Homeಮುಖಪುಟನಗುವನ್ನು ಕಠೋರ ಜಗತ್ತಿನ ಎದುರು ಗುರಾಣಿಯಾಗಿ, ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಸಿದ್ಧಲಿಂಗಯ್ಯನವರು

ನಗುವನ್ನು ಕಠೋರ ಜಗತ್ತಿನ ಎದುರು ಗುರಾಣಿಯಾಗಿ, ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಸಿದ್ಧಲಿಂಗಯ್ಯನವರು

- Advertisement -
- Advertisement -

ಕನ್ನಡದಲ್ಲಿ ಹಾಸ್ಯ ಬರವಣಿಗೆಯ ಒಂದು ಸಂಪ್ರದಾಯವಿದೆ. ಇದು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ. ತಮಾಷೆಗೆ ಒಳಗಾಗುವವರು ದಡ್ಡ, ಪೆದ್ದ ಅಥವಾ ಸಮಾಜದ ಕೆಳವರ್ಗದವರೇ ಆಗಿರುತ್ತಾರೆ. ಸಿದ್ಧಲಿಂಗಯ್ಯ ಅವರ ಸಾಹಿತ್ಯಕ್ಕೆ ಬಂದರೆ, ಬಡವರ ಮೇಲೆ ಪ್ರಯೋಗ ಮಾಡುವ ಕ್ರೂರ ಹಾಸ್ಯ ಎಲ್ಲೂ ಕಾಣುವುದಿಲ್ಲ. ಎಷ್ಟೋ ಕಡೆ ಅದು ಉಳ್ಳವರನ್ನು ಎಚ್ಚರಿಸುವ ಹಾಸ್ಯವಾಗಿರುತ್ತದೆ. ಅದರಲ್ಲಿ ಚಾಪ್ಲಿನ್ ಮಾಡುವಂತಹ ಹಾಸ್ಯ ಸಿನಿಮಾದ ಒಂದು ಗುಣವಿದೆ. ಅನ್ಯಾಯವನ್ನು ಎತ್ತಿತೋರಿಸಲು ನಗುವನ್ನೇ ಅಸ್ತ್ರವಾಗಿಸಿಕೊಳ್ಳುವುದು ಅವರ ವಿಧಾನ ಎಂದು ತೋರುತ್ತದೆ.

ಅವರ ಬಾಲ್ಯದ ಘಟನೆ ಒಂದು ಹೇಳುತ್ತಾರೆ. ಒಂದು ದಿನ ಅವರು ಶಾಲೆಗೆ ಹೊರಡುವಾಗ ತಡವಾಯಿತು ಎಂದು ಅವರ ಅಕ್ಕ ನಡುದಾರಿಯಲ್ಲಿ ಬಂದು ಮುದ್ದೆಯನ್ನು ಕೊಡುತ್ತಾರೆ. ಅದನ್ನು ತಮ್ಮ ಚೀಲದಲ್ಲಿ ಹಾಕಿಕೊಂಡು ಶಾಲೆಗೆ ಹೋಗುತ್ತಾರೆ. ಆದರೆ ಶಾಲೆಯಲ್ಲಿ ಯಾರೋ ಹುಡುಗ ತನ್ನ ಪೆನ್ಸಿಲ್ ಕಳೆದುಹೋಯಿತು ಎಂದು ಶಿಕ್ಷಕರಿಗೆ ದೂರು ಕೊಟ್ಟಿರುತ್ತಾನೆ. ಆಗ ಟೀಚರ್ ಎಲ್ಲ ಮಕ್ಕಳ ಶಾಲಾಚೀಲಗಳನ್ನು ಹುಡುಕಲು ಶುರು ಮಾಡುತ್ತಾರೆ. ಸಿದ್ಧಲಿಂಗಯ್ಯ ಅವರು ಮಾತ್ರ ತನ್ನ ಚೀಲವನ್ನು ಪರಿಶೀಲಿಸಲು ಬಿಡುವುದಿಲ್ಲ. ಕೊನೆಗೆ ಶಿಕ್ಷಕರು ಬಲವಂತವಾಗಿ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ಪೆನ್ಸಿಲ್ ಸಿಗದೆ ಮುದ್ದೆ ಸಿಗುತ್ತದೆ. ಅದನ್ನು ನೋಡಿ ಮಕ್ಕಳು ’ಮುದ್ದೆ, ಮುದ್ದೆ’ ಎಂದು ಅವರನ್ನು ಅಣಕಿಸಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳಿಂದ ಹಿಡಿದು ಇಡೀ ಸಮುದಾಯದಲ್ಲಿ ಯಾವ ರೀತಿಯಲ್ಲಿ ಅಸೂಕ್ಷ್ಮತೆ ಇರುತ್ತದೆ ಎಂಬುದನ್ನು ಅವರು ತೋರುತ್ತಾ ಹೋಗುತ್ತಾರೆ.

