ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಸೊಣ್ಣೇನಹಳ್ಳಿ, ರಾಂಪುರ ಮತ್ತು ನಾರನಹಳ್ಳಿ ಗ್ರಾಮಗಳ 2100 ಎಕರೆ ರೈತರ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ಇದರ ವಿರುದ್ದ ಹೋರಾಟದ ರಣಕಹಳೆ ಮೊಳಗಿಸಿರುವ ಗ್ರಾಮಸ್ಥರು ಮಂಗಳವಾರ (ಮಾ.31) ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಬೆಳವಂಗಲದಿಂದ ದೊಡ್ಡಬಳ್ಳಾಪುರ ಪಟ್ಟಣದವರೆಗೆ ಟ್ರಾಕ್ಟರ್ ರ್ಯಾಲಿ ನಡೆಸಿದ ಗ್ರಾಮಸ್ಥರು, ಕೆಐಎಡಿಬಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಾಣ ಬಿಡುತ್ತೇವೆ ಹೊರತು, ಭೂಮಿ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

ಈ ಹೋರಾಟ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ನಿಚ್ಚಲವಾಗಿದೆ.
ಐತಿಹಾಸಿಕ ದೇವನಹಳ್ಳಿ ಹೋರಾಟ
ಇದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಈ ಹಿಂದೆ ಕೆಐಎಡಿಬಿ ಮುಂದಾಗಿತ್ತು.
ಇದರ ವಿರುದ್ದ ರೈತರು ಸುಮಾರು ಮೂರುವರೆ ವರ್ಷಗಳ ಕಾಲ ( 1198 ದಿನಗಳು) ನಿರಂತರ ಹೋರಾಟ ನಡೆಸಿದ್ದರು. ಈ ಹೋರಾಟ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಅಂತಿವಾಗಿ 2025ರ ಜುಲೈ 15ರಂದು ಸಂಪೂರ್ಣ ಭೂ ಸ್ವಾಧೀನ ಕೈ ಬಿಟ್ಟಿರುವುದಾಗಿ ಘೋಷಿತ್ತು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಈ ಘೋಷಣೆ ಮಾಡಿದ್ದರು. ಆದರೆ, ಭೂ ಸ್ವಾಧೀನ ರದ್ದತಿಯ ಲಿಖಿತ ಆದೇಶ ಹೊರಡಿಸಲು ಸರ್ಕಾರ ಸತಾಯಿಸಿತ್ತು. ಹಾಗಾಗಿ, ರೈತರು ತಮ್ಮ ಹೋರಾಟ ಮುಂದುವರಿಸಿದ್ದರು. ಇತ್ತೀಚೆಗೆ ಸರ್ಕಾರ ಲಿಖಿತ ಆದೇಶವನ್ನು ನೀಡಿದೆ ಎಂದು ತಿಳಿದು ಬಂದಿದೆ. ಹಾಗಾಗಿ, ರೈತರು 2026ರ ಫೆಬ್ರವರಿ 27ರಂದು ದೊಡ್ಡ ಮಟ್ಟದಲ್ಲಿ ‘ಭೂಮಿ ಹಬ್ಬ’ ಮಾಡಿ ಸಂಭ್ರಮಿಸಿದ್ದಾರೆ.


