ ಮತ್ತು ಹಿಂದುಳಿದ ಸಮುದಾಯಗಳ ಧ್ವನಿಯನ್ನು ಅಡಗಿಸಲು ಮಾಡಿದ ‘ಕಣ್ಣೊರೆಸುವ ತಂತ್ರ’ ಎಂದು ಹೇಳಿದೆ.

ಭಾನುವಾರ (ಸೆ.21) ಉತ್ತರ ಪ್ರದೇಶ ಸರ್ಕಾರ ಹೊರಡಿಸಿ ನಿರ್ದೇಶನದಲ್ಲಿ ಜಾತಿ ಆಧಾರಿತ ರಾಜಕೀಯ ರ‍್ಯಾಲಿಗಳು ಸಾಮಾಜಿಕ ಸಂಘರ್ಷವನ್ನು ಉತ್ತೇಜಿಸುತ್ತವೆ. ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಉಂಟು ಮಾಡುತ್ತವೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿದೆ.

ಜಿಲ್ಲಾ ನ್ಯಾಯಾಧೀಶರು, ಪೊಲೀಸ್ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ಹೊರಡಿಸಿದ ನಿರ್ದೇಶನದಲ್ಲಿ, ಜಾತಿ ಆಧಾರಿತ ಪ್ರದರ್ಶನಗಳು ಮತ್ತು ಪ್ರತಿಭಟನೆಗಳ ಮೂಲಕ ವಿಭಜನೆಯನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪೊಲೀಸ್ ದಾಖಲೆಗಳು ಸೇರಿದಂತೆ ಸಾರ್ವಜನಿಕ ದಾಖಲೆಗಳಲ್ಲಿ ಜಾತಿ ಘೋಷಣೆಯನ್ನು ನಿಷೇಧಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದ ಐದು ದಿನಗಳ ನಂತರ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಾಹನಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿ ವೈಭವೀಕರಣದ ಅಭ್ಯಾಸವನ್ನು ನ್ಯಾಯಾಲಯವು ಆಕ್ಷೇಪಿಸಿದೆ.

ಸರ್ಕಾರದ ನಿರ್ದೇಶವನ್ನು ಉಲ್ಲೇಖಿಸಿ ಸೋಮವಾರ (ಸೆ.22) ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು “5,000 ವರ್ಷಗಳಿಂದ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಜಾತಿ ತಾರತಮ್ಯವನ್ನು ತೆಗೆದುಹಾಕಲು ಏನು ಮಾಡುವುದು?” ಎಂದು ಪ್ರಶ್ನಿಸಿದ್ದಾರೆ.

“ಬಟ್ಟೆ, ವೇಷಭೂಷಣಗಳು ಮತ್ತು ಚಿಹ್ನೆಗಳ ಪ್ರದರ್ಶನಗಳಿಂದ ಉಂಟಾಗುವ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡಲು ಏನು ಮಾಡುವುದು?” ಎಂದು ಕೇಳಿದ್ದಾರೆ.

“ಯಾರನ್ನಾದರೂ ಭೇಟಿಯಾದಾಗ ಅವರ ಹೆಸರಿಗಿಂತ ಮೊದಲು ‘ಜಾತಿ’ ಕೇಳುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಕೊನೆಗೊಳಿಸಲು ಏನು ಮಾಡುವುದು? ಯಾರನ್ನಾದರೂ ತಮ್ಮ ಮನೆಯನ್ನು ಸ್ವಚ್ಛಗೊಳಿಸುವಂತೆ ಮಾಡುವ ಜಾತಿ ತಾರತಮ್ಯದ ಚಿಂತನೆಯನ್ನು ಕೊನೆಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಾ?”ಎಂದಿದ್ದಾರೆ.

ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವ ಮೂಲಕ ಯಾರನ್ನಾದರೂ ದೂಷಿಸಲು ಮಾಡುವ ‘ಜಾತಿ ಆಧಾರಿತ ಪಿತೂರಿಗಳನ್ನು’ ಕೊನೆಗೊಳಿಸಲು ಏನು ಮಾಡುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.

ಗುರ್ಜರ್ ಸಮುದಾಯದ ರಾಜಕೀಯ ಅರಿವಿನ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ‘ಹೆದರಿಕೆ’ ಇದೆಯೇ? ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜ್‌ಕುಮಾರ್ ಭಾಟಿ ಕೇಳಿದ್ದಾರೆ.

