ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಕೇಂದ್ರ ಸರ್ಕಾರ ಮುಂದಿನ ಜನಗಣತಿಯೊಂದಿಗೆ ಜಾತಿ ಎಣಿಕೆಯನ್ನು ಘೋಷಿಸುವ ಸಮಯ ಅನುಮಾನಾಸ್ಪದವಾಗಿದೆ ಎಂದು ಹೇಳಿದರು, ಆದರೂ ಅವರು ಇದನ್ನು ದೇಶದಲ್ಲಿ ಸಾಮಾಜಿಕ ನ್ಯಾಯದತ್ತ “ಮೊದಲ ಹೆಜ್ಜೆ” ಎಂದು ಕರೆದರು.
ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚುಕೋರರ ವಿರುದ್ಧ “ಸ್ಪಷ್ಟ ಕ್ರಮ” ವನ್ನು ಒತ್ತಾಯಿಸಿ ಕಾಂಗ್ರೆಸ್ ಕೇಂದ್ರದ ಮೇಲೆ ಚಾಟಿ ಬಿಸಲು ನಿರ್ಧರಿಸಿದೆ. ಈ ದಾಳಿಯ ಸಂಬಂಧ ಸಶಸ್ತ್ರ ಪಡೆಗಳಿಗೆ ಪ್ರತಿಕ್ರಿಯಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂಬ ಕೇಂದ್ರದ ಹೇಳಿಕೆಯು ಕಣ್ಣು ಹೊರೆಸುವ ತಂತ್ರ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಪ್ರಸ್ತಾವಿತ ಜನಗಣತಿಯ ಕುರಿತು ಸರ್ಕಾರ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ ಮತ್ತು ಜನಗಣತಿ ನಡೆಸುವುದಕ್ಕೆ ಹಣವನ್ನೂ ಹಂಚಿಕೆ ಮಾಡಿಲ್ಲ ಎಂಬ ಅಂಶದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವನ್ನು ರಾಹುಲ್ ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿವೆ. “ಇಡೀ ದೇಶವು ಪಹಲ್ಗಾಮ್ ದಾಳಿಯ ಬಲಿಪಶುಗಳಿಗಾಗಿ ಈಗ ಶೋಕದಲ್ಲಿರುವುದರಿಂದ ಈ ಘೋಷಣೆಯ ಸಮಯ ಅನುಮಾನಾಸ್ಪದವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು” ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ತಿಳಿಸಿದರೆಂದು ದಿ ಪ್ರಿಂಟ್ ವರದಿ ಮಾಡಿದೆ.
ಮುಂದಿನ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ನಡೆಸಲಾಗುವುದು ಎಂದು ಸರ್ಕಾರ ಬುಧವಾರ ಘೋಷಿಸಿದೆ. “ರಾಷ್ಟ್ರವ್ಯಾಪಿ ಜಾತಿಗಣತಿಯನ್ನು ಒತ್ತಾಯಿಸುವುದಕ್ಕೆ ಪ್ರಬಲ ಮತ್ತು ಗಟ್ಟಿ ಧ್ವನಿಯಾಗಬೇಕು” ಎಂದು ಸಭೆಯು ತನ್ನ ಅಂಗೀಕರಿಸಿದ ನಿರ್ಣಯದಲ್ಲಿ ಬಣ್ಣಿಸಿರುವ ರಾಹುಲ್, ಕಾಂಗ್ರೆಸ್ ಈಗ ಅನುಸರಿಸಲಿರುವ ಮಾರ್ಗಸೂಚಿಯನ್ನು ಸಹ ವಿವರಿಸಿದ್ದಾರೆ, ರಾಷ್ಟ್ರವ್ಯಾಪಿ ಜಾತಿಗಣತಿಯ ಬೇಡಿಕೆಯನ್ನು ಈಗ ಕಾಗದದ ಮೇಲೆ ಈಡೇರಿಸಲಾಗಿದೆ ಎಂದಿದ್ದಾರೆ.
“ಸುಪ್ರೀಂ ಕೋರ್ಟ್ ವಿಧಿಸಿರುವ ಶೇಕಡಾ 50ಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ಸಕ್ರಿಯಗೊಳಿಸಲು ಸಾಂವಿಧಾನಿಕ ತಿದ್ದುಪಡಿಗಾಗಿ ಪಕ್ಷವು ಈಗ ಒತ್ತಾಯಿಸುತ್ತದೆ ಎಂದು ಅವರು ಹೇಳಿದರು. ಅಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತರಲು 15(5)ನೇ ವಿಧಿಯನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತದೆ” ಎಂದು ಮೂಲಗಳು ತಿಳಿಸಿವೆ.
