Homeಅಂಕಣಗಳುನಾಗಸುಧೆ ಜಗಲಿಯಿಂದನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನು ನಂಬಿದ ಕನ್ನಡ ನಾಡು ನುಡಿಗಳೇ ಈ ಅವಕಾಶ ಒದಗಿಸಿಕೊಟ್ಟಿದೆ ಎನ್ನಲು ನನಗೆ ಅಭಿಮಾನ, ಹೆಮ್ಮೆ ಅನಿಸುತ್ತದೆ. ಅದಕ್ಕೆ ಕನ್ನಡ ಎಂದರೆ ನನ್ನೆದೆಗೆ ಹಸಿರಿನ ಹಾಸಿನಂತೆ.

- Advertisement -
- Advertisement -

ನನಗೆ ಮೊದಲಿನಿಂದಲೂ ಕನ್ನಡ ರಾಜ್ಯೋತ್ಸವ ಎಂದರೆ ತುಳಸೀ ಹಬ್ಬದ ಖುಷಿಯಂತೆ. ಕರಾವಳಿ ಭಾಗದಲ್ಲಿ ತುಳಸೀ ಹಬ್ಬವನ್ನು ಸಂಭ್ರಮದಿಂದ ಆಚರಿಸುವರು ; ದೀಪಾವಳಿಯ ಸಡಗರಕಿಂತ ಹೆಚ್ಚಾಗಿ ! ಕಾರಣ ಇಷ್ಟೇ, ಆ ದಿನ ನಮಗೆಲ್ಲಾ ಪಟಾಕಿ-ಮುದ್ದು-ಗುಂಡುಗಳ ಸಡಗರ. ಇವೆಲ್ಲವೂ ನವೆಂಬರ್ ತಿಂಗಳಲ್ಲಿಯೇ ನಡೆಯುವುದರಿಂದಲೋ ಏನೋ ನವೆಂಬರ್ ತಿಂಗಳೆಂದರೆ ನನಗಂತೂ ಖುಷಿಯೋ ಖುಷಿ.

