ಇವರು ವಿದ್ಯಾರ್ಥಿಗಳು ಮತ್ತು ಹೋರಾಟಗಾರರು. ಜೈಲಿನಂದ ಬಿಡುಗಡೆಗೊಂಡ ಇವರು ಮತ್ತೆ ಪ್ರಭುತ್ವಕ್ಕೆ ಸವಾಲು ಹಾಕಿದ್ದಾರೆ. ‘‘ಜೈಲನ್ನು ತೋರಿಸಿ ನಮ್ಮನ್ನು ಹೆದರಿಸಬೇಡಿ. ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ ನಿರಂತರ…..’’ ಎಂದು ಹೇಳಿದ್ದಾರೆ.
ನತಾಶಾ ನರ್ವಾಲ್, ದೇವಾಂಗನಾ ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರು ದೆಹಲಿಯ ತಿಹಾರ್ ಜೈಲಿನಿಂದ ಹೊರ ಬಂದಿದ್ದಾರೆ. ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
“ಇದು ಸರ್ಕಾರದ ಹತಾಶೆಯನ್ನು ತೋರಿಸುತ್ತದೆ. ನಾವು ಅವರಿಗೆ ಹೆದರದ ಮಹಿಳೆಯರು” ಎಂದು ಕಾಳಿತಾ ಜೈಲು ದ್ವಾರಗಳಿಂದ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರನ್ನು ಸ್ವಾಗತಿಸಲು ಅಲ್ಲಿ ವಿದ್ಯಾರ್ಥಿ ಬೆಂಬಲಿಗರು ನೆರೆದಿದ್ದರು.
ನತಾಶಾ ನರ್ವಾಲ್, “ಈ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ಇರುವುದರಿಂದ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ಪ್ರಮಾಣಪತ್ರ ಹೊಂದಿದ ಗೂಂಡಾಗಳು: ಶಿವಸೇನೆಯ ಸಂಜಯ್ ರಾವತ್
“ನಾವು ನಂಬಿದ್ದನ್ನು ಎತ್ತಿಹಿಡಿದಿದ್ದಕ್ಕಾಗಿ ದೆಹಲಿ ಹೈಕೋರ್ಟ್ಗೆ ಧನ್ಯವಾದ ಹೇಳಲು ನಾವು ಬಯಸುತ್ತೇವೆ. ನಾವು ಮಾಡಿದ ಯಾವುದೇ ಪ್ರತಿಭಟನೆಯು ಭಯೋತ್ಪಾದನೆಯಲ್ಲ. ಇದು ಮಹಿಳೆಯರ ನೇತೃತ್ವದ ಪ್ರಜಾತಾಂತ್ರಿಕ ಪ್ರತಿಭಟನೆಯಾಗಿದೆ” ಎಂದು ಅವರು ಹೇಳಿದ್ದಾರೆ.
“ಅವರು ನಮಗೆ ಜೈಲುವಾಸದ ಬೆದರಿಕೆ ಹಾಕಲು ಸಾಧ್ಯವಿಲ್ಲ. ಅವರು ನಮ್ಮನ್ನು ಜೈಲಿನಲ್ಲಿರಿಸುವುದಾಗಿ ಬೆದರಿಕೆ ಹಾಕಿದರೆ, ಅದು ನಮ್ಮ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಬಲಪಡಿಸುತ್ತದೆ” ಎಂದು ನತಾಶಾ ನರ್ವಾಲ್ ಹೇಳಿದ್ದಾರೆ. ಅವರ ತಂದೆ ಮಹಾವೀರ್ ನರ್ವಾಲ್ ಮೇ ತಿಂಗಳಲ್ಲಿ ಕೊರೊನಾದಿಂದ ನಿಧನರಾಗಿದ್ದರು. ನತಾಶಾರನ್ನು ಸ್ವೀಕರಿಸಲು ಬಂದ ಅವರ ಸಹೋದರ, “ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ. ಬದುಕಿದ್ದರೆ ಅವರು ಇವತ್ತು ಮಗಳನ್ನು ಕರೆದೊಯ್ಯಲು ಇಲ್ಲಿಗೆ ಬರುತ್ತಿದ್ದರು” ಎಂದು ಹೇಳಿದ್ದಾರೆ.