ಭಾನುವಾರ ನಿರ್ದೇಶನ ಹೊರಡಿಸುವ ಮೊದಲು ಬಿಜೆಪಿಯೇ ಜಾತಿ ರ‍್ಯಾಲಿಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುತ್ತಿತ್ತು ಎಂದು ಭಾಟಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಿಂದುತ್ವ ಪಕ್ಷವು ಒಂದು ತಿಂಗಳ ಕಾಲ ಹಲವಾರು ಜಾತಿ ಗುಂಪುಗಳೊಂದಿಗೆ ಸಭೆಗಳನ್ನು ನಡೆಸಿತ್ತು ಎಂದಿದ್ದಾರೆ.

“ಬಿಜೆಪಿ ತಮ್ಮ ಸರ್ಕಾರವು ಪ್ರತಿ ಜಾತಿಯಿಂದ ಎಷ್ಟು ಸಚಿವರನ್ನು ನೇಮಿಸಿದೆ ಎಂಬುದನ್ನು ತೋರಿಸುವ ಫಲಕಗಳನ್ನು ಲಕ್ನೋದಲ್ಲಿ ಹಾಕಿತ್ತು” ಎಂದು ರಾಜ್‌ಕುಮಾರ್ ಭಾಟಿ ಹೇಳಿದ್ದಾರೆ.

ಗಾಝಿಯಾಬಾದ್ ವಿಧಾನಸಭಾ ಉಪಚುನಾವಣೆಯ ಸಮಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೋಡ್ ಶೋ ನಡೆಸಿದ್ದರು. ಅಲ್ಲಿ ವಿವಿಧ ಜಾತಿಗಳಿಗೆ ಹತ್ತು ಸ್ವಾಗತ ವೇದಿಕೆಗಳನ್ನು ಸ್ಥಾಪಿಸಲಾಗಿತ್ತು, ಪ್ರತಿಯೊಂದರ ಮೇಲೆ ಆಯಾ ಜಾತಿಗಳ ಹೆಸರುಗಳನ್ನು ಬರೆಯಲಾಗಿತ್ತು ಎಂದು ನೆನಪಿಸಿದ್ದಾರೆ.

“ಇಂದು, ಗುರ್ಜರ್ ಸಮುದಾಯದಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಅಭಿಯಾನ ನಡೆಯುತ್ತಿರುವಾಗ ಮತ್ತು ನಾವು ಬೃಹತ್ ಗುರ್ಜರ್ ರ‍್ಯಾಲಿಯನ್ನು ಘೋಷಿಸಿರುವಾಗ, ಜಾತಿಗಳ ಹೆಸರಿನಲ್ಲಿ ರ‍್ಯಾಲಿಗಳನ್ನು ನಡೆಸಬಾರದು ಎಂದು ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಹೇಗೆ ನೆನಪಾಯಿತು?” ಎಂದು ಅವರು ಕೇಳಿದ್ದಾರೆ.

ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ಉದಯವೀರ್ ಸಿಂಗ್, “ಬಿಜೆಪಿ ಸರ್ಕಾರವು ಮೊದಲು ತನ್ನ ಜಾತಿ ಆಧಾರಿತ ಮನಸ್ಥಿತಿಯನ್ನು ಹೇಗೆ ತೆಗೆದು ಹಾಕುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಮ್ಮ ಪಕ್ಷ ಎಂದಿಗೂ ಜಾತಿ ಆಧಾರಿತ ರ‍್ಯಾಲಿಗಳನ್ನು ನಡೆಸುವುದಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೇಳಿದ್ದಾರೆ.

“ವಾಸ್ತವವಾಗಿ, ಬಿಜೆಪಿ ಜಾತಿ ಆಧಾರಿತ ರಾಜಕೀಯವನ್ನು ಹೆಚ್ಚು ಉತ್ತೇಜಿಸುತ್ತದೆ” ಎಂದು ಅಜಯ್ ರೈ ಹೇಳಿದ್ದಾಗಿ ಪತ್ರಿಕೆಯೊಂದು ಉಲ್ಲೇಖಿಸಿದೆ. “ಆರ್‌ಎಸ್‌ಎಸ್ [ರಾಷ್ಟ್ರೀಯ ಸ್ವಯಂಸೇವಕ ಸಂಘ] ಜಾತಿ ಆಧಾರಿತ ಪ್ರತಿನಿಧಿಗಳನ್ನು ಹೊಂದಿದೆ” ಎಂದು ರೈ ಹೇಳಿದ್ದಾರೆ.

