ಸುದ್ದಿ ಸಂಸ್ಥೆ ‘ದಿ ವೈರ್’ ಪೋಸ್ಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿಡಂಬನಾತ್ಮಕ ಅನಿಮೇಷನ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ನಿರ್ಬಂಧಿಸಿವೆ.
ಸೋಮವಾರ (ಫೆ.10) ಸಂಜೆ ಸುಮಾರು ಎರಡು ಗಂಟೆಗಳ ಕಾಲ ವೈರ್ನ ಇನ್ಸ್ಟಾಗ್ರಾಮ್ ಖಾತೆ ಭಾರತದಲ್ಲಿ ಕಾಣಿಸುತ್ತಿರಲಿಲ್ಲ ಎಂದು ವರದಿಯಾಗಿದೆ.
“ಈ ಪೇಜ್ ಭಾರತದಲ್ಲಿ ‘ಲಭ್ಯವಿಲ್ಲ’, ಏಕೆಂದರೆ ಈ ವಿಷಯವನ್ನು ನಿರ್ಬಂಧಿಸಲು ಬಂದಿರುವ ‘ಕಾನೂನಾತ್ಮಕ ವಿನಂತಿಗೆ’ ಪ್ಲಾಟ್ಫಾರ್ಮ್ ಬದ್ಧವಾಗಿದೆ” ಎಂಬ ಸಂದೇಶವನ್ನು ವೈರ್ ಪೇಜ್ಗೆ ಭೇಟಿ ನೀಡಿದವರು ನೋಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಭಾರತದಿಂದ ಹೊರಗಿರುವ ಬಳಕೆದಾರರು ಮತ್ತು ವಿಪಿಎನ್ ಬಳಸುವವರಿಗೆ ಮಾತ್ರ ಪೇಜ್ ಕಾಣಿಸುತ್ತಿತ್ತು ಎಂದು ದಿ ವೈರ್ ವರದಿ ಹೇಳಿದೆ.
ದಿ ವೈರಲ್ ಶನಿವಾರ (ಫೆ.7) ಸಂಜೆ ಸುಮಾರು 6:30ಕ್ಕೆ ತನ್ನ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ಪ್ಲಾಟ್ಫಾರ್ಮ್ಗಳಿಗೆ ಅಪ್ಲೋಡ್ ಮಾಡಿದ್ದ 52 ಸೆಕೆಂಡ್ಗಳ ಅನಿಮೇಟೆಡ್ ವಿಡಿಯೋವನ್ನು ಮೂರೂ ವೇದಿಕೆಗಳಲ್ಲಿ ನಿರ್ಬಂಧಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ವೈರ್ನ ಇನ್ಸ್ಟಾಗ್ರಾಮ್ ಖಾತೆ ಮರುಸ್ಥಾಪಿಸಲಾಗಿದೆ. ಆದರೆ, ಅಪ್ಲೋಡ್ ಮಾಡಲಾಗಿದ್ದ ವಿಡಂಬನಾತ್ಮಕ ಅನಿಮೇಷನ್ ಮಾತ್ರ ಮೂರೂ ಪ್ಲಾಟ್ಫಾರ್ಮ್ಗಳಲ್ಲಿ ಕಾಣಿಸುತ್ತಿಲ್ಲ ಎನ್ನಲಾಗಿದೆ.
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಬಗ್ಗೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈರ್ನ ಅನಿಮೇಷನ್ ವಿಡಂಬನೆ ಮಾಡಿತ್ತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಖಾತೆಯನ್ನು ನಿರ್ಬಂಧಿಸಲು ನಿರ್ದಿಷ್ಟವಾಗಿ ಆದೇಶಿಸಿಲ್ಲ ಎಂದು ತನಗೆ ತಿಳಿಸಿದೆ ಎಂದು ಸೋಮವಾರ ‘ದಿ ವೈರ್’ ಹೇಳಿದೆ.
ಆದಾಗ್ಯೂ, ಸಚಿವಾಲಯ ಕೇವಲ 52 ಸೆಕೆಂಡ್ಗಳ ವಿಡಂಬನಾತ್ಮಕ ಕಾರ್ಟೂನ್ ಅನ್ನು ನಿರ್ಬಂಧಿಸುವಂತೆ ಮೆಟಾ ಸಂಸ್ಥೆಗೆ ಸೂಚಿಸಿತ್ತು. ಕಂಪನಿ ತಪ್ಪಾಗಿ ಇಡೀ ಇನ್ಸ್ಟಾಗ್ರಾಮ್ ಖಾತೆಯನ್ನೇ ನಿರ್ಬಂಧಿಸಿದೆ ಎಂಬ ವಿಷಯ ತನಗೆ ಅನಧಿಕೃತ ಮೂಲಗಳಿಂದ ತಿಳಿದುಬಂದಿದೆ ಎಂದು ದಿ ವೈರ್ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ನಿರ್ದಿಷ್ಟ ವಿಷಯ ಅಥವಾ ಪೋಸ್ಟ್ ಅನ್ನು ನಿರ್ಬಂಧಿಸುವ ಮೊದಲು ಕೇಂದ್ರ ಸರ್ಕಾರ ಪೋಸ್ಟ್ ಮಾಡಿದವರಿಗೆ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ತನಗೆ ಯಾವುದೇ ರೀತಿಯ ಲಿಖಿತ ಮಾಹಿತಿ ಬಂದಿಲ್ಲ ಎಂದು ‘ದಿ ವೈರ್’ ಹೇಳಿಕೊಂಡಿದೆ.
ಬುಧವಾರ (ಫೆ.11) ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ದಿ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್, “ನಮ್ಮ ಕಾರ್ಟೂನ್ ಮೇಲೆ ನರೇಂದ್ರ ಮೋದಿಯವರು ಹೇರಿರುವ ಅಸಂಬದ್ಧ ಮತ್ತು ಸರ್ವಾಧಿಕಾರಿ ಧೋರಣೆಯ ನಿಷೇಧದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ‘ದಿ ವೈರ್’ ಮತ್ತು ತಮ್ಮ ವಾಕ್ ಸ್ವಾತಂತ್ರ್ಯ ಹಾಗೂ ನಗುವಿನ ಹಕ್ಕನ್ನು ಪ್ರೀತಿಸುವ ಸಾರ್ವಜನಿಕರು ಈ ಹೋರಾಟದಲ್ಲಿ ಗೆಲ್ಲಲು ದಯವಿಟ್ಟು ಉದಾರವಾಗಿ ದೇಣಿಗೆ ನೀಡಿ” ಎಂದು ಬರೆದುಕೊಂಡಿದ್ದಾರೆ.


