ವಕ್ಫ್ ತಿದ್ದುಪಡಿ ಮಸೂದೆ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ದವಾಗಿದೆ ಎಂಬ ಕಾರಣಕ್ಕೆ, ಅದನ್ನು ವಿರೋಧಿಸುವಂತೆ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಸ್ಲಿಂ ನಾಯಕರು, ಪಕ್ಷದ ನಾಯಕ ಹಾಗೂ ಅಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಒತ್ತಡ ಹೇರಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಭಾಗವಾಗಿರುವ ನಾಯ್ಡು ಅವರನ್ನು ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸಿದೆ.
ವರದಿಗಳ ಪ್ರಕಾರ, ವಕ್ಫ್ ತಿದ್ದುಪಡಿ ಮಸೂದೆ ವಿಚಾರದಲ್ಲಿ ಅತ್ತ ತನ್ನ ಪಕ್ಷದ ಮುಸ್ಲಿಂ ನಾಯಕರನ್ನು ಬಿಟ್ಟು ಕೊಡಲಾಗದೆ, ಇತ್ತ ಬಿಜೆಪಿಯನ್ನು ವಿರೋಧಿಸಲಾಗದೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾಯ್ಡು ಹೆಣಗಾಡುತ್ತಿದ್ದಾರೆ.
ಪ್ರಸ್ತುತ, ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಶೀಲನೆಯಲ್ಲಿರುವ ವಕ್ಫ್ ತಿದ್ದುಪಡಿ ಮಸೂದೆಯ ಕುರಿತ ವರದಿಯು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಸಂಸತ್ ಒಳಗೆ ಮತ್ತು ಹೊರಗೆ ತಿದ್ದುಪಡಿ ಮಸೂದೆಯನ್ನು ಬೆಂಬಲಿಸದಂತೆ ಟಿಡಿಪಿಯ ಮುಸ್ಲಿಂ ನಾಯಕರು ನಾಯ್ಡುಅವರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ, ಬಿಜೆಪಿ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಲಾಗ ಪರಿಸ್ಥಿಯಲ್ಲಿದೆ. ರಾಜ್ಯ ಮಟ್ಟದಲ್ಲಿ ಮುಸ್ಲಿಂ ನಾಯಕರನ್ನೂ ಕಡೆಗಣಿಸುವಂತಿಲ್ಲ. ಹಾಗಾಗಿ, ವಕ್ಫ್ ಮಸೂದೆ ಕುರಿತು ಟಿಡಿಪಿ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ವಕ್ಫ್ ತಿದ್ದುಪಡಿ ಮಸೂದೆಯು ಎನ್ಡಿಎ ಸರ್ಕಾರವನ್ನು ಬೆಂಬಲಿಸಿದ ಬಳಿಕ ನಾಯ್ಡು ಅವರ ಜಾತ್ಯತೀತ ಇಮೇಜ್ಗೆ ಎದುರಾದ ಮೊದಲ ಅಗ್ನಿ ಪರೀಕ್ಷೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಫಜ್ಲುರಹೀಂ ಮುಜದ್ದಿದಿ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗವು ಅಕ್ಟೋಬರ್ 23ರಂದು ಅಮರಾವತಿಯಲ್ಲಿ ನಾಯ್ಡು ಅವರನ್ನು ಭೇಟಿ ಮಾಡಿ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ವಿರೋಧಿಸುವಂತೆ ಒತ್ತಾಯಿಸಿದೆ.
ನಾಯ್ಡು ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎಂ.ಡಿ ಫಾರೂಕ್ ಮತ್ತು ಆಂಧ್ರ ಪ್ರದೇಶದ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಮೊಹಮ್ಮದ್ ಅಹ್ಮದ್ ಷರೀಫ್ ಅವರು ಈ ನಿಯೋಗದಲ್ಲಿದ್ದರು. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ಈ ನಾಯಕರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಸ್ತಾಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯಕ್ಕೆ ಹೇಗೆ ವಿರೋಧವಾಗಿದೆ ಎಂದು ವಿವರಿಸಿದ್ದಾರೆ.