ಈ ಆದೇಶವನ್ನು ಹೇಗೆ ಜಾರಿಗೆ ತರುತ್ತೀರಿ? ಇದು ವಿರೋಧ ಪಕ್ಷಗಳಿಗೆ ಕಿರುಕುಳ ನೀಡುವ ಮತ್ತೊಂದು ಕಾರ್ಯವಿಧಾನವಾಗಿ ಬದಲಾಗುತ್ತಾ? ಎಂದು ಕಾದು ನೋಡಬೇಕಾಗಿದೆ ಎಂದು ರೈ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಧಾರ ಅಪಾಯಕಾರಿ. ದಲಿತ ಸಮುದಾಯ ಮತ್ತು ಇತರ ತಳಮಟ್ಟದ ಗುಂಪುಗಳ ಧ್ವನಿಗಳನ್ನು ಅಡಗಿಸಲು ಮಾಡುವ ‘ಕಣ್ಣೊರೆಸುವ ತಂತ್ರ’ ಎಂದು ಕಾಂಗ್ರೆಸ್ ನಾಯಕ ಅನಿಲ್ ಯಾದವ್ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

ಭಾನುವಾರ ಹೊರಡಿಸಲಾದ ನಿರ್ದೇಶನವು ‘ಅನ್ಯಾಯದ ಶಕ್ತಿಗಳನ್ನು ಮತ್ತಷ್ಟು ಧೈರ್ಯಗೊಳಿಸುತ್ತದೆ ಮತ್ತು ಅಂತಿಮವಾಗಿ ತಾರತಮ್ಯದ ವಿರುದ್ಧ ಹೋರಾಡುವ ಸಾಮಾಜಿಕ ಸಮುದಾಯ ಆಧಾರಿತ ಗುಂಪುಗಳನ್ನು ಗುರಿಯಾಗಿಸುತ್ತದೆ’ ಎಂದು ಅನಿಲ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ಅಗತ್ಯತೆ ಇಲ್ಲದೆ ಜಾತಿಯನ್ನು ದಾಖಲಿಸುವುದು ಅಥವಾ ಘೋಷಿಸುವುದು ಗುರುತಿನ ಪ್ರೊಫೈಲಿಂಗ್‌ಗೆ ಸಮನಾಗಿರುತ್ತದೆ. ಇದು ಪೂರ್ವಾಗ್ರಹವನ್ನು ಬಲಪಡಿಸುತ್ತದೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಭಾನುವಾರ, ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ತನ್ನ ನಿರ್ದೇಶನವನ್ನು ಹೊರಡಿಸಿದೆ.

ಬಂಧನ ಮೆಮೊಗಳು ಮತ್ತು ಠಾಣೆಯ ಸೂಚನಾ ಫಲಕಗಳಂತಹ ಪೊಲೀಸ್ ದಾಖಲೆಗಳು ಜಾತಿ ವಿವರಗಳನ್ನು ಹೊಂದಿರಬಾರದು. ಇಬ್ಬರೂ ಪೋಷಕರ ಹೆಸರನ್ನು ದಾಖಲಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

ಅಪರಾಧ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಪೋರ್ಟಲ್‌ನಿಂದ ಜಾತಿ ಕಾಲಮ್‌ಗಳನ್ನು ತೆಗೆದುಹಾಕಲು ಮತ್ತು ಬದಲಾವಣೆಗಳನ್ನು ಮಾಡುವವರೆಗೆ ಆ ಜಾಗವನ್ನು ಖಾಲಿ ಬಿಡಲು ಅಧಿಕಾರಿಗಳಿಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದೊಂದಿಗೆ ಸಂಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಅಪರಾಧಗಳಂತಹ ಜಾತಿ ಗುರುತುಗಳನ್ನು ನಮೂದಿಸುವುದು ಕಾನೂನಿನಲ್ಲಿ ಅಗತ್ಯವಿದ್ದಾಗ ಮಾತ್ರ ವಿನಾಯಿತಿಗಳನ್ನು ನೀಡಬಹುದು ಎಂದು ಸರ್ಕಾರದ ನಿರ್ದೇಶನದಲ್ಲಿ ತಿಳಿಸಿದೆ.

ಜಾತಿ ಘೋಷಣೆಗಳು ಅಥವಾ ಸ್ಟಿಕ್ಕರ್‌ಗಳನ್ನು ಹೊತ್ತ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಬೇಕು ಮತ್ತು ಜಾತಿಯನ್ನು ವೈಭವೀಕರಿಸುವ ಅಥವಾ ಪ್ರದೇಶಗಳನ್ನು ಜಾತಿ ಪ್ರದೇಶಗಳಾಗಿ ಘೋಷಿಸುವ ಸೈನ್‌ಬೋರ್ಡ್‌ಗಳನ್ನು ತೆಗೆದುಹಾಕಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ರಾಜಸ್ಥಾನ: ದೇವಾಲಯ ಪ್ರವೇಶಿಸಲು ಯತ್ನಿಸಿದ ದಲಿತ ವ್ಯಕ್ತಿ ಮೇಲೆ ಗುಂಪು ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...