ಚಾರ್ಲಿ ಚಾಪ್ಲಿನ್ ತನ್ನ ಆತ್ಮ ಚರಿತ್ರೆಯಲ್ಲಿ ಹೇಳುತ್ತಾನೆ : “ಬಾಲ್ಕನಿಯಿಂದ ಬಿದ್ದ ವಸ್ತುವೊಂದು ಬಡವನ ತಲೆ ಮೇಲೆ ಬಿದ್ದರೆ ಅದು ಹಾಸ್ಯವಲ್ಲ, ಯಾರೂ ನಗುವುದಿಲ್ಲ. ಆದರೆ ದರ್ಪದಿಂದ ಮೆರೆಯುವ ಸಾಹುಕಾರನ ತಲೆ ಮೇಲೆ ಬಿದ್ದರೆ ಅದು ತುಂಬಾ ತಮಾಷೆಯಾಗಿ ಕಾಣುತ್ತದೇ” ಎಂದು. ಸಿದ್ಧಲಿಂಗಯ್ಯ ಅವರು ಹಾಸ್ಯ ಸಾಹಿತ್ಯವನ್ನು ಇದೇ ರೀತಿ ಮರುವ್ಯಾಖ್ಯಾನಿಸುತ್ತಾರೆ. ಏನೂ ತಿಳಿಯದವರನ್ನು, ಏನೂ ಇಲ್ಲದವರನ್ನು ಆಡಿಕೊಳ್ಳುವುದು ಏಕೆ ತಪ್ಪು ಎಂದು ಸಿದ್ಧಲಿಂಗಯ್ಯ ಅವರು ತಮ್ಮ ಬರಹಗಳ ಮೂಲಕ ತೋರಿಸಿಕೊಡುತ್ತಾರೆ.