ಎಂಬತ್ತರ ದಶಕದಲ್ಲಿ ನಾನು ಅಂಕೋಲೆಯಲ್ಲಿದ್ದೆ. ಇದು ಕರ್ನಾಟಕದ ಬಾರ್ಡೋಲಿ ಅಂತ ಹೆಸರು ಮಾಡಿದಂಥ ಸ್ಥಳ. ಅಂಕೋಲೆ ಮೊದಲಿನಿಂದಲೂ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿ. ಅಂಕೋಲೆಯ ಕರ್ನಾಟಕ ಸಂಘ, ರಾಘವೇಂದ್ರ ಪ್ರಕಾಶನ, ಕನ್ನಡಾಭಿಮಾನಿಗಳ ಸಂಘ, ಕನ್ನಡ ಸೇವಾ ಸಂಘ ಗಳಿಗಂತೂ ಕನ್ನಡ ರಾಜ್ಯೋತ್ಸವದ ಆಚರಣೆಯಂದರೆ ಮೈ ಮನಕೆಲ್ಲಾ ಸಡಗರ. ಆಗ ತಾನೇ ಸಣ್ಣ ಪುಟ್ಟ ಕವಿತೆ ಬರೆದು ಅಲ್ಲಲ್ಲಿ ಹೆಸರು ಕೇಳಿಸಿಕೊಂಡಿದ್ದೆ. ಕರ್ನಾಟಕ ಸಂಘದ ವತಿಯಿಂದ ಅಂದಿನ ಝೇಂಡಾ ಕಟ್ಟೆಯ ಮೇಲಿನ ಕವಿಗೋಷ್ಠಿಯೇ ನನ್ನ ಬದುಕಿನ ಮೊದಲನೆಯ ಕವಿಗೋಷ್ಠಿ, ಅದರಲ್ಲೂ ಕವಿಗೋಷ್ಠಿಯ ನಿರ್ವಾಹಕ ನಾನೇ ಆದ್ದರಿಂದ ಆ ವೈಭವ ವರ್ಣಿಸಲಸಾಧ್ಯ. ಮೊದಲನೆಯ ಸಲ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಪ್ರಕಟವಾಗಿದ್ದರಿಂದ ಮತ್ತು ಕವಿಗೋಷ್ಠಿಯ ನಿರ್ವಾಹಕನೂ ನಾನೇ ಆಗಿದ್ದರಿಂದ ಆಯೋಜಕರು ಕೊಟ್ಟ ಆಮಂತ್ರಣ ಖರ್ಚಾದರೂ ಮತ್ತೆ ನಾನೇ ಪ್ರಿಂಟ್ ಹಾಕಿಸಿ ಊರಿಗೆಲ್ಲಾ ಹಂಚಿ ಖುಷಿ ಪಟ್ಟಿದ್ದೆ, ಮರುದಿನದ ವೃತ್ತ ಪತ್ರಿಕೆಯಲ್ಲೆಲ್ಲಾ ಪ್ರಥಮ ಬಾರಿಗೆ ಫೋಟೋದೊಂದಿಗೆ ನನ್ನ ಹೆಸರು ಬಂದದ್ದನ್ನು ಕಂಡ ಆ ಕ್ಷಣ ಬದುಕಿನಲಿ ಅಚ್ಚಳಿಯದೇ ಉಳಿದಿದೆ. ಅದರಂತೆಯೇ ಆ ದಿನಗಳಲ್ಲೇ ವಿಷ್ಣು ನಾಯ್ಕರ ವಿಶ್ವಾಸದಲ್ಲಿ ಕೈಯ್ಯಾರ ಕಿಂಞಣ್ಣ ರೈ ರ ಅಧ್ಯಕ್ಷತೆಯಲಿ ಕವಿತೆ ಓದಿದ ಕ್ಷಣವೂ ಸಹ. ಅದಕ್ಕೆ ಕನ್ನಡ ರಾಜ್ಯೋತ್ಸವ ಮತ್ತು ಕವಿಗೋಷ್ಠಿ ಅಂದರೆ ಮೊದಲಿನಿಂದಲೂ ನನಗೆ ಉಸಿರಿನಷ್ಟೇ ಪ್ರೀತಿ.

 

ಸುಬ್ಬಣ್ಣ ರಂಗನಾಥ ಎಕ್ಕುಂಡಿ, ಗೌರೀಶ್ ಕಾಯ್ಕಿಣಿಯವರು ನನ್ನ ವಿದ್ಯಾಗುರುಗಳಾದ್ದರಿಂದ ಇವರ ಪ್ರಭಾವದಿಂದಾಗಿ ಹೈಸ್ಕೂಲು ದಿನಗಳಿಂದಲೇ ನನ್ನ ಮನದಲ್ಲಿ ಕನ್ನಡದ ಜಾಗೃತಿ ಹುಟ್ಟಿಕೊಂಡಿತು. ಈ ಇಬ್ಬರೂ ಮಹನೀಯರೂ ಕನ್ನಡ ನಾಡು ನುಡಿಗಳಿಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿಯ ಸಂಚಲನ ಮೂಡಿಸುತ್ತಿದ್ದರು. ಇವರು ನಮಗೆ ಕಲಿಸುವ ಗುರುಗಳಷ್ಟೇ ಆಗಿರದೇ ಮನುಷ್ಯ ಪ್ರೀತಿಯ ಮಾನವೀಯ ಸಂಬಂಧದ ಕೈಗನ್ನಡಿಯಾಗಿದ್ದರು. ಮೂಲತಃ ನನ್ನ ಕಡಮೆಯ ಸಮೀಪದ ಹನೇಹಳ್ಳಿ-ಬಂಕೀಕೋಡ್ಲದವರಾಗಿದ್ದ ಯಶವಂತ ಚಿತ್ತಾಲ, ಸುಂದರ ನಾಡಕರ್ಣಿಯವರು ರಾಜ್ಯದಿಂದ ದೂರವಿದ್ದರೂ ತಾವಿದ್ದ ಸ್ಥಳದಿಂದಲೇ ಕನ್ನಡದ ತೇರು ಎಳೆಯುತ್ತಿದ್ದು ಊರಿಗೆ ಬಂದಾಗಲೆಲ್ಲಾ ಈ ನಾಡಿನಲ್ಲಿ ಕನ್ನಡತನದ ಬೀಜ ಬಿತ್ತಿ ಹೊಸ ತಲೆಮಾರಿನಲ್ಲಿ ಬರಹದ ಗಟ್ಟಿತನಕ್ಕೆ ಕಾರಣರಾದರು. ಇವರಂತೆ ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗ ಸಹ.

