Homeಮುಖಪುಟಫೆ:13-ಎಂಡಿಎನ್ ಜನ್ಮದಿನ ನೆನಪು; ಪ್ರಾಮಾಣಿಕತೆಯ-ಸ್ಪಷ್ಟತೆಯ ನಾಯಕ ಪ್ರೊ. ನಂಜುಂಡಸ್ವಾಮಿ

ಫೆ:13-ಎಂಡಿಎನ್ ಜನ್ಮದಿನ ನೆನಪು; ಪ್ರಾಮಾಣಿಕತೆಯ-ಸ್ಪಷ್ಟತೆಯ ನಾಯಕ ಪ್ರೊ. ನಂಜುಂಡಸ್ವಾಮಿ

- Advertisement -
- Advertisement -

ನನಗೆ ಪ್ರೊ. ನಂಜುಂಡಸ್ವಾಮಿಯವರ ಸಂಪರ್ಕ ಬಂದಿದ್ದು 1998ರ ಇಸವಿಯಲ್ಲಿ. ಅದು ನಾನು ಕರ್ನಾಟಕ ರಾಜ್ಯ ರೈತಸಂಘ ಸೇರಿದ ಮೇಲೆ. ಅಕ್ಟೋಬರ್ 2 ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ರೈತ ಸಂಘದ ಘಟಕವನ್ನು ಕಟ್ಟಲು ನಿರ್ಧರಿಸಿದ್ದೆವು. ನಂಜುಂಡಸ್ವಾಮಿಯವರ ಮನೆಯಲ್ಲಿ ಭೇಟಿ ಮಾಡಿದ ನಂತರ, ನನ್ನ ವಿವರಗಳನ್ನು ತಿಳಿದ ಅವರು, ’ನೀವು ಮುಂದುವರೆದು ಕೆಲಸ ಮಾಡಿ, ನಾನು ನವೆಂಬರ್ ತಿಂಗಳ 30ನೇ ತಾರಿಖು ಹಗರಿಬೊಮ್ಮನಹಳ್ಳಿಗೆ ಬರುತ್ತೇನೆ’ ಎಂದರು. ವಾಪಸ್ಸು ಹೋದವನು, ಅಕ್ಟೋಬರ್ ತಿಂಗಳ 2ನೇ ವಾರದಿಂದ ನವಂಬರ್ 30ರವರೆಗೂ 116 ಗ್ರಾಮಗಳಲ್ಲಿ ರೈತರನ್ನು ಸಂಘಟಿಸಲು ಓಡಾಡಿದೆನು.

