Homeಕರ್ನಾಟಕ‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

- Advertisement -
- Advertisement -

ಚಿತ್ರದರ್ಗದ ಮುರುಘಾ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಮತ್ತೊಂದು ಸಂಗತಿ ಚರ್ಚೆಯ ಮುನ್ನೆಲೆಗೆ ಬಂದಿದೆ. ನಾಡಿನ ಬಹುತೇಕ ಜನರು, “ಈ ಮಠಾಧೀಶರೇಕೆ ಮದುವೆಯಾಗುವುದಿಲ್ಲ? ವಚನ ಪರಂಪರೆಯನ್ನು ಅನುಸರಿಸುವವರು ನಿಸರ್ಗ ಸಹಜ ಗುಣಗಳನ್ನು ಹತ್ತಿಕ್ಕುವುದಿಲ್ಲ ಹಾಗೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡು ಈ ರೀತಿಯ ಘೋರ ಅಪರಾಧದಲ್ಲಿ ಸಿಲುಕುವುದಿಲ್ಲ” ಎಂಬ ಅಭಿಪ್ರಾಯಗಳನ್ನು ತಾಳುತ್ತಿದ್ದಾರೆ.

ಲೌಕಿಕ ಜೀವನ, ಸತಿಪತಿ ಬಾಳ್ವೆ ಹಾಗೂ ನಿಸರ್ಗ ಸಹಜ ಸ್ಥಾಯಿ ಭಾವಗಳ ಕುರಿತು ವಚನಕಾರರ ನಿಲುವು ಏನಿತ್ತು? ಧರ್ಮಗುರುಗಳು ಎನಿಸಿಕೊಂಡು, ಗುರು ಪೀಠದಲ್ಲಿ ಕುಳಿತು ಜನರಿಗೆ ಮಾರ್ಗದರ್ಶನ ತೋರುವವರು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ? ನಿಜಕ್ಕೂ ವಚನಕಾರರ ಹಾದಿಯಲ್ಲಿ ಇವರು ನಡೆಯುತ್ತಿದ್ದಾರಾ?- ಈ ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

“ಶರಣ ಪರಂಪರೆಯಲ್ಲಿ ಸತಿ-ಪತಿ ಭಾವ ಎನ್ನುವುದು ಲೋಕ ವಿವರಣೆಗೂ ಬಳಕೆಯಾಗುತ್ತದೆ, ಕೌಟುಂಬಿಕ ವ್ಯವಸ್ಥೆಗೂ ಬಳಕೆಯಾಗುತ್ತದೆ. ಸತಿ-ಪತಿ ಭಾವವು ಶರಣ ಪರಂಪರೆಯಲ್ಲಿ ಬಹಳ ಮುಖ್ಯವಾದ ನಿಲುವು ಎನ್ನುತ್ತಾರೆ” ಚಿಂತಕ ಡಾ.ಎಸ್‌.ನಟರಾಜ ಬೂದಾಳು.

ಶ್ರಮಣ ಪರಂಪರೆಗಳ ಬಗ್ಗೆ ಗಂಭೀರವಾದ ಅಧ್ಯಯನ ಮಾಡಿದವರಲ್ಲಿ ಒಬ್ಬರಾದ ಬೂದಾಳು ಅವರು ಈ ವಿಷಯದ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತಾರೆ. “ಸತಿ-ಪತಿ ಭಾವ ಎನ್ನುವುದು ಗುರು-ಶಿಷ್ಯ ಪರಂಪರೆಗೂ ಅನ್ವಯವಾಗುತ್ತದೆ. ಅಂಗ-ಲಿಂಗ ಸಂಬಂಧಕ್ಕೂ ಅನ್ವಯವಾಗುತ್ತದೆ. ಕುಟುಂಬ ವ್ಯವಸ್ಥೆಗೂ ಅನ್ವಯವಾಗುತ್ತದೆ” ಎಂಬುದು ಅವರ ವಿಶ್ಲೇಷಣೆ.

“ಕುಟುಂಬ- ಶರಣರ ಮುಖ್ಯವಾದ ಕೇಂದ್ರ ಕಲ್ಪನೆಯೂ ಹೌದು. ಕೌಂಟುಬಿಕ ಬದುಕನ್ನು ತುಂಬಾ ಗೌರವದಿಂದ ನೋಡಿದರು ಹಾಗೂ ಅದನ್ನು ಜತನದಿಂದ ಕಾಪಾಡಬೇಕೆಂದು ಆಶಿಸಿದರು. ಕುಟುಂಬದಾಚೆಗಿನ ವ್ಯವಸ್ಥೆಗಳಾದ ಮಠಗಳ ಬಗ್ಗೆ ವಚನಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಶರಣರು ಕಾಲವಾದ ಸುಮಾರು ಇನ್ನೂರು ಮುನ್ನೂರು ವರ್ಷಗಳ ನಂತರದಲ್ಲಿ ಮಠಗಳು ಹುಟ್ಟಿಕೊಂಡವು” ಎನ್ನುತ್ತಾರೆ ಬೂದಾಳು.