ಶುದ್ಧ ಕನ್ನಡಪರ ಕಾರ್ಯಕ್ರಮದಲ್ಲಿ ರಾಜಕೀಯದ ವಾಸನೆ ಬೀರುವುದು ನಿಜವಾಗಿಯೂ ದುರಂತವೇ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಲೆಕ್ಕಾಧೀಕ್ಷಕನಾಗಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ರಾಜ್ಯೋತ್ಸವ ಕವಿಗೋಷ್ಠಿಯನ್ನು ನಿರ್ವಹಿಸುವ ಖುಷಿ ನನಗೆ ಒದಗಿ ಬಂದಿತ್ತು. ಇದು ನನಗೆ ಸಡಗರದ ಸಂಭ್ರಮವೂ ಆಗಿದ್ದಿತು. ಸಮಿತಿಯ ಅಧ್ಯಕ್ಷರ ನಿರ್ಣಯದಂತೆ ‘ಹೊಸ ಚಿಗುರು ಹಳೆ ಬೇರಿನ’ ಪಾಲಿಕೆಯ ವ್ಯಾಪ್ತಿಯ ಇಪ್ಪತ್ತು ಕವಿಗಳ ಯಾದಿಯನ್ನೂ ತಯಾರಿಸಿ ನಮ್ಮ ತಂಡದೊಂದಿಗೆ ಗೌರವ ಪೂರಕವಾಗಿ ಎಲ್ಲಾ ಕವಿಗಳ ಮನೆ ಮನೆಗೆ ತೆರಳಿ ಕವಿಗೋಷ್ಠಿಗೆ ಸಿದ್ಧತೆ ನಡೆಸಲಾಯಿತು. ಹೊಸತನದ ನಿರ್ವಹಣೆಯೊಂದಿಗೆ ಕವಿಗೋಷ್ಠಿ ನಡೆಸುವುದು ನನ್ನ ಪಾಲಿನ ಕರ್ತವ್ಯವಾಗಿತ್ತು. ಕಾರ್ಯಕ್ರಮದ ಯಶಸ್ಸಿಗಾಗಿ ವಾರಗಟ್ಟಲೆ ಖುಷಿಯಿಂದ ದುಡಿದು ಎಲ್ಲರ ಮೆಚ್ಚುಗೆಗೆ ಪಾತ್ರನಾದೆನು. ಇನ್ನೇನು ಆ ದಿನ ಆ ಕ್ಷಣ ಬಂದೇ ಬಿಟ್ಟಿತು. ಸಭಾಂಗಣ ಕನ್ನಡ ಮನಸ್ಸುಗಳಿಂದ ಮೊಳಗುತ್ತಿತ್ತು. ಕವಿಗೋಷ್ಠಿ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ರಾಜಕೀಯ ವ್ಯಕ್ತಿಯೊಬ್ಬರು ವೇದಿಕೆಗೆ ಆಗಮಿಸಿ ನನ್ನನ್ನು ಪಕ್ಕಕ್ಕೆ ತಳ್ಳಿ ನನ್ನಲ್ಲಿದ್ದ ಕವಿಗಳ ಯಾದಿ ಪಡೆದು ತಾನೇ ಕಾರ್ಯಕ್ರಮ ಪ್ರಾರಂಭಿಸಿಬಿಟ್ಟ ! ಕೊನೆಗೂ ವಾರಗಟ್ಟಲೆ ಈ ಕಾರ್ಯಕ್ರಮಕ್ಕಾಗಿ ದುಡಿದ ನನಗೆ ಒಂದು ಕವಿತೆ ಓದುವ ಅವಕಾಶವನ್ನೂ ಆತ ಕಸಿದುಕೊಂಡಿದ್ದ. ಮಾನಸಿಕವಾಗಿ ನೊಂದ ನಾನು ವೇದಿಕೆಯಿಂದ ಹಿಂದೆ… ಹಿಂದೆ…. ಹಿಂದಾಗುತ್ತಾ ಇಳಿದು ಹೋಗುತ್ತಿದ್ದರೂ ಯಾವೊಬ್ಬ ಸದಸ್ಯನೂ ನನಗೆ ಕನಿಷ್ಠ ಮಾತಾಡಿಸುವ ಸೌಜನ್ಯವನ್ನೂ ತೋರಿಸದೇ ಇರುವದು ಸಾಹಿತ್ಯದಲ್ಲಿ ರಾಜಕೀಯದ ದುರಂತವಾಗಿರುತ್ತದೆ.