ನವಂಬರ್ 30ಕ್ಕೆ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಸಮಿತಿಯ ಹಲವಾರು ಮುಖಂಡರುಗಳ ಜೊತೆಗೆ ಎಂಡಿಎನ್ ಅಲ್ಲಿಗೆ ಧಾವಿಸಿದರು. ನವೆಂಬರ್ 30, ವಿದ್ಯುತ್ ಬಿಲ್ ಬಾಕಿ ಕಟ್ಟುವುದಕ್ಕೆ ಕೊನೆಯ ದಿನವಾಗಿತ್ತು. 10ಸಾವಿರಕ್ಕೂ ಹೆಚ್ಚು ರೈತರು ಹಗರಿಬೊಮ್ಮನಹಳ್ಳಿಯಲ್ಲಿ ಸೇರಿದ್ದರು. ಗೋಕಾಕ್ ಚಳವಳಿಯನ್ನು ಬಿಟ್ಟರೆ ಹಗರಿಬೊಮ್ಮನಹಳ್ಳಿಯ ಇತಿಹಾಸದಲ್ಲಿ ಎರಡನೇ ದೊಡ್ಡ ಚಳವಳಿಯಾಗಿ ರೈತಸಂಘದ ಬೃಹತ್ ಸಮಾವೇಶ ನಡೆಯಿತು. ಆ ಸಮಾವೇಶದಲ್ಲಿ ನಂಜುಂಡಸ್ವಾಮಿಯವರು ’ವಿದ್ಯುತ್ ಬಾಕಿಗೆ ಹೆದರುವ ಅವಶ್ಯಕತೆ ಇಲ್ಲ, ಸಮಾನ ವಿದ್ಯುತ್ ನೀತಿ ಕೊಟ್ಟಾಗ ಮಾತ್ರ, ಸಮಾನ ವಿದ್ಯುತ್ ಒದಗಿಸಿದಾಗ ಮಾತ್ರ ಈ ಸರ್ಕಾರಕ್ಕೆ ತೆರಿಗೆಯನ್ನು ಮತ್ತು ಬಾಕಿಯನ್ನು ಕಟ್ಟಬೇಕೇ ವಿನಃ, ಕಿರುಕುಳಕ್ಕೆ ತೆರಿಗೆ ಕಟ್ಟುವ ಪದ್ಧತಿ ಪ್ರಪಂಚದಲ್ಲಿ ಎಲ್ಲೂ ಇಲ್ಲ. ಇಲ್ಲಿ ಮೌಢ್ಯತೆ ಇರುವುದರಿಂದ, ತಿಳಿವಳಿಕೆ ಇಲ್ಲದಿರುವುದರಿಂದ ಈ ರೀತಿಯ ಸಮಸ್ಯೆಗಳು ಜರುಗುತ್ತವೆ. ನೀವು ಜಾಗೃತರಾಗಬೇಕು’ ಅಂತ ಹೇಳಿ ಅಲ್ಲಿಗೆ ತಂದಿದ್ದಂತಹ ಎಲ್ಲ ಬಿಲ್‌ಗಳನ್ನು ಸಂಗ್ರಹಿಸಿ ಸುಟ್ಟು ಹಾಕಿದರು. ಅದಾದ ಕೆಲವು ತಿಂಗಳುಗಳಲ್ಲಿ, ಆಗತಾನೇ ಅಧಿಕಾರಕ್ಕೆ ಬಂದಿದ್ದ ಎಸ್ ಎಂ ಕೃಷ್ಣ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡುವಂತಹ ಪರಿಸ್ಥಿತಿ ಕೂಡ ರಾಜ್ಯದಲ್ಲಿ ನಿರ್ಮಾಣವಾಯಿತು.

ಹೀಗೆ ಪ್ರಾರಂಭವಾದ ನನ್ನ ಮತ್ತು ಅವರ ಸಂಪರ್ಕ ನಂತರದ ದಿನಗಳಲ್ಲಿ ಗಾಢವಾಯಿತು. 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದನ್ನು ನೋಡಿ ಸಂತಸಪಟ್ಟಿದ್ದ ಅವರು, ’ವೀರಸಂಗಯ್ಯ ನೀನು ಸಂಘಟನೆಯ ಕೆಲಸವನ್ನ ಬರೀ ತಾಲೂಕಿಗೆ ಅಥವಾ ಜಿಲ್ಲೆಗೆ ಸೀಮಿತ ಮಾಡುವುದಲ್ಲ, ರಾಜ್ಯಮಟ್ಟದಲ್ಲಿ ಕೂಡ ನಮ್ಮ ಜೊತೆ ಇರಬೇಕು’ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ’ಇಲ್ಲ ಸಾರ್ ನನಗೆ ತೊಂದರೆಯಾಗುತ್ತದೆ, ನಾನು ಕೇವಲ ತಾಲೂಕು ಮಟ್ಟದಲ್ಲಿ ಮಾತ್ರ ಈ ಕೆಲಸವನ್ನ ಸದ್ಯಕ್ಕೆ ಮಾಡುತ್ತೇನೆ’ ಎಂದಾಗ, ’ಸರಿಸರಿ ಮುಂದೆ ನೋಡೋಣ’ ಎಂದರು. ಹಗರಿಬೊಮ್ಮನಹಳ್ಳಿಯ ಅನೇಕ ಸಮಸ್ಯೆಗಳಿಗೆ ತೀವ್ರವಾದ ಹೋರಾಟವನ್ನು ನಡೆಸುವಂತಹ ಹಲವಾರು ಸಂದರ್ಭಗಳು ಎದುರಾದವು. 1998, 1999, 2000 ಮತ್ತು 2001 ಇಸವಿಗಳಲ್ಲಿ ಹಲವು ಹೋರಾಟಗಳನ್ನು ನಾವು ನಿರಂತರವಾಗಿ ಸಂಘಟಿಸಿದೆವು. ಅದರ ಭಾಗವಾಗಿ ಪ್ರತಿ ಸಾರಿಯೂ ಪ್ರೊ ಎಂ.ಡಿ ನಂಜುಂಡಸ್ವಾಮಿಯವರು ನಮ್ಮ ಜೊತೆ ಬಂದು ತಮ್ಮ ನಾಯಕತ್ವವನ್ನು ಧಾರೆಯೆರೆಯುತ್ತಿದ್ದರು.