ಮುಂದುವರಿದು, “ಶರಣರದ್ದು ಬಹುಮುಖ್ಯವಾಗಿ ಗುರುಶಿಷ್ಯ ಪರಂಪರೆಯಾಗಿದೆ. ಅದು ಗುರುಮಾರ್ಗವೇ ಹೊರತು ಮಠಮಾರ್ಗವಲ್ಲ. ಅರಿವನ್ನೇ ಗುರು ಎನ್ನುತ್ತಾರೆ ವಚನಕಾರರು. ಅಲ್ಲಮ, ಬಸವಣ್ಣ, ಜೇಡರ ದಾಸಮಯ್ಯ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರು ಒಳ್ಳೆಯ ಕುಟುಂಬಸ್ಥರಾಗಿದ್ದರು. ಬಸವಾದಿ ಶರಣರೆಲ್ಲ ಕುಟುಂಬ ಪ್ರೇಮಿಗಳೇ ಹೊರತು ಮಠ ಪ್ರೇಮಿಗಳಲ್ಲ” ಎಂದು ತಿಳಿಸಿದರು.

“ಬಸವಣ್ಣ, ಅಲ್ಲಮ, ಅಂಬಿಗರ ಚೌಡಯ್ಯ- ಇವರ್‍ಯಾರು ಯಾವುದೇ ಮಠದ ಜಗದ್ಗುರು ಆಗಿರಲಿಲ್ಲ. ಬದಲಿಗೆ ಒಳ್ಳೆಯ ಕುಟುಂಬಸ್ಥರಾಗಿದ್ದರು ಹಾಗೂ ಜ್ಞಾನಿಗಳಾಗಿದ್ದರು. ಶರಣರ ಕಾಲದಲ್ಲಿ ಯಾವುದೇ ಮಠಗಳು ಇರಲಿಲ್ಲ. ಆದರೆ ಅನುಭವ ಮಂಟಪಗಳು ಇದ್ದವು. ಎಲ್ಲೆಲ್ಲಿ ಶರಣರು, ಜ್ಞಾನಿಗಳು ಸೇರುತ್ತಿದ್ದರೋ ಅವೆಲ್ಲವನ್ನೂ ಅನುಭವ ಮಂಟಪ ಎನ್ನಲಾಗುತ್ತಿತ್ತು” ಎಂದು ವಿವರಿಸಿದರು.

“ಮಠ ಮಾನ್ಯಗಳ ನಡೆ ನಿಸರ್ಗ ಸಹಜವಾದದ್ದಲ್ಲ. ತಿಂದ ಅನ್ನದ ರಸವ ಕಟ್ಟಿದೊಡೆ ದೊಡ್ಡ ಯೋಗಿಯಾಗುತ್ತಾನೆಯೇ? ಅನ್ನ ತಿಂದ ಬಳಿಕ ಏನೆಲ್ಲ ನಿಸರ್ಗ ಸಹಜವಾಗಿ ಆಗಬೇಕೋ ಅದೆಲ್ಲವೂ ಆಗಬೇಕು ಎಂಬುದು ವಚನಕಾರರ ಆಶಯ” ಎಂದು ಸ್ಪಷ್ಟಪಡಿಸಿದರು.

ವಚನ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಾದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಾಯಕ ನಿರತರಾದ ವಚನಕಾರರು (ಸಂಸಾರಿಗಳು) ಹಾಗೂ ಜಂಗಮರು (ಬಹುತೇಕರು ಮದುವೆಯಾಗಿರುತ್ತಿರಲಿಲ್ಲ) ಎಂದು ಎರಡು ವಿಧದಲ್ಲಿ ವಚನಕಾರರನ್ನು ಗುರುತಿಸಬಹುದು. ಇವರ್‍ಯಾರು ಮಠಗಳನ್ನು ಸ್ಥಾಪಿಸಿದವರಲ್ಲ. ನಾಥ, ಸಿದ್ಧ ಪರಂಪರೆಯಲ್ಲಿ ಬರುವ ಭೈರಾಗಿಗಳ ರೀತಿ, ಬೌದ್ಧಬಿಕ್ಕುಗಳಂತೆ ಜಂಗಮರು ಸಂಚಾರಿಗಳಾಗಿದ್ದರು. ಆದರೆ ಮದುವೆಯಾಗಲೇಬಾರದು ಎನ್ನುವುದಾಗಲೀ, ಸನ್ಯಾಸ ಧರ್ಮವೇ ಶ್ರೇಷ್ಠ ಎನ್ನುವುದಾಗಲೀ ಯಾವುದೇ ವಚನಕಾರರ ನಿಲುವಾಗಿರಲಿಲ್ಲ. ಸತಿ-ಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎಂಬ ಉದಾತ್ತ ಚಿಂತನೆಯನ್ನು ಬಿತ್ತದವರು ಶರಣರು” ಎಂದರು.