ನಂಬಿದವರನ್ನು ಕನ್ನಡ-ಕನ್ನಡ ಭಾಷೆ ಎಂದೂ ಕೈಬಿಡುವುದಿಲ್ಲ. ವೈಯಕ್ತಿಕವಾಗಿ ಹೇಳಬೇಕೆಂದರೆ ಖಾಸಗಿ ಬದುಕಿನಲಿ ಪ್ರಕಾಶ ಶೆಟ್ಟಿಯಾಗಿದ್ದ ನನ್ನನ್ನು ಸಾಹಿತ್ಯ ಪರಿಸರದಲ್ಲಿ ಪ್ರಕಾಶ ಕಡಮೆಯನ್ನಾಗಿಸಿ ಕನ್ನಡ ನಾಡು ನುಡಿ ಇಲ್ಲಿಯ ತನಕ ಪೊರೆದಿದೆ ಮತ್ತು ಕಾಪಾಡಿದೆ. ಮೂವತ್ತು ವರ್ಷಗಳ ಸುಧೀರ್ಘ ಸರಕಾರೀ ಸೇವಾವಧಿಯಲ್ಲಿ ಎಂದೂ ಬೀಳಕೊಡದೇ, ಬಿದ್ದಾಗಲೆಲ್ಲಾ ಬಡಿದೆಬ್ಬಿಸಿದೆ. ಈ ಕನ್ನಡ ನನಗೆ ಎಲ್ಲವನ್ನೂ ಕೊಟ್ಟಿದೆ. ನಿಜವಾಗಿಯೂ ಮನಸ್ಸಿನ ಶಾಂತಿ ನೆಮ್ಮದಿಗೆ ಕನ್ನಡತನ ಬೇಕೇ ಬೇಕು. ಅದಕ್ಕಾಗಿಯೇ ಕನ್ನಡ ಹಬ್ಬ, ರಾಜ್ಯೋತ್ಸವ ಎಂದರೆ ನನಗೆ ಎಲ್ಲಿಲ್ಲದ ಹಿಗ್ಗು.

ಮಹಾರಾಷ್ಟ್ರದ ಅಕ್ಕಲಕೋಟೆಯ ಗಡಿನಾಡು ಕನ್ನಡ ಉತ್ಸವದ ಕವಿಗೋಷ್ಠಿ, ಗೋವಾದ ಪಣಜಿಯಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕವಿಗೋಷ್ಠಿ, ಧಾರವಾಡದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಮತ್ತು ಅಮೇರಿಕೆಯ ನ್ಯೂಜೆರ್ಸಿಯಲ್ಲಿ ನಡೆದ ಸಾಹಿತ್ಯ ರಂಗದ ಕವಿ ಗೋಷ್ಠಿಗಳು ನಾನು ಪಾಲ್ಗೊಂಡ ಪ್ರಮುಖ ಕನ್ನಡ ಕಾರ್ಯಕ್ರಮಗಳು. ನಾನು ನಂಬಿದ ಕನ್ನಡ ನಾಡು ನುಡಿಗಳೇ ನನಗೆ ಈ ಅವಕಾಶ ಒದಗಿಸಿಕೊಟ್ಟಿದೆ ಎನ್ನಲು ನನಗೆ ಅಭಿಮಾನ ಮತ್ತು ಹೆಮ್ಮೆ ಅನಿಸುತ್ತದೆ. ಅದಕ್ಕೆ ಕನ್ನಡ ಎಂದರೆ ನನ್ನೆದೆಗೆ ಹಸಿರಿನ ಹಾಸಿನಂತೆ.