ಈ ವಿಷಯದ ಬಗ್ಗೆ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ಪಕ್ಷವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಟಿಡಿಪಿ ಮುಖ್ಯಸ್ಥರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ, ಟಿಡಿಪಿ ತನ್ನ ರಾಜ್ಯ ಉಪಾಧ್ಯಕ್ಷ ವಿ.ಎಸ್ ಅಮೀರ್ ಬಾಬು ಅವರನ್ನು ದೆಹಲಿಗೆ ಕಳುಹಿಸಿ ವಕ್ಫ್ ತಿದ್ದುಪಡಿ ಮಸೂದೆ ವಿರುದ್ದ ಎತ್ತಿರುವ ಆಕ್ಷೇಪಣೆಗಳ ಕುರಿತು ಎಐಎಂಪಿಎಲ್ಬಿ ಮತ್ತು ಇತರ ಸಂಘನೆಗಳು ಮುಖಂಡರ ಜೊತೆ ಚರ್ಚಿಸುವಂತೆ ಹೇಳಿತ್ತು.
ವರದಿಗಳ ಪ್ರಕಾರ, ವಕ್ಫ್ ತಿದ್ದುಪಡಿಸ ಮಸೂದೆ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ದವಾಗಿದೆ ಎಂದಿರುವ ಟಿಡಿಪಿ, ಅದನ್ನು ವಿರೋಧಿಸಿದೆ ಎನ್ನಲಾಗುತ್ತಿದೆ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವ ಮಂಡಳಿಯು ಆ ಸಮುದಾಯದ ಸದಸ್ಯರನ್ನು ಮಾತ್ರ ಒಳಗೊಂಡಿರಬೇಕು ಎಂಬುವುದನ್ನು ಚಂದ್ರಬಾಬು ನಾಯ್ಡು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅಮೀರ್ ಬಾಬು ಹೇಳಿಕೆ ಕೊಟ್ಟಿದ್ದಾರೆ. ಇದು ಟಿಡಿಪಿ ಮಸೂದೆಗೆ ವಿರುದ್ದವಿದೆ ಎಂಬುವುದನ್ನು ಪುಷ್ಠೀಕರಿಸಿದೆ.
ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಬೋರ್ಡ್ಗಳಿಗೆ ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನೇಮಿಸಲು ವಕ್ಫ್ ತಿದ್ದುಪಡಿ ಮಸೂದೆ ಅನುವು ಮಾಡಿಕೊಡುವುದನ್ನು ಮುಸ್ಲಿಂ ನಾಯಕರು ವಿರೋಧಿಸಿದ್ದಾರೆ ಎಂಬುವುದು ಇಲ್ಲಿ ಗಮನಾರ್ಹ ಅಂಶ.