’ಇಕ್ರಲಾ, ವದೀರ್‍ಲಾ’ ತುಂಬಾ ಹೆಸರು ಮಾಡಿದ ಪದ್ಯ. ಅದನ್ನು ಹೇಗೆ ಬರೆದಿದ್ದು ಎಂದು ಅವರು ಒಮ್ಮೆ ಹೇಳಿದ್ದರು. ಐಎಎಂನ ಕೆಲವರು, ದಲಿತರು ಹೇಗೆ ಬದುಕುತ್ತಾರೆ ಎಂದು ತಿಳಿಯಲು ತಮಿಳುನಾಡಿನ ದಲಿತರ ಕೇರಿಯಲ್ಲಿ 15 ದಿನಗಳು ಉಳಿದ ಪ್ರಸಂಗ ನಡೆಯಿತಂತೆ. ಅದಾದ ನಂತರ ಅಲ್ಲಿನ ಜನರು ತುಂಬಾ ನೋವಿನಿಂದ ಸಿದ್ಧಲಿಂಗಯ್ಯ ಅವರೊಂದಿಗೆ ಅದರ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ಆ ಪದ್ಯ ಬರೆದಿದ್ದು ಎಂದು ಅವರು ಹೇಳಿಕೊಂಡಿದ್ದಾರೆ. ಜನರ ಅಸೂಕ್ಷ್ಮತೆ ಹೇಗಿರುತ್ತದೆ ಎಂಬುದನ್ನು ನೋಡಿ ರೊಚ್ಚಿನಿಂದ ಅವರು ಬರೆದ ಪದ್ಯ ಅದು. ಮೊದಲೆಲ್ಲಾ ರೋಷದಲ್ಲಿ ಬರೆಯುತ್ತಿದ್ದ ಅವರ ವರಸೆ ಬರಬರುತ್ತ ಸೌಮ್ಯವಾಗಿ ಬದಲಾಯಿತು. ಅವರ ಆತ್ಮಕಥನದಲ್ಲಿ ಸಮಾನತೆಯ ಬಗೆಗಿನ ಚಿಂತನೆ, ಮೂಢನಂಬಿಕೆ ವಿರುದ್ಧದ ಚಿಂತನೆಯನ್ನು ನಾವು ಕಾಣಬಹುದು, ಆದರೆ ಮೊದಲಿನ ಆಕ್ರೋಶ ಅಲ್ಲಿಲ್ಲ.

ಒಬ್ಬ ಸ್ವಾಮೀಜಿ ಪತ್ರಿಕೆಯಲ್ಲಿ ’ನಾನು ದೇವರನ್ನು ತೋರಿಸುತ್ತೇನೆ’ ಎಂದು ಜಾಹಿರಾತು ನೀಡುತ್ತಾನೆ. ಸಿದ್ಧಲಿಂಗಯ್ಯ ಮೂರ್ನಾಲ್ಕು ಸ್ನೇಹಿತ ಜೊತೆಗೂಡಿ ಅಲ್ಲಿಗೆ ತೆರಳುತ್ತಾರೆ. ದೇವರನ್ನು ತೋರಿಸಿ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ’ನಾನೇ ದೇವರು’ ಎಂದು ಹೇಳುತ್ತಾನೆ. ’ಯಾವ ದೇವರು?’ ಎಂದು ಕೇಳಿದಾಗ ’ಶಿವ’ ಎಂದು ಹೇಳುತ್ತಾನೆ. ಆಗ ಸಿದ್ದಲಿಂಗಯ್ಯ ಅವರು, ’ನೀವೊಂದು ಕೊಲೆ ಮಾಡಿದ್ದೀರಿ’ ಎನ್ನುತ್ತಾರೆ. ಸ್ವಾಮೀಜಿ ತಬ್ಬಿಬ್ಬಾದಾಗ, ’ನೀವು ದೊಡ್ಡದಾಗಿ ಕಣ್ಣು ಬಿಟ್ಟು ಆ ಮನ್ಮಥನನ್ನ ಕೊಲೆ ಮಾಡಿದ್ದೀರಾ,’ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ಹೇಳೋದು: ’ಹೋ ಹೌದು ಅವನು ತುಂಬಾ ತಲೆಹರಟೆ ಮಾಡುತ್ತಿದ್ದ. ಅದಕ್ಕೆ ಹಾಗೆ ಮಾಡಿದೆ.’ ’ತಮ್ಮ ವಾಸ ಎಲ್ಲಿ ಅಂದರೆ ಕೈಲಾಸ ಪರ್ವತ ಎಂದು ಹೇಳುತ್ತಾನೆ. ಅದಕ್ಕೆ ಸಿದ್ಧಲಿಂಗಯ್ಯ ಅವರು, ’ಚೀನಾದವರು ದಾಳಿ ಮಾಡಿದರಲ್ಲ ನೀವ್ಯಾಕೆ ತಡೆಯಲಿಲ್ಲ?’ ಎಂದು ಕೇಳುತ್ತಾರೆ.
’ಇಂಡಿಯಾದವರಿಗೆ ನನ್ನ ಮೇಲೆ ಭಕ್ತಿ ಕಡಿಮೆಯಾಗಿತ್ತು, ಅವರಿಗೆ ಸ್ವಲ್ಪ ಬುದ್ಧಿ ಕಲಿಸೋಣ ಎಂದು ನಾನೇ ಅವರನ್ನು ಛೂ ಬಿಟ್ಟೆ,’ ಎಂದು ಸ್ವಾಮೀಜಿ ಹೇಳುತ್ತಾರೆ.