ಇಂತಹ ಸಂದರ್ಭವೊಂದರಲ್ಲಿ ಸಮಾನ ವಿದ್ಯುತ್ ನೀತಿಗಾಗಿ ಕೆಇಬಿ ಕಚೇರಿ ಮುಂದೆ ನಿರಂತರವಾಗಿ ಒಂದು ತಿಂಗಳ ಕಾಲ ನೆರೆದು, ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುವಂತಹ ಬೃಹತ್ ಚಳವಳಿಯನ್ನು ನಾವು ಸಂಘಟಿಸಿದೆವು. ಆಗ ಒಂದು ದಿನ ನಂಜುಂಡಸ್ವಾಮಿಯವರು ನೇರವಾಗಿ ಅಲ್ಲಿಗೆ ಬಂದು, ನಮ್ಮ ಜೊತೆ ಕುಳಿತು ಬೀದಿಯಲ್ಲಿಯೇ ಊಟ ಮಾಡಿ ಅದರಲ್ಲಿ ಭಾಗಿಯಾದರು. ಒಂದು ದಿನ ’ಧಾರವಾಡಗೆ ಹೊರಟಿದ್ದೇವೆ, ನೀವೂ ಬರಬೇಕು’ ಎಂದು ಹೇಳಿ ನನ್ನನ್ನು ಕರೆದುಕೊಂಡು ಹೊರಟರು. ಆಗ ದಾರಿಯುದ್ದಕ್ಕೂ ಅನೇಕ ವಿಷಯಗಳು ಚರ್ಚೆಯಾದವು. ಹುಬ್ಬಳ್ಳಿಯ ಹತ್ತಿರ ನಾವು ಹೋಗುತ್ತಿರುವಾಗ, ಪ್ರವೇಶದ್ವಾರದಲ್ಲಿಯೇ ಕಾಣುವ ಸಮಾಧಿಗಳನ್ನು ತೋರಿಸಿ, ’ವೀರಸಂಗಯ್ಯನವರೇ ಇಲ್ಲಿರುವ ಸಮಾಧಿಗಳನ್ನು ನೋಡಿದರೆ ಏನನಿಸುತ್ತದೆ’ ಎಂದು ಕೇಳಿದರು. ಆಗ ನಾನು ’ಯಾಕ್ ಸರ್ ಇದ್ದಕ್ಕಿದ್ದಂತೆ ಈ ಪ್ರಶ್ನೆ’ ಎಂದು ಮುಂದೇನೂ ಹೇಳಲು ತೋಚದೆ ’ಏನೋ ಗೊತ್ತಾಗ್ತ ಇಲ್ಲ ಸರ್’ ಎಂದು ಹೇಳಿದೆ. ಆಗ ಅವರು ’ಮನುಷ್ಯರು ಸತ್ತಾಗ ಎಲ್ಲರಿಗೂ ಈ ರೀತಿಯ ಸಮಾಧಿಗಳನ್ನು ಸೃಷ್ಟಿ ಮಾಡುತ್ತಾ ಹೋದರೆ, ಮುಂದೆ ಬರುವ ಜನಾಂಗಕ್ಕೆ ಭೂಮಿಯೇ ಇರುವುದಿಲ್ಲ. ಹಾಗಾಗಿ ಸಮಾಧಿ ಕಟ್ಟುವ ಮತ್ತು ಪ್ರತಿಮೆಯನ್ನು ಮಾಡುವ ಆಮಿಷಗಳು ನಮ್ಮ ತಲೆಯಲ್ಲಿ ಯಾವಾಗಲೂ ಇರಬಾರದು. ಇದು ಚಳವಳಿಗಾರರಿಗೆ ಸಲ್ಲದು’ ಅನ್ನುವಂತಹ ಮಾತುಗಳನ್ನ ಬಹಳ ಸ್ಪಷ್ಟವಾಗಿ ತಮ್ಮ ಎಂದಿನ ವಿಚಾರಪರತೆಯ ದೃಷ್ಟಿಕೋನದಲ್ಲಿ ಹೇಳಿದರು. ಆಗ ನನಗೆ ಆಶ್ಚರ್ಯವಾಯಿತು. ’ಸರಿ ಸಾರ್, ಸರಿ ಇದೆ ನಿಮ್ಮ ಮಾತು. ಯಾಕೆಂದರೆ ಸತ್ತವರಿಗೆಲ್ಲ ಒಂದು ಗುರುತು ಮಾಡುತ್ತಾ ಹೋದರೆ ಭೂಮಿ ಏನೂ ಬೆಳೆಯುವುದಿಲ್ಲ, ಆದರೆ ಜನಸಂಖ್ಯೆ ನಿರಂತರವಾಗಿ ಬೆಳೆಯುತ್ತಾ ಇರುತ್ತದೆ. ಸಾವು ಕೂಡ ನಿರಂತವಾಗಿರುತ್ತದೆ. ಹಾಗಾಗಿ ತಾವು ಹೇಳುವ ಮಾತಿನಲ್ಲಿ ಸತ್ಯಾಂಶ ಇದೆ’ ಎಂದು ಪ್ರಶಂಸಾಧಾಟಿಯಲ್ಲಿ ಹೇಳಿದೆ.