ನಾಯ್ಡು ಜಾತ್ಯತೀತ ನಾಯಕ ಎಂದು ಪ್ರತಿಪಾದಿಸಿರುವ ಅಮೀರ್ ಬಾಬು, ಟಿಡಿಪಿ ಮುಖ್ಯಸ್ಥರು ನಿರ್ಧಾರ ತೆಗೆದುಕೊಳ್ಳುವಾಗ ಮುಸ್ಲಿಂ ಸಮುದಾಯದ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ವಕ್ಫ್ ಮಸೂದೆ ವಿರುದ್ಧ ಡಿ.15ರಂದು ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದಿರುವ ಅಮೀರ್ ಬಾಬು, ಜಂ ಇಯತುಲ್ ಉಲಮಾ-ಇ-ಹಿಂದ್ ಆಯೋಜಿಸಲು ಉದ್ದೇಶಿಸಿರುವ ಈ ಸಾರ್ವಜನಿಕ ಸಭೆಯಲ್ಲಿ ನಾಯ್ಡು ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ನಡುವೆ, ಜಮಾತೆ ಇಸ್ಲಾಮಿ ಹಿಂದ್ ಭಾನುವಾರ ಸಂಜೆ ವಿಜಯವಾಡದಲ್ಲಿ ಸಾರ್ವಜನಿಕ ಸಭೆ ಅಯೋಜಿಸಿತ್ತು. ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಎಸ್.ಖಾಸಿಂ ರಸೂಲ್ ಇಲ್ಯಾಸ್ ಅವರು ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು. ಈ ಸಭೆಗೆ ಟಿಡಿಪಿಯ ವಿಜಯವಾಡ ಸಂಸದ ಕೆಸಿನೇನಿ ಶಿವನಾಧ ನಾಣಿ ಅವರನ್ನು ಆಹ್ವಾನಿಸಿದ್ದರು. ಹಿರಿಯ ಟಿಡಿಪಿ ನಾಯಕ ಅಹ್ಮದ್ ಷರೀಫ್ ಕೂಡ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಟಿಡಿಪಿಯ ಮುಸ್ಲಿಂ ಮುಖಂಡರು ಚುನಾವಣಾ ಪ್ರಚಾರದ ಸಮಯದಲ್ಲಿ, ಟಿಡಿಪಿ ಜಾತ್ಯತೀತತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುವುದನ್ನು ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾಗಿ ಒತ್ತಿ ಹೇಳಿದ್ದರು. ಪ್ರತಿ ಸಾರ್ವಜನಿಕ ಸಭೆಯಲ್ಲಿ, ನಾಯ್ಡು ಹಿಂದೆ ಸಮ್ಮಿಶ್ರ ಸರ್ಕಾರಗಳ ಪಾಲುದಾರರಾಗಿ ಅಥವಾ ಹೊರಗಿನ ಬೆಂಬಲಿಗರಾಗಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಕೆಲಸ ಮಾಡಿದ್ದಾರೆ ಎಂದಿದ್ದರು.
ಇದೀಗ ನಾಯ್ಡು ಬೆಂಬಲಿಸಿರುವ ಬಿಜೆಪಿ ಪಕ್ಷ ವಕ್ಫ್ ತಿದ್ದುಪಡಿ ಮಸೂದೆ ತಂದಿದೆ. ಅದರಲ್ಲಿರುವ ಅಂಶಗಳು ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ದವಿದೆ ಎಂಬುವುದು ಸಮುದಾಯಕ್ಕೆ ಮನದಟ್ಟಾಗಿದೆ. ಹಾಗಾಗಿ, ತಾವು ಬೆಂಬಲಿಸಿ ಮತ ನೀಡಿರುವ ಟಿಡಿಪಿ ಅಥವಾ ಚಂದ್ರಬಾಬು ನಾಯ್ಡು ಸಮುದಾಯದ ಪರ ನಿಲ್ಲಬೇಕು ಎಂಬುವುದು ಮುಸ್ಲಿಮರ ಆಗ್ರಹ. ಅತ್ತ ಎನ್ಎಡಿ ಸರ್ಕಾರವನ್ನು ಬೆಂಬಲಿಸಿ ತಮ್ಮ ಪಕ್ಷದ ಸಂಸದರಿಗೆ ಹಲವು ಸ್ಥಾನಗಳನ್ನು ಪಡೆದಿರುವ ನಾಯ್ಡು, ಮುಸ್ಲಿಮರು ಮತ್ತು ಬಿಜೆಪಿಯ ನಡುವೆ ಅಡಕತ್ತರಿಗೆ ಸಿಲುಕಿದ್ದಾರೆ.
ಇದನ್ನೂ ಓದಿ : ಜಾತಿಗಣತಿಗೆ ಆಗ್ರಹಿಸಿದ ನಟ ವಿಜಯ್ ಪಕ್ಷ ಟಿವಿಕೆ : ವಕ್ಫ್ ಮಸೂದೆ, ಒಂದು ರಾಷ್ಟ್ರ ಒಂದು ಚುನಾವಣೆ ವಿರುದ್ಧ ನಿರ್ಣಯ


