ದೇಶದ ಬೃಹತ್ ಕಾರ್ಪೊರೇಟ್ಗಳಾದ ಅಂಬಾನಿ-ಅದಾನಿಗಳಿಗೆ ಅನುಕೂಲ ಮಾಡಲು, ಕೇಂದ್ರದ ಬಿಜೆಪಿ ಸರ್ಕಾರ ರೈತವಿರೋಧಿ ಕಾನೂನಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿ, ಸಿಂಧನೂರಿನ ರಿಲಾಯನ್ಸ್ ಪೆಟ್ರೋಲ್ ಬಂಕ್ ಮುಂದೆ ’ಸಿಂಧನೂರು ರೈತವಿರೋಧಿ ಕೃಷಿ ಕಾನೂನು ರದ್ದತಿ ಹೋರಾಟ ಸಮಿತಿ’ ಶುಕ್ರವಾರ ಪ್ರತಿಭಟನೆ ನಡೆಸಿತು.
ಕೇಂದ್ರ ಹಾಗೂ ಜಿಯೋ ರಿಲಾಯನ್ಸ್ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಿಲಯನ್ಸ್ ಸರಕುಗಳನ್ನು ಬಹಿಷ್ಕರಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿದರು. ಕೇಂದ್ರ ಸರಕಾರ ಅಪ್ರಜಾತಾಂತ್ರಿಕ ಮತ್ತು ಅಸಂವಿಧಾನಿಕವಾಗಿ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ರೈತ ಹೋರಾಟ: ರಾಜಸ್ಥಾನ-ಹರಿಯಾಣ ಗಡಿಯಲ್ಲಿನ ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದ ರೈತರು
“ದೇಶೀಯ ಮತ್ತು ವಿದೇಶೀಯ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಕ್ಷೇತ್ರವನ್ನು ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರಕಾರದ ನಡೆ ರೈತ ವಿರೋಧಿಯಾಗಿದೆ. ಕಾರ್ಪೊರೇಟ್ ಕುಳಗಳಾದ ರಿಲಾಯನ್ಸ್ ಅಂಬಾನಿ, ಅದಾನಿಗಳ ಸಂಪತ್ತು ಹೆಚ್ಚಿಸುವುದಕ್ಕಾಗಿ ದೇಶದ ಸಮಸ್ತ ರೈತರ ಕೃಷಿ ಭೂಮಿ ಹಾಗೂ ಉತ್ಪನ್ನಕ್ಕೆ ಕನ್ನ ಹಾಕಲು ಹೊರಟಿರುವುದು ದೇಶದ ರೈತರಗೆ ಮಾಡಿದ ದ್ರೋಹವಾಗಿದೆ” ಎಂದು ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರದ ಈ ಕಾನೂನುಗಳು ಜಾರಿಯಾದರೆ ದೇಶದ ಕೃಷಿ ಭೂಮಿ ಮತ್ತು ಮಾರುಕಟ್ಟೆ ಕಾರ್ಪೊರೇಟ್ ಬಂಡವಾಳಶಾಹಿಗಳ ಶಕ್ತಿಗಳ ಏಕಸ್ವಾಮ್ಯಕ್ಕೆ ಒಳಪಚ್ಚು ರೈತರು ಬೀದಿಗೆ ಬೀಳಲಿದ್ದಾರೆ ಎಂದು ಎಚ್ಚರಿಸಿರುವ ಹೋರಾಟ ಸಮಿತಿಯು, “ಕೃಷಿ ಸೇರಿದಂತೆ ಇನ್ನಿತರೆ ಸಬ್ಸಿಡಿಯನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿರುವ ಕೇಂದ್ರ ಸರಕಾರ, ಈಗ ಕೃಷಿ ಭೂಮಿಯನ್ನು ಬಂಡವಾಳಗರಿಗೆ ಒತ್ತೆಯಿಡಲು ಹೊರಟಿದೆ. ಯಾವುದೆ ಚರ್ಚೆಯಲ್ಲದೇ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದು ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಪಾಲಿಗೆ ಮರಣ ಶಾಸನವಾಗಿದೆ” ಎಂದು ಅದು ಹೇಳಿದೆ.
“ಈ ಕಾಯ್ದೆಗಳ ಜಾರಿಯ ಹಿಂದೆ ರಿಲಯನ್ಸ್ ಫ್ರೆಶ್, ಬಿಗ್ ಬಝಾರ್, ಅಮೆಜಾನ್ ಸೇರಿದಂತೆ ದೈತ್ಯ ಕಾರ್ಪೊರೇಟ್ ಕಂಪೆನಿಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ. ಈ ಕಾಯ್ದೆಗಳ ಜಾರಿಯಿಂದ ಇಡೀ ಕೃಷಿ ವಲಯವೆ ಸಂಕಷ್ಟಕ್ಕೀಡಾಗಲಿ. ಆದ್ದರಿಂದ ಕೇಂದ್ರ ಸರ್ಕಾರವು ದೇಶದ ರೈತರೊಂದಿಗೆ ಬೇಷರತ್ತಾಗಿ ಕ್ಷಮೆಯಾಚಿಸಿ, ಈ ಕೂಡಲೇ ರೈತವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು” ಎಂದು ಹೋರಾಟ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಚಂದ್ರಶೇಖರ್ ಗೋರೆಬಾಳ್, ಡಿ.ಎಚ್ ಕಂಬಳಿ, ಬಸವರಾಜ ಗೂಗೆಬಾಳ್, ಎಸ್ ದೇವೇಂದ್ರ ಗೌಡ ಮಾತನಾಡಿದರು. ಹುಷೇನ್ ಸಾಬ್, ನಾಗರಾಜ್ ಪೂಜಾರ್, ಶೇಕ್ಷಾ ಖಾದ್ರಿ, ರಮೇಶ್ ಪಾಟೀಲ್, ಶಂಕರ್ ವಾಲೇಕರ್, ಬಸವರಾಜ ಬಾದರ್ಲಿ, ಅಬ್ದುಲ್ ಸಮದ್ ಚೌದ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಿದ ಶ್ರೀರಂಗಪಟ್ಟಣದ ಗಾರ್ಮೆಂಟ್ಸ್: ಅಧ್ಯಯನ ವರದಿ
ರೈತರ ಹೋರಾಟ ಚಿರಾಯವಾಗಲಿ..