ಅಂದು ನಮ್ಮ ಜೊತೆ ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ ಗಂಗಾಧರ್ ಕೂಡ ಇದ್ದರು. ಹುಬ್ಬಳ್ಳಿ ದಾಟಿರಬಹುದು, ಆಗ ಇನ್ನೊಂದು ಪ್ರಶ್ನೆಯನ್ನು ಕೆ.ಟಿ ಗಂಗಾಧರ್ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೆ ಎಂಡಿಎನ್ ಚರ್ಚೆ ಮಾಡುತ್ತ ಬಂದರು. ಕರ್ನಾಟಕ ರಾಜ್ಯ ರೈತಸಂಘದ ಇವತ್ತಿನ ಈ ಸ್ಥಿತಿಗೆ, ಅದರ ವಿಘಟನೆಗೆ ರಾಮಕೃಷ್ಣ ಹೆಗಡೆಯವರು ಪ್ರಮುಖ ಕಾರಣ ಎಂಬ ಮಾತನ್ನ ನಮ್ಮ ಅಂದಿನ ಕಾರ್ಯದರ್ಶಿಗಳು ಹೇಳಿದರು. ಆಗ ನಾನು ಮಧ್ಯಪ್ರವೇಶಿಸಿ ಬಹಳ ಪ್ರಮುಖವಾದ ಒಂದು ಪ್ರಶ್ನೆಯನ್ನು ಎತ್ತಿದೆ: ’ರೈತ ಸಂಘವನ್ನು ಇನ್ನೊಬ್ಬರು ವಿಘಟನೆ ಮಾಡುವಂತಹ ರೀತಿಯಲ್ಲಿ ನೀವು ಕಟ್ಟಿದ್ದೀರ?’ ಅಂದೆ. ಅದಕ್ಕೊಂದು ಉದಾಹರಣೆಯನ್ನು ಕೊಟ್ಟು, ’ನಾವು ತಾಳಿ ಕಟ್ಟಿರುವ ಹೆಂಡತಿ ಇನ್ನೊಬ್ಬರಿಗೆ ಕಣ್ಣು ಹೊಡೆದು, ನಮ್ಮನ್ನು ಬಿಟ್ಟುಹೋಗುತ್ತಾಳೆ ಎಂದರೆ ಅದು ನಮ್ಮ ಮೇಲೆ ಇಲ್ಲದಿರುವ ವಿಶ್ವಾಸ ಎಂದು ಅರ್ಥವಾಗುತ್ತದೆ. ಆ ನಿಟ್ಟಿನಲ್ಲಿ, ಒಂದು ಸಂಘಟನಾತ್ಮಕ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರೈತ ಸಂಘಟನೆಯನ್ನ ಕಟ್ಟಿದ್ದರೆ ಆ ಪರಿಸ್ಥಿತಿ ಬರುತ್ತಿರಲಿಲ್ಲವೆನೋ’ ಎಂದು ಮುಂದುವರೆದು ಹೇಳಿದೆ. ಆಗ ಅದಕ್ಕೆ ಉತ್ತರಿಸಿದ ನಮ್ಮ ಕಾರ್ಯದರ್ಶಿಗಳು ’ಮಂಡಲ ಪಂಚಾಯ್ತಿಗಳನ್ನು ತಂದು, ಕರ್ನಾಟಕ ರಾಜ್ಯ ರೈತ ಸಂಘದ ಶೇ.40 ಕಾರ್ಯಕರ್ತರನ್ನು ಸೆಳೆದು, ಅವರಿಗೆ ಮಂಡಲ ಪಂಚಾಯ್ತಿ ಸದಸ್ಯತ್ವ ಆಸೆಯನ್ನು ತೋರಿಸಿ, ರೈತ ಸಂಘಟನೆಯನ್ನ ರಾಜಕೀಯವಾಗಿ ನಾಶ ಮಾಡಿರುವಂತಹ ಸಂದರ್ಭವನ್ನ ಹುಟ್ಟುಹಾಕಿದ್ದನ್ನು’ ವಿವರಿಸಿದರು.

