ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾ ಮತದಾನ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಎರಡು ದಿನಗಳಲ್ಲಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಜಾರ್ಖಂಡ್ನ ಹಜಾರಿಬಾಗ್ ಕ್ಷೇತ್ರದ ಹಾಲಿ ಸಂಸದರಾಗಿರುವ ಜಯಂತ್ ಸಿನ್ಹಾ ಬದಲಿಗೆ ಈ ಬಾರಿ ಮನೀಷ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಮುನಿಸಿಕೊಂಡಿದ್ದ ಜಯಂತ್ ಸಿನ್ಹಾ ಸಂಘಟನಾ ಕೆಲಸ ಮತ್ತು ಚುನಾವಣಾ ಪ್ರಚಾರದಲ್ಲಿ ಭಾಗವಹಿಸದೆ ದೂರ ಉಳಿದುಕೊಂಡು ಅಸಮಾಧಾನವನ್ನು ಹೊರಹಾಕಿದ್ದರು. ನಿನ್ನೆ ನಡೆದ ಚುನಾವಣೆಯಲ್ಲಿ ಕನಿಷ್ಠ ಪಕ್ಷ ಮತದಾನವನ್ನು ಕೂಡ ಅವರು ಮಾಡಿರಲಿಲ್ಲ. ಇದರಿಂದ ಬಿಜೆಪಿ ಇದೀಗ ಜಯಂತ್ ಸಿನ್ಹಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿ ನೊಟೀಸ್ ನೀಡಿದೆ.
‘ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕೆಲಸ ಮತ್ತು ಚುನಾವಣಾ ಪ್ರಚಾರದಲ್ಲಿ ಆಸಕ್ತಿ ವಹಿಸಿಲ್ಲ. ನಿಮ್ಮ ಮತವನ್ನು ಚಲಾಯಿಸಬೇಕು ಎಂದು ನಿಮಗೆ ಅನಿಸಲಿಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ’ ಎಂದು ಬಿಜೆಪಿ ಜಯಂತ್ ಸಿನ್ಹಾ ಅವರಿಗೆ ಕಳುಹಿಸಿದ ನೋಟಿಸ್ನಲ್ಲಿ ಹೇಳಿದೆ. ಈ ಬಗ್ಗೆ ಜಯಂತ್ ಸಿನ್ಹಾ ಅವರು ತಮ್ಮ ನಿಲುವನ್ನು ಎರಡು ದಿನಗಳಲ್ಲಿ ವಿವರಿಸುವಂತೆ ಸೂಚಿಸಲಾಗಿದೆ.
ಮಾರ್ಚ್ 2ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಜಯಂತ್ ಸಿನ್ಹಾ, ಭಾರತ ಮತ್ತು ವಿಶ್ವಾದ್ಯಂತ ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಬಗ್ಗೆ ಗಮನ ಹರಿಸಲು ಬಯಸಿರುವುದರಿಂದ ತಮ್ಮನ್ನು ಚುನಾವಣೆಗೆ ಸಂಬಂಧಿಸಿದ ನೇರ ಕರ್ತವ್ಯಗಳಿಂದ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಆಗ್ರಹಿಸಿದ್ದರು.
ಇದರ ಬೆನ್ನಲ್ಲಿ ಬಿಜೆಪಿ ಜೈಸ್ವಾಲ್ ಅವರನ್ನು ಜಾರ್ಖಂಡ್ ನ ಹಝಾರಿಬಾಗ್ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿತ್ತು. ಯಶ್ವಂತ್ ಸಿನ್ಹಾ ಹಾಗೂ ಅವರ ಪುತ್ರ ಜಯಂತ್ ಸಿನ್ಹಾ ಈ ಕ್ಷೇತ್ರಗಳನ್ನು ಮೊದಲು ಪ್ರತಿನಿಧಿಸಿದ್ದರು.
ನಿನ್ನೆ (ಮೇ 20) ಐದನೇ ಹಂತದ ಲೋಕಸಭಾ ಚುನಾವಣೆಯ ವೇಳೆ ಜಾರ್ಖಂಡ್ನ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಹಜಾರಿಬಾಗ್ನಲ್ಲಿ ಅತಿ ಹೆಚ್ಚು ಶೇಕಡಾ 64.32 ಮತದಾನವಾಗಿದೆ, ನಂತರ ಚತ್ರಾದಲ್ಲಿ 62.96 ಶೇಕಡಾ ಮತದಾನವಾಗಿದೆ ಮತ್ತು ಕೊಡೆರ್ಮಾದಲ್ಲಿ 61.86 ಶೇಕಡಾ ಮತದಾನವಾಗಿದೆ.
Jharkhand | BJP has issued a show-cause notice to former Union Minister and MP Jayant Sinha and asked him to reply within 2 days
"You are not taking any interest in organisational work and election campaigning ever since the party declared Manish Jaiswal as the candidate from… pic.twitter.com/sYkoELZo2g
— ANI (@ANI) May 21, 2024
ಇದನ್ನು ಓದಿ: ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲ; ಚು.ಆಯೋಗವನ್ನು ತರಾಟೆಗೆ ತೆಗೆದುಕೊಂಡ ಕಲ್ಕತ್ತಾ ಹೈಕೋರ್ಟ್