ಈಗಿನ ಐಟಿ-ಬಿಟಿ ಯುಗದಲ್ಲಿ ಕನ್ನಡ, ರಾಜಧಾನಿಯಿಂದಲೂ ದೂರಾಗುತ್ತದೆ ಎಂದೆನಿಸಿದರೂ ಅದೆಂದಿಗೂ ಸಾಧ್ಯವಿಲ್ಲ ಎಂದು ನಾವೆಲ್ಲಾ ಈಗ ಸಾಧಿಸಿ ತೋರಿಸಬೇಕಾಗಿದೆ. ಮನೆ ಮನದಲ್ಲಿ ಕನ್ನಡತನ ತುಂಬಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆ ಮನಗಳಲ್ಲಿ ಕನ್ನಡ ಪುಸ್ತಕಗಳು ಓಡಾಡಬೇಕಾಗಿದೆ. ಮನೆಗೊಂದು ವಾಚನಾಲಯ ಮತ್ತು ಪ್ರತೀ ವಾಚನಾಲಯದಲ್ಲಿ ಕನ್ನಡ ಪುಸ್ತಕ ಇರಲೇಬೇಕೆಂಬ ಛಲ ನಮ್ಮಲ್ಲಿರಬೇಕು. ನಾವು ಕನ್ನಡವನ್ನು ಕಟ್ಟಿ ಬೆಳೆಸಿದರೆ ಇದು ಎಂದೂ ನಮ್ಮ ಕೈ ಬಿಡಲಾರರು.

ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಮನೆಯಲ್ಲೇ ‘ನಾಗಸುಧೆ ಜಗಲಿ’ಯ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕಾರಣಕ್ಕಾಗಿ ಆಗಾಗ ಕವಿಗೋಷ್ಠಿಗಳು ನಡೆಯುತ್ತಲೇ ಇರುತ್ತವೆ ; ಯುವ ಪ್ರತಿಭೆಗಳೊಂದಿಗೆ ಮಾಗಿದ ಮನಸ್ಸಿಗೂ ಸಹ. ಇದೊಂದು ಅಪೂರ್ವವಾದ ಪ್ರಯೋಗವಾಗಿದೆ. ದೂರದೂರಿನಿಂದ ಬಂದು ಕವಿತೆ ಓದುವ ಆ ಕಂಗಳಲಿ ಭವಿಷ್ಯದ ಸಾಹಿತ್ಯ ಅಡಗಿರುವುದು ನಿಜಕ್ಕೂ ಬೆರಗಿನ ಸಂಗತಿಯೆ. ಕೊರೋನಾದ ಈ ದುರಿತ ಕಾಲದಲ್ಲಿ ಈ ಪ್ರಕ್ರಿಯೆ ನಿಧಾನಗತಿಯಿಂದ ಸಾಗಿದರೂ, ಮುಂದಿನ ದಿನಗಳಲ್ಲಿ ಯುವ ಮನಸ್ಸುಗಳಿಗೆ ಕವಿತೆಗಳ ರುಚಿ ಹತ್ತಿಸುವದು ನಮ್ಮ ಕರ್ತವ್ಯ ಎಂದು ಸುನಂದಾ ಮನದಾಳದಿಂದ ಹೇಳುವುದು ಅವಳ ಕನ್ನಡ ಮತ್ತು ಕಾವ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಅಂದಿನ ದಿನಗಳಲ್ಲಿ ಅಂಕೋಲಾದ ವಿಷ್ಣು ನಾಯ್ಕರು ಜಿಲ್ಲೆಯ ತುಂಬೆಲ್ಲಾ ಕಾವ್ಯ ಸಂಚಲನ ಮಾಡುತ್ತಿದ್ದರು. ಹೊಸ ಹೊಸ ಪ್ರತಿಭೆಗಳ ಶೋಧ ನಡೆಸಿ ಅವರಿಗೆ ವೇದಿಕೆ ಕೊಟ್ಟು ಕವಿತೆಯನ್ನು ಓದಿಸುತ್ತಿದ್ದರು. ಇದಕ್ಕಾಗಿ ನಾಗಸುಧೆಯ ಕಾರ್ಯಕ್ರಮದಲ್ಲಿ ಒಮ್ಮೊಮ್ಮೆ ಅವರ ನೆನಪಾಗುವುದು ಸಹಜವೇ.