“ವೈದಿಕ ಧರ್ಮ ಸನ್ಯಾಸವೇ ಶ್ರೇಷ್ಠ ಎಂದು ಪ್ರತಿಪಾದಿಸಿತು. ಬಾಲ ಸನ್ಯಾಸಿಗಳು ಇನ್ನೂ ಶ್ರೇಷ್ಠ, ಹೆಣ್ಣು ಮೋಕ್ಷಕ್ಕೆ ಅಡ್ಡಿ ಎಂದು ಹೇಳಿತು. ಪೂಜಾ ವಿಧಿಗಳಲ್ಲಿ ಹೆಣ್ಣು ಸಹಾಯಕಿಯಾಗಿರಬೇಕೋ ಹೊರತು ಪ್ರಧಾನ ಪೂಜಕಳಾಗಿರಬಾರದು ಎಂದು ನಿಯಮಗಳನ್ನು ವೈದಿಕ ಧರ್ಮ ತಂದಿತು. ಇದನ್ನು ವಿರೋಧಿಸಿದವರು ಶರಣರು. ಹೆಣ್ಣಿಗೂ ಲಿಂಗಾಧಾರಣೆ, ಇಷ್ಟಲಿಂಗ ಪೂಜೆಗೆ ಅವಕಾಶ ನೀಡಿತು. ಕಾಲಗಳು ಉರುಳಿದಂತೆ ವೈದಿಕ ಪ್ರಭಾವಕ್ಕೆ ಒಳಗಾದ ಕೆಲವರು ಮಠ ಕಟ್ಟಲು ಶುರು ಮಾಡಿದರು. ಇಲ್ಲಿ ಸಂಸಾರಿ ಮಠಗಳೂ ಇವೆ, ಸನ್ಯಾಸಿ ಮಠಗಳೂ ಇವೆ” ಎಂದು ಹೇಳಿದರು.

“ವೈದಿಕ ಮಠಗಳ ಅನುಕರಣೆಯಲ್ಲಿ ವಿರಕ್ತ ಮಠಗಳಲ್ಲಿಯೂ ಪೀಠಗಳು ಬಂದವು. ಆದರೆ ವಚನಕಾರರಲ್ಲಿ ಮದುವೆಯಾಗದೆಯೇ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಪರಿಕಲ್ಪನೆಯೇ ಇಲ್ಲ. ಶರಣರಿಗೆ ಸಂಸಾರ ಮತ್ತು ಕಾಯಕಗಳು ತೊಡಕುಗಳಾಗಿರಲಿಲ್ಲ. ಭಕ್ತಿಯನ್ನು ಪ್ರಕಟಿಸಲು ಇವುಗಳು ಸಾಧನಗಳಾಗಿದ್ದವು. ಸ್ವಾರ್ಥವಿಲ್ಲದ ಸಂಸಾರ ಕಲ್ಪನೆಯನ್ನು ಬೆಳೆಸಿದರು. ದಾಸೋಹ ಚಿಂತನೆ ಬೆಳೆದು ಬಂದಿದ್ದೇ ಈ ಮಾರ್ಗದಲ್ಲಿ. ವಚನಕಾರರ ಪ್ರಕಾರ ದುಡಿಯದೇ ತಿನ್ನುವುದು ಅಪರಾಧ, ಜೊತೆಗೆ ದುಡಿದು ತಾನೊಬ್ಬನೇ ತಿನ್ನವುದು ಕೂಡ ಅಪರಾಧ. ಅತಿಥಿಯೇ ಶಿವನ ಸ್ವರೂಪ” ಎಂದು ವಿಶ್ಲೇಷಿಸಿದರು.