ಹೀಗೆ ಸಿದ್ಧಲಿಂಗಯ್ಯ ಅವರ ಜೀವನದುದ್ದಕ್ಕೂ ತುಂಟತನದಿಂದ ಸತ್ಯವನ್ನು ಬಯಲು ಮಾಡುವಂತಹ ಸುಮಾರು ಘಟನೆ ನಡೆದಿದೆ. ಅವರು ದೇವರನ್ನು ನಂಬಲ್ಲ ಎಂದು ಕೊನೆಯವರೆಗೂ ಹೇಳುತ್ತಿದ್ದರು. ಮೂಢನಂಬಿಕೆಗಳ ವಿರುದ್ಧ ಇದ್ದರು. ಪ್ರತಿನಿತ್ಯ ನಡೆಯುವ ಘಟನೆಯನ್ನು ತುಂಟತನದಿಂದಲೆ ನೋಡುತ್ತಿದ್ದರು. ಅವರ ಸುತ್ತಮುತ್ತಲು ಇರುವವರನ್ನು ಯಾವ ರೀತಿಯಲ್ಲಿ ನಗಿಸುತ್ತಿದ್ದರೆಂದರೆ ಗಂಭೀರ ಮುಖ ಹಾಕಿಕೊಂಡು ಕೂರುವುದು ಕಷ್ಟವಾಗಿರುತ್ತಿತ್ತು. ಒಮ್ಮೆ ಜೋಗ ಜಲಪಾತ ನೋಡಿ ಮೂರು ನಾಲ್ಕು ಜನ ಹೆಗ್ಗೋಡಿಗೆ ಹಿಂತಿರುಗಿದ್ದೆವು. ತಕ್ಷಣ ಒಳಗಡೆ ಹೋಗಿ ಮುಸುಕು ಹಾಕಿ ಮಲಗಿಬಿಟ್ಟರು. ’ನಾವಿನ್ನೂ ಒಳಗಡೆ ಕಾಲಿಟ್ಟಿದ್ದಷ್ಟೇ, ಅಷ್ಟರೊಳಗೆ ಮಲಗಿಬಿಟ್ಟಿದ್ದೀರಲ್ಲ?’ ಎಂದು ಅಚ್ಚರಿಯಿಂದ ಕೇಳಿದೆ. ಅದಕ್ಕೆ ಅವರು, ’ನೋಡಿ ನಾನು ಹೇಗೆಂದರೆ, ಸಮಯ ವೇಸ್ಟ್ ಮಾಡುವುದಿಲ್ಲ. ಐದು ನಿಮಿಷ ಸಿಕ್ಕರೂ ಮಲಗಿ ನಿದ್ದೆಮಾಡಿಬಿಡುತ್ತೇನೆ,’ ಎಂದು ಹೇಳಿದ್ದರು.