ಜಾತಿ ಜನಗಣತಿಯ ಕುರಿತಾದ CWC ನಿರ್ಣಯವು 15(5)ನೇ ವಿಧಿಯ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳಿದೆ. 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ I ಸರ್ಕಾರದ ಅಡಿಯಲ್ಲಿ 93ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾದ ನಿಬಂಧನೆಯನ್ನು ಸಕ್ರಿಯಗೊಳಿಸುವುದು “ತಡವಾಯಿತು” ಎಂದು ಹೇಳಿದೆ.
“ಖಾಸಗಿ ಸಂಸ್ಥೆಗಳು, ಉನ್ನತ ಶಿಕ್ಷಣದಲ್ಲಿ ಹೆಚ್ಚು ಪ್ರಬಲ ಪಾತ್ರ ವಹಿಸುವ ಯುಗದಲ್ಲಿ ಅಂಚಿನಲ್ಲಿರುವ ಸಮುದಾಯಗಳನ್ನು ಇಲ್ಲಿಂದ ಹೊರಗಿಡುವುದು ಅಸಮಾನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. 15(5)ನೇ ವಿಧಿಯು ಕೇವಲ ಸಾಂವಿಧಾನಿಕ ನಿಬಂಧನೆಯಲ್ಲ, ಇದು ಸಾಮಾಜಿಕ ನ್ಯಾಯದ ಕಡ್ಡಾಯವಾಗಿದೆ. ಇದರಿಂದ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳು, ಇಬಿಸಿಗಳು, ದಲಿತರು ಮತ್ತು ಆದಿವಾಸಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ದೊರಕುತ್ತದೆ ಎಂದು ಕಾಂಗ್ರೆಸ್ ದೃಢವಾಗಿ ನಂಬುತ್ತದೆ” ಎಂದು ನಿರ್ಣಯವು ಹೇಳಿದೆ.
ಕೇಂದ್ರವು ಜಾತಿಗಣತಿಯನ್ನು ಪ್ರಾಮಾಣಿಕವಾಗಿ ನಡೆಸಲು ಸಿದ್ಧರಿದ್ದರೆ, ಕಾಂಗ್ರೆಸ್ ನೇತೃತ್ವದ ತೆಲಂಗಾಣ ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿಸಮೀಕ್ಷೆಯನ್ನು ಉಲ್ಲೇಖಿಸಿ “ತೆಲಂಗಾಣ ಮಾದರಿಯನ್ನು” ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ರಾಹುಲ್ ಹೇಳಿದರು.
ಈ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು. ಎಲ್ಲಾ ರಾಜಕೀಯ ಪಕ್ಷಗಳನ್ನು ಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ವಿಷಯದ ಬಗ್ಗೆ ಸಂಸತ್ತು ತಕ್ಷಣವೇ ಚರ್ಚೆ ನಡೆಸಬೇಕು. ಪ್ರಶ್ನಾವಳಿ ಮತ್ತು ವಿಧಾನದ ತಯಾರಿಕೆಯಿಂದ ಹಿಡಿದು ಎಣಿಕೆ, ವರ್ಗೀಕರಣ ಮತ್ತು ಅಂತಿಮವಾಗಿ ದತ್ತಾಂಶದ ಪ್ರಕಟಣೆಯವರೆಗೆ ಜನಗಣತಿಯ ಪ್ರತಿಯೊಂದು ಹಂತಕ್ಕೂ ಸರ್ಕಾರವು ತಕ್ಷಣವೇ ಅಗತ್ಯ ಹಣವನ್ನು ಹಂಚಿಕೆ ಮಾಡಬೇಕು ಮತ್ತು ಸ್ಪಷ್ಟ ಸಮಯವನ್ನು ಘೋಷಿಸಬೇಕು ಎಂದು ರಾಹುಲ್ ಒತ್ತಾಯಿಸಿದರು.