ಆದರೆ ನಾನು ನನ್ನ ಪ್ರಶ್ನೆಯನ್ನು ಮುಂದುವರಿಸಿ, ’ಹಾಗಾದರೆ ಗ್ರಾಮಿಣ ಪ್ರದೇಶಕ್ಕೆ ಸೂಕ್ತವಾದ, ಜನಪರವಾದ ರಾಜಕೀಯವನ್ನ ಆ ದಿನ ಸಂಘಟನೆ ಕೈಗೊಳ್ಳಬೇಕಿತ್ತಲ್ಲ’ ಎಂದೆ. ನಂಜುಂಡಸ್ವಾಮಿಯವರು ಮೌನವಾಗಿ ಇದನ್ನೆಲ್ಲ ಆಲಿಸುತ್ತಾ, ಕಾರ್ಯದರ್ಶಿಗಳೆ ’ವೀರಸಂಗಯ್ಯನವರ ಪ್ರಶ್ನೆಗಳಿಗೆ ಉತ್ತರ ಕೊಡಿ. ಅವರು ಹೇಳುವುದರಲ್ಲಿ ಅರ್ಥ ಇದೆ. ಒಂದು ಸಂಘಟನೆ ಸೈದ್ಧಾಂತಿಕವಾಗಿ ಗಟ್ಟಿಯಾಗಿ ಬೆಳೆದಾಗ, ಯಾರೂ ಸಂಘಟನೆಯನ್ನ ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಆದರೆ ನಮ್ಮ ಸಂಘಟನೆಯಲ್ಲಿ ಸೈದ್ಧಾಂತಿಕ ತಿಳವಳಿಕೆ ಕಮ್ಮಿ ಇರುವುದೇ ಆ ರೀತಿ ಸಂಘಟನೆ ವಿಘಟನೆಯಾಗಲು ಕಾರಣ. ರಾಜಕೀಯ ಅಸ್ಥಿರತೆ ಮತ್ತು ರಾಜಕೀಯ ಭಾಗವಹಿಸುವಿಕೆ ಒಂದು ಸಂದರ್ಭದಲ್ಲಿ ಹೇಗೆ ಮುಖ್ಯವಾಗುತ್ತದೆ ಎಂಬ ಅವರ ಮಾತನ್ನ ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿ ಮಾತು ಮುಗಿಸಿದರು.