ದಲಿತ ಸಂಘರ್ಷ ಸಮಿತಿ ಹೇಗೆ ಕಟ್ಟಿದ್ದು ಎಂದು ಕೂಡ ಅವರು ಬರೆದುಕೊಂಡಿದ್ದಾರೆ. ಕೊನೆಗೆ ಅವರು ಬಿಜೆಪಿ ಜೊತೆಗಿನ ಸಂಪರ್ಕ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿದ್ದರ ಬಗ್ಗೆ ತುಂಬಾ ಟೀಕೆಗಳು ಬಂದವು. ಆದರೆ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸಿಲ್ಲ ಎಂದೇ ಹೇಳುತ್ತಿದ್ದರು. ’ನಾನಿನ್ನೂ ನಾಸ್ತಿಕನಾಗಿಯೆ ಇದ್ದೇನೆ. ದಲಿತರ ಪರವಾಗಿ, ಕನ್ನಡದ ಪರವಾಗಿ, ಇರುವ ಬೇಡಿಕೆಯನ್ನು ಇಟ್ಟು ಒತ್ತಾಯ ಮಾಡಿದೆ,’ ಎಂದು ಹೇಳುತ್ತಿದ್ದರು. ಈ ನಿಲುವನ್ನು ಅನುಮಾನದಿಂದಲೇ ಅವರ ಹೋರಾಟದ ಜೊತೆಗಾರರು ಕಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಅವರಿಗೆ ಎಲ್ಲೆಡೆ ಸ್ನೇಹಿತರಿದ್ದರು ಎನ್ನುವುದಂತೂ ನಿಜ. ಯಡಿಯೂರಪ್ಪ ಅವರನ್ನು ಕೊಂಡಾಡಿ ಬಸವಣ್ಣ ಎಂದು ಪರಾಕು ಹಾಕಿದರು ಎಂಬ ಆಪಾದನೆ ಅವರ ಮೇಲೆ ಇತ್ತು. ಅದು ತಪ್ಪಾಗಿ ವರದಿಯಾಗಿದೆ ಎಂದು ಅವರು ಹೇಳಿದ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಬಹುದು.

ಆತ್ಮಚರಿತ್ರೆ ಸಾಮಾನ್ಯವಾಗಿ ಇಂತಹ ಜಾಗದಲ್ಲಿ ಹುಟ್ಟಿದೆ, ಇಲ್ಲಿ ಬೆಳೆದೆ ಎಂಬ ರೀತಿ ಬರೆಯುತ್ತಾರೆ. ಆದರೆ ಸಿದ್ಧಲಿಂಗಯ್ಯನವರು ಅದಕ್ಕೆ ಬದಲಾಗಿ ಪ್ರಸಂಗಗಳ ಮೂಲಕ ತಮ್ಮ ಜೀವನದ ಕತೆಯನ್ನು ಹೇಳುತ್ತಾರೆ. ಅವರ ಆತ್ಮಚರಿತ್ರೆಯನ್ನು ಓದಿದಾಗ ಅವರು ತಮ್ಮ ಬಗ್ಗೆ ಬರೆಯುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಜನರ ಬಣ್ಣ ಬಣ್ಣದ ಬದುಕನ್ನು ಚಿತ್ರಿಸುವುದೇ ಹೆಚ್ಚಾಗಿದೆ. ಹಾಗಾಗಿ ಆತ್ಮ ಚರಿತ್ರೆ ಅನ್ನುವುದನ್ನೂ ಅವರು ಕನ್ನಡ ಸಂದಂರ್ಭದಲ್ಲಿ ಮರುವ್ಯಾಖ್ಯಾನಿಸಿದರು. ಆ ಪ್ರಕಾರವನ್ನು ಹೀಗೂ ಬರೆಯಬಹುದು ಎಂದು ತೋರಿಸಿಕೊಟ್ಟವರು ಅವರೇ ಆಗಿದ್ದಾರೆ. ನನಗೆ ಗೊತ್ತಿದ್ದ ಮಟ್ಟಿಗೆ ಆ ರೀತಿಯಾದ ಆತ್ಮ ಚರಿತ್ರೆಗಳು ಯಾವುದೂ ಇಲ್ಲ.