ಸಂಗ್ರಹಿಸಿದ ದತ್ತಾಂಶವು ವಿಶೇಷವಾಗಿ ಮೀಸಲಾತಿ, ಕಲ್ಯಾಣ ಯೋಜನೆಗಳು, ಶೈಕ್ಷಣಿಕ ಪ್ರವೇಶ ಮತ್ತು ಉದ್ಯೋಗಾವಕಾಶಗಳ ಕ್ಷೇತ್ರಗಳಲ್ಲಿ ಸಾರ್ವಜನಿಕ ನೀತಿಯ ವ್ಯಾಪಕ ವಿಮರ್ಶೆಗೆ ಆಧಾರವಾಗಿ ಕಾರ್ಯನಿರ್ವಹಿಸಬೇಕು. ಜಾತಿ ಜನಗಣತಿಯನ್ನು ಸರಿಯಾಗಿ ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಿದರೆ ಅದು ಸಮಾಜದ ಎಲ್ಲಾ ವರ್ಗಗಳ ಪ್ರಯೋಜನಕ್ಕಾಗಿ ಕೆಲಸ ಮಾಡುತ್ತದೆ ಎಂದು ಸಭೆಯು ಒಪ್ಪುತ್ತದೆ” ಎಂದು CWC ನಿರ್ಣಯವು ಸೇರಿಸಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು “ಪಾಕಿಸ್ತಾನಕ್ಕೆ ಪಾಠ ಕಲಿಸುವ” ಮತ್ತು ಭಯೋತ್ಪಾದನೆಯನ್ನು ನಿರ್ಣಾಯಕವಾಗಿ ನಿಗ್ರಹಿಸುವ ಅಗತ್ಯವನ್ನು ಒತ್ತಿಹೇಳುವ ನಿರ್ಣಯವನ್ನು CWC ಅಂಗೀಕರಿಸಿದೆ. ಇಡೀ ದೇಶವು ಈ ಘಟನೆಯ ಹೊಣೆಗಾರಿಕೆಗೆ ಯಾರದ್ದು?, ಇದಕ್ಕೆ ಸಂಬಂಧಿಸಿದ ಉತ್ತರಗಳು ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ ಎಂದು ಅದು ಹೇಳಿದೆ.
ದೇಶದ ಅತ್ಯಂತ ಬಿಗಿ ಭದ್ರತೆಯ ಪ್ರದೇಶಗಳಲ್ಲಿ ಒಂದಾದ ಭದ್ರತೆ ಮತ್ತು ಗುಪ್ತಚರದಲ್ಲಿನ ಗಂಭೀರ ಲೋಪಗಳ ಹೊಣೆಗಾರಿಕೆಗಾಗಿ CWC ತನ್ನ ಹಿಂದಿನ ಬೇಡಿಕೆಯನ್ನು ಪುನರುಚ್ಚರಿಸುತ್ತದೆ. ಭಾರತದ ಜನರು ಘಟನೆಯ ಪಾರದರ್ಶಕತೆ ಮತ್ತು ಯಾರ ಹೊಣೆಗಾರಿಕೆ ಎಂದು ಪ್ರಶ್ನಿಸಲು ಅರ್ಹರು ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಡಬ್ಲ್ಯೂಸಿ ಸಭೆಯಲ್ಲಿ ತಮ್ಮ ಭಾಷಣದಲ್ಲಿ, “ಈ ಘಟನೆ ನಡೆದು ಹಲವು ದಿನಗಳ ನಂತರವೂ ಸರ್ಕಾರದಿಂದ ಯಾವುದೇ ಸ್ಪಷ್ಟ ಕಾರ್ಯತಂತ್ರ ಹೊರಹೊಮ್ಮಿಲ್ಲ” ಎಂದು ಹೇಳಿದರು.
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್, “ಲಾಲ್ ಅಂಖ್ (ಕೆಂಪು ಕಣ್ಣು) ಬಗ್ಗೆ ಮಾತನಾಡುತ್ತಿದ್ದ 56 ಇಂಚಿನ ಎದೆಯ ಪ್ರಧಾನಿ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ? ಅಲ್ಲದೆ, ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಯಾವುದೇ ಭದ್ರತೆ ಏಕೆ ಇರಲಿಲ್ಲ?” ಎಂದು ಪ್ರಶ್ನಿಸಿದರು.
ಆದಾಗ್ಯೂ ಕಾಂಗ್ರೆಸ್ ನಾಯಕತ್ವವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಗುರಿಯನ್ನು ಹೊಂದಿರುವ ಪಕ್ಷಪಾತದ ಸಮಯ ಇದಲ್ಲ ಎಂದು ಪುನರುಚ್ಚರಿಸಲು ಎಚ್ಚರಿಕೆಯಿಂದಿತ್ತು.
“ನಾವು ಪಕ್ಷಪಾತದ ವಿಭಜನೆಗಳನ್ನು ಮೀರಿ ಎದ್ದು ನಿಂತು ಭಾರತದ ಒಗ್ಗಟ್ಟಿಗೆ ನಿಲ್ಲುತ್ತವೆ ಮತ್ತು ಒಡಕನ್ನುಂಟುಮಾಡುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಕಳುಹಿಸಬೇಕು” ಎಂದು ನಿರ್ಣಯವು ಹೇಳಿದೆ.
ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಿರ್ಣಯದಲ್ಲಿ “ವಿಚಾರಣೆ” ಎಂಬ ಪದವನ್ನು ಬಳಸದಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಒತ್ತಾಯದ ಮೇರೆಗೆ ಅದನ್ನು “ಜವಾಬ್ದಾರಿ” ಎಂಬ ಪದಕಕೆ ಬದಲಾಯಿಸಲಾಯಿತು. “ಇಡೀ ದೇಶವು ಹೊಣೆಗಾರಿಕೆ, ಉತ್ತರಗಳು ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ” ಎಂದು ನಿರ್ಣಯದಲ್ಲಿನ ಒಂದು ಸಾಲು ಹೇಳುತ್ತದೆ.
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪಂಜಾಬ್ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಚರಣ್ಜಿತ್ ಸಿಂಗ್ ಚನ್ನಿ, ಯಾವುದೇ ವಿವಾದಕ್ಕೆ ಸಿಲುಕದಂತೆ ಕಾಂಗ್ರೆಸ್ ಪ್ರತಿಕ್ರಿಯೆಗಳನ್ನು ನೀಡಲು ಪ್ರಯತ್ನಿಸುತ್ತಿರುವಾಗ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಮಾಡಿದರು.
2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಕೈಗೊಂಡ ಬಾಲಕೋಟ್ ವಾಯುದಾಳಿಗಳು “ಎಂದಿಗೂ ನಡೆದಿಲ್ಲ” ಎಂದು ಅವರು ಸೂಚಿಸಿದಂತೆ ಕಂಡುಬಂದಿತು. ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಸೇರಿದಂತೆ ಏಪ್ರಿಲ್ 22ರಿಂದ ಕೇಂದ್ರವು ತೆಗೆದುಕೊಂಡ ಕ್ರಮಗಳನ್ನು ಚನ್ನಿ ಅವರು “ಅರ್ಥಹೀನ” ಎಂದು ಕರೆದರು.
“ಅವರು ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ್ದಾರೆ. ಅದು ಕೂಡ ಸಾಧ್ಯವಿಲ್ಲ. ಮುಂದಿನ ದಶಕದವರೆಗೂ ಕೇಂದ್ರವು ಹಣವನ್ನು ಖರ್ಚು ಮಾಡಿದರೂ ಸಹ, ಶೇಕಡಾ 20ರಷ್ಟು ನೀರನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ. ಏಕೆಂದರೆ ಭೂಮಿಯು ಆ ಕಡೆಗೆ (ಪಾಕಿಸ್ತಾನ) ವಾಲಿದೆ. ಅವರು ತೆಗೆದುಕೊಂಡ ಕ್ರಮಗಳಿಗೆ ಯಾವುದೇ ಮೌಲ್ಯವಿಲ್ಲ. ಈ ಕ್ರಮಗಳಿಂದ ದೇಶದ ಜನರು ಹೇಗೆ ತೃಪ್ತರಾಗುತ್ತಾರೆ?” ಎಂದು ಚನ್ನಿ ಪ್ರಶ್ನಿಸಿದರು.
“ಹಿಂದಿನ ದಾಳಿಯ ನಂತರವೂ (ಪುಲ್ವಾಮಾ) 40 ಸೈನಿಕರು ಸಾವನ್ನಪ್ಪಿದ್ದರು, ಅವರು ದೊಡ್ಡ ಹೇಳಿಕೆಗಳನ್ನು ನೀಡಿದ್ದರು. ಆದರೆ ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ದಾಳಿ ಎಲ್ಲಿ ನಡೆಯಿತು, ಯಾರು ಎಲ್ಲಿ ಕೊಲ್ಲಲ್ಪಟ್ಟರು, ಎಲ್ಲಿ ಏನು ನಡೆಯಿತು ಎಂದು ನನಗೆ ತಿಳಿದಿಲ್ಲ. ಯಾರಾದರೂ ಬಂದು ನಮ್ಮ ದೇಶದಲ್ಲಿ ಬಾಂಬ್ ಹಾಕಿದರೆ, ನಮಗೆ ತಿಳಿಯುವುದಿಲ್ಲವೇ? ಕೇಂದ್ರವು ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಹೇಳಿಕೊಂಡಿತು. ಅಂತಹದ್ದೇನೂ ಆಗಿಲ್ಲ, ಯಾವುದೇ ಸರ್ಜಿಕಲ್ ಸ್ಟ್ರೈಕ್ಗಳಿಲ್ಲ,” ಎಂದು ಚನ್ನಿ ಹೇಳಿದರು, ದಾಳಿಗಳ ಪುರಾವೆಗಳನ್ನು ನಾವು ನಿರಂತರವಾಗಿ ಕೇಳುತ್ತಲೇ ಇದ್ದಾವೆ ಎಂದು ಅವರು ತಿಳಿಸಿದರು.