“ತಂದೆಯ ಮರಣವನ್ನು ನಾನು ಹೇಗೆ ಎದುರಿಸುತ್ತೇನೆಂದು ನನಗೆ ತಿಳಿದಿಲ್ಲ…ಸೆರೆವಾಸದ ವ್ಯವಸ್ಥೆಯು ನಮ್ಮ ಪ್ರೀತಿಪಾತ್ರರಿಂದ ನಮ್ಮನ್ನು ಹೇಗೆ ಬೇರ್ಪಡಿಸುತ್ತದೆ ಎಂಬುದಕ್ಕೆ ಇದು ಒಂದು ಸೂಚನೆ ಅಥವಾ ಜ್ಞಾಪನೆ ಆಗಿರಬೇಕು. ನನ್ನ ಪ್ರಕರಣವನ್ನು ಹೈಲೈಟ್ ಮಾಡಲಾಗಿದೆ. ಆದರೆ ನನಗೆ ಒಂದು ಫೋನ್ ಕಾಲ ಕೂಡ ತಲುಪದಂತೆ ಮಾಡಲಾಗಿತ್ತು” ಎಂದು ನರ್ವಾಲ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ತಬ್ಲೀಘಿ ಜಮಾತ್ ಗುರಿಯಾಗಿಸಿ ಕಾರ್ಯಕ್ರಮ: ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ
“ಭಯೋತ್ಪಾದನೆ ಮತ್ತು ಭಿನ್ನಾಭಿಪ್ರಾಯದ ನಡುವಿನ ರೇಖೆಯು ಮಸುಕಾಗಿರುವಂತಹ ಹಂತಕ್ಕೆ ನಾವು ಹೇಗೆ ತಲುಪಿದ್ದೇವೆ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಜನರನ್ನು ಕ್ಷುಲ್ಲಕ ಆರೋಪಗಳ ಕಾರಣಕ್ಕೆ ಜೈಲಿಗೆ ಹಾಕಲಾಗುತ್ತಿದೆ. ಜನರು ಪ್ರತಿಭಟಿಸಿದ ಕೂಡಲೆ ಅದು ಭಯೋತ್ಪಾದನೆಯಲ್ಲ” ಎಂದು ನರ್ವಾಲ್ ಹೇಳಿದ್ದಾರೆ.
ನತಾಶಾ ನರ್ವಾಲ್ ಮತ್ತು ಇತರ ಇಬ್ಬರು ವಿದ್ಯಾರ್ಥಿ ಹೋರಾಟಗಾರರನ್ನು ಕಳೆದ ವರ್ಷ ಬಂಧಿಸಲಾಗಿತ್ತು.
ದೆಹಲಿ ಹೈಕೋರ್ಟ್ ಕಳೆದ ವರ್ಷ ಮೇ ತಿಂಗಳಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲ್ಪಟ್ಟಿದ್ದ ನರ್ವಾಲ್, ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ನೀಡಿದ ಎರಡು ದಿನಗಳ ನಂತರ ಈ ಮೂವರನ್ನು ತಕ್ಷಣ ಬಿಡುಗಡೆ ಮಾಡುವ ಆದೇಶ ಬಂದಿದೆ.
ಮೂವರು ವಿದ್ಯಾರ್ಥಿ ಹೋರಾಟಗಾರರಿಗೆ ಜಾಮೀನು ನೀಡುವ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ದೆಹಲಿ ಪೊಲೀಸ್ ಮನವಿಯನ್ನು ಸುಪ್ರೀಂಕೋರ್ಟ್ ಇಂದು (ಶುಕ್ರವಾರ) ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ನಿಯಂತ್ರಿಸಲು ಸಾಧ್ಯವಾಗದ ಎಲ್ಲವನ್ನೂ ಮೋದಿ ಸರ್ಕಾರ ಧ್ವಂಸ ಮಾಡುತ್ತಿದೆ: ಮಮತಾ ಬ್ಯಾನರ್ಜಿ