ಅವರ ಕಾವ್ಯದ ಎರಡು ಮಗ್ಗುಲನ್ನು ಎಲ್ಲರೂ ಗುರುತಿಸುತ್ತಾರೆ. ಮೊದಲಿನದು ರೊಚ್ಚಿನ, ಆಕ್ರೋಶದ ಕಾವ್ಯ, ಮತ್ತು ಎರಡನೆಯದ್ದು ನವಿರು ಪ್ರೇಮ ಕಾವ್ಯ. ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಥರದ ಹಾಡುಗಳು ಸಮುದಾಯ ಗೀತೆಗಳೂ, ಹೋರಾಟ ಗೀತೆಗಳೂ, ಸೊಗಸೆನಿಸುವ ಕಾವ್ಯವೂ ಒಟ್ಟೊಟ್ಟಿಗೆ ಆಗಿವೆ. ಅವರು ಎರಡನೆ ಹಂತದಲ್ಲಿ ಬರೆದಂತಹ ಪ್ರೇಮ ಗೀತೆಗಳ ಬಗ್ಗೆ ಬಂದ ಟೀಕೆಯ ಬಗ್ಗೆಯೂ ತಮಾಷೆಯಾಗೇ ಮಾತಾಡುತ್ತಿದ್ದರು. ಮದರಾಸಿಗೆ ಹೋಗಿ ಸಿನಿಮಾ ಹಾಡು ಬರೆದು ಬಂದ ಅನುಭವವನ್ನೂ ಕೀಟಲೆ ಮಾಡಿಕೊಂಡು ಹೇಳಿಕೊಳ್ಳುತ್ತಿದ್ದರು.

ಕನ್ನಡ ಕಾವ್ಯದಲ್ಲಿ ಪ್ರತಿಭಟನೆಯ ಅಂಶ ಮೊದಲಿನಿಂದಲೂ ಇದ್ದರೂ, ಸಿದ್ಧಲಿಂಗಯ್ಯ ಅವರ ಬರಹದ ಭಾಷೆ ಹೊಸದಾಗಿದೆ. ಈ ಹಿಂದೆ ಶಿಷ್ಟ ಭಾಷೆ ಎಂದು ಯಾವುದು ಅನ್ನಿಸಿಕೊಂಡಿತ್ತೋ ಅದಕ್ಕೆ ಎದುರಾಗುವಂತಹ ಹಾಗೂ ಅದನ್ನು ಮೀರಿದ ತೀವ್ರತೆ ತೋರಿಸುವ ಭಾಷೆಯನ್ನು ಅವರು ಬಳಸಿದರು. ಬಹಳ ಜನ ಸ್ನೇಹಿತರ ಜೊತೆಗೂಡಿ ಚಳುವಳಿಗಳನ್ನು ಹುಟ್ಟುಹಾಕುವುದರಲ್ಲಿ, ಅದಕ್ಕೊಂದು ಸೈದ್ಧಾಂತಿಕ ದಿಕ್ಕು ತೋರುವ ನಿಟ್ಟಿನಲ್ಲಿ ಮಾಡಿದ ಕೆಲಸವನ್ನು ಸ್ವಲ್ಪ ಕಡಿಮೆಯೇ ಬರೆದುಕೊಂಡಿದ್ದಾರೆ. ಡಿ.ಆರ್. ನಾಗರಾಜ್ ಮತ್ತು ಅವರ ಸಂಬಂಧ ಬಹಳ ಸ್ನೇಹದ ಮತ್ತು ತುಂಟತನದ ಸಂಬಂಧವಾಗಿತ್ತು. ಅವರು ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಂಡೇ ಇರುತ್ತಿದ್ದರು.

ನಗುವನ್ನು ಕಠೋರ ಜಗತ್ತಿನ ಎದುರು ಹೇಗೆ ಗುರಾಣಿಯಾಗಿ ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಂತೆಯೇ, ಪ್ರತಿಭಟನೆಯ ಹೊಸ ದನಿಯೊಂದನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.