ನಂತರ ನಾವು ಧಾರವಾಡದ ಐಬಿಗೆ ಹೋದೆವು. ರಾಮಣ್ಣ ಎಂಬ ಪ್ರಾಮಾಣಿಕ ರೈತ ಸಂಘಟಕ ಅಲ್ಲಿ ನಮಗೆ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದರು. ನಾವು ಮೂರ್ನಾಲ್ಕು ದಿನಗಳ ಕಾಲ ಅಲ್ಲಿ ಉಳಿದು, ಅಲ್ಲಿನ ಹಳ್ಳಿಗಳಲ್ಲಿ ಪ್ರಚಾರ ಮಾಡಿದೆವು. ರೈತ ಸಂಘಟನೆಗಾಗಿ ನಾವು ಕೆಲಸ ಮಾಡಿದೆವು. ಆಗ ದಿನಕ್ಕೆ ಮೂರರಿಂದ ನಾಲ್ಕು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೆವು. ಪ್ರತಿಯೊಂದು ಕಡೆ ನಂಜುಂಡಸ್ವಾಮಿಯವರು ನೀವು ಮಾತನಾಡಿ ಎಂದು ಹುರಿದುಂಬಿಸಿ ಅವಕಾಶವನ್ನು ಕೊಡುತ್ತಿದ್ದರು. ಅಲ್ಲಿನ ಹಳ್ಳಿಯ ರೈತರನ್ನು ಕುರಿತು, ಸಮಸ್ಯೆಗಳ ಕುರಿತು ಅನೇಕ ಅಂಶಗಳ ಬಗ್ಗೆ ನಾವು ಚರ್ಚಿಸಿದೆವು. ನಂಜುಂಡಸ್ವಾಮಿಯವರ ನಂತರ, ಗ್ರಾಮೀಣ ಪ್ರದೇಶದಲ್ಲಿ ತಳಮಟ್ಟಕ್ಕಿಳಿದು, ರೈತರನ್ನು ಸಂಘಟನೆಗೆ ಕರೆತರುವ ಕೆಲಸ ಮಾಡಿದ ವ್ಯಕ್ತಿತ್ವವನ್ನು ನೋಡಿದ್ದು ಅಪರೂಪ. ರಾಜ್ಯ ಮಟ್ಟದ ಮುಖಂಡರು ಹಳ್ಳಿಗಳಿಗೆ ಸಂಚರಿಸಿ ಅಡ್ಡಾಡಿ ಕೆಲಸ ಮಾಡುವ ಸ್ಥಿತಿ ಬಹಳ ಕ್ಷೀಣವಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಆ ಮಹಾನ್ ನಾಯಕ ನಮ್ಮ ಜೊತೆ ಅಷ್ಟೊಂದು ಹಳ್ಳಿಗಳಿಗೆ ತಿರುಗಿ, ಮತ್ತೆ ಸಂಘಟಿಸುವ ಅವರ ಛಲ ನೋಡಿ ನನಗೆ ಆಶ್ಚರ್ಯವಾಗಿತ್ತು. ಅವರ ಬದ್ಧತೆ ಮತ್ತು ಪ್ರಾಮಾಣಿಕತೆಗಳು ಅಷ್ಟೇ ಖುಷಿ ಕೊಟ್ಟಿದ್ದವು.
ಪ್ರೊ. ನಂಜುಂಡಸ್ವಾಮಿಯವರ ಜತೆಗಿನ ನನ್ನ ಅನುಭವದ ಕೆಲವು ನೆನಪುಗಳು ಇವು.

ಜೆ ಎಂ ವೀರಸಂಗಯ್ಯ

ಜೆ ಎಂ ವೀರಸಂಗಯ್ಯ
ಪ್ರೊ ಎಂ.ಡಿ.ಎನ್ ಒಡನಾಡಿಗಳಾಗಿದ್ದ ವೀರಸಂಗಯ್ಯನವರು ಚಳವಳಿಯ ಸಂಗಾತಿ. ಸದ್ಯ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಗಳು. ಕರ್ನಾಟಕ ರಾಜ್ಯ ಕಿಡ್ನಿ ಕ್ಷೇಮಾಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರು.


ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...