ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ‘ಮತಗಳ್ಳತನ’ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ವಿರೋಧ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಸೋಮವಾರ (ಆ.11) ವಶಕ್ಕೆ ಪಡೆದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಟಿಎಂಸಿ ಸಂಸದೆ ಸಾಗರಿಕ ಘೋಷ್ ಸೇರಿದಂತೆ ಪ್ರಮುಖರನ್ನು ಪೊಲೀಸರು ಅರ್ಧ ದಾರಿಯಲ್ಲಿ ವಶಕ್ಕೆ ಪಡೆದರು ಎಂದು ವರದಿಯಾಗಿದೆ.
ಈ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪೊಲೀಸ್ ಬ್ಯಾರಿಕೇಡ್ಗಳನ್ನು ಹತ್ತಿ ಮುಂದುವರಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಆಡಳಿತ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಪೊಲೀಸರು ಬಳಸುತ್ತಿದೆ” ಎಂದು ಕಿಡಿಕಾರಿದರು.
“ವಿರೋಧ ಪಕ್ಷಗಳು ಸಂವಿಧಾನವನ್ನು ರಕ್ಷಿಸಲು ಹೋರಾಡುತ್ತಿವೆ. ನಮಗೆ ಶುದ್ಧ ಮತದಾರರ ಪಟ್ಟಿ ಬೇಕು” ಎಂದು ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದರು.
“ಅವರು ಹೆದರಿದ್ದಾರೆ. ಇದೊಂದು ಹೇಡಿ ಸರ್ಕಾರ” ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ ಭವನದ ಮಕರ ದ್ವಾರದಲ್ಲಿ ರಾಷ್ಟ್ರಗೀತೆಯೊಂದಿಗೆ ಮೆರವಣಿಗೆ ಪ್ರಾರಂಭಿಸಿದ್ದ ಪ್ರತಿಪಕ್ಷ ನಾಯಕರು, ‘ಎಸ್ಐಆರ್’ ಮತ್ತು ‘ವೋಟ್ ಚೋರಿ’ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಚುನಾವಣಾ ಆಯೋಗದ ಕೇಂದ್ರ ಕಚೇರಿಯತ್ತ ಸಾಗುತ್ತಿದ್ದರು. ಸಾರಿಗೆ ಭವನದ ಬಳಿ ಮೆರವಣಿಗೆಗೆ ತಡೆಯೊಡ್ಡಿದ ಪೊಲೀಸರು, ನಾಯಕರನ್ನು ವಶಕ್ಕೆ ಪಡೆದರು.
ಸಾರಿಗೆ ಭವನದ ಬಳಿ ಪೊಲೀಸರು ದೊಡ್ಡ ಮಟ್ಟದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
“ದೆಹಲಿಯ ಬೀದಿಗಳಲ್ಲಿ ನಡೆಯಲು ಸಂಸದರಿಗೆ ಅನುಮತಿಯ ಅಗತ್ಯವಿಲ್ಲ” ಎಂದು ಸಮಾಜವಾದಿ ಪಕ್ಷದ ಸಂಸದ ರಾಮಗೋಪಾಲ್ ಯಾದವ್ ಹೇಳಿದರು. ಪೊಲೀಸ್ ನಿರ್ಬಂಧದ ಅಗತ್ಯವನ್ನು ಅವರು ಪ್ರಶ್ನಿಸಿದರು.
ಆರ್ಜೆಡಿಯ ಮನೋಜ್ ಝಾ ಎಸ್ಐಆರ್ ಒಂದು ‘ವಂಚನೆ’ ಎಂದು ಕರೆದಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಚುನಾವಣಾ ಆಯೋಗ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಅವರು ಉತ್ತರ ಪ್ರದೇಶದ ಉಪಚುನಾವಣೆಯಲ್ಲೂ ಮತಗಟ್ಟೆ ವಶಪಡಿಸಿಕೊಳ್ಳುವಿಕೆ ಮತ್ತು ಮತ ಕಳ್ಳತನ ನಡೆದಿದೆ ಆರೋಪಿಸಿದರು. ಈ ಬಗ್ಗೆ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯವರ ಆರೋಪಗಳನ್ನು ಬೆಂಬಲಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, “ಚುನಾವಣಾ ಆಯೋಗವು ರಾಷ್ಟ್ರದ ಬಗ್ಗೆ ಮಾತ್ರವಲ್ಲ, ಸ್ವಯಂ ಒಂದು ಜವಾಬ್ದಾರಿಯನ್ನು ಹೊಂದಿದೆ. ನಮ್ಮ ಪ್ರಜಾಪ್ರಭುತ್ವವು ನಕಲಿ ಮತದಾನ ಮಾಡಲಾಗುತ್ತಿದೆಯೇ ಎಂಬ ಅನುಮಾನಗಳಿಂದ ಅಪಾಯಕ್ಕೆ ಸಿಲುಕಬಾರದು. ಏಕೆಂದರೆ ಅದು ತುಂಬಾ ಅಮೂಲ್ಯವಾಗಿದೆ. ಹಾಗಾಗಿ, ಚುನಾವಣಾ ಆಯೋಗ ವಿಶ್ವಾಸಾರ್ಹ ಉತ್ತರ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್, ಸಮಾಜವಾದಿ, ಎನ್ಸಿಪಿ (ಎಸ್ಪಿ), ಶಿವಸೇನೆ (ಯುಬಿಟಿ), ಟಿಎಂಸಿ, ಆರ್ಜೆಡಿ, ಡಿಎಂಕೆ ಸೇರಿದಂತೆ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷದ ಸಂಸದರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ ಆರೋಪ: ರಾಹುಲ್ ಗಾಂಧಿಯಿಂದ ದಾಖಲೆ ಕೇಳಿದ ರಾಜ್ಯ ಚುನಾವಣಾಧಿಕಾರಿ


