ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮುಸ್ಲಿಂ ವೃದ್ಧರ ಮೇಲೆ ನಡೆದ ಪ್ರಕರಣದಲ್ಲಿ “ಕೋಮು ಪ್ರಚೋದನೆ” ನೀಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಈ ಘಟನೆಯ ಕುರಿತು ಟ್ವೀಟ್ ಮಾಡಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟ್ವಿಟರ್ ಇಂಡಿಯಾ, ನಟಿ ಸ್ವರ ಭಾಸ್ಕರ್, ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರು ಸೇರಿದಂತೆ ಒಟ್ಟು 9 ಜನರ ಮೇಲೆ ಗಾಜಿಯಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಭಾರತದ ಟ್ವಿಟರ್ನ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ದೆಹಲಿ ಬಳಿಯ ಲೋನಿ ಬಾರ್ಡರ್ನಲ್ಲಿರುವ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲು ತಿಳಿಸಲಾಗಿದೆ. ಇನ್ನು ಏಳು ದಿನಗಳಲ್ಲಿ ಅವರ ಹೇಳಿಕೆಯನ್ನು ದಾಖಲಿಸುವಂತೆ ಕೋರಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಯುಪಿ ಮುಸ್ಲಿಂ ವೃದ್ದನ ಮೇಲಿನ ದಾಳಿ ಪ್ರಕರಣ: ಟ್ವಿಟರ್, ಪತ್ರಕರ್ತರು, ರಾಜಕೀಯ ನಾಯಕರ ವಿರುದ್ದ FIR!
“ಕೆಲವರು ತಮ್ಮ ಟ್ವಿಟರ್ ಖಾತೆಯನ್ನು ಸಮಾಜದಲ್ಲಿ ದ್ವೇಷವನ್ನು ಹರಡಲು ಒಂದು ಸಾಧನವಾಗಿ ಬಳಸಿಕೊಂಡಿದ್ದಾರೆ. ಟ್ವಿಟರ್ ಕಮ್ಯುನಿಕೇಷನ್ ಇಂಡಿಯಾ ಮತ್ತು ಟ್ವಿಟರ್ ಇಂಡಿಯಾ ಇವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಸಮಾಜ ವಿರೋಧಿ ಸಂದೇಶಗಳನ್ನು ವೈರಲ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ” ಎಂದು ಮನೀಶ್ ಮಹೇಶ್ವರಿಗೆ ಕಳುಹಿಸಿದ ನೋಟಿಸ್ನಲ್ಲಿ ತಿಳಿಸಲಾಗಿದೆ.
ಶುಕ್ರವಾರ ಸಂಜೆ 4 ಗಂಟೆಗೆ ಪಾರ್ಲಿಮೆಂಟ್ ಕಾಂಪ್ಲೆಕ್ಸ್ನಲ್ಲಿ ಸಂಸದೀಯ ಸಮಿತಿಯ ಮುಂದೆ ಹಾಜರಾಗಲು ಟ್ವಿಟರ್ಗೆ ಕರೆ ನೀಡಿದೆ. ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ಸುದ್ದಿಗಳ ದುರುಪಯೋಗವನ್ನು ಹೇಗೆ ತಡೆಯುವುದು ಎಂಬುದರ ಕುರಿತು ನಿರೂಪಣೆ ನೀಡುವಂತೆ ಸಂಸದೀಯ ಸಮಿತಿಯು ಟ್ವಿಟರ್ಗೆ ಹೇಳಿದೆ.
ಈ ಹಿಂದೆ “ಕಾಂಗ್ರೆಸ್ ಟೂಲ್ಕಿಟ್” ವಿವಾದಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರನ್ನು ದೆಹಲಿ ಪೊಲೀಸ್ ತಂಡ ವಿಚಾರಣೆ ನಡೆಸಿತ್ತು. ಕಾನೂನು ನೋಟಿಸ್ ನೀಡಿದ ಬಳಿಕ ದೆಹಲಿ ಮತ್ತು ಗುರಗಾಂವ್ನಲ್ಲಿರುವ ಟ್ವಿಟರ್ ಕಚೇರಿಗಳಿಗೆ ಭೇಟಿ ನೀಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವಿಡಿಯೋವೊಂದರಲ್ಲಿ, ಸಂತ್ರಸ್ತ ವೃದ್ಧ ಅಬ್ದುಲ್ ಸಮದ್ ಎಂಬವರು ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆಟೋದಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಕಾಡಿನೊಳಗೆ ಎಳೆದೊಯ್ದು ಚಿತ್ರ ಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಚಾಕುವಿನಲ್ಲಿ ವೃದ್ದನ ಗಡ್ಡ ಕತ್ತರಿಸಿ, ಕೋಲಿನಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಗಾಜಿಯಾಬಾದ್ನ ಲೋನಿ ಪ್ರದೇಶದಲ್ಲಿ “ಜೈ ಶ್ರೀ ರಾಮ್” ಎಂದು ಕೂಗುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜಕ್ಕೆ ಒಂದು ಕಳಂಕ : ರಾಹುಲ್ ಗಾಂಧಿ