ಎರಡು ವರ್ಷಗಳ ಹಿಂದೆ ಮೊಮ್ಮಗ ವಿಸ್ಮಯನ ಆಗಮನವನ್ನು ಸ್ವಾಗತಿಸಲು ನಾವಿಬ್ಬರೂ ಅಮೇರಿಕೆಯ ನ್ಯೂಜೆರ್ಸಿಯ ಬ್ರಿಡ್ಜ್ ವಾಟರ್ ನಲ್ಲಿ ಐದು ತಿಂಗಳ ಕಳೆದೆವು. ಇಲ್ಲಿಂದಲೇ ಹೋಗಿ ನೆಲೆನಿಂತ ಅಲ್ಲಿಯ ಕನ್ನಡಿಗರ ಕನ್ನಡ ಪ್ರೇಮ ಅಪ್ರತಿಮ. ನಾವಂದು ನ್ಯೂಜೆರ್ಸಿಯ, ಉಡುಪಿ ಕೃಷ್ಣ ಮಂದಿರದಲ್ಲಿ ನಿಂತಿದ್ದಾಗ “ಕಡಮೆ ಸರ್” ಎಂಬ ಇಂಪಾದ ಧ್ವನಿ ತೇಲಿ ಬಂದಾಗ ನನ್ನ ನಾ ನಂಬದೇ ಹೋದೆ! ತಿರುಗಿದಾಗ ದಂಪತಿಗಳಿಬ್ಬರೂ ನಮಸ್ಕರಿಸುತ್ತಾ ಮುಂದೆ ಬಂದು “ನಾವು ನಿಮ್ಮ ಫೇಸ್ಬುಕ್ ಫ್ರೆಂಡ್ಸ್” ಎಂದಾಗಲಂತೂ ರೋಮಾಂಚನ. ಆಶಿಶ್ ಭಾರಧ್ವಾಜ್ ಮತ್ತು ಸರಿತಾ ನವಲಿ ದಶಕಗಳಿಂದ ಅಲ್ಲೇ ನೆಲೆಸಿ ಮನೆ ತುಂಬಾ ಕನ್ನಡ ಪುಸ್ತಕಗಳ ಒಡನಾಡಿಯಾಗಿರುವದನ್ನು ಕಂಡು ಬೆರಗಾದೆ. ಆ ಐದು ತಿಂಗಳ ಅವಧಿಯಲ್ಲಿ ನಮ್ಮಿಬ್ಬರ ವಾಕಿಂಗ್, ವೆಂಡರ್ ವೀರ್-ಪೆಟರ್ ಸನ್-ಗ್ನೆನ್ ಆಯರ್-ಹಂಟ್ಲಿ ವೇ-ವಾಲ್ಟರ್ ಬ್ರೂಕ್ ನಿಂದ ಮತ್ತೆ ವೆಂಡರ್ ವೀರ್ ಗೆ ಸಾಂಗವಾಗಿ ಸಾಗುತಿತ್ತು ; ಕಾವ್ಯಾ & ಸಂತೋಷ್ ಹಾಕಿ ಕೊಟ್ಟ ಮಾರ್ಗಸೂಚಿಯ ಮಾರ್ಗದಲ್ಲಿ. ಆಕಸ್ಮಿಕ ಅಲ್ಲೇನಾದರೂ ಕನ್ನಡದ ಪಿಸು ನುಡಿ ಕೇಳಿದರಂತೂ ಮಳೆಯಲ್ಲಿ ಕಾಮನ ಬಿಲ್ಲು ಕಂಡಷ್ಟೇ ಖುಷಿಯಾಗುತ್ತಿತ್ತು. ಇಂತಹ ಖುಷಿಯನ್ನು ಅದೆಷ್ಟೋ ದಿನ ಅನುಭವಿಸಿ ನಾಡು ನುಡಿಗೆ ಸಪ್ತ ಸಾಗರದಾಚೆಯಿಂದಲೇ ಜಂಟಿಯಾಗಿ ನಮಿಸುತ್ತಿದ್ದೆವು ; ನಿಂತು ಬಾಯ್ತುಂಬಾ ಮಾತನಾಡುತ್ತಿದ್ದೆವು, ಎಂದೂ ಕಾಣದ ಆ ಕನ್ನಡದ ಮನಸ್ಸುಗಳೊಡನೆ.