(ಬರಹ ರೂಪಕ್ಕೆ): ಬಾಪು ಅಮ್ಮೆಂಬಳ

ಎಸ್ ಆರ್ ರಾಮಕೃಷ್ಣ

ಎಸ್ ಆರ್ ರಾಮಕೃಷ್ಣ
ಹಿರಿಯ ಪತ್ರಕರ್ತ ಮತ್ತು ಸಂಗೀತ ನಿರ್ದೇಶಕ. ಸಿದ್ಧಲಿಂಗಯ್ಯವನವರ ಆತ್ಮಕತೆ ’ಊರುಕೇರಿ’, ಅನಂತಮೂರ್ತಿಯವರ ಆತ್ಮಕತೆ ’ಸುರಗಿ’ಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಗಿರೀಶ್ ಕಾಸರವಳ್ಳಿಯವರ ’ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ‘ಜೈಲನ್ನು ತೋರಿಸಿ ನಮ್ಮನ್ನು ಬೆದರಿಸಲಾಗದು’ – ಬಿಡುಗಡೆಗೊಂಡ ವಿದ್ಯಾರ್ಥಿ ಹೋರಾಟಗಾರರ ಘೋಷಣೆಗಳಿವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...

‘ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸುವುದು ಅಪರಾಧವಲ್ಲ..’; ಅಂತರಧರ್ಮೀಯ ಜೋಡಿ ಕುರಿತು ಕೋರ್ಟ್ ಮಹತ್ವದ ತೀರ್ಪು

"ಅಂತರ್ಧರ್ಮೀಯರಾದ ಇಬ್ಬರು ವಯಸ್ಕ ವ್ಯಕ್ತಿಗಳು, ಅವರು ತಮ್ಮ ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ, ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನು ಅವರನ್ನು ತಡೆಯಲು ಅಥವಾ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು...

ಗೋರಖ್‌ಪುರದ ಏಮ್ಸ್‌ನಲ್ಲಿ ನಾಗಾಲ್ಯಾಂಡ್ ವೈದ್ಯೆಗೆ ಕಿರುಕುಳ; ಜನಾಂಗೀಯ ನಿಂದನೆ

ಉತ್ತರ ಪ್ರದೇಶದ ಗೋರಖ್‌ಪುರದ ಏಮ್ಸ್‌ನಲ್ಲಿ ನಿಯೋಜಿತರಾಗಿದ್ದ ನಾಗಾಲ್ಯಾಂಡ್‌ನ ಮೂರನೇ ವರ್ಷದ ನಿವಾಸಿ ವೈದ್ಯರ ಮೇಲೆ ಭಾನುವಾರ ಸಂಜೆ ಸಂಸ್ಥೆಯ ಆವರಣದ ಬಳಿ ಮೂವರು ಜನಾಂಗೀಯ ನಿಂದನೆ, ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ...

‘2026 ರಲ್ಲಿ ಸಮುದ್ರವನ್ನು ಪ್ರಾಬಲ್ಯಗೊಳಿಸುತ್ತೇವೆ’: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯಿಂದ ಭಾರತಕ್ಕೆ ಬಹಿರಂಗ ಬೆದರಿಕೆ

2008ರ ಮುಂಬೈ ದಾಳಿಯ ಭೀಕರತೆಯನ್ನು ಪ್ರತಿಧ್ವನಿಸುವ ಕಟು ಬೆದರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಭಾರತದಲ್ಲಿ ಮತ್ತೊಮ್ಮೆ ಸಮುದ್ರ ಮಾರ್ಗವನ್ನು ಬಳಸಿಕೊಂಡು 26/11 ಮಾದರಿಯ ದಾಳಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ...

ಕೇರಳ ಹೆಸರು ಇನ್ನು ಮುಂದೆ ‘ಕೇರಳಂ’; ಕೇಂದ್ರ ಸಚಿವ ಸಂಪುಟ ಅನುಮೋದನೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. "ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ...

ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಡಾ ಜಿ. ರಾಮಕೃಷ್ಣ; ರಾಜ್ಯಪಾಲರಿಂದ ಗೌರವ ಸ್ವೀಕರಿಸದಿರಲು ನಿರ್ಧಾರ

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ...

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ’: ‘ದಿ ಕೇರಳ ಸ್ಟೋರಿ 2’ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...