ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ವೇಳೆ ಯೋಜನಾ ನಿರ್ದೇಶಕರು 800 ಕೋಟಿ ರೂ ಹಗರಣ ನಡೆಸಿದ್ದು, ಈ ಕುರಿತು ಸಿಬಿಐ ತನಿಖೆ ಮಾಡಬೇಕೆಂದು ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಒತ್ತಾಯಿಸಿದ್ದಾರೆ.
ಆರಂಭದಲ್ಲಿ ಭೂ ಸ್ವಾಧೀನಕ್ಕಾಗಿ 8,060 ಕೋಟಿ ರೂಗೆ ಡಿಪಿಆರ್ ಆಗಿತ್ತು. ಈಗ 10,600 ಕೋಟಿ ರೂವರೆಗೂ ಬಂದು ನಿಂತಿದೆ. ಪ್ರಾಥಮಿಕ ಭೂ ಸ್ವಾಧೀನ ನಡೆದಾಗ ಇದ್ದ ಹಣಕ್ಕೂ, ಸದ್ಯ ಅವರು ನೀಡಿರುವ ಹಣಕ್ಕೂ 800-900 ಕೋಟಿ ರೂ ಹೆಚ್ಚು ತೋರಿಸುತ್ತಿದ್ದಾರೆ. ಆ ಮೂಲಕ ಪ್ರಾಜೆಕ್ಟ್ ಡೈರೆಕ್ಟರ್ ಡಿ.ಬಿ ಶ್ರೀಧರ್ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಶಾಸಕರು, “ಬೆಂಗಳೂರು ಮೈಸೂರು ರಸ್ತೆಗಾಗಿ ನಾವು ಜನರನ್ನು ಒಪ್ಪಿಸಿ ಭೂಮಿ ಬಿಟ್ಟುಕೊಡುವಂತೆ ಮನವಿ ಮಾಡಿದ್ದೆವು. ಆದರೆ ಆ ಸಮಯದಲ್ಲಿ ಜನರಿಂದ ಭೂಮಿ ತೆಗೆದುಕೊಂಡು ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆನಂತರ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ಯಾರದೋ ಭೂಮಿಗೆ ಇನ್ಯಾರೊ ಪರಿಹಾರ ಪಡೆಯುತ್ತಿದ್ದಾರೆ. ಆ ಮೂಲಕ ಯೋಜನಾ ನಿರ್ದೇಶಕರು ಹಣ ಹೊಡೆದಿದ್ದಾರೆ. ಇದರಿಂದ ನಿಜವಾದ ರೈತರಿಗೆ ಅನ್ಯಾಯವಾಗಿದೆ” ಎಂದು ದೂರಿದರು.
ಇದನ್ನೂ ಓದಿ: 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಕ್ಷೆ; ಮಾಗಡಿಯಲ್ಲಿ ಗೆಲ್ಲುವವರು ಯಾರು?
ರಸ್ತೆ ಮಾಡುವಾಗ ಕೆರೆಗಳನ್ನು ಇಭ್ಭಾಗ ಮಾಡಲಾಗಿದೆ. ಕೆರೆಯ ಮಧ್ಯದಲ್ಲಿ ರಸ್ತೆ ಮಾಡಲಾಗಿದೆ. ರಾಜಕಾಲುವೆ ಮತ್ತು ಸ್ವಾಭಾವಿಕ ಹಳ್ಳಗಳನ್ನು ಬೇರೆ ದಿಕ್ಕಿಗೆ ತಿರುಗಿಸಲಾಗಿದೆ. ಈ ಕಾರಣದಿಂದ ಕಳೆದ ವಾರದಿಂದ ರಸ್ತೆಯಲ್ಲಿ ನೀರು ತುಂಬಿಕೊಂಡು ಪರದಾಡುವ ಸ್ಥಿತಿ ಬಂದಿದೆ ಎಂದ ಅವರು ಶನಿವಾರದ ಪತ್ರಿಕಾಗೋಷ್ಟಿಯಲ್ಲಿ ಜಲಾವೃತಗೊಂಡ ರಸ್ತೆಯ ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ.
ಒಂದು ಕಿ.ಮೀ ರಸ್ತೆ ನಿರ್ಮಾಣಕ್ಕೆ 80 ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಅವರು ನಿರ್ಮಿಸಿದ ಹಲವು ಕಿ.ಮೀ ನಷ್ಟು ರಸ್ತೆ ಹಾಳಾಗಿದ್ದು ಅದರಿಂದ 1,300 ಕೋಟಿ ರೂ ನಷ್ಟವಾಗಿದೆ. ಜನರ ತೆರಿಗೆ ಹಣವನ್ನು ಈ ರೀತಿ ವ್ಯಯ ಮಾಡುವುದು ಸರಿಯೇ? ಈ ರಸ್ತೆಗೆ ಪ್ರತಾಪ್ ಸಿಂಹರವರು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆಗಳಿಗೆಲ್ಲ ಪ್ರಾಜೆಕ್ಟ್ ಡೈರೆಕ್ಟರ್ ಡಿ.ಬಿ ಶ್ರೀಧರ್ ನೇರ ಹೊಣೆಯಾಗಿದ್ದಾರೆ. ಅವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹರವರ ಬೆಂಬಲವಿದೆ. ಹಾಗಾಗಿ ಈ ಹಗರಣದ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಮನವಿ ಸಲ್ಲಿಸಲು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿಯಾಗುತ್ತೇವೆ ಮತ್ತು ಪ್ರಧಾನಿಯವರ ಗಮನಕ್ಕೆ ತರುತ್ತೇವೆ ಎಂದರು.
ಇದನ್ನೂ ಓದಿ: ಏರ್ಪೋರ್ಟ್ ವಿವಾದದಲ್ಲಿ ಬಿಜೆಪಿ ಸಂಸದ; ದಿಯೋಘರ್ ಡಿಸಿ ವಿರುದ್ಧ ದೆಹಲಿಯಲ್ಲಿ ದೇಶದ್ರೋಹ ಪ್ರಕರಣ ದಾಖಲು