ನ್ಯೂಯಾರ್ಕಿನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಭಾರತೀಯ ಅಧ್ಯಯನ ಕೇಂದ್ರದಲ್ಲಿ ಕನ್ನಡ ಭಾಷೆ, ಸಾಹಿತ್ಯ ಕುರಿತು “ಕನ್ನಡ ಭಾಷಾ ವೈಜ್ಞಾನಿಕ ಅಧ್ಯಯನ” ಕೇಂದ್ರವಿದೆ. ಇಲ್ಲಿ ಆಧುನಿಕ ಕನ್ನಡ, ಸಮಗ್ರ ವ್ಯಾಕರಣ, ಪದ ರಚನೆ, ಬಳಕೆ, ಕನ್ನಡಿಗರ ಇಂಗ್ಲಿಷ್ ಬಳಕೆ, ಕನ್ನಡಿಗರ ಬಹು ಭಾಷಿಕತೆ ಕುರಿತು ಪ್ರೊ. ಶ್ರೀಧರರ ಕಾರ್ಯ ನಿರ್ವಹಣೆ ನಿಜಕ್ಕೂ ಶ್ಲಾಘನೀಯ. ಅವರ ಸರಳತನ, ಗಾಂಭೀರ್ಯದ ನಗು ಮೊಗ, ಕನ್ನಡ ಪ್ರೀತಿ ಅನುಕರಣೀಯ. ಇದರಂತೆ ಬೆಂಗಳೂರಿನಲ್ಲಿ ನೆಲೆಸಿದ ಕನ್ನಡದ ಕವಯತ್ರಿ ವಿಭಾ ಪುರೋಹಿತರ ಹೊರ ದೇಶದ ಪ್ರಜೆಗಳಿಗೆ ಮತ್ತು ಹೊರ ರಾಜ್ಯದ ಕನ್ನಡೇತರರಿಗೆ ಕನ್ನಡ ಕಲಿಸುವಿಕೆಯ ಹೂ ಮನಸ್ಸೂ ಸಹ ಕನ್ನಡ ಕಟ್ಟುವಿಕೆಯ ಭಾಗವೇ ಅಲ್ಲವೇನು ?

ಇವುಗಳ ನಡುವೆ ಕಳೆದ ಎಂಟು ವರ್ಷಗಳಿಂದ ಚಳಿ-ಹಸಿರಿನ ಆ ನೆಲದಲ್ಲಿ ನೆಲೆಸಿ ತನ್ನ ಕಥೆ, ಕವಿತೆ, ನಾಟಕ, ಅಂಕಣ ಬರಹದ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಮಗಳು ಕಾವ್ಯಾ ಕಡಮೆಗೂ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಶುಭಾಷಯ ಈ ಮೂಲಕ ತಿಳಿಸಿ, ‘ಕನ್ನಡಿಗರಿಗೆ ಕನ್ನಡದಿಂದಲೇ ಶಕ್ತಿ, ಕನ್ನಡ ದಿಂದಲೇ ಭುಕ್ತಿ’ ಎಂಬ ಎ. ಆರ್. ಕೃಷ್ಣ ಶಾಸ್ತ್ರಿಗಳ ನುಡಿಯನ್ನು ನೆನೆಯುವೆ.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಶೆಟಗೇರಿಯಿಂದ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನ ದಾರಿಗುಂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...