“ಕಾಮ- ವ್ಯಾಮೋಹವಾಗಬಾರದು ಎಂಬುದು ವಚನಕಾರರ ನಿಲುವಾಗಿತ್ತು. ಪರಸತಿಯನ್ನೊಲ್ಲೆ, ಪರಧನವನ್ನೊಲ್ಲೆ ಎಂಬ ಸಂದೇಶವನ್ನು ಸಾರಿದರು. ಸತಿ-ಪತಿ ಒಂದಾದರೆ ಶಿವ-ಶಿವೆಯರ ಮಿಲನವಾದಂತೆ ಎಂದು ತಿಳಿಸಿದರು. ಆದರೆ ಕಾಮದ ಮೋಹ ಹಾಗೂ ಪರಸತಿಯ ಮೋಹವನ್ನು ಅಲ್ಲಗಳೆದರು. ಇದರ ಜೊತೆಗೆ ನಿಸರ್ಗಧರ್ಮವನ್ನು ಪ್ರತಿಪಾದಿಸಿದರು. ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು ಎಂದರು. ಒಡಲೆಚ್ಚೆ ಎಂಬುದು ಯಾವುದು? ಹಸಿವು, ನಿದ್ರೆ, ಕಾಮ ನಿಸರ್ಗ ತತ್ವಗಳು. ಅವುಗಳು ಎಷ್ಟಿರಬೇಕೋ ಅಷ್ಟು ಇರಲೇಬೇಕು. ಅಂದರೆ ಅದರಲ್ಲಿಯೇ ಮುಳುಗಬಾರದು ಎನ್ನುತ್ತಾರೆ ವಚನಕಾರರು. ನಿಸರ್ಗ ತತ್ವವನ್ನು ಅಲ್ಲಗಳೆದು ಬದುಕುವುದು ಶಿವನ ಇಚ್ಛೆಗೆ ವಿರುದ್ಧವಾಗಿ ಬದುಕಿದಂತೆ. ಆದರೆ ಲಂಪಟತನ ಬೇರೆ, ಕಾಮ ಬೇರೆ. ದುಡಿಮೆ ಬೇರೆ, ದುರಾಸೆ ಬೇರೆ ಎಂಬುದು ವಚನಕಾರರ ನಿಲುವುವಾಗಿತ್ತು” ಎಂದು ವಿವರಿಸಿದರು.

1
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

2
ಕಾಮ ಬೇಡ ಪರಸ್ತ್ರೀಯರಲ್ಲಿ
ಕ್ರೋಧ ಬೇಡ ಗುರುವಿನಲ್ಲಿ
ಲೋಭ ಬೇಡ ತನು ಮನ ಧನದಲ್ಲಿ
ಮೋಹ ಬೇಡ ಸಂಸಾರದಲ್ಲಿ
ಮದ ಬೇಡ ಶಿವಭಕ್ತರಲ್ಲಿ
ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ

3
ಭಕ್ತನ ಮನ ಹೆಣ್ಣಿನೊಳಗಾದಡೆ,
ವಿವಾಹವಾಗಿ ಕೊಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ,
ಬಳಲಿ ದೊರಕಿಸುವುದು ನೋಡಾ.
ಕಪಿಲಸಿದ್ಧಮಲ್ಲಿಕಾರ್ಜುನಾ

– ಈ ರೀತಿಯ ನೂರಾರು ವಚನಗಳನ್ನು ವಚನಕಾರರು ಬರೆದಿದ್ದಾರೆ ಎನ್ನುತ್ತಾರೆ ವಚನಗಳನ್ನು ಅಧ್ಯಯನ ಮಾಡಿದವರಾದ ವೀರಭದ್ರಗೌಡ ಅಮರಾಪುರ.

“17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿ ಎಂಬ ಶರಣ- ಹೊರಗೆ ಹೆಣ್ಣ ಬಿಟ್ಟು ನಿಶ್ಚಿಂತನೆಂದು ಹೇಳುವನಲ್ಲದೆ ಒಳಗೆಬಿಟ್ಟು ನಿಶ್ಚಿಂತನಲ್ಲನಯ್ಯ. ಇಂತಪ್ಪ ಏಕಾಂತ ದ್ರೋಹಿ- ಎಂದಿದ್ದಾರೆ. ಈ ರೀತಿಯಲ್ಲಿ ವಚನಕಾರರು ನಿಸರ್ಗ ಸಹಜ ಗುಣಗಳನ್ನು ಚಿಂತಿಸಿದರು” ಎನ್ನುತ್ತಾರೆ ಅಮರಾಪುರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲ ಪ್ಯಾರಾದಲ್ಲಿ. ಹತ್ತಿಕ್ಕುತ್ತಾರೆ ಮತ್ತು ಸಿಲುಕುತ್ತಾರೆ ಎಂಬ ಪದಗಳನ್ನು ಬಳಸಬೇಕಾಗಿತ್ತು ನೀವು ಬಳಸಿದ ಪದಗಳು ತಪ್ಪಾಗಿದೆ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...